”ಕೆಆರ್ಎಸ್ ಅಣೆಕಟ್ಟಿನ ಬೀಗ ನಮ್ಮ ಕೈಯಲ್ಲಿ ಇಲ್ಲ, ಅದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಈ ಕಾನೂನು ಬಗ್ಗೆ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೆ? ರಾಜಕಾರಣ ಯಾವ ವಿಚಾರದಲ್ಲಿ ಮಾಡಬೇಕೊ ಅದರಲ್ಲಿ ಮಾಡಬೇಕು, ಎಲ್ಲಾ ವಿಚಾರದಲ್ಲೂ ಅಲ್ಲ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ರಾಜ್ಯದ ರೈತರ ಹಿತ ಮರೆತು ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ ಎಂಬ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರ ಟೀಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ”ತಮಿಳುನಾಡಿಗೆ ನೀರು ಬಿಡುವವರು ನಾವಲ್ಲ. ಅದರ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ. ಈ ಬಗ್ಗೆ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೇ?” ಎಂದು ಕೇಳಿದ್ದಾರೆ.
”ರಾಜ್ಯದ ರೈತರ ಹಿತ ಕಾಪಾಡುವುದಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈ ಕಾರಣಕ್ಕೆ ಈಗಾಗಲೇ ನಾನು ಸಚಿವನಾದ ಬಳಿಕ 2 ಬಾರಿ ಬೆಳೆಗಳಿಗೆ ನೀರು ಹರಿಸಲು ಅನುಮತಿ ನೀಡಿದ್ದೇನೆ. ತಮಿಳುನಾಡಿನವರು 27 ಟಿಎಂಸಿ ನೀರು ಕೇಳಿದ್ದಾರೆ, ಅವರು ಕೇಳಿದಷ್ಟು ನೀರು ಕೊಟ್ಟಿಲ್ಲ. ನಾವು ನಮಗೆ ಇಚ್ಛೆ ಬಂದಂತೆ ವರ್ತಿಸಿದರೆ ಕೋರ್ಟ್ ಕೇಳಬೇಕಲ್ಲ” ಎಂದಿದ್ದಾರೆ.
”ತಮಿಳುನಾಡು ಸರ್ಕಾರ ಇತ್ತೀಚೆಗೆ ನಡೆದ ಕಾವೇರಿ ಟ್ರಿಬ್ಯುನಲ್ ಸಭೆಯನ್ನು ಬಹಿಷ್ಕರಿಸಿ ಹೋಗಿದೆ. ತಮಿಳುನಾಡಿನವರು ಹೀಗೆ ಸಂಘರ್ಷ ಮಾಡಿಕೊಂಡು ಇರಲು ಆಗುತ್ತದೆಯೇ? ಸರ್ಕಾರ ನಡೆಸುವವರು ಎಲ್ಲಾ ರೀತಿಯಲ್ಲೂ ಆಲೋಚನೆ ಮಾಡಬೇಕು. ನಾವು ಕಾನೂನು ತಜ್ಞರ ಸಲಹೆ ಕೇಳಿ ಅದರ ಅನುಗುಣವಾಗಿ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ ಇನ್ನಷ್ಟು ದೊಡ್ಡ ನಷ್ಟವನ್ನು ನಾವು ಅನುಭವಿಸಬೇಕಾಗುತ್ತದೆ” ಎಂದು ಹೇಳಿದರು.
ಇದೇ ವೇಳೆ ರೈತರು ಪ್ರತಿಭಟನೆಗೆ ಮುಂದಾಗಿರುವ ವಿಚಾರದ ಬಗ್ಗೆ ಕೇಳಿದಾಗ, ”ಪ್ರತಿಭಟನೆ ಮಾಡುತ್ತಿರುವವರು ನಮ್ಮ ರೈತರೇ, ಪ್ರತಿಭಟನೆ ಅವರ ಹಕ್ಕು. ಆದರೆ ಸುಪ್ರಿಂ ಕೋರ್ಟ್ ನಮ್ಮ ಮಾತು ಕೇಳಬೇಕಲ್ಲ. ರೈತರಿಗೂ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಹಿಂದೆಯೂ ಅನೇಕ ಬಾರಿ ಕಾನೂನು ಹೋರಾಟ ನಡೆದಿದೆ” ಎಂದು ಉತ್ತರಿಸಿದರು.
”ಕಳೆದ 30-40 ವರ್ಷಗಳಲ್ಲಿ ಈ ವರ್ಷ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಇಂತಹ ಸಂಕಷ್ಟದ ಕಾಲದಲ್ಲೂ ನಾವು ನಮ್ಮ ರಾಜ್ಯದ ರೈತರ ಪರವಾಗಿಯೂ ಇದ್ದೇವೆ ಹಾಗೂ ಕಾನೂನಿಗೂ ಗೌರವ ನೀಡುತ್ತಿದ್ದೇವೆ ಎನ್ನುವ ಕಾರಣಕ್ಕೆ ನೀರು ಬಿಡುಗಡೆ ಮಾಡಿದ್ದೇವೆ” ಎಂದು ತಿಳಿಸಿದರು.


