ಅತ್ಯಾಚಾರದ ಆರೋಪದ ಬಂಧನದಿಂದ ತಪ್ಪಿಸಿಕೊಳ್ಳಲು ರಕ್ಷಣೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಸರ್ಕಾರಿ ನೌಕರನನ್ನು ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆಯನ್ನು ಮದುವೆಯಾಗಲು ಸುಪ್ರೀಂಕೋರ್ಟ್ ಕೇಳಿರುವ ಘಟನೆ ನಡೆದಿದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಸುಭಾಷ್ ಚೌವಾಣ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಇಂತಹ ಪ್ರಶ್ನೆ ಕೇಳಿದೆ. ಮೋಹಿತ್ ಸುಭಾಷ್ ಚೌವಾಣ್ ಮೇಲೆ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದ್ದು, ಆತನ ಮೇಲೆ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾನೂನಿನಡಿಯಲ್ಲಿ ದೂರು ದಾಖಲಾಗಿದೆ.
“ನೀವು ಬಾಲಕಿಯನ್ನು ಮದುವೆಯಾಗಲು ಬಯಸಿದರೆ ನಾವು ನಿಮಗೆ ಸಹಾಯ ಮಾಡಬಹುದು. ಇಲ್ಲದಿದ್ದರೆ, ನೀವು ನಿಮ್ಮ ಕೆಲಸವನ್ನು ಕಳೆದುಕೊಂಡು ಜೈಲಿಗೆ ಹೋಗುತ್ತೀರಿ. ನೀವು ಹುಡುಗಿಯನ್ನು ಮೋಹಿಸಿದ್ದೀರಿ, ಅವಳ ಮೇಲೆ ಅತ್ಯಾಚಾರ ಮಾಡಿದ್ದೀರಿ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅರ್ಜಿದಾರರ ವಕೀಲರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದ ಅಧಿಕಾರಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಪತ್ರಕರ್ತನ ವಿರುದ್ಧ ಎಫ್ಐಆರ್!
ಅತ್ಯಾಚಾರದ ದೂರು ದಾಖಲಿಸಲು ಬಾಲಕಿ ಪೊಲೀಸ್ ಠಾಣೆಗೆ ಹೋದಾಗಲೂ ಸಹ ಆರೋಪಿಯ ತಾಯಿ ಮದುವೆಯ ಪ್ರಸ್ತಾಪ ಇಟ್ಟಿದ್ದರು. ಆಗ ಆಕೆ ನಿರಾಕರಿಸಿದ್ದಳು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಂತರ ಠಾಣೆಯಲ್ಲಿ, ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆ ನಡೆಯುತ್ತದೆ ಎಂದು ಒಂದು ದಾಖಲೆಯನ್ನು ರಚಿಸಲಾಗಿತ್ತು. ಈಗ ಅತ್ಯಾಚಾರ ನಡೆಸಿದ್ದ ವ್ಯಕ್ತಿ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ ಎಂದು ಆರೋಪಿ ಚೌವಾಣ್ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ.
ವರದಿಗಳ ಪ್ರಕಾರ, ಮುಖ್ಯ ನ್ಯಾಯಾಧೀಶರು ಆರೋಪಿಗೆ “ನೀವು ಆಕೆಯನ್ನು ಮದುವೆಯಾಗುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ “ಬಾಲಕಿ ಮೇಲೆ ದೌರ್ಜನ್ಯ ನಡೆಸುವ ಮತ್ತು ಅತ್ಯಾಚಾರ ಮಾಡುವ ಮೊದಲು ನೀವು ಸರ್ಕಾರಿ ನೌಕರ ಎಂಬುದು ನಿಮಗೆ ತಿಳಿದಿರಬೇಕಿತ್ತು” ಎಂದಿದ್ದಾರೆ.
ಮುಂದುವರೆದು, “ನಾವು ನಿಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿಲ್ಲ. ನೀವು ಮದುವೆಯಾಗಲು ಬಯಸಿದರೆ ನಮಗೆ ತಿಳಿಸಿ. ಇಲ್ಲದಿದ್ದರೆ ಆಕೆಯನ್ನು ಮದುವೆಯಾಗುವಂತೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ನೀವು ಹೇಳುತ್ತೀರಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಪರ ವಕೀಲರು ಅರ್ಜಿದಾರರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಬಿಜೆಪಿ ಮಂಡಲ ಅಧ್ಯಕ್ಷ ಸೇರಿದಂತೆ 4 ಜನರಿಂದ 20 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ
ನಂತರ ಅರ್ಜಿದಾರ ಸುಪ್ರೀಂ ಕೋರ್ಟ್ ನ್ಯಾಯಾದೀಶರ ಮುಂದೆ “ಆರಂಭದಲ್ಲಿ ನಾನು ಅವಳನ್ನು ಮದುವೆಯಾಗಲು ಬಯಸಿದ್ದೆ, ಆದರೆ ಆಕೆ ನಿರಾಕರಿಸಿದಳು, ನಾನು ಈಗಾಗಲೇ ಮದುವೆಯಾಗಿರುವುದರಿಂದ ಈಗ ನನಗೆ ಮದುವೆಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ. ಜೊತೆಗೆ ವಿಚಾರಣೆ ಇನ್ನು ನಡೆಯುತ್ತಿದೆ ಮತ್ತು ಆರೋಪ ಪಟ್ಟಿಯನ್ನು ಇನ್ನೂ ರೂಪಿಸಲಾಗಿಲ್ಲ ಎಂದಿದ್ದಾರೆ.
“ನಾನು ಸರ್ಕಾರಿ ನೌಕರ, ನನ್ನನ್ನು ಬಂಧಿಸಿದರೆ ನನ್ನನ್ನು ಕೆಲಸದಿಂದ ಅಮಾನತುಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ಆರೋಪಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಬೊಬ್ಡೆ, “ಅದಕ್ಕಾಗಿಯೇ ನಾವು ನಿಮಗೆ ಈ ಯೋಜನೆ ನೀಡಿದ್ದೇವೆ. ನಾವು ನಾಲ್ಕು ವಾರಗಳ ಕಾಲ ಬಂಧನವನ್ನು ತಡೆ ಹಿಡಿಯುತ್ತೇವೆ. ನಂತರ ನೀವು ನಿಯಮಿತ ಜಾಮೀನುಗಾಗಿ ಅರ್ಜಿ ಸಲ್ಲಿಸಿ” ಎಂದಿದೆ.
ವಿಚಾರಣಾ ನ್ಯಾಯಾಲಯವು ಆರೋಪಿಗೆ ಬಂಧನದಿಂದ ರಕ್ಷಣೆ ನೀಡಿತ್ತು. ಆದರೆ ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಸದ್ಯ ಆರೋಪಿಗೆ ನಾಲ್ಕು ವಾರಗಳವರೆಗೆ ಬಂಧನದಿಂದ ರಕ್ಷಣೆ ನೀಡಿಲಾಗಿದ್ದು, ನಂತರ ನಿಯಮಿತ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್: ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್


