ಮುಂದಿನ ಆದೇಶದವರೆಗೆ ನಾವು ಮೂರು ಕೃಷಿ ಕಾನೂನುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲಿದ್ದೇವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ಹೇಳಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತ ಪ್ರಕರಣದ ತೀರ್ಪು ನೀಡುವ ವೇಳೆ “ನಾವು ಇಲ್ಲಿರುವುದು ಸಮಸ್ಯೆಯನ್ನು ಬಗೆಹರಿಸಲಿಕ್ಕೆ. ಹಾಗಾಗಿ ಪ್ರತಿಭಟನಾಕಾರರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಸಲು ಸಮಿತಿಯನ್ನು ರಚಿಸುತ್ತೇವೆ” ಎಂದು ಬೋಬ್ಡೆ ತಿಳಿಸಿದ್ದಾರೆ.
ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಹರ್ಸಿಮ್ರತ್ ಮನ್, ಪ್ರಮೋದ್ ಜೋಶಿ ಸೇರಿದಂತೆ ಹಲವು ಜನ ಸಮಿತಿಯಲ್ಲಿರುತ್ತಾರೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಉಲ್ಲೇಖಿಸಿದೆ. ಸುಪ್ರೀಂನ ಪೂರ್ಣ ಆದೇಶ ಸಂಜೆಯ ವೇಳೆಗೆ ಲಭ್ಯವಾಗಲಿದೆ.
“ನಾವು ಸಮಸ್ಯೆಯನ್ನು ಬಗೆಹರಿಸಲು ಇಲ್ಲಿದ್ದೇವೆ. ನೀವು ಅನಿರ್ದಿಷ್ಠಾವಧಿ ಪ್ರತಿಭಟನೆ ಮಾಡಲು ಬಯಸಿದರೆ ಮಾಡಿ. ಈ ಸಮಸ್ಯೆಯನ್ನು ಬಗೆಹರಿಸಬೇಕೆಂಬ ನೈಜ ಕಾಳಜಿಯಿರುವವರು ಸಮಿತಿಯಲ್ಲಿರುತ್ತಾರೆ. ಈ ಸಮಿತಿಯು ಕೃಷಿ ಕಾನೂನುಗಳನ್ನು ಅಧ್ಯಯನ ಮಾಡುತ್ತದೆಯೇ ವಿನಾಃ ನಿಮ್ಮನ್ನು ಶಿಕ್ಷಿಸುವುದಿಲ್ಲ ಅಥವಾ ಯಾವುದೇ ಆದೇಶ ನೀಡುವುದಿಲ್ಲ. ನಾವು ಹೋರಾಟನಿರತ ಸಂಘಟನೆಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಇದರಿಂದ ಕಾಯ್ದೆಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ” ಎಂದು ಸಿಜೆಐ ಹೇಳಿದ್ದಾರೆ.
ಗೌರವಾನ್ವಿತ ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಯುವ ಸುಪ್ರೀಂ ಕೋರ್ಟ್ ಸಲಹೆಯನ್ನು ಎಲ್ಲ ಸಂಘಟನೆಗಳು ಸ್ವಾಗತ್ತಿಸುತ್ತವೆ. ಆದರೆ ರೈತ ಸಂಘಟನೆಗಳು ಸಾಮೂಹಿಕವಾಗಿ ಹಾಗೂ ವ್ಯಕ್ತಿಗತವಾಗಿ ಸುಪ್ರೀಂ ಕೋರ್ಟ್ ನೇಮಿಸಲಿರುವ ಸಮಿತಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ರೈತ ಮುಖಂಡರ ಹೇಳಿಕೆಯ ಹಿನ್ನೆಲೆಯಲ್ಲಿ ಸಿಜೆಐ ಮೇಲಿನ ಮಾತುಗಳನ್ನಾಡಿದ್ದಾರೆ.
ಗುತ್ತಿಗೆ ಕೃಷಿ ಪದ್ದತಿಯಿಂದ ರೈತರು ಭೂಮಿ ಕಳೆದುಕೊಳ್ಳುವ ಭಯದಲ್ಲಿರುವುದರಿಂದ ಆ ಕಾಯ್ದೆಯ ಜಾರಿಗೆ ಮಧ್ಯಂತರ ತಡೆ ನೀಡುತ್ತಿದ್ದೇವೆ. ನಾವು ಈ ಕಾಯ್ದೆಗಳ ಸಿಂಧುತ್ವದ ಬಗ್ಗೆ ಗಮನವಹಿಸುತ್ತೇವೆ ಜೊತೆಗೆ ಪ್ರತಿಭಟನೆಯಿಂದ ತೊಂದರೆಗೊಳಗಾಗುವ ನಾಗರಿಕರ ಜೀವನ ಮತ್ತು ಅವರ ಆಸ್ತಿಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ನಮಗಿರುವ ಅಧಿಕಾರ ಬಳಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿದೆ.
ಸರ್ಕಾರದ ಪರವಾಗಿ ಹಾಜರಾದ ವಕೀಲ ಹರೀಶ್ ಸಾಳ್ವೆ “ಎಂಎಸ್ಪಿ ಕೊನೆಗೊಳ್ಳುವುದಿಲ್ಲ ಹಾಗೂ ಉತ್ತಮ ಗುಣಮಟ್ಟದ ಬೆಳೆ ಬೆಳೆಯಲಾಗದ ರೈತರ ಜಮೀನನ್ನು ಗುತ್ತಿಗೆ ಕೃಷಿಗೆ ತೆಗೆದುಕೊಂಡವರು ಮಾರಲಾಗುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಮುಂದುವರಿದು ಈ ವಿಚಾರದ ತೀರ್ಪು ನೀಡುವಾಗ ಇದು ಯಾರಬ್ಬರದೋ ಗೆಲುವು ಎಂದು ಎಂದು ನಿರ್ಧರಿಸಬಾರದು. ಕಾಯ್ದೆಗಳಲ್ಲಿದ್ದ ಕೆಲ ದೋಷಗಳನ್ನು ಸರಿಪಡಿಸಲಾಗುವುದು ಎಂದು ಕರೆಯಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಇದು ನ್ಯಾಯವಂತಿಕೆಯ ಗೆಲುವು ಮಾತ್ರ ಎಂದರು.
ಅಟಾರ್ನಿ ಜನರಲ್ ರವರು ಖಲಿಸ್ತಾನಿ ಚಳವಳಿಗೆ ದೇಣಿಗೆ ಸಂಗ್ರಹಿಸಿದ ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆಯ ಇಲ್ಲಿದೆ ಎಂದು ಬರೆದಿದ್ದೀರಿ. ಅದಕ್ಕೆ ಆಧಾರ ಒದಗಿಸುವಿರಾ ಎಂಬ ಸಿಜೆಐ ಪ್ರಶ್ನೆಗೆ ಹೌದು ಅಫಿಡವಿಟ್ ಸಲ್ಲಿಸುತ್ತೇವೆ ಎಂದಿದ್ದಲ್ಲದೆ ಕಾಯ್ದೆಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ವಕೀಲ ವಿಲ್ಸನ್ ಕಾಯ್ದೆ ವಿರುದ್ಧ ದೊಡ್ಡ ಪ್ರತಿಭಟನೆಗಳಾಗುತ್ತಿವೆ. ವಿಜಯವಾಡ ಹೊತ್ತಿ ಉರಿಯುತ್ತಿದೆ. ಬೇಕಾದರೆ ನಿಮಗೆ ನಾನು ಚಿತ್ರಗಳನ್ನು ತೋರಿಸುತ್ತೇನೆ. ಅಟಾರ್ನಿ ಜನರಲ್ರವರ ಹೇಳಿಕೆ ಸರಿಯಾಗಿಲ್ಲ ಎಂದರು.
ಇನ್ನು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಎಪಿ ಸಿಂಗ್ ಹೇಳಿದ್ದಾರೆ ಎಂದು ಸಿಜೆಐ ಬೋಬ್ಡೆ ಹೇಳಿದ್ದಾರೆ.
ಈ ಕುರಿತು ರೈತ ಮುಖಂಡ ಮತ್ತು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು “ಎಪಿ ಸಿಂಗ್ ಸುಪ್ರೀಂ ಕೋರ್ಟ್ಗೆ ಸುಳ್ಳು ಹೇಳುತ್ತಿದ್ದಾರೆ. ಇದನ್ನು ಓದಿದ ನಂತರ ನಾನು ಬಿಕೆಯು ಅಧ್ಯಕ್ಷ ಭಾನು ಅವರೊಂದಿಗೆ ಮಾತನಾಡಿದೆ. ಅವರು ನಿನ್ನೆ ಅಥವಾ ಇಂದು ಎಪಿ ಸಿಂಗ್ರವರೊಂದಿಗೆ ಮಾತನಾಡಲಿಲ್ಲ ಮತ್ತು ಅವರ ಸಂಘಟನೆಯು ಮಹಿಳೆಯರು ಮತ್ತು ಹಿರಿಯರನ್ನು ಪ್ರತಿಭಟನೆಯಿಂದ ಹಿಂತಿರುಗಿ ಎಂದು ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ನನಗೆ ದೃಢಪಡಿಸಿದರು” ಎಂದಿದ್ದಾರೆ.
Seems AP Singh is lying to the Supreme Court. I spoke to Mr Bhanu, President of BKU (Bhanu) after reading this. He confirmed to me that Mr Singh did not speak to him yesterday or today and that there is no question of his organisation asking women and elders to go back. pic.twitter.com/adKeZPj0Qg
— Yogendra Yadav (@_YogendraYadav) January 12, 2021
ಇನ್ನು ವಕೀಲರಾದ ದವೆಯವರು ರೈತರು ಟ್ರಾಕ್ಟರ್ ರ್ಯಾಲಿಯನ್ನು ಆಯೋಜಿಸುತ್ತಿಲ್ಲ ಎಂದಿದ್ದಾರೆ. ತಮ್ಮ ಕಕ್ಷಿದಾರರು (ರೈತರು) ಸಮಿತಿಯ ಮುಂದೆ ಹಾಜರಾಗಲಿದ್ದಾರೆ ಎಂದಿದ್ದಾರೆ ಎಂದೂ ಸಿಜೆಐ ಹೇಳಿದ್ದಾರೆ.
ಇದನ್ನೂ ಓದಿ: No appeal only Repeal: ರೈತ ಹೋರಾಟದ ಇಂದಿನ ಹ್ಯಾಷ್ಟ್ಯಾಗ್!