ಭಾನುವಾರ ಪ್ರತಿಭಟನಾ ನಿರತ ರೈತರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ “ಕಿಸಾನ್ ಮಹಾಪಂಚಾಯತ್” ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿ ವೇದಿಕೆಯನ್ನು ಪುಡಿಗಟ್ಟಿದ್ದರು. ಇದರಂದ ತೀವ್ರ ಒತ್ತಡಕ್ಕೆ ಒಳಗಾಗಿರುವ ಖಟ್ಟರ್ ಮತ್ತು ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಸೇರಿದಂತೆ ಬಿಜೆಪಿ-ಜೆಜೆಪಿ ಮೈತ್ರಿಕೂಟದ ಉನ್ನತ ನಾಯಕರು ರಾಜ್ಯದ ರಾಜಕೀಯ ಸನ್ನಿವೇಶದ ಕುರಿತು ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ.
ಸಭೆಯು ನವದೆಹಲಿಯಲ್ಲಿ ಮಂಗಳವಾರ(ಇಂದು) ನಡೆಯಲಿದೆ. ಆದರೆ ಅದಕ್ಕೂ ಮುನ್ನ ದುಶ್ಯಂತ್ ಚೌತಾಲಾ ಜೆಜೆಪಿ ಶಾಸಕರೊಂದಿಗೆ ದೆಹಲಿಯ ತಮ್ಮ ತೋಟದ ಮನೆಯಲ್ಲಿ ಸಭೆ ನಡೆಸಲಿದ್ದಾರೆ. ಎಲ್ಲಾ ಜೆಜೆಪಿ ಶಾಸಕರಿಗೆ ಮಂಗಳವಾರ ರಾಜಧಾನಿಗೆ ಬರಲು ತಿಳಿಸಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಹರಿಯಾಣ ರಾಜಕೀಯದಲ್ಲಿ ರೈತರ ಆಂದೋಲನ ಮೇಲುಗೈ ಸಾಧಿಸುತ್ತಿದೆ. ಸರ್ಕಾರದ ಮೇಲೆ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಶಾಸಕರನ್ನು ಮೈತ್ರಿಕೂಟದಲ್ಲಿ ಉಳಿಸಿಕೊಳ್ಳುವ ಪ್ರಯತ್ನವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ವೇದಿಕೆಗೆ ನುಗ್ಗಿ ಕೃಷಿ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದ ರೈತರು: ಬೆದರಿ ರೈತ ಕಾರ್ಯಕ್ರಮ ರದ್ದುಗೊಳಿಸಿದ ಹರಿಯಾಣ ಸಿಎಂ
ಸೋಮವಾರದಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಆಡಳಿತರೂಢ ಒಕ್ಕೂಟದ ಹಲವಾರು ಶಾಸಕರು ಒಕ್ಕೂಟವನ್ನು ತ್ಯಜಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಮಧ್ಯೆ ಈ ಸಭೆ ನಡೆಯುತ್ತಿದೆ. 90 ಸದಸ್ಯ ಬಲವಿರುವ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿಗೆ 40 ಸ್ಥಾನಗಳಿದ್ದರೆ, ಜೆಜೆಪಿಯಲ್ಲಿ 10 ಶಾಸಕರಿದ್ದಾರೆ. ಅಲ್ಲದೆ ಏಳು ಪಕ್ಷೇತರ ಶಾಸಕರಲ್ಲಿ ಐವರು ಸರ್ಕಾರದ ಪರವಾಗಿದ್ದಾರೆ.
ರೈತರ ಆಂದೋಲನ ಬಲಗೊಳ್ಳುತ್ತಿದ್ದಂತೆ ಸಚಿವರು ಮತ್ತು ಶಾಸಕರಿಗೆ ಹಳ್ಳಿಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದು ಕಷ್ಟಕರವಾಗಿದೆ. ರೈತರು ಕಪ್ಪು ಧ್ವಜಗಳನ್ನು ಪ್ರದರ್ಶನ ಮಾಡುವುದು, ವಾಹನಗಳನ್ನು ಬೆನ್ನಟ್ಟುವುದು, ಹೆಲಿಪ್ಯಾಡ್ಗಳಿಗೆ ಹಾನಿ ಮಾಡುವುದು ಸೇರಿದಂತೆ ಅಂತಹ ಸಭೆಗಳ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಭಾನುವಾರ ಕರ್ನಾಲ್ ಗ್ರಾಮದಲ್ಲಿ ಯಾವುದೇ ತೊಂದರೆಯಾಗದಂತೆ ಸಭೆ ನಡೆಯಲು ಸರ್ಕಾರಿ ಯಂತ್ರಾಂಗದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅಲ್ಲಿಗೆ ರೈತರು ನುಗ್ಗಿ ವೇದಿಕೆಯನ್ನು ಪುಡಿಗಟ್ಟಿರುವುದುರಿಂದ ಸರ್ಕಾರವು ಆತಂಕಕ್ಕೊಳಗಾಗಿದೆ.
ಇದನ್ನೂ ಓದಿ: ಹರಿಯಾಣದ ಎಲ್ಲಾ ಪೆಟ್ರೋಲ್ ಪಂಪ್ ಮುಚ್ಚುವ ದಿನಾಂಕ ಘೋಷಿಸುತ್ತೇವೆಂದು ಎಚ್ಚರಿಕೆ!
ರಾಜ್ಯದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬಿಜೆಪಿ-ಜೆಜೆಪಿ ನಾಯಕರು ಕೇಂದ್ರ ಗೃಹ ಸಚಿವರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಖಟ್ಟರ್ ಮತ್ತು ದುಶ್ಯಂತ್ ಅವರಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್, ರಾಜ್ಯ ಶಿಕ್ಷಣ ಸಚಿವ ಕನ್ವರ್ ಪಾಲ್ ಗುಜ್ಜರ್ ಮತ್ತು ಜೆಜೆಪಿ ರಾಜ್ಯ ಅಧ್ಯಕ್ಷ ನಿಶಾನ್ ಸಿಂಗ್ ಅವರು ನಿಯೋಗದಲ್ಲಿ ಇರಲಿದ್ದಾರೆ ಎಂದು ಅದು ವರದಿ ಮಾಡಿದೆ.
ನಿನ್ನೆಯಷ್ಟೇ, ಪಕ್ಷೇತರ ಶಾಸಕ ರಾಜ್ಯ ವಿದ್ಯುತ್ ಸಚಿವ ರಂಜಿತ್ ಚೌತಾಲಾ ಅವರ ನಿವಾಸದಲ್ಲಿ ಮೈತ್ರಿ ಸರ್ಕಾರವನ್ನು ಬೆಂಬಲಿಸುವ ಐದು ಪಕ್ಷೇತರ ಶಾಸಕರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಿದ್ದರು.
ಈ ಮಧ್ಯೆ ಐಎನ್ಎಲ್ಡಿ ನಾಯಕ ಅಭಯ್ ಚೌತಲಾ ಸೋಮವಾರ ವಿಧಾನಸಭೆ ಸ್ಪೀಕರ್ಗೆ ಪತ್ರವೊಂದನ್ನು ಬರೆದು, ಜನವರಿ 26 ರೊಳಗೆ ಸರ್ಕಾರವು ಮೂರು ಕರಾಳ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಈ ಪತ್ರವನ್ನೇ ರಾಜೀನಾಮೆ ಎಂದು ಪರಿಗಣಿಸುವಂತೆ ಕೇಳಿಕೊಂಡಿದ್ದಾರೆ. ತಮ್ಮನ್ನು ತಾವು ರೈತ ನಾಯಕ ಎಂದು ಬಿಂಬಿಸಿಕೊಳ್ಳುವ ಉಪಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಅವರಿಗೆ ಈ ರಾಜಿನಾಮೆ ಪತ್ರವು ಹೆಚ್ಚಿನ ಒತ್ತಡವನ್ನು ಉಂಟುಮಾಡಿದೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ರದ್ದು ಪಡಿಸದಿದ್ದರೆ ರಾಜಿನಾಮೆ ನೀಡುತ್ತೇನೆ: ಹರಿಯಾಣ ಶಾಸಕ


