Homeನ್ಯಾಯ ಪಥಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

- Advertisement -
- Advertisement -

ಹಾವೇರಿಯಲ್ಲಿ ಜನವರಿ 6-7-8 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದ ಸುಳಿಯಲ್ಲಿದೆ. ಹಿಂದೆ ಹಲವು ಬಾರಿ ಸಾಹಿತ್ಯ ಸಮ್ಮೇಳನಗಳು ವಿವಿಧ ಕಾರಣಗಳಿಗೆ ಪ್ರತಿರೋಧಗಳನ್ನು ಎದುರಿಸಿದ್ದವು. ಇನ್ನೂ ಕೆಲವು ಬಾರಿ ಸಮ್ಮೇಳನಗಳಿಗೆ ಪರ್ಯಾಯ ಸಮಾವೇಶಗಳೂ ನಡೆದಿದ್ದಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಲಿಂದಲೂ, ಕರ್ನಾಟಕದ ಏಕೀಕರಣ, ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಶಿಕ್ಷಣದ ಕೂಗು ಹೀಗೆ ಕೆಲವು ಸಂಗತಿಗಳಲ್ಲಿ ಜನಸಾಮಾನ್ಯರ ಅಭಿಪ್ರಾಯ ರೂಪಿಸಲು ಅದು ತನ್ನ ಛಾಪು ಮೂಡಿಸಿತು. ಆದರೆ, ಈ ದೇಶದ ಮೂಲಭೂತ ಸಮಸ್ಯೆಗಳು ಎನ್ನಬಹುದಾದ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಈ ದೇಶದ ಆತ್ಮವನ್ನು ಕಿತ್ತುತಿಂದ ಜಾತೀಯತೆ, ಕೋಮು ವಿಷಮತೆ, ಆರ್ಥಿಕ ಅಸಮಾನತೆ ಮುಂತಾದ ವಿಷಯಗಳ ಬಗ್ಗೆ ಸಾಹಿತ್ಯ ಪರಿಷತ್ತು ಚರ್ಚೆಗಳನ್ನು ಎತ್ತಿಕೊಂಡದ್ದು ಅಥವಾ ಆ ವಿಷಯಗಳಲ್ಲಿ ಜನರ ತಿಳಿವಳಿಕೆಯನ್ನು ರೂಪಿಸುವತ್ತ ಕೆಲಸ ಮಾಡಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಾಹಿತ್ಯ ಪರಿಷತ್ತಿನ ಆರಂಭಿಕ ಕಾರ್ಯ ಚಟುವಟಿಕೆಗಳ ಸಾರ್ವಜನಿಕ ದಾಖಲೆಗಳಾದ ’ಕನ್ನಡ ನುಡಿ’ ಅಥವಾ ’ಸಾಹಿತ್ಯ ಪರಿಷತ್ ಪತ್ರಿಕೆ’ಯ ಹಳೆಯ ಸಂಚಿಕೆಗಳನ್ನು ಗಮನಿಸಿದರೆ ಇದು ನಮಗೆ ಸುಲಭಕ್ಕೆ ಮನದಟ್ಟಾಗುತ್ತದೆ. ಇದು ಬರಬರುತ್ತಾ ’ವಿಐಪಿ’ ಸಂಸ್ಕೃತಿಯನ್ನು ಬೆಳೆಸಿಕೊಂಡು, ಬೃಹತ್ ಮಟ್ಟದ ಸಮಾವೇಶವನ್ನು ಆಯೋಜಿಸಿ ಮುಗಿಸುವ ವಾರ್ಷಿಕ ಸಂಪ್ರದಾಯವನ್ನು ತನ್ನದಾಗಿಸಿಕೊಂಡಿತೇ ಹೊರತು ನಾಡಿನ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕನ್ನಡಿಗರ ಸಂಸ್ಥೆಯಾಗಿ ಬೆಳೆಯದೇ ಇದ್ದುದಕ್ಕೆ ಆರಂಭಿಕ ದಿನಗಳ ’ಶುದ್ಧ ಸಾಹಿತ್ಯ ನಿಷ್ಠೆ’ಯ ಕಾಳಜಿಯೂ ಕಾರಣವಾಗುತ್ತದೆ. ಕನಿಷ್ಠ ಹಿಂದೆ ಸಾರ್ವಜನಿಕ ಹಣವನ್ನು ಹದ್ದುಬಸ್ತಿನಿಂದ ಖರ್ಚು ಮಾಡುತ್ತಿದ್ದ ಸಂಸ್ಥೆ ಇಂದು ದುಂದುವೆಚ್ಚಕ್ಕೆ ಮುಂದಾಗಿರುವುದು ಮಾತ್ರ ದೊಡ್ಡ ಸಾಧನೆಯಾಗಿದೆ!

ನಮ್ಮೆಲ್ಲರವು ಅಲ್ಪಾಯುಷಿ ನೆನಪುಗಳಾದ್ದರಿಂದ ಇತ್ತೀಚಿನ ಸಾಹಿತ್ಯ ಸಮ್ಮೇಳನಗಳ ವಿವಾದಗಳಲ್ಲಿ ಕೆಲವನ್ನು ಇಲ್ಲಿ ನೆನಪಿಸಿಕೊಳ್ಳಬಹುದು; 2019ರಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ಅಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದವರು ಚಂದ್ರಶೇಖರ ಕಂಬಾರರು. ಆ ಸಮ್ಮೇಳನದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ನಡೆಯುವ ಊಳಿಗಮಾನ್ಯ ಮೆರವಣಿಗೆಯನ್ನು ನಡೆಸಬಾರದೆಂದು ಹಲವು ಪ್ರಾಜ್ಞರು ಕರೆನೀಡಿದರು. ಆದರೆ, ಕಂಬಾರರು ಅದರ ಬಗ್ಗೆ ತುಟಿಕ್‌ಪಿಟಿಕ್ ಅನ್ನಲಿಲ್ಲ. ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಏನೇನೋ ಸಬೂಬು ನೀಡಿ ಈ ಪ್ರತಿಗಾಮಿ ಮೆರವಣಿಗೆಯನ್ನು ಸಮರ್ಥಿಸಿಕೊಂಡರು. ಕೊನೆಗೆ ಅದು ನಡೆದೇ ತೀರಿತು. ಈ ಬಾರಿಯ ಸಮ್ಮೇಳನದಲ್ಲಿ ಕೂಡ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರಾತಿನಿಧ್ಯ ನೀಡಿಲ್ಲವೆಂದು ’ಕರ್ನಾಟಕ ಲೇಖಕಿಯರ ಸಂಘ’ದ ಎಚ್ ಎಲ್ ಪುಷ್ಪಾ ಕಿಡಿಕಾರಿದ್ದಾರೆ. ಆದರೆ ಅದನ್ನು ಸರಿಪಡಿಸಿಕೊಳ್ಳಬಹುದಾದ ಸೌಜನ್ಯವನ್ನು ತೋರಿಸಲು ಕ್ಯಾಬಿನೆಟ್ ದರ್ಜೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿಯವರಿಗೆ ಪುರುಸೊತ್ತಿಲ್ಲ!

ಇನ್ನು, ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಊರನ್ನು ಸುತ್ತಿಸಿ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಬರುವ ಸಂಪ್ರದಾಯ ಎಗ್ಗಿಲ್ಲದೇ ಮುಂದುವರೆದಿದೆ. ಈ ಮೆರವಣಿಗೆಯ ಉದ್ದೇಶವೇನು ಎಂಬುದು ಮಾತ್ರ ಇಂದಿಗೂ ನಿಗೂಢ! ಪ್ರಜಾಪ್ರಭುತ್ವದಲ್ಲಿ ’ವ್ಯಕ್ತಿ ವಿಶಿಷ್ಟತೆ’ಯನ್ನು ಮೆರೆಯುವ ಈ ಮೆರವಣಿಗೆ ಅನವಶ್ಯಕ ಎಂದು (ಜಿಎಸ್‌ಎಸ್ ಥರದ ಒಂದಿಬ್ಬರು ಸಾಹಿತಿಗಳನ್ನು ಹೊರತುಪಡಿಸಿ) ಇಲ್ಲಿಯವರೆಗೂ ಯಾಕೆ ಯಾವ ಸಮ್ಮೇಳನಾಧ್ಯಕ್ಷರಿಗೂ ಅನಿಸಿಲ್ಲ? ಯಾಕೆ ಮೆರವಣಿಗೆ ಬೇಡವೆಂದು ನಿರಾಕರಿಸಿಲ್ಲ? ಇದರ ಮುಂದುವರಿದ ಭಾಗವೆಂಬಂತೆ ವಿಐಪಿಗಳಿಗೆ ವಿಭಿನ್ನ ವಸತಿ, ವಿಭಿನ್ನ ಕೂರುವ ವ್ಯವಸ್ಥೆ, ವಿಭಿನ್ನ ಊಟ-ಉಪಚಾರವೆಸಗುವ ವ್ಯವಸ್ಥೆಯೆಲ್ಲವೂ ಪ್ರಜಾಪ್ರಭುತ್ವದ ಅಣಕವಲ್ಲದೆ ಇನ್ನೇನು? ಜನಸಾಮಾನ್ಯರ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆಯಬೇಕಿದ್ದರೆ ಇಂತಹ ತಾರತಮ್ಯದ ನೀತಿಗಳಿಗೆ ಕೊನೆ ಹಾಡಬೇಕಲ್ಲವೇ?

ಇನ್ನು ಸಾಹಿತ್ಯ ಸಮ್ಮೇಳನವನ್ನು ಅಷ್ಟೇನು ತೂಕವಲ್ಲದ ಕಾರಣಗಳಿಗೂ ವಿರೋಧಿಸಿ ಪರ್ಯಾಯ ಸಮಾವೇಶ ನಡೆಸಿದ ಇತಿಹಾಸವೂ ಬಹಳಷ್ಟು ಚರ್ಚೆಯಾಗಿದೆ. 1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 59ನೇ ಸಾಹಿತ್ಯ ಸಮ್ಮೇಳದಲ್ಲಿ ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಮುನ್ನೆಲೆಗೆ ತಂದು, ಸಮ್ಮೇಳನದ ಅಧ್ಯಕ್ಷತೆಗೆ ಆರ್ ಸಿ ಹಿರೇಮಠ್ ಅವರ ಆಯ್ಕೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ’ಜಾಗೃತ ಸಾಹಿತ್ಯ ಸಮಾವೇಶ’ವನ್ನು ಆಯೋಜಿಸಲಾಗಿತ್ತು. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳು ಜಾಗೃತ ಸಮಾವೇಶದಲ್ಲಿ ಭಾಗವಹಿಸಿದ್ದು ಹೆಚ್ಚಿನ ಜನ ಅಲ್ಲಿಗೆ ಬರುವುದಕ್ಕೆ ಕಾರಣವಾಯಿತು ಎನ್ನಲಾಗುತ್ತದೆ. “ಯಾವುದು ಉತ್ತಮ ಸಾಹಿತ್ಯ, ಯಾವುದು ಅಷ್ಟು ಉತ್ತಮವಲ್ಲ ಎಂಬುದು ನನಗಂತೂ ಜೀವನ್ಮರಣದ ಪ್ರಶ್ನೆ” ಎಂದಿದ್ದರಂತೆ ಅಂದು ಆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅಡಿಗರು. ಅಂದು ಅಲ್ಲಿ ನೆರೆದಿದ್ದವರು ರಚಿಸಿದ ಸಾಹಿತ್ಯವನ್ನು ಶ್ರೇಷ್ಠ ಎಂದು ಬಗೆಯುವುದು ಹೇಗೆ? ಇಷ್ಟು ದಿನ “ಶ್ರೇಷ್ಠ” ಎಂದು ಬಿಂಬಿಸಲಾಗಿದ್ದ ಅಡಿಗರಂತಹವರ ಪದ್ಯಗಳ ಬಗ್ಗೆಯೇ ಹಲವು ಪ್ರಶ್ನೆಗಳಿವೆ. ಬ್ರಾಹ್ಮಣ್ಯದ ತಾರತಮ್ಯವನ್ನು ಮೆರೆಯುವ ಅವರ ಹಲವು ಕವನಗಳು ಹೇಗೆ ಶ್ರೇಷ್ಠವಾದವು? ಅಂದು ಅಲ್ಲಿ ಶ್ರೇಷ್ಠತೆಯ ನೆಪದಲ್ಲಿ ನೆರೆದಿದ್ದ ಎಷ್ಟೋ ಸಾಹಿತಿಗಳು ಇಂದು ಸಾರ್ವಜನಿಕ ನೆನಪಿನಿಂದಲೇ ಮರೆಯಾಗಿದ್ದಾರೆ. ಅದೇ ಸಮಾವೇಶದಲ್ಲಿ ಈ ’ಶ್ರೇಷ್ಠತೆಯ ವ್ಯಸನ’ವನ್ನು ಪ್ರಶ್ನಿಸಿ ಕೆ ವಿ ಸುಬ್ಬಣ್ಣ ಮಾಡಿದ ಭಾಷಣವೂ ಬಹಳ ಚರ್ಚೆಗೆ ಒಳಪಟ್ಟಿತ್ತು. ಅವರೂ ಕೂಡ ಶ್ರೇಷ್ಠತೆಯ ಮಾನದಂಡವನ್ನು ಒಪ್ಪಿಯೇ, ಅದು ವ್ಯಸನವಾಗಬಾರದು ಎಂಬ ರೀತಿಯಲ್ಲಿ ಚರ್ಚೆಯನ್ನು ಬೆಳೆಸಿದ್ದರು ಅಷ್ಟೇ. ಆದರೆ ಈ ಶ್ರೇಷ್ಠತೆಯ ಕಲ್ಪನೆ ಕಾಲ-ದೇಶಬದ್ಧವಾಗಿದ್ದು, ಸಾಪೇಕ್ಷವಾದದ್ದು. ಮತ್ತು ಈ ಕಲ್ಪನೆ ಸಮಾನತೆಗೆ ವಿರುದ್ಧವಾದ ಚಿಂತನೆಯಿಂದ ಕೂಡಿದ್ದು ಕೂಡ. ಇಂತಹ ಶ್ರೇಷ್ಠತೆಯ ಮಾನದಂಡಕ್ಕೂ ಸಾಹಿತ್ಯ ಸಮ್ಮೇಳನ ಗುರಿಯಾಗಿತ್ತು. ಆದರೆ ನಿಜವಾಗಿ ಯಾವುದೇ ಸಮ್ಮೇಳನಗಳಲ್ಲಿ ಎತ್ತಬೇಕಾದ ಪ್ರಶ್ನೆ ’ಪ್ರಾತಿನಿಧ್ಯ’ದ್ದಾಗಿರಬೇಕು.

ಅಂತಹ ಪ್ರಾತಿನಿಧ್ಯದ ಪ್ರಶ್ನೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದಿತ್ತು. ದಲಿತ ಗೋಷ್ಠಿ ಇರಬೇಕೆಂದ ವಾದಕ್ಕೆ ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಹಂಪನಾ ಅವರು ನೀಡಿದ ಬೇಜವಾಬ್ದಾರಿ ಉತ್ತರ ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನ ಹುಟ್ಟಲು ಕಾರಣವಾಗಿತ್ತು. ಈಗ ಮುಸಲ್ಮಾನ ಬರಹಗಾರರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ಸದರಿ ಹಾವೇರಿ ಸಾಹಿತ್ಯ ಸಮ್ಮೇಳನದ ಮೇಲಿದೆ. ಟೋಕನಿಸಂ ಎಂಬಂತೆ ಅಲ್ಲಲ್ಲಿ ಕೆಲವು ಮುಸ್ಲಿಂ ಸಮುದಾಯದ ಸಾಹಿತಿಗಳು-ಕವಿಗಳಿಗೆ ಅವಕಾಶ ನೀಡಿದ್ದರೂ ಅದು ಸಮರ್ಪಕ ಮಟ್ಟದಲ್ಲಿಲ್ಲ. ಇದನ್ನು ಸರಿಪಡಿಸಿಕೊಳ್ಳುವ ಎಲ್ಲ ಅವಕಾಶವೂ ಮಹೇಶ ಜೋಶಿಯವರ ಮುಂದೆ ಇತ್ತು. ಆದರೆ ಅವರು ಸಮ್ಮೇಳನದ ಪ್ರಾತಿನಿಧ್ಯದ ಪ್ರಶ್ನೆ ಎತ್ತಿದವರ ಮೇಲೆ ವೈಯಕ್ತಿಕ ಪ್ರತ್ಯಾರೋಪಕ್ಕೆ ನಿಂತರು. ಅವುಗಳಿಗೆ ಯಾವ ಸಾಕ್ಷ್ಯಾಧಾರಗಳನ್ನೂ ನೀಡುವ ಗೋಜಿಗೆ ಹೋಗಲಿಲ್ಲ. ಪ್ರಜಾಪ್ರಭುತ್ವದ ಲಕ್ಷಣಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಸಾಹಿತ್ಯ ಪರಿಷತ್ತಿನ ಈ ಅಧ್ಯಕ್ಷರಿಗೆ ಗೌರವವಿದ್ದಿದ್ದರೆ ಈ ರೀತಿಯ ವರ್ತನೆಯ ಅಗತ್ಯವೇ ಬೀಳುತ್ತಿರಲಿಲ್ಲ. 2020ರಲ್ಲಿ ರೈತರ ಪ್ರತಿರೋಧಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು. ಯಾವುದೇ ದೋಷಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿದ್ದಾಗ, ಸಾಹಿತ್ಯ ಪರಿಷತ್ ಸಂಸ್ಥೆಯ ಅಧ್ಯಕ್ಷರ ಮೊಂಡುತನಕ್ಕೆ ಯಾವ ಸಮರ್ಥನೆಯೂ ಇಲ್ಲ!

ಇದನ್ನೂ ಓದಿ: ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲು ಮನಸ್ಸು ಒಪ್ಪುತ್ತಿಲ್ಲ: ಕಸಾಪ ಎಡವಟ್ಟಿಗೆ ಕವಯತ್ರಿ ಸುಜಾತ ಪ್ರತಿರೋಧ

ಇನ್ನು ಗೋಷ್ಠಿಗಳ ಆಯೋಜನೆಯಲ್ಲಿಯೂ ಇಂದಿನ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಪರಿಣಾಮಕಾರಿಯಾಗಿಲ್ಲ. ಇಂದು ಇಡೀ ಜಗತ್ತನ್ನು ಕೃತಕ ಬುದ್ಧಿಮತ್ತೆ ಆವರಿಸಿಕೊಳ್ಳುತ್ತಿದೆ. ಇದರ ಬಗ್ಗೆ ನಾವು ಕನ್ನಡಿಗರು ಚರ್ಚಿಸುವ ಅಗತ್ಯ ಇತ್ತಲ್ಲವೇ? ’ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಎಂಬ ಗೋಷ್ಠಿಯಲ್ಲಿ ಅವೇ ಓಬಿರಾಯನ ಕಾಲದ ಚರ್ಚೆಗಳು! ಉತ್ತರ ಕರ್ನಾಟಕ ಹವಾಮಾನ ವೈಪರೀತ್ಯಕ್ಕೆ ಕಳೆದ ಕೆಲವು ವರ್ಷಗಳಿಂದ ಗುರಿಯಾಗುತ್ತಲೇ ಇದೆ. ಹಾವೇರಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಚರ್ಚೆ ಬೇಡವೇ? ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಸಾಗಿದೆ. ’ಕನ್ನಡ ಚಳವಳಿ ಪರಿಣಾಮಗಳು’ ಎಂಬ ಗೋಷ್ಠಿಯಲ್ಲಿ ಭಾಷೆ ಮತ್ತು ಗಡಿಗೆ ಸಂಬಂಧಿಸಿದ ಕೆಲವು ವಿಷಯಗಳ ಮಂಡನೆ ಇದೆ. ಕರ್ನಾಟಕದಲ್ಲಿ ನಡೆದ ರೈತ, ದಲಿತ, ಕೋಮು ಸೌಹಾರ್ದ ಚಳವಳಿಗಳೆಲ್ಲವೂ ಕನ್ನಡ ಚಳವಳಿಗಳೇ ತಾನೇ? ಅವಕ್ಕೆ ಅಲ್ಲಿ ಸ್ಥಾನ ಬೇಡವೇ? ’ಕರ್ನಾಟಕ: ಭಾಷಾ ವೈವಿಧ್ಯ ಎಂಬ ಗೋಷ್ಠಿಯಲ್ಲಿ ಉರ್ದು ಮತ್ತು ಬ್ಯಾರಿ ಭಾಷೆಗಳಂತಹ ಕನ್ನಡ ನಾಡಿನ ಭಾಷೆಗಳ ಚರ್ಚೆಗೆ ಜಾಗವೇ ಇಲ್ಲ. ಈ ಪಟ್ಟಿಯನ್ನು ಮುಂದುವರಿಸುತ್ತಲೇ ಹೋಗಬಹುದು.

ಕರ್ನಾಟಕದಲ್ಲಿ ಸಾಹಿತಿಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ನೀಡುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ತಮ್ಮ ಕ್ಷೇತ್ರವಲ್ಲದಿದ್ದರೂ ಅವುಗಳ ಬಗ್ಗೆ ಸಾಹಿತಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುವ ಸಂಪ್ರದಾಯ ಈ ನಾಡಿನಲ್ಲಿ ಹೇಗೋ ಬೆಳೆದುಬಂದಿದೆ. ಕೆಲವೊಮ್ಮೆ ಅದು ಆರೋಗ್ಯಕರವಾಗಿ ಪರಿಣಮಿಸಿದ್ದರೂ, ಅಪಾಯಗಳನ್ನೂ ತಂದೊಡ್ಡಿದ್ದಿದೆ. ಉದಾಹರಣೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು ಎಂದು ಮೇಲ್ಪದರಲ್ಲಿ ಆಗ್ರಹಿಸುತ್ತಾ ಬರುವ ಸಾಹಿತಿಗಳು, ಅದಕ್ಕಾಗಿ ನಡೆಸುವ ಅಧ್ಯಯನಗಳ ಬಗ್ಗೆ ಹೆಚ್ಚು ಆಸಕ್ತಿ ತಳೆಯುವುದಿಲ್ಲ. ಹೀಗೆ ಸಾಹಿತಿಗಳಿಗೆ ಸಿಕ್ಕ ಅನಗತ್ಯ ಪ್ರಾಶಸ್ತ್ಯದಿಂದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ಸಮ್ಮೇಳನಗಳಿಗೂ ’ಪ್ರತಿಷ್ಠೆ’ ಲಭ್ಯವಾಗಿದೆ. ಈ ಪ್ರತಿಷ್ಠೆಯನ್ನು ಸರಿ ದಾರಿಗೆ, ಜನಪರ ಮಾರ್ಗಕ್ಕೆ ತಿರುಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಬಿಸಾಡಿ, ಕರ್ನಾಟಕದ ಎಲ್ಲ ಜನರ ಆಶೋತ್ತರಗಳಿಗೆ ಮತ್ತು ನಾಡಿನ ಬಹುತ್ವ ಪರಂಪರೆಗೆ ಮಿಡಿಯುವ ಸಂಸ್ಥೆಯಾಗಿ ಇದನ್ನು ರೂಪಾಂತರಗೊಳಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಿದೆ. ಪ್ರತಿರೋಧ ಒಂದು ಮಾರ್ಗವಾದರೆ, ಸಂಸ್ಥೆಯ ಒಳಹೊಕ್ಕು ಸುಧಾರಣೆಗೆ ಮುಂದಾಗುವುದು ಮತ್ತೊಂದು. ಈ ನಿಟ್ಟಿನಲ್ಲಿ ಇವುಗಳ ನಡುವೆ ಸಮನ್ವಯವನ್ನು ಸಾಧಿಸುವತ್ತ ನಾವೆಲ್ಲರೂ ಚಿಂತಿಸಬೇಕಿದೆ.

ಗುರುಪ್ರಸಾದ್ ಡಿ ಎನ್

ಸಂಪಾದಕರು, ನ್ಯಾಯಪಥ

ಇದನ್ನೂ ಓದಿ; ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಂಭ್ರಮ ಮತ್ತು ಪ್ರತಿರೋಧಗಳ ನಡುವೆ ಜನಸಾಹಿತ್ಯ ಸಮ್ಮೇಳನದ ರೂವಾರಿಗಳು ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಮ್ಮ ಪುಸ್ತಕದ ಮಳಿಗೆಯೂ ಹಾವೇರಿಗೆ ಹೋದಂತಿದೆ!?
    ಗೌರಿಯವರಿದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೋ.

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...