ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ’ದೇಶಕ್ಕಾಗಿ ಮೃತಪಟ್ಟ ಯೋಧರನ್ನು ಹುತಾತ್ಮರು ಎನ್ನುವಂತೆ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಕೊರೊನಾ ವಾರಿಯರ್ಗಳನ್ನು ಕೂಡಾ ಹುತಾತ್ಮರು ಎಂದು ಕರೆಯಬೇಕು’ ಎಂದು ಹೇಳಿದರು.
ಇದನ್ನೂ ಓದಿ: ಮಹಿಷಾ ದಸರಾ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಲಿ; ಸಂಸದ ಪ್ರತಾಪ್ ಸಿಂಹರವರಿಗೆ ಸವಾಲು
ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ನಿರತರಾದವರಿಗೆ ಪ್ರಶಂಸಾ ಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ ಅವರು, “ದೇಶದಲ್ಲಿ 550 ಕ್ಕೂ ಹೆಚ್ಚು ವೈದ್ಯರು 700 ಕ್ಕೂ ಹೆಚ್ಚು ನರ್ಸ್ಗಳು ಮೃತಪಟ್ಟಿದ್ದು, ಅವರೆಲ್ಲರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನ ದೇವಿ ಚಾಮುಂಡಿ ನೀಡಲಿ” ಎಂದು ಪ್ರಾರ್ಥಿಸಿದರು.
ದಸರೆಯ ಇತಿಹಾಸದಲ್ಲಿ ವೈದ್ಯರೊಬ್ಬರಿಗೆ ದಸರಾ ಉದ್ಘಾಟನೆಯ ಭಾಗ್ಯ ಸಿಕ್ಕಿರುವುದು ಜೀವಿತಾವಧಿಯ ಗೌರವ ಎಂದು ಅವರು ಹೇಳಿದರು.
ಇದನ್ನೂ ಓದಿ: ಅಂಚಿಗೆ ತಳ್ಳಲ್ಪಟ್ಟ ತುಳುನಾಡಿನ ನಿಜ ವಾರಸುದಾರರು
ಬೆಳಗ್ಗೆ 7:45 ರ ಹೊತ್ತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ನವರಾತ್ರಿ ಆಚರಣೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿತ್ತು.
ಇದೇ ವೇಳೆ ಕೋರೋನ ಯೋಧರಾದ ಜಿಲ್ಲಾ ಆಸ್ಪತ್ರೆಯ ಹಿರಿಯ ಶುಶ್ರೂಷಾಧಿಕಾರಿ ಪಿ.ಎಂ.ರುಕ್ಮಿಣಿ, ನಂಜನಗೂಡಿನ ಆಶಾ ಕಾರ್ಯಕರ್ತೆ ನೂರ್ ಜಾನ್, ಪೌರ ಕಾರ್ಮಿಕೆ ಮರಗಮ್ಮ, ಸಾಮಾಜಿಕ ಕಾರ್ಯಕರ್ತ ಅಯ್ಯೂಬ್ ಅಹ್ಮದ್, ಪೊಲೀಸ್ ಕಾನ್ ಸ್ಟೇಬಲ್ ಪಿ.ಕುಮಾರ್, ವೈದ್ಯಾಧಿಕಾರಿ ಡಾ.ನವೀನ್ ಟಿ.ಆರ್. ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ದಸರಾ ಆರಂಭ
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ “ಮಂಗಳೂರು ದಸರಾ” ವಿದ್ಯುಕ್ತವಾಗಿ ಆರಂಭಗೊಂಡಿತು. ಕೊರೊನಾ ಯೋಧರಾಗಿರುವ ಎನ್ಆರ್ಐ ಫೋರಂನ ಮಾಜಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ನವದುರ್ಗೆಯರಿಗೆ ದೀಪವನ್ನು ಬೆಳಗಿಸಿ ದಸರಾ ಆಚರಣೆಗೆ ಚಾಲನೆ ನೀಡಿದರು.
ಇದನ್ನೂ ಓದಿ: ‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್