ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ (ಸಿಪಿಐ-ಮಾವೋವಾದಿ)ಯೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿರುವ 16 ಸಂಘಟನೆಗಳು ತೆಲಂಗಾಣ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧಿಸಿ ಆದೇಶಿಸಿದೆ. ಈ 16 ಸಂಘಟನೆಗಳು ಕಾನೂನುಬಾಹಿರ ಸಂಘಟನೆಗಳು ಎಂದು ಹೇಳಿದ್ದು, ಮಾರ್ಚ್ 30 ರಿಂದ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ ಎಂದು ಘೋಷಿಸಲಾಗಿದೆ.
ತೆಲಂಗಾಣ ಸರ್ಕಾರ ಕಾನೂನುಬಾಹಿರವೆಂದು ಘೋಷಿಸಿರುವ ಸಂಘಟನೆಗಳು: ತೆಲಂಗಾಣ ಪ್ರಜಾ ಫ್ರಂಟ್ (TPD), ತೆಲಂಗಾಣ ಅಸಂಘಟಿತ ಕಾರ್ಮಿಕ ಸಮಾಕ್ಯ (TAKS), ತೆಲಂಗಾಣ ವಿದ್ಯಾರ್ಥಿ ವೇದಿಕಾ (TVV), ಡೆಮಾಕ್ರಟಿಕ್ ಸ್ಟೂಡೆಂಟ್ ಯೂನಿಯನ್ (DSU), ತೆಲಂಗಾಣ ವಿದ್ಯಾರ್ಥಿ ಸಂಘ (TVS), ಆದಿವಾಸಿ ಸ್ಟೂಡೆಂಟ್ಸ್ ಯೂನಿಯನ್ (ASU), ರಾಜಕೀಯ ಕೈದಿಗಳ ಬಿಡುಗಡೆ ಸಮಿತಿ (CRPP), ತೆಲಂಗಾಣ ರೈತಂಗ ಸಮಿತಿ (TRS), ತುಡುಮ್ ಡೆಬ್ಬಾ (TD), ಪ್ರಜಾ ಕಲಾ ಮಂಡಳಿ (PKM), ತೆಲಂಗಾಣ ಡೆಮಾಕ್ರಟಿಕ್ ಫ್ರಂಟ್ (TDF), ಹಿಂದೂ ಫ್ಯಾಸಿಸಂ ಆಕ್ರಮಣ ವಿರೋಧಿ ವೇದಿಕೆ (FAHFO), ಸಿವಿಲ್ ಲಿಬರ್ಟೀಸ್ ಕಮಿಟಿ (CLC), ಅಮರುಲಾ ಬಂಧು ಮಿಥ್ರುಲಾ ಸಂಘ (ABMS), ಚೈತನ್ಯ ಮಹಿಳಾ ಸಂಘ (CMS) ಮತ್ತು ಕ್ರಾಂತಿಕಾರಿ ಬರಹಗಾರರ ಸಂಘ (RWA).
ನಿಷೇಧಿಸಲಾಗಿರುವ ಈ 16 ಸಂಘಟನೆಗಳು ಯುಎಪಿಎ ಕಾಯ್ದೆ, ವಿವಾದಿತ ಮೂರು ಕೃಷಿ ಕಾನೂನುಗಳು, ಸಿಎಎ – ಎನ್ಆರ್ಸಿ ಮುಂತಾದ ವಿಷಯಗಳ ವಿರುದ್ದ ಪ್ರಚೋದನಾಕಾರಿ ಹೇಳಿಕೆಗಳು, ಸಭೆಗಳು ಮತ್ತು ರ್ಯಾಲಿಗಳನ್ನು ನಡೆಸುತ್ತಿದ್ದವು. ಈ ಮೂಲಕ ಜನರನ್ನು ತಮ್ಮ ಸಂಘಟನೆಯತ್ತ ಸೆಳೆಯುತ್ತಿವೆ. ಅಲ್ಲದೆ, ಈ ಸಂಘಟನೆಗಳು ಸಿಪಿಐ-ಮಾವೋವಾದಿ ನಾಯಕತ್ವದ ನಿರ್ದೇಶನದಂತೆ ಕೆಲಸ ಮಾಡುತ್ತವೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತ ವರ, ಪಿಪಿಇ ಕಿಟ್ ಧರಿಸಿದ ವಧು: ಮದುವೆ ಮಂಟಪವಾದ ಕೋವಿಡ್ ವಾರ್ಡ್!
ಈ ಸಂಘಟನೆಗಳ ಕೆಲವು ಸದಸ್ಯರು ಸರ್ಕಾರವನ್ನು “ರಾಜ್ಯದ ದಬ್ಬಾಳಿಕೆ” ಎಂದು ಕರೆಯುತ್ತಾರೆ ಮತ್ತು ಈ ಸಂಘಟನೆಗಳು ಪಿ. ವರವರ ರಾವ್, ಪ್ರೊಫೆಸರ್ ಜಿ.ಎನ್. ರೋಮಾ ವಿಲ್ಸನ್ ಮತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವಿವಿಧ ಸಂಘಟನೆಗಳ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 16 ಸಂಘಟನೆಗಳನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿರುವುದಾಗಿ ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.
ಸಂಘಟನೆಗಳನ್ನು ನಿಷೇಧಿಸಿರುವ ಸರ್ಕಾರ ಆದೇಶವನ್ನು ವಿರೋಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಸರ್ಕಾರದ ಈ ನಡೆಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ರಾಜಕೀಯ ಭಿನ್ನಮತದ ವಿರುದ್ಧ ರಾಜ್ಯ ಸರ್ಕಾರ ಈ ರೀತಿಯ ಪ್ರತೀಕಾರಕ್ಕೆ ಇಳಿದಿದೆ ಎಂದು ಆರೋಪಿಸಿದೆ.
ಯಾವುದೇ ಸಿದ್ಧಾಂತಗಳನ್ನು ಬಲಪ್ರಯೋಗದ ಮೂಲಕ ಸೋಲಿಸಲಾಗದು. ಸಮಾಜದಲ್ಲಿ ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಲು ಅವಕಾಶ ನಿರಾಕರಿಸುವುದು ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದೆ.
ಕಾನೂನುಬಾಹಿರ ಕೆಲಸವನ್ನು ಮಾಡಿರುವುದಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧ ಸರ್ಕಾರದ ಬಳಿ ಸಾಕ್ಷಿಯಿದ್ದರೇ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು. ಅದನ್ನು ಬಿಟ್ಟು, ಈ ರೀತಿಯಲ್ಲಿ ದಮನ ಮಾಡುವುದು ಪ್ರಜಾಸತ್ತಾತ್ಮಕ ಸಮಾಜಕ್ಕೆ ವಿನಾಶಕಾರಿಯಾಗಿದೆ ಎಂದು ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: ಸಂಕೇಶ್ವರರ Some-ಶೋಧನೆಗಳು: ಉಚಿತ ರೇಷನ್ ಕೊಟ್ಟರೆ ಜನ ಕೆಲಸಕ್ಕೆ ಬರಲ್ಲ! ಆಮ್ಲಜನಕ ಸಮಸ್ಯೆ ಬಗೆಹರಿಸಲು ನಿಂಬೆರಸ!
ತೆಲಂಗಾಣ ಸರ್ಕಾರದ ಈ ಕ್ರಮ ಪ್ರಜಾಪ್ರಭುತ್ವದ ನಾಶಕ್ಕೆ ನಾಂದಿ ಹಾಡಿದೆ.