Homeಮುಖಪುಟ‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

ಸದಭಿರುಚಿಯ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ನೀಡುವ ಕುರಿತು ಸರ್ಕಾರದೊಂದಿಗೆ ಮಾತನಾಡುವುದಾಗಿ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್‌ ತಿಳಿಸಿದ್ದಾರೆ.

- Advertisement -
- Advertisement -

ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ಮಾಣ ಮಾಡಿರುವ ‘ಚಾರ್ಲಿ 777’ ಸಿನಿಮಾಕ್ಕೆ ರಾಜ್ಯ ಸರ್ಕಾರ ಎಸ್‌ಜಿಎಸ್‌ಟಿ (ರಾಜ್ಯ ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ ನೀಡಿದೆ. ಸರ್ಕಾರದ ನಿರ್ಧಾರವನ್ನು ತೆರೆದ ಹೃದಯದಿಂದ ಸ್ವಾಗತಿಸಿರುವ ಕನ್ನಡ ಚಿತ್ರಕರ್ಮಿಗಳು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರ ಇತರ ಸದಭಿರುಚಿಯ ಸಿನಿಮಾಗಳಿಗೂ ಪ್ರೋತ್ಸಾಹ ನೀಡಬೇಕೆಂಬ ಅಭಿಪ್ರಾಯವನ್ನು ತಾಳಿದ್ದಾರೆ.

‘ಹರಿವು’, ‘ನಾತಿಚರಾಮಿ’, ‘ಆಕ್ಟ್‌ 1978’ ಸಿನಿಮಾಗಳನ್ನು ನಿರ್ದೇಶಿಸಿರುವ ಮಂಸೋರೆಯವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಪತ್ರ ಬರೆದ ಬಳಿಕ ಹಲವು ಚಿತ್ರಕರ್ಮಿಗಳು ಈ ಕುರಿತು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ?” ಎಂದು ಮಂಸೋರೆ ಕೇಳಿದ್ದಾರೆ.

“ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ: ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಠಕ್ಕೆ, ಅಮೃತಮತಿ, ನೀಲಿ ಹಕ್ಕಿ- ಇನ್ನೂ ಬಹಳಷ್ಟ ಸಿನಿಮಾಗಳಿವೆ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ, ಅತ್ಯುತ್ತಮ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಬಂದಿವೆ. ಈ ಯಾವುದಕ್ಕೂ ತೆರಿಗೆ ವಿನಾಯಿತಿ ನೀಡದೆ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಸೋರೆಯವರ ಪತ್ರದ ಹಿನ್ನಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಚಿತ್ರಕರ್ಮಿಗಳು ಸರ್ಕಾರದ ಮುಂದೆ ಇದೇ ಬೇಡಿಕೆಯನ್ನು ಇಟ್ಟರು. ಸದಭಿರುಚಿಯ ಸಿನಿಮಾಗಳು ಹೆಚ್ಚಾಗಬೇಕಾದರೆ ಸರ್ಕಾರ ತೆರಿಗೆ ವಿನಾಯಿತಿ ನಿರ್ಧಾರವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿರಿ: ‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ

ಸಮಿತಿ ರಚಿಸಿ ತೆರಿಗೆ ವಿನಾಯಿತಿಗೆ ನಿರ್ಧಾರ ಮಾಡಲಿ: ಜಯತೀರ್ಥ

‘ಒಲವೇ ಮಂದಾರ’, ‘ಬ್ಯೂಟಿಫುಲ್‌ ಮನಸುಗಳು’, ‘ಬೆಲ್‌ಬಾಟಂ’ ಸಿನಿಮಾಗಳ ನಿರ್ದೇಶಕ ಜಯತೀರ್ಥ ಅವರು ಮಾತನಾಡಿ, “ಸರ್ಕಾರ ಒಳ್ಳೆಯ ಹೆಜ್ಜೆಯನ್ನಿಟ್ಟಿದೆ. ಸದಭಿರುಚಿಯ ಸಿನಿಮಾಕ್ಕೆ ತೆರಿಗೆ ನೀಡಿದೆ. ಇದೇ ರೀತಿಯ ಒಳ್ಳೆಯ ಆಶಯ ಇರುವ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿದರೆ ಬಹಳ ಒಳ್ಳೆಯದಾಗುತ್ತದೆ. ಅದಕ್ಕೆ ನನ್ನ ಬೆಂಬಲವೂ ಇದೆ” ಎಂದರು.

ನಿರ್ದೇಶಕ ಜಯತೀರ್ಥ

“ಒಳ್ಳೆಯ ಸಿನಿಮಾ ಯಾವುದೆಂದು ನಿರ್ಧಾರ ಮಾಡಲು ಎಲ್ಲ ಸಿನಿಮಾಗಳನ್ನು ನೋಡಲು ಮುಖ್ಯಮಂತ್ರಿಯವರಿಗೆ ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಯವರಿಗೆ ಸಂಪರ್ಕದಲ್ಲಿರುವವರು ಅವರನ್ನು ಕರೆದು ಸಿನಿಮಾ ತೋರಿಸಬಹುದಷ್ಟೇ. ಆದರೆ ಯಾವುದೇ ಪ್ರಭಾವ ಇರದೇ ಇರುವ ಸಾಮಾನ್ಯ ಕಲಾವಿದರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಇದು ಸಾಧ್ಯವಾಗದು. ಅದಕ್ಕಾಗಿ ಒಂದು ಸಮಿತಿ ಮಾಡಬಹುದು. ಗುಣಾತ್ಮಕ ಸಿನಿಮಾಗಳಿಗೆ ಸಬ್ಸಿಡಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಈ ಸಬ್ಸಿಡಿ ಸಿನಿಮಾ ಬಿಡುಗಡೆಯಾಗಿ ವರ್ಷಗಳು ಕಳೆದ ಮೇಲೆ ಕೈಗೆ ಸಿಗುತ್ತದೆ. ಈ ರೀತಿ ಆಗಬಾರದು. ಸೆನ್ಸಾರ್‌ ಮಂಡಳಿ ಹೇಗೆ ಸಿನಿಮಾ ನೋಡುತ್ತದೆಯೇ ಹಾಗೆಯೇ ಸಿನಿಮಾ ನೋಡುವ ಸಮಿತಿಯನ್ನು ಸರ್ಕಾರ ಮಾಡಬಹುದು. ತೆರಿಗೆ ವಿನಾಯಿತಿ ನೀಡಬೇಕು ಎಂಬುದು ನಮ್ಮ ಆಶಯ” ಎಂದು ತಿಳಿಸಿದರು.

“ಪ್ರತಿಯೊಂದು ಹಂತದಲ್ಲೂ ನಿರ್ಮಾಪಕರು ಸವಾಲನ್ನು ಎದುರಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ ನಟರ ಸಿನಿಮಾಗಳನ್ನು ಮಾಡಿದವರು ಹೇಗೋ ಸಹಿಸಿಕೊಳ್ಳಬಹುದು. ಆದರೆ ಎಲ್ಲರಿಗೂ ಇದು ಸಾಧ್ಯವಾಗದು. ಹೀಗಾದಾಗ ಸಿನಿಮಾಗಳು ಒಟಿಟಿಗೆ ಸೀಮಿತವಾಗಿಬಿಡುತ್ತದೆ. ಸಿನಿಮಾ ಸಂಸ್ಕೃತಿ ಹೊರಟು ಹೋಗುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ದೊರಕಬೇಕಿದೆ” ಎಂದು ಒತ್ತಾಯಿಸಿದರು.

ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು

“ಕಲಾವಿದರು ಕೊಡುವ ಅನೇಕ ತೆರಿಗೆಯಿಂದ ಸರ್ಕಾರಕ್ಕೆ ಅನುಕೂಲವಾಗುತ್ತಿದೆ. ಒಂದು ಸಿನಿಮಾ ನೋಡಲು ಬರುವ ಪ್ರೇಕ್ಷಕ ಸಾಕಷ್ಟು ಹಣ ವ್ಯಯಿಸುತ್ತಾನೆ. ಪಾರ್ಕಿಂಗ್‌ ಶುಲ್ಕ ಕಟ್ಟುತ್ತಾನೆ, ಪೆಟ್ರೋಲ್ ಹಾಕಿಸಿಕೊಳ್ಳುತ್ತಾನೆ, ಮನರಂಜನಾ ತೆರಿಗೆ ಕಟ್ಟುತ್ತಾನೆ. ಹೀಗೆ ಇಷ್ಟೆಲ್ಲ ವೆಚ್ಚದ ನಡುವೆಯೂ ಫೈರಸಿ ಹಾವಳಿಯೂ ಇದೆ. ಈ ಪೈರಸಿ ಹಾವಳಿಯೂ ತಪ್ಪುತ್ತಿಲ್ಲ. ಸರ್ಕಾರದಿಂದಲೂ ಬೆಂಬಲ ಸಿಗುತ್ತಿಲ್ಲ” ಎಂದು ವಿಷಾದಿಸಿದರು.

ರಾಜನ ಭಾವನೆಗೆ ತಕ್ಕಂತೆ ಸಿನಿಮಾ ಮಾಡಬೇಕೆ: ಬಿ.ಎಂ.ಗಿರಿರಾಜ್‌

‘ಜಟ್ಟ’, ‘ನವಿಲಾದವರು’, ‘ಮೈತ್ರಿ’, ‘ಅಮರಾವತಿ’, ‘ಕನ್ನಡಿಗ’ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್‌ ಮಾತನಾಡಿ, “ನಾವು ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ನಿಮಗೆ ಇಷ್ಟವಾಗಲು ಅಥವಾ ಆಗದಿರಲು ನಿಮ್ಮದೇ ಆದ ಕಾರಣಗಳಿರುತ್ತವೆ. ಮುಖ್ಯಮಂತ್ರಿಯವರ ನಾಯಿ ತೀರಿಕೊಂಡಿದ್ದರಿಂದ ‘ಚಾರ್ಲಿ’ ಸಿನಿಮಾ ಅವರಿಗೆ ಹೆಚ್ಚು ಕನೆಕ್ಟ್ ಆಯಿತು. ಟ್ಯಾಕ್ಸ್‌ ಫ್ರೀ ಎಂದರು. ಯಾವುದೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಒಳ್ಳೆಯದು. ಆದರೆ ಈ ಪ್ರಕರಣ ಹೇಗಿದೆ ಎಂದರೆ, ಒಬ್ಬ ರಾಜ ಅಥವಾ ಒಡೆಯನ ಮನವೊಲಿಸಿ, ಆತನ ಮನಸ್ಸಿನ ಭಾವಕ್ಕೆ ತಕ್ಕಂತೆ ಸಿನಿಮಾ ಮಾಡಿದರೆ ಮಾತ್ರ ಉಳಿಗಾಲ ಎಂಬಂತಿದೆ” ಎಂದು ವಿವರಿಸಿದರು.

ನಿರ್ದೇಶಕ ಬಿ.ಎಂ.ಗಿರಿರಾಜ್‌

“ಕನ್ನಡ ಸಿನಿಮಾಗಳಿಗೆ ಮೊದಲು ತೆರಿಗೆ ವಿನಾಯಿತಿ ಇತ್ತು. ಇಲ್ಲಿನ ತಂತ್ರಜ್ಞರು, ಕಾರ್ಮಿಕರನ್ನು ಬಳಸಿಕೊಂಡು ಸಿನಿಮಾ ಮಾಡಬೇಕು ಎಂಬ ನಿಯಮಗಳಿದ್ದವು. ಆದರೆ ಜಿಎಸ್‌ಟಿ ಜಾರಿ ಬಳಿಕ ಬದಲಾಯಿತು. ಕೇಂದ್ರದ ವ್ಯಾಪ್ತಿಗೆ ಹೋದ ಮೇಲೆ ತೆರಿಗೆ ವಿನಾಯಿತಿ ಕಳೆದುಕೊಂಡೆವು” ಎಂದು ಹೇಳಿದರು.

“ಒಬ್ಬ ನಿರ್ಮಾಪಕ ಕಷ್ಟಪಟ್ಟು 10 ಕೋಟಿ ರೂ. ವೆಚ್ಚದಲ್ಲಿ ಒಂದು ಸಿನಿಮಾ ಮಾಡುತ್ತಾನೆ ಎಂದುಕೊಳ್ಳೋಣ. ಅದರಲ್ಲಿ 18 % ಜಿಎಸ್‌ಟಿ ಎಂದರೆ 1 ಕೋಟಿ 80 ಲಕ್ಷ ರೂ.ಗಳಾಗುತ್ತದೆ. ಬಡ್ಡಿ ಮೇಲೆ ಹಣ ತಂದಿರುತ್ತಾರೆ. ಹೀಗಿರುವಾಗ 1 ಕೋಟಿ 80 ಲಕ್ಷ ರೂ. ಮೊದಲೇ ಕಟ್ಟಿ ಎನ್ನುವುದು ಬಹಳ ಭಾರವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅತಿ ಹೆಚ್ಚು ಸಿನಿಮಾ ಬಿಡುಗಡೆ ಮಾಡಿದ ರಾಜ್ಯ ನಮ್ಮದು. ಒಂದು ರಾಜ್ಯಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಮತ್ತೊಂದು ರಾಜ್ಯವೂ ಕೇಳುತ್ತದೆ ಎಂಬ ವಾದವನ್ನು ಮಂಡಿಸುತ್ತಾರೆ. ಆದರೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿರಿ: ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

ವಿನಾಯಿತಿ ನೀಡಿದರೆ ಪ್ರೇಕ್ಷಕರು ಹೆಚ್ಚುತ್ತಾರೆ: ಕಿಶೋರ್‌‌ ಪತ್ತಿಕೊಂಡ

ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ನ ನಿರ್ಮಾಪಕ ಹಾಗೂ ಹಂಚಿಕೆದಾರರೂ ಆಗಿರುವ ಕಿಶೋರ್ ಪತ್ತಿಕೊಂಡ ಮಾತನಾಡಿ, “ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ಬಹಳ ಅನುಕೂಲವಾಗುತ್ತದೆ. ಮೊದಲೆಲ್ಲ ತೆರಿಗೆ ಇರಲಿಲ್ಲ. ಆದರೆ ಈಗ ಪ್ರೇಕ್ಷಕರಿಗೂ ಭಾರವಾಗುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ನಿರ್ಮಾಪಕ ಕಿಶೋರ್‌ ಪತ್ತಿಕೊಂಡ

“ಚಿತ್ರಮಂದಿರಗಳಿಂದ ಬರುವ ಆದಾಯ ಹೆಚ್ಚಾದರೆ, ಮೂವತ್ತು ದಿನಕ್ಕೆ ಓಟಿಟಿಗೆ ಹೋಗುವ ಸಿನಿಮಾ ಐವತ್ತು ದಿನಕ್ಕೆ ಹೋಗುತ್ತದೆ. ದುರಾದೃಷ್ಟವಶಾತ್‌ ಬಹಳಷ್ಟು ಚಿತ್ರಮಂದಿರಗಳು ಮುಚ್ಚಿಹೋಗುತ್ತಿವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಇಂದು ಚಿತ್ರಮಂದಿರಗಳು ಉಳಿಯಬೇಕಾದರೆ ತೆರಿಗೆ ವಿನಾಯಿತಿ ಅಗತ್ಯವಿದೆ. ಚಾರ್ಲಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಿದ್ದು ಖುಷಿ ತಂದಿದೆ. ಇದೇ ಕ್ರಮವನ್ನು ಎಲ್ಲ ಸಿನಿಮಾಗಳಿಗೆ ಅನ್ವಯಿಸುವ ಅಗತ್ಯವಿದೆ” ಎಂದು ಮನವಿ ಮಾಡಿದರು.

ಸರ್ಕಾರದೊಂದಿಗೆ ಮಾತನಾಡುವೆ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಹೇಳಿಕೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್‌, “ಈ ವಿಚಾರವಾಗಿ ವಾರ್ತಾ ಇಲಾಖೆಯ ಆಯುಕ್ತರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಮಂಸೋರೆಯಂಥವರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದಂತೆಯೇ ಒಳ್ಳೆಯ ಸಿನಿಮಾಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು. ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಚಿತ್ರರಂಗ ಸವಾಲುಗಳನ್ನು ಎದುರಿಸುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಹಿರಿಯರೊಂದಿಗೆ ಚರ್ಚಿಸುವೆ” ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌

ತೆರಿಗೆ ವಿನಾಯಿತಿ ವಿಸ್ತರಿಸಿ: ಮಂಸೋರೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಂಸೋರೆಯವರು, “ತೆರಿಗೆ ವಿನಾಯಿತಿ ನೀಡಿದರೆ ಮಧ್ಯಮ ಹಾಗೂ ಕಡಿಮೆ ಬಜೆಟ್ ಸಿನಿಮಾ ಮೇಕರ್ಸ್‌‌ಗಳಿಗೆ ಬಹಳ ಅನುಕೂಲವಾಗುತ್ತದೆ. ಚಾರ್ಲಿಗೆ ಕೊಟ್ಟಿರುವ ವಿನಾಯಿತಿಯನ್ನು ಎಲ್ಲ ಸಿನಿಮಾಗಳಿಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.

“ಜಿಎಸ್‌ಟಿ ಬಂದ ಮೇಲೆ ಕೇಂದ್ರದ ಹಿಡಿತಕ್ಕೆ ಸಿಲುಕಿ ರಾಜ್ಯ ಸರ್ಕಾರಗಳ ಕೈಕಾಲು ಕತ್ತರಿಸಿದಂತಾಗಿದೆ. ಒಟ್ಟಾಗಿ ಕೂತು ಮಾತನಾಡಿ, ವಿನಾಯಿತಿ ನೀಡಬೇಕಾಗಿದೆ. ಒಳ್ಳೆಯ ಸಿನಿಮಾ ಯಾವುದೆಂದು ವಾರ್ತಾ ಇಲಾಖೆ ನಿರ್ಧರಿಸಬೇಕಿದೆ. ಹಳೆಯ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆ” ಎಂದು ಹೇಳಿದರು.

ನಿರ್ದೇಶಕ ಮಂಸೋರೆ

ಅಭಿಪ್ರಾಯ ನೀಡಲು ನಿರಾಕರಿಸಿದ ರಾಕ್‌ಲೈನ್‌

ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ತೆರಿಗೆ ವಿನಾಯಿತಿ ಬಗ್ಗೆ ಕಮೆಂಟ್‌ ಮಾಡಲು ಹೋಗಲ್ಲ” ಎಂದು ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಡ್ಡಿಗಳ ಸದಭಿರುಚಿಯೆಂದರೆ ಕೋಮುವಾದ, ಮತಾಂಧತೆ,ಹಿಂಸೆ,ಚಾರಿತ್ರ್ಯಹನನ ಇತ್ಯಾದಿ. ಈ ಶೂದ್ರ ಚಾರ್ಲಿ ಜನಪರ ಕಾಳಜಿಯ ಚೇತನನಿಗೆ ಬ್ರಾಹ್ಮಣ್ಯದ ವಿರುದ್ಧ ಮಾತಾನಾಡದಂತೆ ಬುದ್ಧಿ ಹೇಳಿದವ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕ, ನಿರ್ದೇಶಕ, ನಟರುಗಳು ಸಿನಿಮಾ ಆರಂಭಕ್ಕೂ ಮುಂಚೆ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಕೊಂಡು ಸಬ್ಸಿಡಿಗಾಗಿ ಪ್ರಯತ್ನಿಸಬಹುದು 😁

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...