Homeಚಳವಳಿಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ

- Advertisement -
- Advertisement -

ಋಷಿಯಂತೆ ಬದುಕಿ, ಪರಿಸರ ಜಾಗೃತಿ ಮೂಡಿಸಿ, ಅದಕ್ಕಾಗಿ ಪಾದಯಾತ್ರೆ ನಡೆಸಿ ಹೋರಾಟ ಮಾಡಿ ಹಿಮಾಲಯದ ತಪ್ಪಲು ಹಸಿರಾಗಿರುವಂತೆ ನೋಡಿಕೊಂಡ ಸುಂದರಲಾಲ್ ಬಹುಗುಣ ಅವರನ್ನು ಮೇ 21ರಂದು ಕಳೆದುಕೊಂಡೆವು.

ಎಂಟನೆಯ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ’ಚಿಪ್ಕೊ ಚಳವಳಿ’ಯ ಬಗ್ಗೆ ಪಾಠವಿತ್ತು. ಆ ಪಾಠವನ್ನು ಓದಿದ ನನ್ನ ಹಲವಾರು ವಿದ್ಯಾರ್ಥಿಗಳು ಆಡುಕುರಿಗಳಿಗಾಗಿ ಮತ್ತು ಉರುವಲಿಗಾಗಿ ಗಿಡ ಕಡಿಯುವವರೊಂದಿಗೆ ಜಗಳಕ್ಕಿಳಿದು ಪೊಲೀಸ್ ಸ್ಟೇಷನ್ನಿಗೆ ಸುದ್ದಿ ಮುಟ್ಟಿಸಿ ಹಲವಾರು ಗಿಡಗಳ ರಕ್ಷಣೆ ಮಾಡಿದರು. ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಟಿಯ ದಿನಗಳಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸುತ್ತಿದ್ದರು. ಹೊಲ ಮನೆ ಇಲ್ಲದ ನೌಕರರ ಮಕ್ಕಳು ತಮ್ಮ ಸ್ನೇಹಿತರ ಹೊಲಗಳಲ್ಲಿ ಹಣ್ಣಿನ ಗಿಡ ನೆಟ್ಟರು. ಇಂತಹ ಎಲ್ಲ ಪರಿಸರ ರಕ್ಷಣಾ ಚಟುವಟಿಕೆಗೆ ಮೂಲಕಾರಣ ಸುಂದರಲಾಲ್ ಬಹುಗುಣರು. ಗಢವಾಲದ ಈ ಸಂತ ಕರ್ನಾಟಕದ ಮಕ್ಕಳನ್ನು ಈ ರೀತಿ ಗಿಡ ನೆಡಲು ಪ್ರೇರೆಪಿಸಿದ್ದರು.

ಕೆಲವರ್ಷಗಳ ಹಿಂದೆ ’ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನದಲ್ಲಿ ಅವರು ಗೋವೆಗೆ ಬಂದಿದ್ದರು. ಅಲ್ಲಿ ಅವರಾಡಿದ ಮಾತುಗಳು ಇನ್ನೂ ನೆನಪಿನಲ್ಲಿ ಹಸಿರಾಗಿ ಉಳಿದಿವೆ.

’ನಾವು ಶಿವನ ಜಟೆಯಲ್ಲಿ ಗಂಗೆ ವಾಸಿಸಿದ್ದಾಳೆಂದು ನಂಬಿದ್ದೇವೆ. ಶಿವ ಹಿಮಾಲಯವಾಸಿ. ಅವನ ಜಟೆಯೆಂದರೆ ಹಿಮಾಲಯದ ತಪ್ಪಲಿನ ದಟ್ಟ ಅರಣ್ಯದಲ್ಲಿಯ ವೃಕ್ಷರಾಶಿ. ತಮ್ಮ ಬೇರುಗಳ ಮೂಲಕ ನೀರನ್ನು ಭೂಮಿಯ ಅಂತರಾಳಕ್ಕೆ ಇಳಿಸುತ್ತವೆ. ಹೀಗಾಗಿ ಅಂತರ್ಜಲ ಹೆಚ್ಚಾಗಿ ವರ್ಷವಿಡೀ ನಾವು ನೀರು ಪಡೆಯುತ್ತೇವೆ. ನಾವು ಅರಣ್ಯನಾಶದಿಂದ ಶಿವನ ಜಟೆಯನ್ನು ಕತ್ತರಿಸಿದರೆ ಗಂಗೆಯ ವಾಸಸ್ಥಾನವನ್ನು ಹಾಳುಮಾಡಿದಂತಾಗುತ್ತದೆ. ಅರಣ್ಯ ಉಳಿದರೆ ಗಂಗೆ, ಗಂಗೆ ಉಳಿದರೆ ನೀರು’ ಎಂದಿದ್ದರು.

ಹಲವು ದಶಕಗಳ ಹಿಂದೆಯೇ ಸುಂದರಲಾಲ್ ಬಹುಗುಣರು ಪ್ರವಾಹಗಳ ಪರಿಣಾಮವನ್ನು ಊಹಿಸಿದ್ದರು. ಹಿಮಾಲಯದ ದೇವಧಾರು ಮತ್ತು ಇತ್ಯಾದಿ ಮರಗಳ ನಾಶದಿಂದ ಭೂಮಿಯ ಮೇಲ್ಮೈ ಸಡಿಲಗೊಂಡು ಮಣ್ಣೆಲ್ಲ ಹಳ್ಳ ತೊರೆಗಳ ಮೂಲಕ ನದಿಯನ್ನು ಸೇರುತ್ತದೆ. ನದಿಯ ಆಳ ಕಡಿಮೆಯಾಗಿ ಅಗಲ ಹೆಚ್ಚಾಗುವುದು. ನದಿ ತನ್ನ ಒಡಲನ್ನು ಬಿಟ್ಟು ಸುತ್ತೆಲ್ಲ ಪಸರಿಸಿ ಹರಿಯುತ್ತದೆ. ಊರುಗಳು ಮತ್ತು ಹೊಲಗಳಲ್ಲೆಲ್ಲ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಭೂಮಿಯ ಮೇಲ್ಮೈ ಮಣ್ಣು ನಾಶವಾಗಿ ಭೂಮಿ ಬರಡಾಗುತ್ತದೆ. ಜನರ ಆಹಾರ ಮೂಲವಾದ ಹೊಲಗಳನ್ನು ಕಳೆದುಕೊಳ್ಳುತ್ತಾರೆ. ಗಿಡ ಕಡಿಯುವುದನ್ನು ನಿಲ್ಲಿಸಿ ಪ್ರವಾಹಗಳನ್ನು ತಡೆಯಬೇಕೆಂದು ಆಗಲೇ ಹೇಳಿದ್ದರು. ಸರಕಾರಗಳು ಟಿಂಬರ್ ಮಾಫಿಯಾಗಳ ಪ್ರಭಾವಕ್ಕೆ ಮಣಿನು ಅವರ ಮಾತನ್ನು ನಿರ್ಲಕ್ಷಿಸಿದವು. ಪ್ರತಿಫಲ ಎಲ್ಲರೂ ಅನುಭವಿಸಬೇಕಾಯಿತು.

PC : Sakshi

ಅವರು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ವಿರೋಧಿಸಿದರು. ನಮ್ಮ ಅರಣ್ಯಗಳೇ ನಮ್ಮ ಅಣೆಕಟ್ಟುಗಳು. ಅರಣ್ಯ ಉಳಿಸಿದರೆ ಅಲ್ಲಿಯ ಗಿಡಮರಗಳು ಅಂತರ್ಜಲ ಹೆಚ್ಚಿಸಿ ವರ್ಷವಿಡಿ ನೀರನ್ನು ಹಿಡಿದಿಡುತ್ತವೆ. ನದಿಗಳು ಹನ್ನೆರಡು ತಿಂಗಳು ಹರಿಯುತ್ತವೆ. ಜೀವ ವೈವಿಧ್ಯ ರಕ್ಷಣೆಯಾಗುತ್ತದೆ. ಮಾನವನ ಅವಶ್ಯಕತೆಗಳಾದ Food, Fodder, Fibre, Fertilizer, Furniture ಇತ್ಯಾದಿಗಳು ಸುಲಭವಾಗಿ ದೊರಕುತ್ತವೆ. ಇಂತಹ ದಟ್ಟ ಅರಣ್ಯ ನಾಶಮಾಡಿ ಅಣೆಕಟ್ಟು ಕಟ್ಟಿ ನೀರನ್ನು ಉಳಿಸುವ ಪ್ರಯತ್ನವೆಂದರೆ ಜಲಸಂಪನ್ಮೂಲವನ್ನು ನಾಶ ಮಾಡಿ ಜಲ ಉಳಿಸುವ ಯತ್ನ. ಈ ಜಲಾಶಯಗಳು ಅರ್ಥಹೀನ, ಹಿಮಾಲಯದ ತಪ್ಪಲಿನಲ್ಲಿ ಈ ಜಲಾಶಯಗಳು ಟೈಂಬಾಂಬ್ ಇಟ್ಟಂತೆ ಎಂದು ಹೇಳುತ್ತಿದ್ದರು. ದೊಡ್ಡ ದೊಡ್ಡ ಅಣೆಕಟ್ಟುಗಳು ನಿರ್ಮಾಣದ ವಿರುದ್ಧ ಹೋರಾಟ ಮಾಡಿದರು.

ಗೋಧಿ, ಅಕ್ಕಿಯನ್ನು ಬೆಳೆಯಲು ಬಹಳ ನೀರು ಬೇಕು. ಅದರ ಬದಲಿಗೆ ಕಡಿಮೆ ನೀರು ಬೇಡುವ ತೃಣಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದರು. ತಾವು ಗೋಧಿ ಮತ್ತು ಅಕ್ಕಿಯನ್ನು ಉಣ್ಣುವುದನ್ನೇ ಬಿಟ್ಟರು.

ಅವರು ಕರ್ನಾಟಕದ ಲಕ್ಷವೃಕ್ಷ ಆಂದೋಲನ, ಅಪ್ಪಿಕೊ ಚಳವಳಿ ಇತ್ಯಾದಿಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯ ಬಹಳಷ್ಟು ಶಾಲಾಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದರು. ಗಿಡಮರ ನೆಡಲು ಪ್ರೇರೇಪಿಸಿದರು.

ಆ ಹಿರಿಯ ಜೀವ ತನ್ನ ಮುಂದಿನ ಜನಾಂಗಗಳ ಬಗೆಗೆ ಹೊಂದಿದ್ದ ಕಾಳಜಿಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಭೂಮಿಯ ಮೇಲಿನ ಹಸಿರು ಹೊದಿಕೆ ಉಳಿಸಿಕೊಳ್ಳಬೇಕು. ಈ ಮುಖಾಂತರ ಸುಂದರಲಾಲ್ ಬಹುಗುಣರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.

ಆರ್ ಜಿ ತಿಮ್ಮಾಪುರ
ನಿವೃತ್ತ ಶಿಕ್ಷಕರು, ಪರಿಸರಾಸಕ್ತರು ಮತ್ತು ಪ್ರಸ್ತುತ ಸಾವಯವ ಕೃಷಿಕರು


ಇದನ್ನೂ ಓದಿ: ‘ಏನಪ್ಪ, ದೇವರು ಇದಾನೆ ಅನಿಸುತ್ತಾ, ಇಲ್ಲಾ ಅನಿಸುತ್ತಾ?’ ದೊರೆಸ್ವಾಮಿ ಜೊತೆಗಿನ ನೆನಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...