ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಲಗಚರ್ಲಾ ಗ್ರಾಮದ ಬುಡಕಟ್ಟು ಜನರ ಮನೆಗಳಿಗೆ ತಡರಾತ್ರಿ ನುಗ್ಗಿದ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಹೆಚ್ಆರ್ಸಿ) ವರದಿ ಕೇಳಿದೆ.
ತೆಲಂಗಾಣದ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಈ ಬಗ್ಗೆ ಎರಡು ವಾರಗಳಲ್ಲಿ ವಿವರವಾದ ವರದಿ ನೀಡುವಂತೆ ಎನ್ಹೆಚ್ಆರ್ಸಿ ನೋಟಿಸ್ ಜಾರಿ ಮಾಡಿದೆ. ಆಯೋಗವು ತನ್ನ ಕಾನೂನು ಮತ್ತು ತನಿಖಾ ಅಧಿಕಾರಿಗಳ ಜಂಟಿ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿ ಒಂದು ವಾರದಲ್ಲಿ ವರದಿ ಪಡೆಯಲು ನಿರ್ಧರಿಸಿದೆ.
ನವೆಂಬರ್ 16ರಂದು ತೆಲಂಗಾಣ ತೆಲಂಗಾಣ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷ ಬಕ್ಕಿ ವೆಂಕಟಯ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಲಗಚರ್ಲಾ ಗ್ರಾಮಸ್ಥರು ದೂರು ಸಲ್ಲಿಸಿದ್ದರು.
ನವೆಂಬರ್ 11 ರಂದು ಗ್ರಾಮದಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆದ ನಂತರ, ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಬುಡಕಟ್ಟು ನಿವಾಸಿಗಳ ಮನೆಗಳಿಗೆ ‘ಪೊಲೀಸ್ ಸಿಬ್ಬಂದಿ ಹಿಂಸಾತ್ಮಕವಾಗಿ ಪ್ರವೇಶಿಸಿ’ ಬಾಗಿಲು ಒಡೆದು ಗರ್ಭಿಣಿಯರು ಸೇರಿದಂತೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದವರು. ಈ ಪೈಕಿ 12 ಮಂದಿ ಆಯೋಗವನ್ನು ಭೇಟಿಯಾಗಿ ನ್ಯಾಯ ದೊರಕಿಸುವಂತೆ ದೂರು ಸಲ್ಲಿಸಿದ್ದಾರೆ ಎಂದು ಎನ್ಹೆಚ್ಆರ್ಸಿ ತಿಳಿಸಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಸ್ವಕ್ಷೇತ್ರ ಕೊಂಡಂಗಲ್ ವ್ಯಾಪ್ತಿಯ ದಲಿತ, ಬುಡಕಟ್ಟು ನಿವಾಸಿಗಳ ಗ್ರಾಮ ಲಗಚರ್ಲಾದಲ್ಲಿ ಸರ್ಕಾರ ಅತ್ಯಾಧುನಿಕ ಫಾರ್ಮಾ ಸಿಟಿ ಸ್ಥಾಪನೆ ಮುಂದಾಗಿದೆ. ಇದಕ್ಕಾಗಿ ಈ ಹಿಂದಿನ ಸರ್ಕಾರ 16 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈಗ ಮತ್ತೆ 1,374 ಎಕರೆ ಭೂಮಿಯ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿದ ಆರೋಪವಿದೆ.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ಮನವೊಲಿಸಲು ಮತ್ತು ಅವರ ಅಹವಾಲು ಸ್ವೀಕರಿಸಲು ನವೆಂಬರ್ 11 ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ ಲಿಂಗಯ್ಯ ನಾಯ್ಕ್, ಕೊಡಂಗಲ್ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ವೆಂಕಟ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿದ ಗ್ರಾಮದ ನಿವಾಸಿಗಳು, ಅಧಿಕಾರಿಗಳನ್ನು ಓಡಿಸಿದ್ದರು. ಅವರ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದರು.
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಕ್ಷೇತ್ರ ಕೊಡಂಗಲ್ನಲ್ಲಿ ನಡೆದ ಈ ಘಟನೆಯು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಆರ್ಎಸ್ ನಡುವೆ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಕೊಡಂಗಲ್ನ ಮಾಜಿ ಬಿಆರ್ಎಸ್ ಶಾಸಕ ಪಟ್ನಂ ನರೇಂದ್ರ ರೆಡ್ಡಿ ಸೇರಿದಂತೆ ಹಲವು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಿಆರ್ಎಸ್ ನಾಯಕ ಕೆಟಿ ರಾಮರಾವ್ ಅವರ ಸೂಚನೆ ಮೇರೆಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವಾಗಿ ಹಿಂಸಾಚಾರವನ್ನು ಪ್ರಚೋದಿಸಿದ್ದಾಗಿ ನರೇಂದ್ರ ರೆಡ್ಡಿ ಒಪ್ಪಿಕೊಂಡಿದ್ದಾರೆ ಎಂದು ರಿಮಾಂಡ್ ವರದಿಯಲ್ಲಿ ಪೊಲೀಸರು ತಿಳಿಸಿದ್ದರು.
ರಾಜಕೀಯ ಲಾಭ ಗಳಿಸುವುದು ಮತ್ತು ತೆಲಂಗಾಣ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿಯುವುದು ಅವರ ಗುರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕೆಟಿಆರ್, ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದರು. ಈ ನಡುವೆ ರಾತ್ರೋರಾತ್ರಿ ಬುಡಕಟ್ಟು ಜನರ ಮನೆಗಳಿಗೆ ನುಗ್ಗಿ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಲಂಬಾಡಾ ಬುಡಕಟ್ಟು ಜನಾಂಗದ ಲಗಚಾರ್ಲ ನಿವಾಸಿಗಳ ಗುಂಪಿನ ಹೆಸರಿನಲ್ಲಿ ಎಸ್ಸಿ, ಎಸ್ಟಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. “ಪೊಲೀಸರು ನಮ್ಮ ಮನೆಗಳಿಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯ ಮೇಲೆ ಹಿಂಸಾತ್ಮಕ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗಳನ್ನು ಉಂಟು ಮಾಡಿದ್ದಾರೆ. ನಾವು ರಾತ್ರೋ ರಾತ್ರಿ ಮನೆ ಬಿಟ್ಟು ಓಡಿ ಹೋಗಿ ಹೊಲ, ಕಾಡುಗಳಲ್ಲಿ ಆಶ್ರಯ ಪಡೆದೆವು” ಎಂದು ದೂರುದಾರರು ಹೇಳಿದ್ದರು.
“ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿದ ಮೇಲೆ ಬಂಧಿತರಾಗಿರುವ ಹಲವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದವರು ಸರ್ಕಾರಿ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ದಾಳಿಯಲ್ಲಿ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ರಕ್ತಸ್ರಾವದಿಂದ ಗಾಯಗೊಂಡಿದ್ದಾರೆ ಎಂದು ರಿಮಾಂಡ್ ವರದಿ ಹೇಳಿದೆ. ಆದರೆ, ಘಟನೆ ನಡೆದ ಮರುದಿನ ಪತ್ರಿಕಾಗೋಷ್ಠಿ ನಡೆಸಿದ್ದ ಜಿಲ್ಲಾಧಿಕಾರಿ, “ಯಾವುದೇ ಹಿಂಸಾಚಾರ ನಡೆದಿಲ್ಲ ಮತ್ತು ಯಾವುದೇ ರೀತಿಯ ಗಾಯಗಳಾಗಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಬಂಧಿತರ ವಿರುದ್ಧ ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತ” ಎಂದು ದೂರಿನಲ್ಲಿ ತಿಳಿಸಿದ್ದರು.
“ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಜೊತೆಗೂಡಿ ಗ್ರಾಮದಲ್ಲಿ ಎಸ್ಸಿ ಮತ್ತು ಎಸ್ಟಿ ಮಹಿಳೆಯರ ವಿರುದ್ಧ ಜಾತಿ ನಿಂದನೆ ಪದಗಳನ್ನು ಬಳಸಿದ್ದಾರೆ, ಅವರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜಾತಿಯ ಹೆಸರಿನಲ್ಲಿ ನಿಂದಿಸಿದ್ದಾರೆ ಮತ್ತು ಮ್ಯಾಜಿಸ್ಟ್ರೇಟ್ಗೆ ಹಿಂಸೆಯನ್ನು ಪ್ರಸ್ತಾಪಿಸದಂತೆ ಬೆದರಿಕೆ ಹಾಕಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದರು.
ಆರೋಪಗಳ ಕುರಿತು ತನಿಖೆ ನಡೆಸಲು ಎಸ್ಸಿ/ಎಸ್ಟಿ ಆಯೋಗವು ಶೀಘ್ರವೇ ಲಗಚರ್ಲಾ ಗ್ರಾಮಕ್ಕೆ ಭೇಟಿ ನೀಡಲಿದೆ ಎಂದು ಬಕ್ಕಿ ವೆಂಕಟಯ್ಯ ಭರವಸೆ ನೀಡಿದ್ದರು. ಈಗ ಎನ್ಹೆಚ್ಆರ್ಸಿ ಈ ವಿಚಾರದಲ್ಲಿ ತನಿಖೆಗೆ ಮುಂದಾಗಿದೆ.
ಸಿಎಂ ರೇವಂತ್ ರೆಡ್ಡಿ ಕ್ಷೇತ್ರದಲ್ಲಿ ಫಾರ್ಮಾ ಕಂಪನಿ ಸ್ಥಾಪನೆ, ಪ್ರತಿಪಕ್ಷ ಬಿಆರ್ಎಸ್ ವಿರುದ್ದ ಗ್ರಾಮಸ್ಥರನ್ನು ಪ್ರಚೋಧಿಸಿದ ಆರೋಪ, ಈ ನಡುವೆ ಕೇಂದ್ರ ಸರ್ಕಾರದ ನೆರಳಿನಲ್ಲಿರುವ ಮಾನವ ಹಕ್ಕುಗಳ ಆಯೋಗ ಪ್ರಕರಣಕ್ಕೆ ಪ್ರವೇಶಿಸಿರುವುದು ಎಲ್ಲಾ ಸೇರಿ ಇಡೀ ಪ್ರಕರಣ ರಾಜಕೀಯ ತಿಕ್ಕಾಟದ ವಿಷಯವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ : ತೆಲಂಗಾಣ | ತಡರಾತ್ರಿ ಬುಡಕಟ್ಟು ಜನರ ಮನೆಗಳಿಗೆ ನುಗ್ಗಿ ಪೊಲೀಸರಿಂದ ದೌರ್ಜನ್ಯ ಆರೋಪ : ಎಸ್ಸಿ, ಎಸ್ಟಿ ಆಯೋಗಕ್ಕೆ ದೂರು


