ಕಾಡುಗಳ್ಳ ವೀರಪ್ಪನ್ ಜೊತೆ ನಡೆದಿದ್ದ ಗುಂಡಿನ ಚಕಮಕಿ ವೇಳೆ ತಲೆಗೆ ಗುಂಡೇಟು ತಿಂದು, ಆ ಗುಂಡುಗಳನ್ನು ತಲೆಯಲ್ಲೆ ಇಟ್ಟಕೊಂಡು ಬದುಕುತ್ತಿದ್ದ ಸಬ್-ಇನ್ಸ್ಪೆಕ್ಟರ್ ಸಿದ್ದರಾಜ ನಾಯಕ್ ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
1992 ರಲ್ಲಿ ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿಎಸ್ಐ ಆಗಿ ಸಿದ್ದರಾಜ ನಾಯಕ್ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಅವರು ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹಮದ್ ಅವರ ನೇತೃತ್ವದಲ್ಲಿ ವೀರಪ್ಪನ್ ಹಿಡಿಯುವ ಕಾರ್ಯಾಚರಣೆ ಭಾಗಿಯಾಗಿದ್ದರು. ಆಗಸ್ಟ್ 14 ರಂದು ಮೀಣ್ಯಂನಲ್ಲಿ ನಡೆದಿದ್ದ ಈ ಗುಂಡಿನ ಕಾಳಗದಲ್ಲಿ ಸಿದ್ದರಾಜ ಅವರು ಗುಂಡೇಟು ತಿಂದಿದ್ದರು.
ಇದನ್ನೂ ಓದಿ: ಪ್ರಕರಣಗಳ ಸಂಖ್ಯೆ ಇಳಿಕೆಯಾದರೂ ಗದಗ ಸಂಪೂರ್ಣ ಲಾಕ್ಡೌನ್: ಸಚಿವ ಸಿ.ಸಿ ಪಾಟೀಲ್ ಆದೇಶ
ಈ ಗುಂಡಿನ ಚಕಮಕಿಯಲ್ಲಿ ಅವರ ದೇಹಕ್ಕೆ ಏಳು ಗುಂಡುಗಳು ಹೊಕ್ಕಿದ್ದವು. ನಂತರ, ಶಸ್ತ್ರಚಿಕಿತ್ಸೆ ಮಾಡಿ 04 ಗುಂಡುಗಳನ್ನು ಹೊರ ತೆಗೆಯಲಾಗಿತ್ತು. ಆದರೆ, 03 ಗುಂಡುಗಳು ಅವರ ತಲೆಗೆ ಹೊಕ್ಕಿದ್ದರಿಂದ ಅವುಗಳನ್ನು ತೆಗೆಯಲಾಗಿರಲಿಲ್ಲ. 29 ವರ್ಷಗಳ ಕಾಲ ತಲೆಯಲ್ಲಿ ಗುಂಡುಗಳನ್ನು ಇಟ್ಟುಕೊಂಡೇ ಬದುಕಿದ್ದ ಸಿದ್ದರಾಜ ಅವರು ಮಂಗಳವಾರ ಮೃತಪಟ್ಟಿದ್ದಾರೆ.
ಕಳೆದ ವರ್ಷ ಕರೊನಾ ಸಮಯದಲ್ಲಿ 75 ದಿನಗಳ ಕಾಲ ರಜಾ ತೆಗೆದುಕೊಳ್ಳದೆ ಕೊರೊನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ನಿವೃತ್ತಿಗೆ 5 ದಿನಗಳು ಬಾಕಿಯಿರುವಾಗ ಹೃದಯಾಘಾತದಿಂದಾಗಿ ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಸಿಬಿಐ ಮುಖ್ಯಸ್ಥರಾಗಿ ಆಯ್ಕೆಯಾದ ಸುಬೋಧ್ ಕುಮಾರ್ ಜೈಸ್ವಾಲ್; ಕೇಂದ್ರಕ್ಕೆ ಹಿನ್ನಡೆ?