ಗಣರಾಜ್ಯೋತ್ಸವ ಪರೇಡ್ಗಾಗಿ ತಮಿಳುನಾಡಿನ ಟ್ಯಾಬ್ಲೋವನ್ನು ಒಕ್ಕೂಟ ಸರ್ಕಾರದ ತಜ್ಞರ ಸಮಿತಿಯು ತಿರಸ್ಕರಿಸಿದ ಒಂದು ದಿನದ ನಂತರ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯ ಸರ್ಕಾರ ಆಯೋಜಿಸಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇದನ್ನು ಪ್ರದರ್ಶಿಸಲಾಗುವುದು ಎಂದು ಚೆನ್ನೈನಲ್ಲಿ ಮಂಗಳವಾರ ಘೋಷಿಸಿದ್ದಾರೆ. ಇಷ್ಟೇ ಅಲ್ಲದೆ, ಈ ಟ್ಯಾಬ್ಲೊವನ್ನು ರಾಜ್ಯದ ಪ್ರಮುಖ ಸ್ಥಳಗಳಿಗೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ‘ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು’ ಎಂಬ ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನವನ್ನು ದೇಶದ ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ ಎಂದು ತಮಿಳುನಾಡು ಈ ಹಿಂದೆಯೆ ಘೊಷಿಸಿತ್ತು.
‘1857ರ ದಂಗೆಗೆ ಮುನ್ನ ನಾವು ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆ’
ಸ್ವಾತಂತ್ರ್ಯ ಹೋರಾಟಕ್ಕೆ ತಮಿಳುನಾಡಿನ ಕೊಡುಗೆಯು 1857 ರ ದಂಗೆಗೆ ಮುಂಚಿತವಾಗಿತ್ತು ಎಂದು ಸೂಚಿಸಿರುವ ಸ್ಟಾಲಿನ್, “ರಾಜ್ಯದ ಸ್ವಾತಂತ್ಯ್ರ ಹೋರಾಟಗಾರರ ಪಾತ್ರವು ಇತರ ಯಾವುದೆ ರಾಜ್ಯಗಳಿಗಿಂತ ಕಡಿಮೆಯಲ್ಲ” ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವಾಲಿನ್ ಅವರಿಗೆ ಪತ್ರ ಬರೆದ ಕೆಲವೆ ಗಂಟೆಗಳ ನಂತರ ಮುಖ್ಯಮಂತ್ರಿ ಈ ನಿರ್ಧಾರ ಮಾಡಿದ್ದಾರೆ. ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಟ್ಯಾಬ್ಲೊವನ್ನು ಆಯ್ಕೆ ಮಾಡಲಾಗಿದೆ ಎಂದು ರಾಜನಾಥ್ ಸಿಂಗ್ ಪತ್ರದಲ್ಲಿ ಹೇಳಿದ್ದರು. ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ರಾಜನಾಥ್ ಸಿಂಗ್ ಅವರ ಪತ್ರದಲ್ಲಿ ಅವರು ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಆಘಾತ ಮತ್ತು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ವಿವಾದ: ಸುಳ್ಳು ಹೇಳಿದ ಸಚಿವ ಸುನಿಲ್ ಕುಮಾರ್?
ತಮಿಳುನಾಡಿನ ದೇಶಭಕ್ತಿಯ ಉತ್ಸಾಹ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ರಾಜ್ಯ ಸರ್ಕಾರದ ಗಣರಾಜ್ಯೋತ್ಸವದ ಆಚರಣೆಯಲ್ಲಿ ಟ್ಯಾಬ್ಲೊವನ್ನು ಪ್ರಸ್ತುತಪಡಿಸಲಾಗುತ್ತದೆ. ಇದನ್ನು ತಮಿಳುನಾಡಿನ ಪ್ರಮುಖ ನಗರಗಳಿಗೆ ಕಳುಹಿಸಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.
ವೆಲ್ಲೂರು ದಂಗೆಯು 1806ರಲ್ಲಿ ನಡೆದಿತ್ತು. ಆದರೆ 1857ರಲ್ಲಿ ನಡೆದ ಸಿಪಾಯಿ ದಂಗೆಯನ್ನು ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೇಳಲಾಗುತ್ತಿದೆ. ಅದೇ ರೀತಿ, ಝಾನ್ಸಿ ರಾಣಿ ತನ್ನ ಕತ್ತಿಯನ್ನು ಬೀಸುವ ದಶಕಗಳ ಹಿಂದೆಯೆ ವೇಲು ನಾಚಿಯಾರ್ ಬ್ರಿಟಿಷರ ವಿರುದ್ಧ ಹೋರಾಡಿ, ಕಳೆದುಕೊಂಡ ಭೂಮಿಯನ್ನು ಮರಳಿ ವಶಪಡಿಸಿಕೊಂಡರು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅದೇ ರೀತಿ ಪುಲಿತೇವನ್, ವೀರ ಪಾಂಡಿಯ ಕಟ್ಟಬೊಮ್ಮನ್, ವೀರನ್ ಸುಂದರಲಿಂಗಂ, ಮರುತು ಸಹೋದರರು, ಧೀರನ್ ಚಿನ್ನಮಲೈ ಸೇರಿದಂತೆ ಹಲವು ವೀರರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ತಮಿಳುನಾಡಿನ ಈ ನೆಲವು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.