ಕೇಂದ್ರ ಸರ್ಕಾರವು ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು(NMML) ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (PMML) ಎಂದು ಮರುನಾಮಕರಣ ಮಾಡಿದ ನಂತರ ಪ್ರತಿಪಕ್ಷಗಳು ಟೀಕೆಗಳ ಸುರಿಮಳೆಗೈದಿವೆ.
”ಇತಿಹಾಸ ರಚಿಸುವ ಅಗತ್ಯವಿದೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅದನ್ನು ರಚಿಸಲು ಸಾಧ್ಯವಾಗುತ್ತಿಲ್ಲ. ನೆಹರೂಗೆ ಸಮರ್ಪಿತವಾದ ಯಾವುದನ್ನಾದರೂ ಕೀಳಾಗಿ ನೋಡುವುದು ಅಥವಾ ಹೆಸರು ಬದಲಾಯಿಸುವ ರಾಜಕೀಯ ಮಾಡುವುದನ್ನು ಬಿಡಿ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಪ್ರತಿಕ್ರಿಯಿಸಿದ್ದಾರೆ.
”ಪಂಡಿತ್ ಜವಾಹರ್ಲಾಲ್ ನೆಹರು ಆಧುನಿಕ ಭಾರತವನ್ನು ನಿರ್ಮಿಸಿದರು ಮತ್ತು ಅದಕ್ಕೆ ಅಡಿಪಾಯ ಹಾಕಿದರು. ಅವರು ಈ ದೇಶದಲ್ಲಿ ಉದಾರವಾದಿ ಪ್ರಜಾಪ್ರಭುತ್ವವನ್ನು ಜೀವಂತವಾಗಿಟ್ಟರು. ಐಐಎಂಗಳು, ಏಮ್ಸ್, ಐಐಟಿಗಳು, ಇಸ್ರೋ ಮತ್ತು ಸಂಸ್ಥೆಗಳನ್ನು ನಿರ್ಮಿಸಿದರು. ಆದರೆ ಪ್ರಧಾನಿ ಮೋದಿ ಇತಿಹಾಸದಲ್ಲಿ ಬಹಳ ನಕಾರಾತ್ಮಕವಾಗಿ ನೆನಪಿಸಿಕೊಳ್ಳುತ್ತಾರೆ” ಸುಪ್ರಿಯಾ ಹೇಳಿದ್ದಾರೆ.
ಜೂನ್ನಲ್ಲಿ ನಡೆದ ವಿಶೇಷ ಸಭೆಯಲ್ಲಿ NMML ಸೊಸೈಟಿ ತನ್ನ ಹೆಸರನ್ನು PMML ಸೊಸೈಟಿ ಎಂದು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದಾದ ನಂತರ ವಸ್ತುಸಂಗ್ರಹಾಲಯವನ್ನು ಅಧಿಕೃತವಾಗಿ ಆಗಸ್ಟ್ 14ರಂದು ಮರುನಾಮಕರಣ ಮಾಡಲಾಯಿತು. ಈ ವಸ್ತುಸಂಗ್ರಹಾಲಯವು ತೀನ್ ಮೂರ್ತಿ ಭವನದಲ್ಲಿದೆ. ಇದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿದೆ.
ಕೇಂದ್ರ ಸರ್ಕಾರ ಮ್ಯೂಸಿಯಂ ಹೆಸರನ್ನು ಅಧಿಕೃತವಾಗಿ ಬದಲಾಯಿಸಿದ ನಂತರ ರಾಜಕೀಯ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿವೆ.
”ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೆಹರು ಪರಂಪರೆಯನ್ನು ನಿರಾಕರಿಸುವ, ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶಪಡಿಸುವ ಕಾರ್ಯಸೂಚಿಯನ್ನು ಮಾತ್ರ ಹೊಂದಿದೆ” ಎಂದು ಕಾಂಗ್ರೆಸ್ ಹೇಳಿದೆ.
”ತೀನ್ ಮೂರ್ತಿ ಭವನದಲ್ಲಿ ಇತರ ಯಾವ ಪ್ರಧಾನಿಗಳ ನಿವಾಸವಾಗಿರಲಿಲ್ಲ. ಇದು ಒಂದು ಐತಿಹಾಸಿಕ ಸ್ಥಳವಾಗಿದ್ದು, ನೆಹರೂ ಅವರು ದೇಶ ವಿಭಜನೆಯಿಂದ ಅವರು ನಿಧನರಾಗುವವರೆಗೂ ಅಲ್ಲೇ ಇದ್ದರು. ಜವಾಹರಲಾಲ್ ನೆಹರು ಅವರು ದೇಶದ ಮಣ್ಣಿನಲ್ಲಿರುವುದರಿಂದ ಕೇಂದ್ರ ಸರ್ಕಾರಕ್ಕೆ ಅವರನ್ನು ಅಳಿಸಲು ಸಾಧ್ಯವಿಲ್ಲ” ಎಂದು ಆರ್ಜೆಡಿ ನಾಯಕ ಮನೋಜ್ ಝಾ ಹೇಳಿದ್ದಾರೆ.
ಇದನ್ನೂ ಓದಿ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ