ಜನವರಿ 26 ರೊಳಗೆ ಕೇಂದ್ರವು ತನ್ನ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಹರಿಯಾಣ ವಿಧಾನಸಭೆಯ ಏಕೈಕ ಐಎನ್ಎಲ್ಡಿ ಶಾಸಕ ಅಭಯ್ ಸಿಂಗ್ ಚೌತಲಾ ಸೋಮವಾರ ಹೇಳಿದ್ದಾರೆ.
ಸ್ಪೀಕರ್ಗೆ ಬರೆದ ತನ್ನ ಪತ್ರದಲ್ಲಿ “ಕರಾಳ ಕಾಯಿದೆಗಳನ್ನು” ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಹೇರಿದ್ದಾರೆ ಎಂದು ಅವರು ಟೀಕಿಸಿದ್ದು, “ನನ್ನ ಆತ್ಮಸಾಕ್ಷಿಯು ನನ್ನನ್ನು ಇನ್ನು ಮುಂದೆ ಮೌನವಾಗಿರಲು ಅನುಮತಿಸುವುದಿಲ್ಲ” ಎಂದು ಹೇಳಿದ್ದಾರೆ.
“ಜನವರಿ 26 ರೊಳಗೆ ಭಾರತ ಸರ್ಕಾರವು ಮೂರು ‘ಕರಾಳ ಕಾಯಿದೆಗಳನ್ನು’ ಹಿಂತೆಗೆದುಕೊಳ್ಳದಿದ್ದರೆ ಈ ಪತ್ರವನ್ನು ನನ್ನ ರಾಜೀನಾಮೆ ಎಂದು ಪರಿಗಣಿಸಬೇಕು” ಎಂದು ಅಭಯ್ ಸಿಂಗ್ ಚೌತಲಾ ಬರೆದಿದ್ದಾರೆ.
ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ
“60 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದರೂ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳಲು ಕೇಂದ್ರವು ನಿರಾಕರಿಸುತ್ತಿದೆ. ಅಸೆಂಬ್ಲಿಯ ಜವಾಬ್ದಾರಿಯುತ ಸದಸ್ಯನಾಗಿ, ಪ್ರತಿಭಟನೆಯಲ್ಲಿ ಯಾವುದೇ ಪಾತ್ರವನ್ನು ವಹಿಸಲು ನಾನು ಸಿದ್ಧನಿದ್ದೇನೆ” ಎಂದು ಅವರು ಹೇಳಿದ್ದಾರೆ.
ಅಭಯ್ ಸಿಂಗ್ ಚೌತಾಲಾ ಎಲ್ಲೆನಾಬಾದ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಕಳೆದ ತಿಂಗಳು ಪಕ್ಷದ ಮುಖ್ಯಸ್ಥ, ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಲಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಅಘೋಷಿತ ತುರ್ತು ಪರಿಸ್ಥಿತಿ: ಕರಾಳ ಕಾಯಿದೆಗಳು ಮತ್ತು ರಾಜಕೀಯ ಕೈದಿಗಳು
ಓಂ ಪ್ರಕಾಶ್ ಚೌತಲಾ ಅವರ ಮೊಮ್ಮಗ ದುಶ್ಯಂತ್ ಚೌತಲಾ ಹರಿಯಾಣದ ಉಪಮುಖ್ಯಮಂತ್ರಿಯಾಗಿದ್ದಾರೆ. ಅವರ ಜೆಜೆಪಿ ಪಕ್ಷವು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಹಾಯ ಮಾಡಿತ್ತು. ಕಳೆದ ತಿಂಗಳು ದುಶ್ಯಂತ್ ಚೌತಲಾ ಅವರು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ಪಡೆಯಲು ಸಾಧ್ಯವಾಗದಿದ್ದರೆ ತನ್ನ ಸ್ಥಾನವನ್ನು ತ್ಯಜಿಸುವುದಾಗಿ ಹೇಳಿದ್ದರು.
ದೇಶದಾದ್ಯಂತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಕಾನೂನುಗಳ ವಿರುದ್ದ ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರವು ಇದುವರೆಗೂ ಬಿಕ್ಕಟ್ಟು ಶಮನಕ್ಕೆ ಎಂಟು ಬಾರಿ ಮಾತುಕತೆ ನಡೆಸಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಜನವರಿ 15 ರಂದು ಒಂಬತ್ತನೇ ಸುತ್ತಿನ ಮಾತುಕತೆಗೆ ರೈತರನ್ನು ಕೇಂದ್ರವು ಆಹ್ವಾನಿಸಿದೆ.
ಇದನ್ನೂ ಓದಿ: ಕಾರ್ಮಿಕ ಕಾಯಿದೆಗಳ ರದ್ದು ಎಷ್ಟು ಸರಿ? – ಡಾ.ಚಂದ್ರಪೂಜಾರಿ