Homeಕರ್ನಾಟಕNEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

NEET ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿಲುವಳಿ ಅಂಗೀಕಾರ; ಕಾರಣಗಳೇನು?

- Advertisement -
- Advertisement -

ಮೆರಿಟ್ ಶ್ರೇಷ್ಠ ಎಂಬ ಸುಳ್ಳು ಬಿತ್ತನೆ ವರ್ಸಸ್ ’ಸಾಮಾಜಿಕ ನ್ಯಾಯ ಮತ್ತು ಸಾಮಾನ್ಯ ಒಳಿತಿನ’ ಪರಿಕಲ್ಪನೆ

ಕರ್ನಾಟಕ ರಾಜ್ಯದ ಸಿಇಟಿ ಪರೀಕ್ಷೆ ಫಲಿತಾಂಶಗಳು ಬಂದಿವೆ. ಒಂದು ಕಡೆ ಕೋಚಿಂಗ್ ಕೇಂದ್ರಗಳು ತಾವು ಉತ್ಪಾದಿಸಿರುವ ರ್‍ಯಾಂಕ್‌ಗಳ ಬಗ್ಗೆ ಉದ್ದಗಲದ ಜಾಹೀರಾತುಗಳನ್ನು ನೀಡಿದರೆ, ಮತ್ತೊಂದು ಕಡೆ ಬಡತನದ ಹಿನ್ನೆಲೆಯಿಂದ ಬಂದ ಹಲವು ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್ ಪಡೆದ ವರದಿಗಳು ಹಲವು ದಿನಪತ್ರಿಕೆಗಳಲ್ಲಿ ರಾರಾಜಿಸಲಿವೆ. ಒಟ್ಟಿನಲ್ಲಿ ಮೆರಿಟ್ ಅಥವಾ ಅರ್ಹತೆ ಎಂಬ ಕಲ್ಪನೆ ಶ್ರೇಷ್ಠ ಎಂದು ಸಮಾಜದಲ್ಲಿ ಬಿತ್ತಿಕೊಂಡು ಬಂದಿರುವ ಸುಳ್ಳನ್ನು ಮುಂದುವರಿಸಿಕೊಂಡು ಹೋಗುವ ಹುನ್ನಾರದ ಭಾಗವಾಗಿ ಪ್ರತಿ ವರ್ಷ ನಡೆಯುವ ರಿಚುಯಲ್ ಇದು.

ಇದೇ ಕೆಲವು ದಿನಗಳ ಹಿಂದೆ ತಮಿಳುನಾಡಿನ ವಿಧಾನಸಭೆಯಲ್ಲಿ ಡಿಎಂಕೆ ಸರ್ಕಾರ ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET ವಿರುದ್ಧ ನಿಲುವಳಿಯನ್ನು ಅಂಗೀಕರಿಸಿತು. ಇದಕ್ಕೆ ಮೊದಲು ಇದ್ದ ಎಐಡಿಎಂಕೆ ಸರ್ಕಾರ ಕೂಡ NEET ವಿರುದ್ಧ ನಿಲುವನ್ನು ತಳೆದಿತ್ತು. ಇದಕ್ಕೆ ಇರುವ ಕೆಲವು ಕಾರಣಗಳನ್ನು ಅವಲೋಕಿಸುವುದು ಅಗತ್ಯ.

1984ರಲ್ಲಿ ತಮಿಳುನಾಡಿನ ಎಂ ಜಿ ರಾಮಚಂದ್ರನ್ ಸರ್ಕಾರ ತಮಿಳುನಾಡು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಪರಿಚಯಿಸಿದಾಗ ಅಂದಿನ ಡಿಎಂಕೆ ನೇತಾರ ಕರುಣಾನಿಧಿ ಇದನ್ನು ಉಗ್ರವಾಗಿ ವಿರೋಧಿಸಿದ್ದರು. ಇದು ಬಡ ಮತ್ತು ಹಿಂದುಳಿದ ಮಕ್ಕಳನ್ನು ಹೊರಗಿಡುತ್ತದೆ ಹಾಗೂ ಪೆರಿಯಾರ್ ಮತ್ತು ಸಿ ಎನ್ ಅಣ್ಣಾದೊರೈ ಅವರ ಸಮಾನತೆಯ ಕನಸಿನ ವಿರುದ್ಧ ಎಂದು ವಾದಿಸಿದ್ದರು. ನಂತರದ ದಿನಗಳಲ್ಲಿ ಇಂತಹ ಪ್ರವೇಶ ಪರೀಕ್ಷೆಯನ್ನು ಎಐಡಿಎಂಕೆಯ ಜಯಲಲಿತಾ ಕೂಡ ವಿರೋಧಿಸಿದ್ದರು. ಕೊನೆಗೆ ಡಿಎಂಕೆ ಸರ್ಕಾರ (2006-2011) ಈ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ ದ್ವಿತೀಯ ಪಿಯುಸಿ ಹಂತದಲ್ಲಿ ನಡೆಯುವ ಮೌಲ್ಯಮಾಪನದ ಆಧಾರದ ಮೇಲೆ ವೃತ್ತಿ ಶಿಕ್ಷಣಕ್ಕೆ ಪ್ರವೇಶ ನೀಡುವ ಪರಿಪಾಠ 2007-08ರಿಂದ ಪ್ರಾರಂಭವಾಯಿತು.

ಸಾಮಾಜಿಕ ನ್ಯಾಯದ ಪರವಾಗಿರುವ ಹಲವು ಶಿಕ್ಷಣತಜ್ಞರ ಅಭಿಪ್ರಾಯ ಕೂಡ ಇದೇ ಆಗಿದೆ. ಯಾವುದೇ ವೃತ್ತಿಪರ ಶಿಕ್ಷಣಕ್ಕೆ ಆಯಾ ಆಭ್ಯರ್ಥಿಯ ಜೊತೆ ಸಮಾಲೋಚನೆಯ ಅಗತ್ಯವಿರುತ್ತದೆ ಮತ್ತು ಅವರ ಆಸಕ್ತಿ ಅವರು ಹಿಂದೆ ಪಡೆದ ಶಿಕ್ಷಣದ ಮೌಲ್ಯಮಾಪನದಲ್ಲಿ ವ್ಯಕ್ತವಾಗಿರುತ್ತದೆ. ಇಂತಹ ನೆಲೆಯಲ್ಲಿ, ಸಮಾಜದಲ್ಲಿ ಎಲ್ಲ ವರ್ಗಕ್ಕೆ, ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕುವಂತಹ ಪ್ರವೇಶ ನೀತಿ ವೃತ್ತಿಶಿಕ್ಷಣಕ್ಕೆ ಇರಬೇಕು. ಇನ್ನೊಂದು ಹೆಚ್ಚುವರಿ ಪ್ರವೇಶ ಪರೀಕ್ಷೆಯಿಂದ ಆಯಾ ವೃತ್ತಿಶಿಕ್ಷಣದಲ್ಲಿ ಕಲಿಯುವ ಅಭ್ಯರ್ಥಿಗಳ ಗುಣಮಟ್ಟ ಹೆಚ್ಚುತ್ತದೆ ಎಂಬುದು ಇಲ್ಲಿಯವರೆಗೂ ನಂಬಿಸಿಕೊಂಡು ಬಂದಿರುವ ಮಹಾ ಸುಳ್ಳಲ್ಲದೇ ಬೇರೇನೂ ಅಲ್ಲ.

ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಾಮಾನ್ಯ ಒಳಿತಿಗಾಗಿ, ಸಾರ್ವಜನಿಕ ಶಿಕ್ಷಣ ಹಾಗು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತಮಿಳುನಾಡು ನಡೆಸಿಕೊಂಡು ಬಂದ ಪ್ರಯೋಗ ಅನುಕರಣೀಯ ಮಾದರಿ. ನೀತಿ ಆಯೋಗದ ರಾಷ್ಟ್ರೀಯ ಆರೋಗ್ಯ ವರದಿಯ ಪ್ರಕಾರ ಅಖಿಲ ಭಾರತದ ಮಟ್ಟದಲ್ಲಿ 1445 ಜನರಿಗೆ ಒಬ್ಬ ವೈದ್ಯರಿದ್ದರೆ, ತಮಿಳುನಾಡಿನಲ್ಲಿ 253 ಜನರಿಗೆ ಒಬ್ಬ ವೈದ್ಯರಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೋ (ಜಿಇಆರ್) 26.3 ಇದ್ದರೆ ಅದು ತಮಿಳುನಾಡಿನಲ್ಲಿ 49 ಇದೆ. ಇಂತಹ ವ್ಯವಸ್ಥೆಯಲ್ಲಿ, ಗ್ರಾಮೀಣ ವಿದ್ಯಾರ್ಥಿಗಳಿಗೆ, ತಮಿಳು ಮಾಧ್ಯಮಗಳಲ್ಲಿ ಓದಿದವರಿಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೂ ಕೂಡ ವೈದ್ಯಕೀಯ ಶಿಕ್ಷಣ ಪಡೆಯುವ ಸಮಾನ ಅವಕಾಶ ಸಾಪೇಕ್ಷವಾಗಿ ಹೆಚ್ಚಿದ್ದ ನಾಡಿನಲ್ಲಿ, ಒಂದು ದೇಶ ಒಂದು ಪರೀಕ್ಷೆ ಎನ್ನುವಂತಹ NEET ಪರೀಕ್ಷೆಯನ್ನು ಹೇರಿದ್ದು ಅಲ್ಲಿನ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಯಿತು.

NEET ಪರೀಕ್ಷೆ ಪರಿಚಯಿಸಿದ ಮೇಲೆ ಆಗುವ ಸಮಸ್ಯೆಗಳ ಬಗ್ಗೆ ಹಲವು ಶಿಕ್ಷಣ ತಜ್ಞರು ಈಗಾಗಲೇ ಬೆಳಕು ಚೆಲ್ಲಿದ್ದಾರೆ. ಈಗ ನಿವೃತ್ತ ಜಸ್ಟಿಸ್ ಎ ಕೆ ರಂಗರಾಜನ್ ನೇತೃತ್ವದ ಸಮಿತಿ NEET ಪರೀಕ್ಷೆಯಿಂದ ಹಿಂದುಳಿದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮವನ್ನು ಅಧ್ಯಯನ ಮಾಡಿ ಬಿಡುಗಡೆ ಮಾಡಿರುವ ವರದಿಯಲ್ಲಿ, ಇದು ತಮಿಳುನಾಡು ರಾಜ್ಯವನ್ನು ಸ್ವತಂತ್ರಪೂರ್ವ ಕಾಲಕ್ಕೆ ಕೊಂಡೊಯ್ಯುತ್ತದೆ ಎಂದಿರುವುದಲ್ಲದೆ, ಈ ಪರೀಕ್ಷೆಯನ್ನು ರದ್ದುಗೊಳಿಸಲು ರಾಜ್ಯಸರ್ಕಾರ ಎಲ್ಲಾ ಅಗತ್ಯ ಕಾನೂನು ಮತ್ತು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ.

ಈ ವರದಿ ನೀಡಿರುವ ಇದೊಂದು ಅಂಕಿಅಂಶವನ್ನು ಗಮನಿಸಿ: 2015 ಮತ್ತು 2020ರ ನಡುವೆ ತಮಿಳುನಾಡು ವೈದ್ಯಕೀಯ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದ, ಸಿಬಿಎಸ್‌ಇಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ ಶೇ.0%ಯಿಂದ ಶೇ.26.83ಕ್ಕೆ ಏರಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಈ ಸಂಖ್ಯೆ 0.07% ಇಂದ 12.01%ಕ್ಕೆ ಏರಿದೆ. ಇದೇ ಸಮಯದಲ್ಲಿ ರಾಜ್ಯ ಶಿಕ್ಷಣ ಮಂಡಲಿಯ ಅಡಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವವರ ಸಂಖ್ಯೆ 65% ಇಂದ 43.13%ಗೆ ಇಳಿದಿದೆ. ತಮಿಳು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪ್ರವೇಶ ಪಡೆದ ಸಂಖ್ಯೆ 14.4% ಇಂದ 1.7%ಗೆ ಇಳಿದಿದೆ.

ಕೆಳಗಿನ ಕೋಷ್ಠಕ: ಎಂಬಿಬಿಎಸ್ ಪ್ರವೇಶದ ಅಂಕಿ-ಸಂಖ್ಯೆ

NEET ಪರೀಕ್ಷೆ ಪೂರ್ವ: 2010-2017
NEET ಪರೀಕ್ಷೆ ನಂತರ: 2017-2021

ಇದು ಸ್ಪಷ್ಟವಾಗಿ ತಿಳಿಸುವುದೇನೆಂದರೆ NEET ಪರೀಕ್ಷೆಯನ್ನು ಎದುರಿಸುವುದಕ್ಕೆ ಕೋಚಿಂಗ್ ತೆಗೆದುಕೊಳ್ಳಲು ಶಕ್ತರಾದ ಉಳ್ಳ ಸಮುದಾಯಕ್ಕೆ ಮಾತ್ರ ಇದು ನೆರವಾಗಿದೆ. ತಳಸಮುದಾಯದಿಂದ, ಶೋಷಿತ ಸಮುದಾಯದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಹಂತವನ್ನು ತಲುಪುವುದೇ ಒಂದು ಸವಾಲಾಗಿರುತ್ತದೆ. ಇಂತಹ ಸಮಯದಲ್ಲಿ ಮತ್ತೊಂದು ಪರೀಕ್ಷೆಗೆ ಸಂಪನ್ಮೂಲಗಳನ್ನು ವ್ಯಯಿಸುವುದು ಸುಲಭದ ಮಾತಲ್ಲ. ಅದೂ ಅಲ್ಲದೆ ಬಹು ಉತ್ತರಗಳನ್ನು ಟಿಕ್ ಮಾಡಿ ಕ್ರ್ಯಾಕ್ ಮಾಡುವ ಪರೀಕ್ಷೆಯೊಂದು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡುವುದಕ್ಕೆ ಮಾನದಂಡವಾಗುವುದಿಲ್ಲ. ರಂಗರಾಜನ್ ಸಮಿತಿ ಕೂಡ ಹೇಳುವಂತೆ NEET ಪರೀಕ್ಷೆ ಕಂಠಪಾಠ ಮಾಡುವುದನ್ನು ಉತ್ತೇಜಿಸುತ್ತದೆಯೇ ಹೊರತು, ಸಂಕೀರ್ಣ ಮತ್ತು ಉನ್ನತ ಮಟ್ಟದ ಚಿಂತನೆಗೆ ಉತ್ತೇಜಿಸುವುದಿಲ್ಲ. ಅಲ್ಲದೆ ಈ ಕೋಚಿಂಗ್ ಉದ್ಯಮ ವಾರ್ಷಿಕವಾಗಿ ಸುಮಾರು 5750 ಕೋಟಿ ಗಳಿಸುವ ಉದ್ಯಮವಾಗಿ ಬೆಳೆದಿದೆ ಎಂದು ಕೂಡ ವರದಿ ಸೂಚಿಸುತ್ತದೆ.

ಕರ್ನಾಟಕದಲ್ಲಂತೂ ಸ್ಪರ್ಧಾತ್ಮಕ ಪರೀಕ್ಷೆಗಳ ತೀವ್ರ ದಮನ

ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆ ಮೇಲೆ ಪ್ರಹಾರ ಮಾಡಿರುವ NEET ಪರೀಕ್ಷೆಗೆ ಈ ಮಟ್ಟದ ವಿರೋಧ ವ್ಯಕ್ತವಾಗಿದ್ದರೆ, ಕರ್ನಾಟಕದಲ್ಲಿ ಅಂತಹ ದೊಡ್ಡಮಟ್ಟದ ಪ್ರತಿರೋಧವಂತೂ ಕೇಳಿಯೇ ಬಂದಿಲ್ಲ. ಇಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿಯೇ ಹತ್ತಾರು ಪ್ರವೇಶ ಪರೀಕ್ಷೆಗಳಿವೆ. ಸಿಇಟಿ, ಕಾಮೆಡ್‌ಕೆ, ಜೆಇಇ ಹೀಗೆ ಹತ್ತಾರು ಪರೀಕ್ಷೆಗಳನ್ನು ಎದುರಿಸುವ ಒತ್ತಡದಲ್ಲಿ ನಿಜವಾದ ಕಲಿಕೆ ಮೂಲೆಗುಂಪಾಗಿರುವುದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಇಂತಹ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿಯೇ ನಾಯಿಕೊಡೆಗಳಂತೆ ಎದ್ದಿರುವ ಕೋಚಿಂಗ್ ಸಂಸ್ಥೆಗಳು ಇಡೀ ಶಿಕ್ಷಣಕ್ಕೆ ಮಾರಕವಾಗಿ ರಾರಾಜಿಸುತ್ತಿವೆ.

ಇನ್ನು ಇದರ ಬಗ್ಗೆ ಹಲವು ಕಾಲದಿಂದ ಅಧ್ಯಯನ ನಡೆಸಿರುವ ವೃತ್ತಿಶಿಕ್ಷಣ ಸಮಾಲೋಚಕ ಉಮರ್ ಹೇಳುವಂತೆ, ಕರ್ನಾಟಕದ ಎಷ್ಟೋ ಸರ್ಕಾರಿ ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವ ಮಕ್ಕಳಿಗೆ NEET ಪರೀಕ್ಷೆಯ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇನ್ನು ಎಷ್ಟೋ ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಇರುವ ಸುಮಾರು 250 ವೈದ್ಯಕೀಯ ಸೀಟುಗಳನ್ನು ಪಡೆಯಲು ಪ್ರತ್ಯೇಕ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ಅಥವಾ ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ನೀಡಲಾಗುತ್ತದೆ. ಇದು ನಮಗೆ ತಿಳಿಸುವುದೇನೆಂದರೆ ಒಂದು ಕಡೆ ಇದು ಅಂಚಿನಲ್ಲುಳಿದ ಸಮುದಾಯದ ವಿದ್ಯಾರ್ಥಿಗಳನ್ನು ಹೊರಗುಳಿಸುತ್ತದೆ ಎನ್ನುವುದರ ಜೊತೆಗೆ, ಉಳ್ಳವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ದೊರಕುತ್ತದೆ ಮತ್ತು ಎಷ್ಟೋ ವೈದ್ಯಕೀಯ ಸೀಟುಗಳನ್ನು ಈ NEET ಪ್ರವೇಶ ಪರೀಕ್ಷೆಯ ಹೊರತಾಗಿಯೂ ಮಾರಿಕೊಳ್ಳಲಾಗುತ್ತದೆ.

ಮೆರಿಟ್ ಶ್ರೇಷ್ಠ ಎಂಬ ಸುಳ್ಳಿನ ಬಗ್ಗೆ ವಿಶ್ವದಾದ್ಯಂತ ಚರ್ಚೆ ಎದ್ದಿದೆ

ಜರ್ಮನಿ ದೇಶದ ಚಾನ್ಸಲೆರ್ ಚುನಾವಣೆಗಳಲ್ಲಿ ಮುಂಚೂಣಿ ಅಭ್ಯರ್ಥಿಯಾಗಿರುವ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಓಲಾಫ್ ಶೋಲ್ಸ್ (ಸದ್ಯದ ಉಪ ಚಾನ್ಸಲೆರ್ ಮತ್ತು ವಿತ್ತ ಸಚಿವ) ಅವರು ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಮೆರಿಟ್ ಕಲ್ಪನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅಮೆರಿಕದಲ್ಲಿ ಟ್ರಂಪ್‌ಅನ್ನು ಗೆಲ್ಲಿಸಿದ್ದ ಬಗ್ಗೆ ಮತ್ತು ಬ್ರಿಟನ್‌ನಲ್ಲಿ ಬ್ರೆಕ್ಸಿಟ್ ಪರವಾಗಿ ಬಹುಮತ ಚಲಾಯಿಸಿದ ಬಗ್ಗೆ ಮಾತನಾಡುತ್ತಾ “ಕೆಲವು ವೃತ್ತಿಪರ ವರ್ಗದಲ್ಲಿ ಇರುವ ಅರ್ಹತೆಯ ಬಗೆಗಿನ ಉತ್ಸಾಹ ಅವರ ಯಶಸ್ಸಿಗೆ ತಾವೇ ಸಂಪೂರ್ಣ ಕಾರಣ ಎಂದು ನಂಬುವಂತೆ ಮಾಡಿದೆ. ಈ ಕಾರಣಕ್ಕೆ, ನಿಜವಾಗಿ ರಸ್ತೆಗಳಲ್ಲಿ ಶ್ರಮವಹಿಸಿ ಈ ಯಶಸ್ಸಿನ ಪ್ರದರ್ಶನಕ್ಕೆ ಕಾರಣವಾಗಿರುವವರಿಗೆ ನಿಜವಾದ ಗೌರವ ಸಿಗುತ್ತಿಲ್ಲ. ಇದು ಬದಲಾಗಬೇಕಿದೆ” ಎಂದದ್ದಲ್ಲದೆ, ಹಾರ್ವರ್ಡ್ ತತ್ವಶಾಸ್ತ್ರಜ್ಞ ಮೈಕೆಲ್ ಸ್ಯಾಂಡಲ್ ಅವರ ’ಟಿರೆನಿ ಆಫ್ ಮೆರಿಟ್’ ಪುಸ್ತಕದಲ್ಲಿನ ಚಿಂತನೆಗಳನ್ನು ಆಧರಿಸಿ “ಮೆರಿಟ್ ಎಂಬುದು ಕೇವಲ ಅತಿ ಹೆಚ್ಚು ಗಳಿಕೆ ಇರುವವರಿಗೆ ಅಥವಾ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದವರಿಗೆ ಸೀಮಿತವಾಗಬೇಕಿಲ್ಲ. ಸೆಕ್ಯುರಿಟಿ ಗಾರ್ಡ್‌ಗೆ ಕೂಡ ಮೆರಿಟ್ ಇದೆ. ದಿನಗೂಲಿ ಶ್ರಮಿಕರೂ ಅಕಾಡೆಮಿಕ್‌ಗಳಿಗಿಂತ ಕಡಿಮೆ ಗೌರವವನ್ನು ಪಡೆಯಬೇಕಿಲ್ಲ” ಎಂದಿದ್ದರು.

PC : The Straits Times (ಓಲಾಫ್ ಶೋಲ್ಸ್)

ಪಶ್ಚಿಮ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಅತ್ಯುತ್ತಮ ಕೋಚಿಂಗ್ ಪಡೆಯಲು ಶಕ್ತವಾಗಿರುವ ಕುಟುಂಬಗಳಿಗೆ ಸೇರಿರುತ್ತಾರೆ ಮತ್ತು ಇದರಲ್ಲಿ ಮೆರಿಟ್ ಪ್ರಶ್ನೆ ಹೇಗೆ ನಗಣ್ಯವಾಗಿರುತ್ತದೆ ಎಂಬ ಹಲವು ಅಧ್ಯಯನಗಳು ಆಗಿವೆ. ಇದೇ ನಿಟ್ಟಿನಲ್ಲಿ ಹಲವು ವಿಶ್ವವಿದ್ಯಾಲಯಗಳು ಏಕರೂಪದ ಪರೀಕ್ಷೆಗಳಾದ ಜಿಆರ್‌ಇ, ಜಿಎಂಎಟಿ ಮುಂತಾದ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಪ್ರವೇಶಕ್ಕೆ ಪರಿಗಣಿಸುವ ಬಗ್ಗೆ ಹಿಂದೆ ಸರಿದಿವೆ. ಇನ್ನೂ ಹಲವು ವಿಶ್ವವಿದ್ಯಾಲಯಗಳು ಆ ದಿಕ್ಕಿನಲ್ಲಿ ಚಿಂತಿಸುತ್ತಿವೆ. ವಿದ್ಯಾರ್ಥಿ ಆಸಕ್ತಿ, ಸರ್ವಾಂಗೀಣ ಅಭಿವೃದ್ಧಿಯನ್ನು ಪರಿಗಣಿಸಿ ಪ್ರವೇಶ ನೀಡುವ, ಸಾಮಾಜಿಕ ಪ್ರಾತಿನಿಧ್ಯದ ಕಡೆಗೆ ಹೆಜ್ಜೆ ಹಾಕುವೆಡೆಗೆ ಹಲವು ಪಶ್ಚಿಮದ ಸಂಸ್ಥಗಳು ದಾಪುಗಾಲು ಹಾಕುತ್ತಿವೆ.

ಒಕ್ಕೂಟ ವ್ಯವಸ್ಥೆಗೆ ಧಕ್ಕೆ

ಇದಿಷ್ಟೇ ಅಲ್ಲದೆ ಏಕರೂಪದ ಪರೀಕ್ಷೆಗಳು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ನೀಡುತ್ತವೆ. ಒಂದು, ಶಿಕ್ಷಣ ರಾಜ್ಯ ಪಟ್ಟಿಗೆ ಸೇರಿದ ವಿಷಯವಾಗಿರುವುದರಿಂದ ರಾಜ್ಯಗಳ ಮಾತಿಗೆ ಹೆಚ್ಚು ಮನ್ನಣೆ ಸಿಗಬೇಕಿದೆ. ಎರಡು, ಪ್ರತಿ ರಾಜ್ಯಗಳ ಭಾಷೆ, ಸಂಸ್ಕೃತಿ ವಿಶಿಷ್ಟ ಮತ್ತು ಅನನ್ಯವಾಗಿರುವುದರಿಂದ ಆ ರಾಜ್ಯದ ಮಕ್ಕಳಿಗೆ ಹೆಚ್ಚು ಪ್ರವೇಶಾವಕಾಶ ಇರಬೇಕಾಗುತ್ತದೆ. ಮೂರು, ಅದರಲ್ಲೂ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರ ಎಲ್ಲಾ ಸಮುದಾಯದ ಮತ್ತು ಎಲ್ಲ ವರ್ಗದ ಜನರನ್ನು ತಲುಪುವಂತೆ ಮಾಡುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯವಾಗಿರಬೇಕು. ಇದಕ್ಕಾಗಿ ಅಲ್ಲಿನ ಭಾಷಾ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ಸಿಕ್ಕುವಂತಾಗುವುದು ಮುಖ್ಯವಾಗಿದೆ. ಈ ಎಲ್ಲ ಕಾರಣಗಳಿಗಾಗಿ ಆಯಾ ರಾಜ್ಯದ ವೃತ್ತಿಪರ ಪ್ರವೇಶಕ್ಕೆ ನಿಯಮಾವಳಿಗಳನ್ನು ಹಾಕಿಕೊಳ್ಳಲು ಸಂಪೂರ್ಣ ಅವಕಾಶ ಇರುವುದು ಅಗತ್ಯ.

ಕರ್ನಾಟಕವು ತಮಿಳುನಾಡಿನ ಮಾದರಿಯನ್ನು ಅನುಸರಿಸಿ ಎಲ್ಲಾ ಬಗೆಯ ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ, ಅರ್ಹತಾ ತರಗತಿಯ ಪರೀಕ್ಷೆಯ ಫಲಿತಾಂಶವನ್ನೇ ಮಾನದಂಡವಾಗಿಟ್ಟುಕೊಳ್ಳಬೇಕು, ನೀಟ್‌ನ ಏಕಾಧಿಪತ್ಯಕ್ಕೆ ತಡೆಯೊಡ್ಡುವ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ವಿವಿಧ ವಂಚಿತ ಹಾಗೂ ಗ್ರಾಮೀಣ ಸಮುದಾಯಗಳಿಗೆ ಅವಕಾಶ ಸಿಗುವಂತೆ ನೀತಿ ರೂಪಿಸಲು ಮುಂದಾಗಬೇಕು. ಈ ಸದ್ಯ ಕನಿಷ್ಠ ಲಕ್ಷಾಂತರ ವಿದ್ಯಾರ್ಥಿಗಳು ಮಾಹಿತಿಯಿಂದ ವಂಚಿತವಾಗಿರುವುದು, ಕೋಚಿಂಗ್ ತಾರತಮ್ಯ ಇರುವುದನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಇದನ್ನೂ ಓದಿ: NEET ವಿರುದ್ಧ ಮಸೂದೆ ಅಂಗೀಕರಿಸಿದ ತಮಿಳುನಾಡು ಸರ್ಕಾರ; ಸಿಎಂ ಸ್ಟಾಲಿನ್ ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...