Homeಕರೋನಾ ತಲ್ಲಣ‘ಇಂಡಿಯನ್ ವೇರಿಯೆಂಟ್’ ಪದವಿರುವ ಪೋಸ್ಟ್‌ಗಳನ್ನು ಕಿತ್ತು ಹಾಕಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ನೋಟಿಸ್

‘ಇಂಡಿಯನ್ ವೇರಿಯೆಂಟ್’ ಪದವಿರುವ ಪೋಸ್ಟ್‌ಗಳನ್ನು ಕಿತ್ತು ಹಾಕಿ: ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ನೋಟಿಸ್

ಜನರು ಸಾಂಕ್ರಮಿಕದಿಂದ ಸಾಯುತ್ತಿರಬೇಕಾದರೆ ಕೇಂದ್ರ ಸರ್ಕಾರವು ತನ್ನ ‘ಇಮೇಜ್‌’ ಸರಿಪಡಿಸುವ ಕೆಲಸದಲ್ಲಿ ನಿರತವಾಗಿದೆ.

- Advertisement -
- Advertisement -

ಕೊರೊನಾ ವೈರಸ್‌‌ನ “ಭಾರತೀಯ ರೂಪಾಂತರ”( ಇಂಡಿಯನ್ ವೇರಿಯಂಟ್) ವನ್ನು ಸೂಚಿಸುವ ಅಥವಾ ಬಳಸಿರುವ ಯಾವುದೇ ವಿಷಯವನ್ನು ತೆಗೆದುಹಾಕುವಂತೆ ಕೇಂದ್ರದ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯವು ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಪತ್ರ ಬರೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕಳೆದ ವರ್ಷ ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ರೂಪಾಂತರ ಕೊರೊನಾ ವೈರಸ್ ಅನ್ನು ಮೇ 11 ರಂದು ವಿಶ್ವ ಆರೋಗ್ಯ ಸಂಸ್ಥೆಯು ‘ಬಿ .1.617’ ಎಂದು ವರ್ಗೀಕರಿಸಿತ್ತು. ಇದರ ಮರುದಿನ “ಇಂಡಿಯನ್ ವೇರಿಯಂಟ್” ಎಂಬ ಪದವನ್ನು ಮಾಧ್ಯಮಗಳು ಯಾವುದೇ ಆಧಾರವಿಲ್ಲದೆ ಬಳಸುತ್ತಿದೆ ಎಂದು ಕೇಂದ್ರ ಸರ್ಕಾರವು ಆರೋಪಿಸಿತ್ತು.

ಈ ಬಗ್ಗೆ ಶುಕ್ರವಾರ ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ ಕಂಪೆನಿಗಳಿಗೆ ಪತ್ರ ಬರೆದಿದ್ದು, “ಕೊರೊನಾ ವೈರಸ್‌ ‘ಇಂಡಿಯನ್ ವೇರಿಯಂಟ್’ ಎಂದು ಹೆಸರಿಸುವ ಅಥವಾ ಸೂಚಿಸುವ ಎಲ್ಲಾ ವಿಷಯವನ್ನು ತೆಗೆದುಹಾಕಿ” ಎಂದು ತಿಳಿಸಿದೆ.

ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್‌ ಅನ್ನು ಬೆದರಿಸುತ್ತಿರುವ ಕೇಂದ್ರ ಸರ್ಕಾರ!

“ಇಂಡಿಯನ್ ವೇರಿಯೆಂಟ್‌ ಎಂಬ ಹೆಸರು ಸಂಪೂರ್ಣವಾಗಿ ತಪ್ಪಾಗಿದೆ. ಈ ಮಾದರಿಯ ಯಾವುದೆ ಕೊರೊನಾ ವೈರಸ್‌ ‘ರೂಪಾಂತರ’ವನ್ನು ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿಲ್ಲ. ಆರೋಗ್ಯ ಸಂಸ್ಥೆಯ ಯಾವುದೆ ವರದಿಗಳೂ ಕೊರೊನಾ ವೈರಸ್‌ನ ಬಿ .1.617 ರೂಪಾಂತರವನ್ನು ಇಂಡಿಯನ್ ವೇರಿಯೆಂಟ್‌ ಎಂದು ಹೇಳಿಲ್ಲ” ಎಂದು ಪತ್ರವು ಹೇಳಿದೆ.

‘ಇಂಡಿಯನ್ ವೇರಿಯೆಂಟ್‌’ ಉಲ್ಲೇಖವು ದೇಶದ ಚಿತ್ರಣವನ್ನು ಹಾಳುಗೆಡವುತ್ತದೆ ಮತ್ತು ತಪ್ಪು ಸಂದೇಶವನ್ನು ಹರಡುತ್ತದೆ ಎಂಬ ಬಗ್ಗೆ ‘ಗಟ್ಟಿಯಾದ ಮತ್ತು ಸ್ಪಷ್ಟವಾದ’ ಸಂದೇಶ ರವಾನಿಸಲು ಈ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಐಟಿ ಸಚಿವಾಲಯವು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಅದು ಹೇಳಿದೆ.

ಪ್ರಪಂಚದಾದ್ಯಂತ ವೈದ್ಯರು ಮತ್ತು ಆರೋಗ್ಯ ತಜ್ಞರು ಸಾಮಾನ್ಯವಾಗಿ ಕೊರೊನಾ ವೈರಸ್ ರೂಪಾಂತರಗಳು ಎಲ್ಲಿ ಪತ್ತೆಯಾಗಿದೆಯೊ ಅದರ ಆಧಾರದ ಮೇಲೆಯೆ ಹೆಸರನ್ನು ಉಲ್ಲೇಖಿಸುತ್ತಾರೆ. ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರಗಳನ್ನು ಹಾಗೆಯೆ ಉಲ್ಲೇಖಿಸುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧ ‘ಟೂಲ್‌ಕಿಟ್’ ಆರೋಪ ಸುಳ್ಳು: ಬಿಜೆಪಿಗೆ ಭಾರೀ ಮುಖಭಂಗ

ದೇಶ ಚಿತ್ರಣದ ಹಾಳಾಗುತ್ತಿದೆ ಎಂಬ ಹೆಸರಲ್ಲಿ ಕೇಂದ್ರ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಕನಿಷ್ಠ ಆರೋಗ್ಯ ಸೌಲಭ್ಯಗಳಿಲ್ಲದೆ ಸಾಂಕ್ರಮಿಕದಿಂದಾಗಿ ಜನರು ಸಾಯುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರವು ತನ್ನ ಇಮೇಜ್‌ ಸರಿಪಡಿಸಲು ಹೋಗಿ ಅಂತರಾಷ್ಟ್ರೀಯವಾಗಿ ದೇಶದ ಮಾನವನ್ನು ಹರಾಜಾಕುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶದ ಜನರ ಜೀವಕ್ಕಿಂತಲೂ ತನ್ನ ‘ಇಮೇಜ್‌’ ರಕ್ಷಿಸುವುದು ಮುಖ್ಯವಾಗಿದೆ. ಅದಕ್ಕೆ ಈ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ ಎಂದು ಹಲವಾರು ಜನರು ಕಿಡಿ ಕಾರಿದ್ದಾರೆ.

ಭಾರತವು ಕೊರೊನಾ ಪ್ರಕರಣಗಳಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಸೋಂಕುಗಳು ಮತ್ತು 4,000 ಸಾವುಗಳನ್ನು ವರದಿಯಾಗುತ್ತಿದೆ.

ಕೊರೊನಾ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಲು ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ವಿಫಲವಾದ ಹಿನ್ನಲೆಯಲ್ಲಿ ಭಾರಿ ಟೀಕೆಗಳನ್ನು ಎದುರಿಸುತ್ತಿದೆ. ಕೊರೊನಾ ಎರಡನೆ ಅಲೆ ಬರಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದರೂ ಮೋದಿ ಸರ್ಕಾರವು ಅದನ್ನು ಸಮರ್ಪಕವಾಗಿ ನಿಭಾಯಿಸಲು ಯೋಜನೆ ರೂಪಿಸದ ಕಾರಣಕ್ಕಾಗಿ ದೇಶದಾದ್ಯಂತ ಅಸಮಾಧಾನಗಳು ಎದ್ದಿದೆ.

ಇದನ್ನೂ ಓದಿ: ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read