Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಾಲೂರು: ಮೂರು ಪಕ್ಷಗಳ ಸಮಬಲದ ಸ್ಪರ್ಧೆ ಸಾಧ್ಯತೆ; ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

- Advertisement -
- Advertisement -

ಬೆಂಗಳೂರಿನ ಪಕ್ಕದಲ್ಲಿರುವ ಕೋಲಾರ ಜಿಲ್ಲೆಗೆ ಸೇರಿರುವ ಮಾಲೂರು ವಿಧಾನಸಭಾ ಕ್ಷೇತ್ರ ಶಿಲ್ಪಕಲಾ ಕೆತ್ತನೆಗೆ ಹೆಸರುವಾಸಿ. ಯಾವುದೇ ದೇವಸ್ಥಾನಕ್ಕೆ ಬೇಕಾದ ದೇವರ ವಿಗ್ರಹ ಸೇರಿದಂತೆ ಇತರ ಕೆತ್ತನೆಗಳಿಗೆ ಮಾಲೂರಿನ ಶಿವಾರಪಟ್ಟಣದ ಮೊರೆಹೋಗಲಾಗುತ್ತದೆ. ಆದರೆ ಈಗ ತಾಲ್ಲೂಕಿನಲ್ಲಿ ಆ ಕೆಲಸಕ್ಕಿಂತಲೂ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕೆಗಳ ಸದ್ದು ಜೋರಾಗಿ ಕೇಳಿಬರುತ್ತಿದೆ. ಬ್ರಿಕ್ಸ್, ಇಟ್ಟಿಗೆ ಫ್ಯಾಕ್ಟರಿಗಳು ಸಾಕಷ್ಟು ತಲೆಯೆತ್ತಿವೆ. ಅದರೊಟ್ಟಿಗೆ ಎಲ್ಲೆಂದರಲ್ಲಿ ಜಲ್ಲಿ ಕ್ರಷರ್‌ಗಳು ಕೊರೆಯುತ್ತಿದ್ದು ಅಕ್ರಮ ಗಣಿಗಾರಿಕೆಯ ಆರೋಪಗಳು ಕೇಳಿಬರುತ್ತಿವೆ. ಇಂತಹ ಮಾಲೂರಿನಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.

ರಾಜಕೀಯ ಇತಿಹಾಸ

ಮಾಲೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿತ್ತು ಅಂತಲೇ ಹೇಳಬಹುದು. 14 ವಿಧಾನಸಭಾ ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಜನತಾಪಕ್ಷ, ಜನತಾದಳ, ಜೆಡಿಎಸ್ ತಲಾ ಒಂದೊಂದು ಬಾರಿ ಗೆಲುವು ಸಾಧಿಸಿದರೆ ಬಿಜೆಪಿ ಎರಡು ಬಾರಿ ಜಯಭೇರಿ ಬಾರಿಸಿದೆ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ ಆರು ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ರನ್ನರ್ ಅಪ್ ಆಗಿದ್ದಾರೆ.

1957ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಗೆಲುವು ಸಾಧಿಸಿದ್ದರು. ಆದರೆ 1962ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿ ಎಸ್.ವಿ ರಾಮೇಗೌಡರವರ ಎದುರು ಮಣಿದರು. 1967ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿ ಎಂ.ಆರ್ ರಾಮಣ್ಣನವರ ಎದುರು ಆಯ್ಕೆಯಾಗಿ ಎರಡನೇ ಬಾರಿಗೆ ಶಾಸಕರಾಗಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎ.ವಿ ಮುನಿಸ್ವಾಮಿಯವರಿಗೆ ಟಿಕೆಟ್ ನೀಡಿತು. ಇದರಿಂದ ಅಸಮಾಧಾನಗೊಂಡ ಹೆಚ್.ಸಿ ಲಿಂಗಾರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎ.ವಿ ಮುನಿಸ್ವಾಮಿಯವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.

1978ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದ ಪಿ.ಎನ್ ರೆಡ್ಡಿಯವರು ಜನತಾಪಕ್ಷದ ಲಕ್ಷ್ಮಿದೇವಿ ರಾಮಣ್ಣನವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಆನಂತರದ 5 ಚುನಾವಣೆಗಳು ಎ.ನಾಗರಾಜು ಮತ್ತು ದ್ಯಾವರಪ್ಪನವರ ನಡುವಿನ ಹಣಾಹಣಿಗೆ ಸಾಕ್ಷಿಯಾಯಿತು. ಒಮ್ಮೆ ಅವರು, ಒಮ್ಮೆ ಇವರು ಎಂಬಂತೆ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರು ಸ್ವತಂತ್ರ ಅಭ್ಯರ್ಥಿ ದ್ಯಾವರಪ್ಪರನ್ನು ಮಣಿಸಿ ಗೆಲುವು ಸಾಧಿಸಿದರು. ಆದರೆ ಎರಡು ವರ್ಷಗಳಲ್ಲಿ ನಡೆದ 1985ರ ಚುನಾವಣೆಯಲ್ಲಿ ದ್ಯಾವರಪ್ಪನವರು ಜನತಾದಳ ಪಕ್ಷದಿಂದ ಕಣಕ್ಕಿಳಿದು ಕಾಂಗ್ರೆಸ್‌ನ ಎ.ನಾಗರಾಜು ಎದುರು ಜಯಕಂಡರು. 1989ರಲ್ಲಿ ಎ.ನಾಗರಾಜು ಗೆಲುವು ಕಂಡರೆ 1994ರಲ್ಲಿ ದ್ಯಾವರಪ್ಪನವರು ಜಯ ಸಾಧಿಸಿದರು. 1999ರಲ್ಲಿ ಮತ್ತೆ ಎ.ನಾಗರಾಜು ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರೆನಿಸಿಕೊಂಡರು.

ಎಸ್.ಎನ್.ಕೃಷ್ಣಯ್ಯ ಶೆಟ್ಟಿ

2004 ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯಿತು. ಎಸ್.ಎನ್.ಕೃಷ್ಣಯ್ಯ ಶೆಟ್ಟಿಯವರು ಕಾಂಗ್ರೆಸ್ ಪಕ್ಷದ ಎ.ನಾಗರಾಜುರವರನ್ನು 26,856 ಮತಗಳ ಅಂತರದಿಂದ ಮಣಿಸಿ ಶಾಸಕರಾದರು. ಅಲ್ಲದೆ 2008ರ ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷದ ಆರ್ ಪ್ರಭಾಕರ್ ಎದುರು 52,401 ಮತಗಳ ಭಾರೀ ಅಂತರದಿಂದ ವಿಜಯಪತಾಕೆ ಹಾರಿಸಿ ಮಾಲೂರು ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಅವರು ಶಾಸಕರಾದರು. ಮುಜರಾಯಿ ಇಲಾಖೆ ಸಚಿವರೂ ಆಗಿದ್ದ ಅವರು ಕೆ.ಆರ್ ಪುರಂ ಬಳಿಯ ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪದ ಮೇಲೆ ಯಡಿಯೂರಪ್ಪನವರೊಂದಿಗೆ ಜೈಲು ವಾಸ ಅನುಭವಿಸಿದ್ದರು. ಅಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಾಲ ಪಡೆದ ಆರೋಪವನ್ನು ಸಹ ಎದುರಿಸಿದ್ದರು.

ಜೈಲಿನಿಂದ ಹೊರಬಂದಾಗ ಕೃಷ್ಣಯ್ಯ ಶೆಟ್ಟಿಯವರಿಗೆ 2013ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಲು ಸತಾಯಿಸಿತ್ತು. ಅಂತಿಮ ಕ್ಷಣದಲ್ಲಿ ಬಿ ಫಾರಂ ನೀಡಿದರೂ ಅದನ್ನು ಹರಿದು ಬಿಸಾಕಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಎಲ್ಲಾ ಎಡವಟ್ಟಿನಿಂದಾಗಿ ಅವರಿಗೆ ಹ್ಯಾಟ್ರಿಕ್ ಗೆಲುವು ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೆ.ಎಸ್ ಮಂಜುನಾಥ್ ಗೌಡ ಜಯಕಂಡರು. ಇತ್ತೀಚಿನ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೆ.ಎಸ್ ಮಂಜುನಾಥ್‌ಗೌಡರರಿಗೆ ಟಿಕೆಟ್ ನೀಡಿತು. ಕೃಷ್ಣಯ್ಯಶೆಟ್ಟಿಯವರು ಕಾಂಗ್ರೆಸ್ ಪಡಸಾಲೆಗೆ ಹೋಗಿ, ನಂತರ ಬಿಜೆಪಿಗೆ ವಾಪಸಾಗಿ ಟಿಕೆಟ್ ಗಿಟ್ಟಿಸಿಕೊಂಡರು. ಕಾಂಗ್ರೆಸ್ ಪಕ್ಷವು ಕೆ.ವೈ ನಂಜೇಗೌಡರಿಗೆ ಟಿಕೆಟ್ ನೀಡಿತು. ಮೂರು ಪಕ್ಷಗಳ ನಡುವಿನ ಹಣಾಹಣಿಯಲ್ಲಿ ಕಾಂಗ್ರೆಸ್‌ನ ಕೆ.ವೈ ನಂಜೇಗೌಡರವರು ಸುಲಭ ಜಯ ಸಾಧಿಸಿದರು.

ಜಾತಿವಾರು ಅಂದಾಜು ಮತಗಳು

ಮಾಲೂರು ಕ್ಷೇತ್ರದಲ್ಲಿ ಎಸ್‌ಸಿ-ಎಸ್‌ಟಿ ಮತಗಳು ಅಧಿಕವಾಗಿದ್ದು 65,000ದಷ್ಟಿವೆ. ಒಕ್ಕಲಿಗ ಸಮುದಾಯದ್ದು ಕೂಡ 60,000ದಷ್ಟಿವೆ. ಇತರೆ ಹಿಂದುಳಿದ ವರ್ಗದವರ 50,000 ಮತಗಳಿದ್ದರೆ, ಮುಸ್ಲಿಮರು 15,000ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿ

ಕಾಂಗ್ರೆಸ್: ಕೆ.ವೈ ನಂಜೇಗೌಡರು ಜನರ ಕೈಗೆ ಸಿಗುತ್ತಾರೆ ಎಂಬ ಮಾತಿದೆ. ಮಾಲೂರು ಟೌನ್ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಕೋಲಾರ-ಮಾಲೂರು ರಾಜ್ಯ ಹೆದ್ದಾರಿ ಡಾಂಬರೀಕರಣ ಮತ್ತು ತಮಿಳುನಾಡಿನ ಹೊಸೂರಿಗೆ 4 ಪಥಗಳ ರಸ್ತೆ ರಿಪೇರಿ ಮಾಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆ ಜಾರಿಯಾಗುತ್ತಿದೆ, ಕೆ.ಸಿ ವ್ಯಾಲಿ ನೀರು ತಂದಿದ್ದರಿಂದ ಒಳ್ಳೆಯ ಅಭಿಪ್ರಾಯವಿದೆ.

ಹಾಲಿ ಶಾಸಕ ಕೆ.ವೈ ನಂಜೇಗೌಡ

ಆದರೆ ಅಂಬೇಡ್ಕರ್ ಭವನ ಉದ್ಘಾಟನೆಯಾಗಿಲ್ಲ, ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸಾಧ್ಯವಾಗಿಲ್ಲ, ಹಳ್ಳಿಗಳ ರಸ್ತೆಗಳು ಸಮರ್ಪಕವಾಗಿಲ್ಲ, ನಿರೀಕ್ಷಿಸಿದ ಅಭಿವೃದ್ದಿ ಕಂಡಿಲ್ಲ ಎಂಬ ಟೀಕೆಗಳ ಸಹ ಅವರ ಮೇಲಿದೆ.

ಇದೆಲ್ಲದರ ಹೊರತಾಗಿಯೂ ಶಾಸಕರು ಎಲ್ಲಾ ಕಡೆ ಓಡಾಡುತ್ತಿದ್ದಾರೆ, ದಲಿತರು ಮತ್ತು ಮುಸ್ಲಿಮರೊಟ್ಟಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂಬಿತ್ಯಾದಿ ಕಾರಣಗಳಿಂದ ಮತ್ತೊಂದು ಅವಧಿಗೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವ ಯೋಚನೆಯಲ್ಲಿದೆ.

ಜೆಡಿಎಸ್: ಮಾಜಿ ಶಾಸಕ ಮಂಜುನಾಥ್ ಗೌಡರವರು 2019ರಿಂದಲೇ ಜೆಡಿಎಸ್ ಪಕ್ಷದೊಂದಿಗೆ ಮುನಿಸು ಹೊಂದಿದ್ದರು. ಆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಯವರ ಪರ ಕೆಲಸ ಮಾಡಿದರು. ಕೊನೆಗೆ ಯಾವಾಗ ಪಕ್ಷ ತೊರೆದು ಬಿಜೆಪಿ ಸೇರಿದರೋ ಆಗ ಜೆಡಿಎಸ್ ಪಕ್ಷವು ಜಿ.ಇ ರಾಮೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರಿಗೆ ಟಿಕೆಟ್ ಘೋಷಿಸಿದೆ. ಸ್ಥಳೀಯರಾದ ರಾಮೇಗೌಡರು ಈ ಮುಂಚೆ ಬಿಜೆಪಿಯಲ್ಲಿದ್ದರು. ಮಾಸ್ತಿಯ ಜಿ.ಪಂ ಸದಸ್ಯರಾಗಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆನಂತರ ಕಾಂಗ್ರೆಸ್ ಸೇರಿದ್ದ ಅವರು ಸದ್ಯ ಜೆಡಿಎಸ್‌ನಲ್ಲಿದ್ದಾರೆ. ಅವರೆ ಅಭ್ಯರ್ಥಿ ಎಂದು ಹೆಚ್.ಡಿ ಕುಮಾರಸ್ವಾಮಿಯವರು ಈಗಾಗಲೇ ಘೋಷಿಸಿದ್ದಾರೆ. ರಾಮೇಗೌಡರು ಸಮಾಜಸೇವೆ, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆಯಂತಹ ಕೆಲಸಗಳನ್ನು ಮಾಡುತ್ತಾ ಯುವಜನರನ್ನು ಸೆಳೆಯುವತ್ತ ಗಮನ ಹರಿಸಿದ್ದಾರೆ.

ಜಿ.ಇ ರಾಮೇಗೌಡ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

ಮಾಲೂರಿನಲ್ಲಿ ಟಿಕೆಟ್‌ಗಾಗಿ ಪ್ರಬಲ ಸ್ಪರ್ಧೆಯಿರುವ ಪಕ್ಷವೆಂದರೆ ಅದು ಬಿಜೆಪಿ. ಬಿಜೆಪಿಯಿಂದ ಎರಡು ಭಾರಿ ಶಾಸಕರಾಗಿದ್ದ ಕೃಷ್ಣಯ್ಯಶೆಟ್ಟಿಯವರು ಮಾಲೂರಿನಲ್ಲಿ ಸ್ಪರ್ಧಿಸುವ ಇಚ್ಛೆ ಕೈಬಿಟ್ಟು ಬೆಂಗಳೂರಿನ ಗಾಂಧಿನಗರ ಕ್ಷೇತ್ರದತ್ತ ಮುಖ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಬಿಜೆಪಿ ಸೇರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಅಭಿಮಾನಿಗಳು, ಅನುಯಾಯಿಗಳನ್ನು ಕಟ್ಟಿಕೊಂಡು ಕಳೆದ ಒಂದು ವರ್ಷದಿಂದ ಬಿಜೆಪಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕೆ.ಎಸ್ ಮಂಜುನಾಥ್ ಗೌಡ

ಕೋಡಿಹಳ್ಳಿ ಮಂಜುನಾಥ್‌ಗೌಡರು ಬಿಜೆಪಿ ಸೇರುವುದಕ್ಕೆ ಬಿಜೆಪಿ ಮುಖಂಡರಾದ ಪ್ರಭಾಕರ್, ವೆಂಕಟೇಶ್ ಸೇರಿ ಒಂದಷ್ಟು ಮೂಲ ಬಿಜೆಪಿಗರು ವಿರೋಧ ಮಾಡಿದ್ದುಂಟು.

ಹೂಡಿ ವಿಜಯ್ ಕುಮಾರ್‌

ಬಿಜೆಪಿಯ ಯುವ ಮುಖಂಡರಾದ, ಮಾಜಿ ಬಿಬಿಎಂಪಿ ಸದಸ್ಯರಾದ ಹೂಡಿ ವಿಜಯ್ ಕುಮಾರ್‌ರವರು ಸಹ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪಕ್ಷ ಕಟ್ಟುತ್ತಿರುವ ಮೂಲ ಬಿಜೆಪಿಗರಾದ ತಮಗೆ ಟಿಕೆಟ್ ನೀಡಬೇಕೆಂಬುದು ಅವರ ಒತ್ತಾಯ. ಹಾಗಾಗಿ ಟಿಕೆಟ್‌ಗಾಗಿ ಮಂಜುನಾಥ್‌ಗೌಡ ಬಣ ಮತ್ತು ಹೂಡಿ ವಿಜಯ್ ಕುಮಾರ್ ಬಣದ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮಂಜುನಾಥ್ ಗೌಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ವಿಜಯ್ ಕುಮಾರ್‌ರವರು, ಅಂದೇ ಆಯುಷ್ಮಾನ್ ಭಾರತ್ ಕಾರ್ಡುಗಳ ವಿತರಣೆ ಕಾರ್ಯಕ್ರಮ ಏರ್ಪಡಿಸಿ ಸಚಿವರುಗಳಾದ ಶೋಭಾ ಕರಂದ್ಲಾಜೆ, ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಕರೆಸಿದ್ದರು.

ಕ್ಷೇತ್ರದ ಸಮಸ್ಯೆಗಳು

ಸಮರ್ಪಕ ಕುಡಿಯುವ ನೀರು ದಕ್ಕಿಲ್ಲ. ರಸ್ತೆಗಳು ವ್ಯವಸ್ಥಿತವಾಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ದಿಯಾಗಿಲ್ಲ. ಬಹಳಷ್ಟು ಜನರಿಗೆ ಇನ್ನೂ ಹಕ್ಕುಪತ್ರಗಳು ಸಿಕ್ಕಿಲ್ಲ. ಜಲ್ಲಿ ಕ್ರಶರ್‌ಗಳು ನಿರಂತರ ತಲೆಯೆತ್ತುತ್ತಿದ್ದು ಅವುಗಳಿಂದ ಹೊಮ್ಮುವ ಭಾರಿ ಧೂಳು ಹಾನಿಕಾರಕವಾಗಿದೆ. ಮಾರ್ಕಂಡಯ್ಯ ಡ್ಯಾಮ್ ಸುತ್ತಮುತ್ತಲೇ ಕ್ರಶರ್‌ಗಳ ಕೆಲಸ ನಡೆಯುತ್ತಿದ್ದು ಡ್ಯಾಮ್‌ಗೆ ಅಪಾಯ ಕಾದಿದೆ ಎಂಬ ದೂರುಗಳಿವೆ.

2023ರ ಚುನಾವಣೆ

ಕಾಂಗ್ರೆಸ್‌ನಿಂದ ಹಾಲಿ ಶಾಸಕ ಕೆ.ವೈ ನಂಜೇಗೌಡರವರಿಗೆ ಟಿಕೆಟ್ ದೊರಕುವ ಸಾಧ್ಯತೆಗಳಿವೆ. ಜೆಡಿಎಸ್ ರಾಮೇಗೌಡರಿಗೆ ಟಿಕೆಟ್ ಘೋಷಿಸಿದೆ. ಇನ್ನು ಬಿಜೆಪಿಯಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕೆ.ಎಸ್ ಮಂಜುನಾಥ್ ಗೌಡರು ಟಿಕೆಟ್ ರೇಸ್‌ನಲ್ಲಿ ಮುಂದಿದ್ದಾರೆ. ಹೂಡಿ ವಿಜಯ್ ಕುಮಾರ್ ಜೊತೆಗಿದ್ದಾರೆ. ಎಲ್ಲರೂ ಒಕ್ಕಲಿಗ ಸಮುದಾಯದವರಾಗಿದ್ದಾರೆ. ಟಿಕೆಟ್ ತಪ್ಪಿದವರನ್ನು ಬಿಜೆಪಿ ಹೇಗೆ ಸಮಾಧಾನ ಮಾಡುತ್ತದೆ ಎಂಬುದನ್ನು ನೋಡಬೇಕಿದೆ.

ಎಲ್ಲಾ ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಒಕ್ಕಲಿಗ ಮತಗಳು ಹಂಚಿಹೋಗುವ ಸಾಧ್ಯತೆಯಿದೆ. ಹಾಗಾಗಿ ದಲಿತರು, ಮುಸ್ಲಿಮರು ಮತ್ತು ಇತರ ಹಿಂದುಳಿದ ಮತಗಳು ಯಾರ ಕೈಹಿಡಿಯಲಿವೆಯೊ ಅವರಿಗೆ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆಜಿಎಫ್: ಪರ್ಯಾಯ ಪಕ್ಷಗಳ ನೆಲೆಯಲ್ಲೀಗ ಕಾಂಗ್ರೆಸ್ ಮುಂಚೂಣಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...