ತಮಿಳುನಾಡಿನ ತಿರುವಣ್ಣಾಮಲೈನಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಮೋತಕ್ಕಲ್ ಗ್ರಾಮದಲ್ಲಿ ಕಳೆದ ಸೋಮವಾರ (ಸೆ.30) ದಲಿತ ಮಹಿಳೆಯೊಬ್ಬರ ಶವಯಾತ್ರೆಗೆ ಪ್ರಬಲ ಜಾತಿಯ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ. ತಮ್ಮ ಪ್ರದೇಶದ ಮಾರ್ಗದ ದುಸ್ಥಿತಿಯಿಂದಾಗಿ ಗ್ರಾಮದ ಮುಖ್ಯರಸ್ತೆಯ ಮೂಲಕ ಮೃತದೇಹ ಸಾಗಿಸಲು ದಲಿತ ಕುಟುಂಬ ನಿರ್ಧರಿಸಿತ್ತು ಎಂದು ದಿ ಮೂಕನಾಯಕ ವರದಿ ಮಾಡಿದೆ.
ವರದಿಯ ಪ್ರಕಾರ, 70 ವರ್ಷದ ದಲಿತ ಮಹಿಳೆ ಎಸ್.ಕಿಲಿಯಾಂಬಾಳ್ ಅವರು ವಯೋಸಹಜ ಅನಾರೋಗ್ಯದಿಂದ ಭಾನುವಾರ ಸಂಜೆ ದಲಿತ ಕಾಲೋನಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ಸಾವನ್ನಪ್ಪಿದ್ದರು. ದಲಿತರ ಸ್ಮಶಾನ ಊರ ಹೊರಗೆ ಇರುವುದರಿಂದ ಅಲ್ಲಿಗೆ ಶವ ಕೊಂಡೊಯ್ಯಬೇಕಿತ್ತು. ಗ್ರಾಮದಲ್ಲಿ ದಲಿತರಿಗೆ ಮತ್ತು ಸವರ್ಣಿಯರಿಗೆ ಶವಯಾತ್ರೆ ನಡೆಸಲು ಪ್ರತ್ಯೇಕ ರಸ್ತೆಗಳಿವೆ. ದಲಿತ ಕೇರಿಯ ರಸ್ತೆ ದುಸ್ಥಿಯಿಂದ ಕೂಡಿದೆ. ಹಾಗಾಗಿ, ಸೋಮವಾರ ದಲಿತರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶವಯಾತ್ರೆ ನಡೆಸಲು ಮುಂದಾಗಿದ್ದರು. ಈ ವೇಳೆ ಪ್ರಬಲ ಜಾತಿಯವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಜೆ 4 ಗಂಟೆ ಸುಮಾರಿಗೆ ಗ್ರಾಮದ ಮುಖ್ಯರಸ್ತೆಯಲ್ಲಿ ಶವಯಾತ್ರೆ ನಡೆಸಲು ದಲಿತರು ನಿರ್ಧರಿಸಿದ್ದರು. ಆದರೆ ಪ್ರಬಲ ಜಾತಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸ್ ತಂಡ ಗ್ರಾಮಕ್ಕೆ ದೌಡಾಯಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆದಿದೆ ಎಂದು ವರದಿ ವಿವರಿಸಿದೆ.
ತಿರುವಣ್ಣಾಮಲೈನ ಕಂದಾಯ ವಿಭಾಗೀಯ ಅಧಿಕಾರಿ (ಆರ್ಡಿಒ) ಆರ್.ಮಂದಾಕಿನಿ ನೇತೃತ್ವದಲ್ಲಿ, ಕಂದಾಯ ಅಧಿಕಾರಿಗಳ ತಂಡವು ಗ್ರಾಮದಲ್ಲಿ ಪ್ರಬಲ ಜಾತಿ ಮತ್ತು ದಲಿತರ ನಡುವೆ ಶಾಂತಿ ಮಾತುಕತೆಗಳನ್ನು ಆಯೋಜಿಸಿತ್ತು. ಸುಮಾರು ಐದು ಗಂಟೆಗಳ ಚರ್ಚೆಯ ನಂತರ, ದಲಿತರು ತಮ್ಮ ಸಾಂಪ್ರದಾಯಿಕ ಮಾರ್ಗವನ್ನು ಬಳಸಲು ಒಪ್ಪಿಕೊಂಡರು. ಸ್ಥಳೀಯ ಆಡಳಿತ ದಲಿತ ಕೇರಿಯ ಮಾರ್ಗವನ್ನು ದುರಸ್ಥಿಗೊಳಿಸಿದ ಬಳಿಕ, ಸೋಮವಾರ ರಾತ್ರಿ ಮಹಿಳೆಯ ಅಂತ್ಯಕ್ರಿಯೆ ನಡೆಸಲಾಗಿದೆ.
ಮೋತಕ್ಕಲ್ ತಿರುವಣ್ಣಾಮಲೈ ಮತ್ತು ಧರ್ಮಪುರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಗಡಿ ಗ್ರಾಮವಾಗಿದೆ. ಇದು ತಂಡ್ರಂಪಟ್ಟು ಪಂಚಾಯತ್ ಯೂನಿಯನ್ ವ್ಯಾಪ್ತಿಗೆ ಬರುತ್ತದೆ. ಗ್ರಾಮದ ಪ್ರಬಲ ಜಾತಿಯಲ್ಲಿ ಹೆಚ್ಚಿನವರು ಭೂಮಾಲೀಕರಾಗಿದ್ದಾರೆ. ದಲಿತರು ಅವರ ಜಮೀನುಗಳಲ್ಲಿ ವರ್ಷಗಳಿಂದ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಿಪಿಐ(ಎಂ) ಕಾರ್ಯಕರ್ತ ಆರ್.ಅಣ್ಣಾಮಲೈ ಮಾಧ್ಯಮದವರೊಂದಿಗೆ ಮಾತನಾಡಿ, “ಈ ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಸಾಮಾನ್ಯವಾಗಿದೆ. ಹಿಂದೆ ದಲಿತರಿಗೆ ಪ್ರಬಲ ಜಾತಿಯವರ ಸಲೂನ್ಗಳಲ್ಲಿ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ. ದಲಿತರಿಗೆ ಮತ್ತು ಪ್ರಬಲರಿಗೆ ಪ್ರತ್ಯೇಕ ಟೀ ಕಪ್ಗಳನ್ನು ಬಳಸಲಾಗುತ್ತಿತ್ತು” ಎಂದು ತಿಳಿಸಿದ್ದಾರೆ.
ಬಸ್ಗಾಗಿ ಕಾಯುವ ದಲಿತರು ಪ್ರಬಲ ಜಾತಿಯವರು ನಡೆಸುತ್ತಿರುವ ಸಣ್ಣ ಅಂಗಡಿಗಳ ಬಳಿಯ ಮರಗಳ ನೆರಳಿನಲ್ಲಿ ಕೂಡ ನಿಲ್ಲುವಂತಿಲ್ಲ. ದಲಿತರು ಬಿಸಿಲಿನಲ್ಲೇ ನಿಲ್ಲುವಂತೆ ಒತ್ತಾಯಿಸಲಾಗುತ್ತಿದೆ ಎಂದು ಗ್ರಾಮದ ನಿವಾಸಿಗಳು ಹೇಳಿರುವುದಾಗಿ ವರದಿಯಾಗಿದೆ.
ಶವಯಾತ್ರೆಗೆ ಅಡ್ಡಿಪಡಿಸಿದ ಘಟನೆಯ ನಂತರ ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಜಾತಿ ಆಧಾರಿತ ತಾರತಮ್ಯ ಕೊನೆಗೊಳಿಸಲು ಎರಡು ಸಮುದಾಯಗಳ ನಡುವೆ ಸರಣಿ ಮಾತುಕತೆಗಳನ್ನು ಆಯೋಜಿಸಿದ್ದಾರೆ. ಜಿಲ್ಲಾಧಿಕಾರಿ ಡಿ.ಭಾಸ್ಕರ ಪಾಂಡಿಯನ್ ಮಾತನಾಡಿ, ಗ್ರಾಮದಲ್ಲಿ ಜಾತಿ ತಾರತಮ್ಯ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಮೊತಕ್ಕಲ್ ಗ್ರಾಮದಲ್ಲಿ ಆದಿ ದ್ರಾವಿಡರ್ ಸಮುದಾಯದ 500ಕ್ಕೂ ಹೆಚ್ಚು ಅರ್ಹ ಮತದಾರರು ಈ ವರ್ಷ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಮೂಲ ಸೌಕರ್ಯಗಳ ಕೊರತೆ ಹಾಗೂ ಜಾತಿ ತಾರತಮ್ಯದಿಂದ ದಲಿತ ಸಮುದಾಯ ಹಲವು ವರ್ಷಗಳಿಂದ ನರಳುತ್ತಿದೆ ಎಂದು ದಲಿತ ಹಕ್ಕುಗಳ ಹೋರಾಟಗಾರ್ತಿ ಮತ್ತು ಲೇಖಕಿ ಶಾಲಿನ್ ಮರಿಯಾ ಲಾರೆನ್ಸ್ ಅವರನ್ನು ಉಲ್ಲೇಖಿಸಿ ಮೂಕನಾಯಕ ವರದಿ ಹೇಳಿದೆ.
ದಲಿತರಿಗೆ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆಯೇ ಇಲ್ಲ. ಸಮುದಾಯವು ಅನೇಕ ಪ್ರಬಲ ಜಾತಿ ಮತ್ತು ಪಂಚಾಯತ್ ಅಧ್ಯಕ್ಷರಿಂದ ತಾರತಮ್ಯವನ್ನು ಎದುರಿಸಿದೆ. ಸ್ಮಶಾನಕ್ಕೆ ತೆರಳಲು ಪ್ರತ್ಯೇಕ ಮಾರ್ಗವನ್ನು ಬಳಸಬೇಕಾದ ಅನಿವಾರ್ಯತೆ ಹಲವು ವರ್ಷಗಳಿಂದ ನಮಗೆ ಎದುರಾಗಿದೆ. ಆದರೆ, ಗ್ರಾಮದ ಪ್ರಬಲ ಜಾತಿಯವರು ಮುಖ್ಯ ರಸ್ತೆಯಲ್ಲಿ ಹೋಗಲು ಬಿಡುತ್ತಿಲ್ಲ. ಅವರಿಂದ ಭಯಭೀತರಾಗಿದ್ದೇವೆ” ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ತಮ್ಮ ಸಾಮೂಹಿಕ ಅತೃಪ್ತಿ ವ್ಯಕ್ತಪಡಿಸಲು ಲೋಕಸಭೆ ಚುನಾವಣೆಗೂ ಮುನ್ನ ಗ್ರಾಮಸ್ಥರು ಗ್ರಾಮದ ಪ್ರವೇಶ ದ್ವಾರ ಹಾಗೂ ಸುಮಾರು 200 ಮನೆಗಳ ಮುಂದೆ ಕಪ್ಪು ಬಾವುಟ ಹಾರಿಸಿದ್ದರು. ಗ್ರಾಮಸ್ಥರು ತಮ್ಮ ಬೇಡಿಕೆ ಹಾಗೂ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದರು ಎಂದು ಮೂಕನಾಯಕ ತಿಳಿಸಿದೆ.
ಜಾತಿ ದೌರ್ಜನ್ಯಕ್ಕೆ ಪೊಲೀಸರಿಂದ ಬೆಂಬಲ : ಆರೋಪ
ಗ್ರಾಮದ ಮುಖ್ಯ ರಸ್ತೆಯಲ್ಲಿ ದಲಿತ ಮಹಿಳೆಯ ಶವಯಾತ್ರೆಗೆ ಪ್ರಬಲರು ಅಡ್ಡಿಪಡಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು, ಪ್ರಬಲರ ಮೇಲೆ ಕ್ರಮಕೈಗೊಂಡು ದಲಿತರಿಗೆ ಅವರ ಹಕ್ಕು ನೀಡಬೇಕಾಗಿತ್ತು. ಆದರೆ, ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ಪಿ) ಮೃತ ಮಹಿಳೆಯ ಕುಟುಂಬಸ್ಥರಿಗೆ ಪರ್ಯಾಯ ಮಾರ್ಗದಲ್ಲಿ ಶವಯಾತ್ರೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಮೂಲಕ ಜಾತಿ ದೌರ್ಜನ್ಯವನ್ನು ಪೊಲೀಸರು ಬೆಂಬಲಿಸಿದ್ದಾರೆ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ದಲಿತ ಸಮುದಾಯ ಆರೋಪಿಸಿದೆ.
ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ವರದಿ ಕೂಡ ಈ ಆರೋಪವನ್ನು ಪುಷ್ಠೀಕರಿಸಿದೆ. ಘಟನಾ ಸ್ಥಳಕ್ಕೆ ಧಾವಿಸಿದ ವಿಸಿಕೆಯ ಸತ್ಯಶೋಧನಾ ತಂಡ, ತಿರುವಣ್ಣಾಮಲೈ ಶಾಸಕ ಮತ್ತು ಲೋಕೋಪಯೋಗಿ, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳ ಸಚಿವ ಎವಿ ವೇಲು ಅವರ ಆಪ್ತ ಎಂದು ಹೇಳಿಕೊಳ್ಳುವ ಸ್ಥಳೀಯ ಡಿಎಂಕೆ ನಾಯಕ ಕೂಡ ಇದಕ್ಕೆ ಸಹಕರಿಸಿದ್ದಾರೆ ಎಂದಿದೆ.
ಇದನ್ನೂ ಓದಿ : ತಮಿಳುನಾಡು : ಜಾತಿ ತಾರತಮ್ಯ ಪ್ರತಿಭಟಿಸಿದ ಬುಡಕಟ್ಟು ಪಂಚಾಯತ್ ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು


