Homeಕರ್ನಾಟಕಸರ್ಕಾರಕ್ಕೆ ರೈತರ ಒಗ್ಗಟ್ಟು ಕೊಟ್ಟ ಪೆಟ್ಟು ಮತ್ತೆ ಮರುಕಳಿಸಲಿದೆ: ಕಾರ್ಮಿಕರ ಸಮಾವೇಶ ಎಚ್ಚರಿಕೆ

ಸರ್ಕಾರಕ್ಕೆ ರೈತರ ಒಗ್ಗಟ್ಟು ಕೊಟ್ಟ ಪೆಟ್ಟು ಮತ್ತೆ ಮರುಕಳಿಸಲಿದೆ: ಕಾರ್ಮಿಕರ ಸಮಾವೇಶ ಎಚ್ಚರಿಕೆ

ಬೆಂಗಳೂರಿನಲ್ಲಿ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ ನಡೆದಿದ್ದು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯದಿದ್ದರೆ ಸರ್ಕಾರ ಮತ್ತೊಂದು ಚಳವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

- Advertisement -
- Advertisement -

ಒಂದು ವರ್ಷಕ್ಕೂ ಹೆಚ್ಚು ಕಾಲ ರೈತರು ನಡೆಸಿದ ಮಹಾ ಚಳವಳಿಗೆ ಮಣಿದ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆದ ರೀತಿಯಲ್ಲಿಯೇ ಕಾರ್ಪೋರೇಟ್‌ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದರೆ ರೈತ ಹೋರಾಟದಂತೆಯೇ ಕಾರ್ಮಿಕ ಚಳವಳಿಯನ್ನೂ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ (ಮಾಸಾ) ನಾಯಕರು ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕ ಹಕ್ಕುಗಳ ಹೋರಾಟ ಸಮಿತಿ (ಎಂಎಎಸ್‌ಎ) ಅಡಿಯಲ್ಲಿ ಟ್ರೇಡ್‌ ಯೂನಿಯನ್‌ ಸೆಂಟರ್‌ ಆಫ್‌ ಇಂಡಿಯಾ (ಟಿಯುಸಿಐ), ಕರ್ನಾಟಕ ಶ್ರಮಿಕ ಶಕ್ತಿ (ಕೆಎಸ್‌ಎಸ್‌), ಬಿಡಬ್ಲ್ಯೂಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರ ಸಂಘ, ಬೆಂಗಳೂರು ರೇಸ್‌ ಕೋರ್ಸ್ ಕಾರ್ಮಿಕರ ಸಂಘ, ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಲೋಡಿಂಗ್‌ ಅಂಡ್‌ ಅನ್ ಲೋಡಿಂಗ್‌ ಕಾರ್ಮಿಕರ ಒಕ್ಕೂಟ, ವಲಸೆ ಕಾರ್ಮಿಕರ ಸೌಹಾರ್ದ ಕೇಂದ್ರ (ಎಂಡಬ್ಲೂಎಸ್‌ಎನ್‌), ಮಂಡ್ಯ ರೈಲ್ವೆ ಗೂಡ್ಸ್‌ ಶೆಡ್ ಕಾರ್ಮಿಕರ ಸಂಘ, ಕೆಎಸ್‌‌ಬಿಸಿಎಲ್‌ ಲೋಡಿಂಗ್ ಕಾರ್ಮಿಕರ ಸಂಘ, ಕೂಲಿ ನೇಕಾರ ಕಾರ್ಮಿಕರ ಬಳಗ ಒಂದುಗೂಡಿ ಬೆಂಗಳೂರಿನಲ್ಲಿ ಭಾನುವಾರ ನಡೆಸಿದ ಬೃಹತ್‌ ಸಮಾವೇಶವು ಕಾರ್ಮಿಕ ಒಗ್ಗಟ್ಟನ್ನು ಪ್ರದರ್ಶಿಸಿತು.

ಕೇಂದ್ರೀಯ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಕಾರ್ಮಿಕರು ಬೃಹತ್‌ ಮೆರವಣಿಗೆ ನಡೆಸಿದರು. ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ನೂರ್‌ ಶ್ರೀಧರ್‌, “ರೈತ ಮತ್ತು ಕಾರ್ಮಿಕ ಎಂಬ ಎರಡು ಹೆಜ್ಜೇನು ಗೂಡಿಗೆ ಇವರು ಕಲ್ಲು ಹೊಡೆದಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಇವರ ವಿನಾಶಕ್ಕೆ ಇದು ನಾಂದಿಯಾಗಲಿದೆ. ಎದ್ದೇಳುವ ಹೆಜ್ಜೇನುಗಳು ಸುಮ್ಮನೆ ಬಿಡುವುದಿಲ್ಲ. ಹೀಗಾಗಲೇ ರೈತ ಜೇನುಗೂಡಿಗೆ ಕಲ್ಲು ಹೊಡೆದು ಕಚ್ಚಿಸಿಕೊಂಡು, ಮೈಯೆಲ್ಲ ಕೆರೆದುಕೊಂಡು ಒಂದು ವರ್ಷದ ಬಳಿಕ ಮೂರು ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ರೈತರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ನಾಟಕವನ್ನಾದರೂ ಆಡುವ ಪರಿಸ್ಥಿತಿಗೆ ಬಂದಿದ್ದಾರೆ” ಎಂದರು.

“ನಿಮಗೆ ಹೇಳಲು ಬಯಸುವುದೇನೆಂದರೆ ಈಗ ರೈತರ ರುಚಿ ನೋಡಿದ್ದೀರಿ. ಮುಂದೆ ಕಾರ್ಮಿಕರ ರುಚಿ ನೋಡಲಿದ್ದೀರಿ. ಈ ಹೆಜ್ಜೇನನ್ನು ಒಡೆಯಬಹುದೆಂಬ ಭ್ರಮೆಯಲ್ಲಿದ್ದಾರೆ. ಎಲ್ಲಾ ಕಾರ್ಮಿಕ ಸಂಘಟನೆಗಳು ಒಗ್ಗೂಡುವ ಪರಂಪರೆ ಶುರುವಾಗಿದೆ. ಎಸ್‌ಕೆಎಂ ಅಡಿಯಲ್ಲಿ ರೈತರು ಒಗ್ಗೂಡಿದಂತೆ ಕಾರ್ಮಿಕರು ಒಂದು ವೇದಿಕೆಗೆ ಬರುತ್ತಿದ್ದಾರೆ. ಈ ದೊಡ್ಡ ಶಕ್ತಿ ನಿಮ್ಮ ಮೇಲೆ ಪ್ರಹಾರ ಮಾಡಲಿದೆ. ಇಂದು ಬೆಂಗಳೂರು, ನಾಳೆ ದಿಲ್ಲಿಯಲ್ಲಿ ಹೋರಾಟ ಶುರುವಾಗಲಿದೆ” ಎಂದು ಎಚ್ಚರಿಸಿದರು.

ಇದನ್ನೂ ಓದಿರಿ: ಮಂಡ್ಯದ ಬೂಕನಕೆರೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಆರೋಪ: ನಾಳೆ ಪ್ರತಿಭಟನೆ

ಅಸ್ಮಿತೆಯ ಹೆಸರಲ್ಲಿ ಕಾರ್ಮಿಕರನ್ನು ಒಡೆಯುವ ಯತ್ನ: ಆರ್‌.ಮಾನಸಯ್ಯ

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಯುಸಿಐ ರಾಜ್ಯಾಧ್ಯಕ್ಷರಾದ ಆರ್‌‌.ಮಾನಸಯ್ಯ, “ದೆಹಲಿ ಗಡಿಯಲ್ಲಿ ರೈತರು ಪಟ್ಟು ಹಿಡಿದು ಕುಳಿತು ಮೋದಿ ಸರ್ಕಾರವನ್ನು ಸೋಲಿಸಿದಂತೆ ಎಲ್ಲಾ ಕಾರ್ಮಿಕರ ಸಂಟನೆಗಳನ್ನು ಒಂದು ವೇದಿಕೆಯಲ್ಲಿ ತಂದು ಅದೇ ಮಾದರಿ ಹೋರಾಟಕ್ಕೆ ಕಾರ್ಮಿಕರು ಹೋಗಬೇಕಾಗಿದೆ. ಕಾರ್ಮಿಕರ ನಡುವೆ ಐಡೆಂಟಿಟಿ ಪೊಲಿಟಿಕ್ಸ್‌ ಬಿತ್ತುತ್ತಿದ್ದಾರೆ. ನೀವು ಪೌರ ಕಾರ್ಮಿಕರು, ಹಾಗಾಗಿ ಸಕ್ಕರೆ ಕಾರ್ಖಾನೆ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಕ್ಕರೆ ಕಾರ್ಮಿಕರು ಉಕ್ಕಿನ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸರ್ಕಾರಿ ನೌಕರರು ಸ್ಟೀಲ್ ಕಾರ್ಮಿಕರ ಜೊತೆ ಹೋಗಬಾರದು ಎಂದು ಹೇಳುತ್ತಾರೆ. ನೀವು ಸಾರಿಗೆ ಕಾರ್ಮಿಕರು, ಅಂಗನವಾಡಿ ಕಾರ್ಮಿಕರ ಜೊತೆ ಹೋಗಬಾರದು ಅಂತಾರೆ. ಈ ರೀತಿಯಲ್ಲಿ ನಮ್ಮ ನಡುವೆ ಅಸ್ಮಿತೆಯ ರಾಜಕಾರಣವನ್ನು ಹರಡುವ ಮೂಲಕ ಕಾರ್ಮಿಕರನ್ನು ತುಂಡರಿಸಿದ್ದಾರೆ. ಕಾರ್ಮಿಕರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆ ಎಂದು ತಿಳಿಸಿದರು.

ಬಂಡವಾಳಶಾಹಿಗಳ ಪರವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಂತಿದೆ. 44 ಕಾರ್ಮಿಕ ಕಾಯ್ದೆಗಳನ್ನು ತೆರವುಗೊಳಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಂದಿದ್ದಾರೆ. ಈ ಸಂಹಿತೆಗಳಲ್ಲಿ ವೇತನ ಭದ್ರತೆ, ಆರೋಗ್ಯ ಸುರಕ್ಷತೆ, ಜೀವನ ಭದ್ರತೆ ಇಲ್ಲ. ಮಾಲಿಕರ, ಅಧಿಕಾರಿಗಳ, ಮೇಲ್ಜಾತಿಗಳ, ಶ್ರೀಮಂತರ ಸುರಕ್ಷತೆ ಮಾತ್ರ ಇದೆ. ಹೀಗಾಗಿ ಇದರ ವಿರುದ್ಧ ಒಂದು ದೊಡ್ಡ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಕಾರ್ಮಿಕರಿಗೆ ಕನಿಷ್ಠ 25,000 ರೂ. ಮಾಸಿಕ ವೇತನ ಕಡ್ಡಾಯ ಮಾಡಲೇಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲೇಬೇಕು. ಇಲ್ಲವಾದರೆ ನಮ್ಮ ಕೈಯಲ್ಲಿರುವ ಪೊರಕೆ, ಗುದ್ದಲಿ, ಸುತ್ತಿಗೆಗಳು ಮಾತನಾಡುತ್ತವೆ. ಕಾರ್ಮಿಕರೆಂದರೆ ಕನಿಷ್ಠರಲ್ಲ. ಈ ದೇಶದ ಕಟ್ಟಾಳುಗಳು ಎಂದು ಬಣ್ಣಿಸಿದರು.

ದೇಶ ಕಟ್ಟೋರು ಕಾರ್ಮಿಕರೇ ಹೊರತು ಎಸ್‌ಎಸ್‌ಎಸ್‌, ಬಜರಂಗದಳ, ವಿಎಚ್‌ಪಿಗಳಲ್ಲ, ಇನ್ಯಾವುದೇ ಸ್ವಾಮೀಜಿಗಳಲ್ಲ. ಘಂಟೆ ಭಾರಿಸಿದರೆ ದೇಶ ನಡೆಯುವುದಿಲ್ಲ, ಮಂತ್ರ ಹೇಳಿದರೆ ದೇಶ ನಡೆಯುವುದಿಲ್ಲ. ಹೀಗಾಗಿ ಮಂತ್ರ ಹೇಳುವ ತುಟಿಗಳಿಗಿಂತ ಮಣ್ಣು ಅಗೆಯುವ ಕೈಗಳನ್ನು ಪ್ರೀತಿಸಿ ಎಂದು ಮಾರ್ಮಿಕವಾಗಿ ನುಡಿದರು.

ಸಮಾನ ವೇತನ ನೀಡಿರೆಂದರೆ ಮೊಟ್ಟೆ ಬಗ್ಗೆ ಮಾತನಾಡುತ್ತಾರೆ: ಬಾಲನ್‌

ಸಮಾವೇಶದ ಉದ್ಘಾಟನಾ ಭಾಷಣ ಮಾಡಿದ ಹೈಕೋರ್ಟ್ ಹಿರಿಯ ವಕೀಲರಾದ ಬಾಲನ್‌, “ನಮ್ಮ ಕೆಲಸದ ಹಕ್ಕುಗಳು ಇರುವ ಕಾನೂನನ್ನು, ನಮ್ಮ ಸಂಬಳದ ಹಕ್ಕಿನ ಕಾನೂನುಗಳನ್ನು, ನಮ್ಮ ಸಾಮಾಜಿಕ ಹಕ್ಕುಗಳಾದ ಪಿಎಫ್‌, ಗ್ರಾಚ್ಯುಟಿ, ರಜೆ ಇತ್ಯಾದಿಗಳನ್ನು ನೀಡಿದ ಕಾನೂನುಗಳನ್ನು ಕಿತ್ತುಕೊಂಡಿದ್ದಾರೆ. ನೌಕರರಾಗಬೇಕಿದ್ದವರನ್ನು ಕೂಲಿಗಳನ್ನಾಗಿ ಮಾಡಿದ್ದಾರೆ. ಒಂದೇ ಕೆಲಸ, ಒಂದೇ ಪೊರಕೆ. ಆದರೆ ಗುತ್ತಿಗೆಯವರಿಗೆ ಹಾಗೂ ಕಾಯಂ ನೌಕರರಿಗೆ ಬೇರೆ ಬೇರೆ ಸಂಬಳ ನೀಡುತ್ತಿದ್ದಾರೆ ಎಂದು ವಿವರಿಸಿದರು.

“ನೀವು ಕಾನೂನು ಮಾಡ್ರಯ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಮಾಡಿ. ಕೆಲಸದಿಂದ ತೆಗೆಯಬಾರದೆಂದು ಕಾನೂನು ಮಾಡಿ. ಅದನ್ನು ಬಿಟ್ಟು ಮೊಟ್ಟೆ ತಿನ್ನಬಾರದೆಂದು, ಮಟನ್‌ ತಿನ್ನಬಾರದೆಂದು, ದನದ ಮಾಂಸ ತಿನ್ನಬಾರದೆಂದು, ನೀರು ಕುಡಿಯಬಾರದೆಂದು ಕಾನೂನು ಮಾಡುತ್ತಿದ್ದಾರೆ. ಎಂಥ ಕಾನೂನು ಮಾಡ್ತಾ ಇದ್ದಿರಯ್ಯ ಬೊಮ್ಮಾಯಿ? ನೀವು ಈ ರೀತಿ ಕೆಲಸ ಮಾಡಿದರೆ- ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಆಪ್‌ ನಹೀ ನಹೀ ಎಂದು ಚಾಟಿ ಬೀಸಿದರು.

ಇದನ್ನೂ ಓದಿರಿ: RSS ಮುಖ್ಯಸ್ಥರಿಗೆ ಕಲಬುರಗಿ ಕೇಂದ್ರೀಯ ವಿವಿ ರಿಜಿಸ್ಟ್ರಾರ್ ಡೋಣೂರರ ಪತ್ರ: ಅಕ್ರಮ ನೇಮಕಾತಿ ಕಾರಣವೇ?

ಕ್ಯಾಂಟೀನ್‌ ನಮ್ಮ ಹಕ್ಕು. ಮಧ್ಯಾಹ್ನ ಊಟ ಕೊಡಬೇಕು. ಒಂದು ಕಾಲದಲ್ಲಿ ಇದೆಲ್ಲ ಇತ್ತು. 1996ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ರೈಲ್ವೆ, ಬಿಬಿಎಂಪಿ, ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದೆಂದು ಹೇಳಿತ್ತು. ಆದರೆ 2001ನೇ ಇಸವಿಯಲ್ಲಿ ವಾಜಪೇಯಿ ಆ ಕಾನೂನನ್ನು ಕಿತ್ತು ಹಾಕಿ, ನಿಮ್ಮ ಬಾಯಿಗೆ ಮಣ್ಣು ಹಾಕಿದರು. 2002ರಲ್ಲಿ ಸುಪ್ರೀಂ ಕೋರ್ಟ್, ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಗುತ್ತಿಗೆ ಪದ್ಧತಿಯ ಪರವಾಗಿ ತೀರ್ಪು ನೀಡಿತು. ನಾನು ಸುಪ್ರಿಂ ಕೋರ್ಟ್‌‌ಗೆ ದಿಕ್ಕಾರ ಹೇಳುತ್ತೇನೆ. ನಿಮ್ಮ ಬಾಯಿಗೆ ಸುಪ್ರಿಂಕೋರ್ಟ್ ಮಣ್ಣು ಹಾಕಿದೆ. ನೀವು ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಬಿಜೆಪಿ ಮತ್ತು ಸುಪ್ರೀಂ ಕೋರ್ಟ್ ಕಾರಣ ಎಂದು ಆರೋಪಿಸಿದರು.

ಸಮಾವೇಶದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ವರದರಾಜೇಂದ್ರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಹರಿಯಾಣದ ಜನಸಂಘರ್ಷ ಮಂಚ್‌ನ ಸುದೇಶ್‌ಕುಮಾರಿ, ಆಂಧ್ರಪ್ರದೇಶದ ಐಎಫ್‌‌ಟಿಯು ಸಂಘಟನೆಯ ಎಸ್.ವೆಂಕಟೇಶ್ವರ ರಾವ್‌, ಉತ್ತರಾಖಾಂಡ್‌ನ ಇಂಕಿಲಾಬಿ ಮಜ್ದೂರ್‌ ಕೇಂದ್ರದ ಕೈಲಾಶ್‌, ಬಿಹಾರದ ಐಎಫ್‌ಟಿಯು ಸಂಘಟನೆಯ ಸಿದ್ಧಾಂತ್‌ ವೇದಿಕೆಯಲ್ಲಿ ಹಾಜರಿದ್ದರು. ಕಾರ್ಮಿಕ ಇಲಾಖೆಯ ಡಿಎಲ್‌ಸಿ ರವಿಕುಮಾರ್‌ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಮಿಕರ ಹಕ್ಕೋತ್ತಾಯಗಳನ್ನು ಸ್ವೀಕರಿಸಿದರು.

ಸಮಾವೇಶದ ಹಕ್ಕೋತ್ತಾಯಗಳು


ಇದನ್ನೂ ಓದಿರಿ: ಹನುಮ ಜಯಂತಿ: ಕೆ.ಆರ್‌.ಪೇಟೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ಮೇಲೆ ಎಫ್‌ಐಆರ್‌‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...