HomeUncategorized'ದಿ ಪ್ರಾಫೆಟ್' ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

‘ದಿ ಪ್ರಾಫೆಟ್’ ಖಲೀಲ್ ಗಿಬ್ರಾನ್ : ಯೋಗೇಶ್ ಮಾಸ್ಟರ್

- Advertisement -
- Advertisement -

ಯೋಗೇಶ್ ಮಾಸ್ಟರ್ ಅಪಾರ ಓದು ಮತ್ತು ಜೀವನ ಪ್ರೀತಿಯಿರುವ ಸೃಜನಶೀಲ ವ್ಯಕ್ತಿ. ಡುಂಢಿ ಕಾದಂಬರಿ ವಿವಾದದಿಂದ ‘ಖ್ಯಾತ’ರಾದ ಅವರು ಬಹುಮುಖಿ ಪ್ರತಿಭೆಯುಳ್ಳ ಕಲಾವಿದ. ಈ ವಾರದಿಂದ ಅವರ ಪುಟಕ್ಕಿಟ್ಟ ಪುಟಗಳು ಇಲ್ಲಿ ಹೊಳೆಯಲಿವೆ. ಜೀವನದ ಬೇರೆ ಬೇರೆ ಸಂದರ್ಭದ ಜಟಿಲ ಕ್ಷಣಗಳಲ್ಲಿ ಎಂದೋ ಓದಿದ ಪುಸ್ತಕವೊಂದರಿಂದ ಒಳನೋಟವೊಂದು ಮನದಲ್ಲಿ ತೇಲಿ ಬರುತ್ತದೆ. ಆ ಪುಸ್ತಕವು ಜಗತ್ತಿನ ಯಾವುದೋ ಭಾಷೆಯ ಮಹತ್ವದ ಕೃತಿಯಾಗಿರಬಹುದು ಅಥವಾ ನಮ್ಮದೇ ಪರಿಸರದ ಭಾಷೆಯ ಪುಸ್ತಕವಾಗಿರಬಹುದು. ಅಂತಹ ಪುಸ್ತಕಗಳು ಕತ್ತಲೆಯಲ್ಲೂ ಹೊಳೆಯುತ್ತವೆ. ಆ ರೀತಿ ಹೊಳೆಯುವ ಮಹತ್ವದ ಸಾಲುಗಳನ್ನು ಮತ್ತು ಆ ಪುಸ್ತಕದ ಕುರಿತ ಸಾಂದರ್ಭಿಕ ಮಾಹಿತಿಯನ್ನು ಪ್ರತೀ ವಾರವೂ ನಮ್ಮ ಓದುಗರಿಗೆ ಯೋಗೇಶ್ ಮಾಸ್ಟರ್ ತಲುಪಿಸಲಿದ್ದಾರೆ.

ಆದಿಯಲ್ಲಿ ಆಕಾಶ ಮತ್ತು ಭೂಮಿಯನ್ನು ಸೃಷ್ಟಿಸಿದ ದೇವರು ಮನುಷ್ಯನನ್ನೂ ಸೃಷ್ಟಿಸಿದ ತನ್ನದೇ ಪ್ರತಿರೂಪದಲ್ಲಿ. ಆದಾಮ ಮತ್ತು ಹವ್ವರೆಂಬ ಆ ಗಂಡು ಹೆಣ್ಣುಗಳನ್ನು ಸ್ವತಂತ್ರವಾಗಿ ಸ್ವರ್ಗೋದ್ಯಾನದಲ್ಲಿ ಬಿಟ್ಟು, ಅರಿವನ್ನು ನೀಡುವ ಮರದ ಫಲವನ್ನು ತಿನ್ನಬಾರದೆಂಬ ನಿಬಂಧನೆಯನ್ನಿಟ್ಟು ಅವರನ್ನು ಚೆನ್ನಾಗಿಟ್ಟುಕೊಂಡಿದ್ದ. ತಿನ್ನಬಾರದು ಎಂದು ಅವನು ಏಕೆ ಹೇಳಿದ್ದನೋ?! ಆದರೆ ಅವಳು ತಿಂದಳು, ಅವನೂ ತಿಂದ. ಇಬ್ಬರಿಗೂ ಅರಿವುಂಟಾಯಿತು. ತಮ್ಮ ಬೆತ್ತಲೆಯನ್ನು ಅರಿವೆಯ ಕತ್ತಲೆಯಲ್ಲಿ ಇಟ್ಟುಕೊಳ್ಳಬೇಕೆಂಬುದೇ ಮೊದಲ ಅರಿವು. ತಾನು ಲೋಕ ಸಂಚಾರಕ್ಕೆ ಹೋಗಿದ್ದು ಮರಳಿ ಬಂದಾಗ ದೇವರು ಕಂಡಿದ್ದು, ಸ್ತ್ರೀ ತನ್ನ ಸಂಕೋಚದ ಮರೆಯಿಂದ ಉತ್ತರಿಸಿದ್ದು. ಕೋಪಗೊಂಡ ಅವನು ಸ್ವರ್ಗೋದ್ಯಾನದಿಂದ ಹೊರಗಟ್ಟಿದ. ಮಣ್ಣಿಂದ ಬಂದ ಮನುಷ್ಯರು ಮಣ್ಣಿಗೇ ಹೋಗಲೆನ್ನುತ್ತಾ ಗಂಡು-ಹೆಣ್ಣಿಗೆರಡು ಶಾಪಗಳನ್ನು ಕೊಟ್ಟ. ಹೆಣ್ಣಿಗೆ ನೋವಿನಲ್ಲಿ ಹೆರುವ ಶಾಪವಾದರೆ, ಗಂಡಿಗೆ ದುಡಿವ ಶಾಪವ.

ದೇವರು ಶಾಪ ಎನ್ನುವ ದುಡಿದು ಬದುಕುವುದನ್ನು ಖಲೀಲ್ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರ ಭಾಗ್ಯ ಎನ್ನುತ್ತಾನೆ. ದುಡಿಯುವುದೆಂದರೆ ವಿಶ್ವದ ಅನಂತತೆಯು ಹೆಮ್ಮೆಯಿಂದ ಹೋಗುವ ಘನವೆತ್ತ ಮೆರವಣಿಗೆಯ ಭಾಗವಾಗುವುದು ಎನ್ನುತ್ತಾನೆ. ನಿನ್ನ ಹಣೆಯಲ್ಲಿ ದುಡಿಮೆಯೆಂಬುವುದು ದೌರ್ಭಾಗ್ಯವಾಗಿ ಬರೆದಿದ್ದರೆ, ದುಡಿಯುವಾಗ ಸುರಿವ ನಿನ್ನ ಬೆವರು ಅದನ್ನು ತೊಡೆದು ಹಾಕಿ ಬಿಡುವುದು ಎಂದು ಬಿಡುತ್ತಾನೆ ಈ ಪಾಪಿ ಖಲೀಲ.! ದೇವರ ಶಾಪವನ್ನು ಹೆಮ್ಮೆಯ ಬದುಕಿನ ಭಾಗವಾಗಿಸಿಕೊಳ್ಳುತ್ತಾನೆ. ಸಾಲದ್ದಕ್ಕೆ ಪ್ರೇಮದ ಮೂರ್ತ ಸ್ವರೂಪವೇ ದುಡಿಮೆ ಎನ್ನುತ್ತಾನೆ. ನೀನು ಪ್ರೀತಿಸುವುದನ್ನು ನಿನ್ನ ಕೆಲಸದಲ್ಲಿ ತೋರಿಸೆನ್ನುತ್ತಾನೆ.

ದಿ ಪ್ರಾಫೆಟ್ ಎಂದು ಖಲೀಲ್ ಗಿಬ್ರಾನ್ ಬರೆದ ಅರಿವಿನ ಹೊತ್ತಿಗೆಯು ಬಹುಪಾಲು ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಅನುವಾದಿತವಾಗಿವೆ. ಕನ್ನಡದಲ್ಲಿ ಜಿ.ಎನ್ ರಂಗನಾಥ್, ಬಂಜಗೆರೆ ಜಯಪ್ರಕಾಶ್, ದೇವದತ್ತ ಇಡೀ ಪುಸ್ತಕವನ್ನೇ ಅನುವಾದಿಸಿದ್ದರೆ, ತಮಗೆ ಬೇಕಾದಂತಹ ಭಾಗಗಳನ್ನು ಬಹಳಷ್ಟು ಲೇಖಕರು ಅನುವಾದಿಸಿ ಸಂದರ್ಭೋಚಿತವಾಗಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿರುತ್ತಾರೆ. ಖಲೀಲನ ಪ್ರಾಫೆಟನ್ನು ಪ್ರವಾದಿ ಎನ್ನುವುದಕ್ಕಿಂತ ದಾರ್ಶನಿಕ ಎಂದು ಕನ್ನಡದಲ್ಲಿ ಕರೆಯುವುದು ಸೂಕ್ತವೆಂದೆನಿಸುತ್ತದೆ.
ಅಲ್ ಮುಸ್ತಾಫ ತನ್ನ ಪಟ್ಟಣಕ್ಕೆ ಮರಳಲು ಬೆಟ್ಟವಿಳಿದು ಬಂದಾಗ ಊರವರು ಸೇರುತ್ತಾರೆ.

ಎದೆಗೆ ಮಗುವನ್ನು ಅವುಚಿಕೊಂಡಿರುವ ಮಹಿಳೆ ಮಗುವಿನ ಬಗ್ಗೆ ಹೇಳು ಎಂದರೆ, “ಮಗುವೆಂಬುದು ನಿಮ್ಮ ಮೂಲಕ ಬಂದಿರುವವರೇ ಹೊರತು ನಿಮ್ಮಿಂದ ಅಲ್ಲ” ಎನ್ನುತ್ತಾ ಮಕ್ಕಳ ಮೇಲೆ ಪೋಕರಿಗಿರುವ ಅಧಿಕಾರವನ್ನು ಕಿತ್ತು, “ನೀವು ಮಕ್ಕಳಂತಾಗಬೇಕೇ ಹೊರತು, ಮಕ್ಕಳನ್ನು ನಿಮ್ಮಂತೆ ಮಾಡಬೇಡಿ. ಏಕೆಂದರೆ ಅವರು ಹೊಂದಿರುವ ಕನಸನ್ನು ನೀವು ಎಂದಿಗೂ ಹೊಂದಲಾರಿರಿ” ಎಂದೆಚ್ಚರಿಸುತ್ತಾನೆ. ಹಿರಿಯರಿಗೆ ಬಾಗಬೇಕು ಎಂದು ಸಾಮಾನ್ಯ ಬೋಧನೆಯನ್ನು ಮಕ್ಕಳಿಗೆ ಮಾಡುವಾಗ ಖಲೀಲ್ ನೀವು ಬಿಲ್ಲಿನಂತೆ ಬಾಗಿ ಮಕ್ಕಳು ಬಾಣದಂತೆ ಚಿಮ್ಮಲಿ ಎನ್ನುತ್ತಾನೆ.

ಮನೆ ಕಟ್ಟುವವನು ಮನೆಯ ಬಗ್ಗೆ ಕೇಳಿದರೆ, “ನಿನ್ನ ದೇಹದ ವಿಸ್ತೃತ ರೂಪವೇ ನಿನ್ನ ಮನೆ” ಎನ್ನುತ್ತಾನೆ. ವ್ಯಾಪಾರಿ ವ್ಯಾಪಾರದ ಬಗ್ಗೆ, ಪ್ರೇಮಿಯು ಪ್ರೇಮದ ಬಗ್ಗೆ, ತಳವಾರನು ಕಾನೂನು ವ್ಯವಸ್ಥೆಯ ಬಗ್ಗೆ, ಬಟ್ಟೆಯ ಬಗ್ಗೆ; ಹೀಗೆ ನಾನಾ ವಿಷಯಗಳ ಬಗ್ಗೆ ಕೇಳಿದವರಿಗೆಲ್ಲಾ ಉತ್ತರಿಸುತ್ತಾ ಹೋಗುವ ಅಲ್ ಮುಸ್ತಾಫ ತನ್ನ ಹಡಗು ಬರಲು ಹೊರಟು ಹೋಗುತ್ತಾನೆ, ಪ್ರಶ್ನಿಸಿದವರಿಗೆಲ್ಲಾ ಅರಿವಿನ ಒಳ ನೋಟಗಳನ್ನು ಕೊಟ್ಟು.

ಪ್ರಾಫೆಟ್ಟಿನ ಪುಟವಿಟ್ಟ ಪುಟಗಳು ಕತ್ತಲಲ್ಲಿಯೂ ಹೊಳೆಯುತ್ತಿರುತ್ತವೆ. ಸಂಬಂಧಗಳ ಸಂಘರ್ಷಗಳಲ್ಲಿ, ಅಸೂಯೆ, ಮತ್ಸರ ಮೂಡಿದ ಕ್ಷಣಗಳಲ್ಲಿ, ಲೋಕದ ರೂಢಿಯ ಭಾವನೆಗಳ್ಯಾವವೇ ಆದರೂ ಕಣ್ಣುಗಳಲ್ಲಿ ಕತ್ತಲಾಗಿ ದಾರಿ ಮಸುಕಾದಾಗ ಖಲೀಲನ ಪ್ರಾಫೆಟ್ ತನ್ನರಿವ ನೋಟಗಳ ಬೆಳಕನ್ನು ನಮ್ಮರಿವ ಕಣ್ಣುಗಳಿಗೆ ಧಾರೆಯೆರೆಯುತ್ತಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...