ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆಗೂ, ಬಾಬರಿ ಮಸೀದಿ ಧ್ವಂಸ ಮಾಡಿದ ಸಂಘಿಗಳಿಗೂ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೇ ಶೂ ಎಸೆದ ಸನಾತನಿ ವಕೀಲನಿಗೂ ಸಾಮ್ಯತೆಗಳಿವೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ವಕೀಲನೊಬ್ಬರ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ಯಾವ ಸಿದ್ದಾಂತ ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಿಯೋ, ಯಾವ ಸಿದ್ದಾಂತ ದೇಶದ ಭಾವೈಕ್ಯತೆಗೆ ಧಕ್ಕೆ ತರುತ್ತಿದೆಯೋ, ಯಾವ ಸಿದ್ದಾಂತ ಸಂವಿಧಾನದ ಮೇಲೆಯೇ ದಾಳಿ ನಡೆಸುತ್ತಿದಿಯೋ, ಯಾವ ಸಿದ್ದಾಂತ ದೇಶದಲ್ಲಿ ಭಯೋತ್ಪದಾನೆಯನ್ನು ಹುಟ್ಟು ಹಾಕುತ್ತಿದೆಯೋ, ಅದೇ ಸಿದ್ದಾಂತವೇ ಇಂದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವಂತೆ ಮಾಡಿರುವುದು ಸ್ಪಷ್ಟ ಎಂದಿದ್ದಾರೆ.
ದೇಶದ ಸರ್ವೋಚ್ಛ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ದುಷ್ಕರ್ಮಿಯ ಪರದೆಯ ಹಿಂದಿನ ಸೂತ್ರದಾರರು ಯಾರು? ದೇಶದ ಅಮಾಯಕ ಜನರ ತಲೆಯಲ್ಲಿ ಮನುಷ್ಯ ವಿರೋಧಿ ಮನಸ್ಥಿತಿ ತುಂಬುತ್ತಿರುವವವರು ಯಾರು? ಅದಕ್ಕೆ ಮೂಲ ಕಾರಣವೇ ಸಮಾಜದಲ್ಲಿ ಆರ್.ಎಸ್.ಎಸ್ ಬಿತ್ತುತ್ತಿರುವ ದ್ವೇಷ….! ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಸಿದ್ದಾಂತದ ವಿರೋಧಿಗಳಾದ ಸಂವಿಧಾನದ ರಕ್ಷಕರು, ಪ್ರಜಾಪ್ರಭುತ್ವವಾದಿಗಳು, ಸಮಾನತಾವಾದಿಗಳು, ಜಾತ್ಯಾತೀತವಾದಿಗಳನ್ನು ಇಲ್ಲವಾಗಿಸುವ ವಿಷಕಾರಿ,ದ್ವೇಷಮಯ ವಾತಾವರಣವನ್ನು ಸಮಾಜದಲ್ಲಿ ಆರ್ಎಸ್ಎಸ್ ಹುಟ್ಟು ಹಾಕಿದೆ. ಇಂತಹ ವಿಚ್ಛದ್ರಕಾರಿ ಶಕ್ತಿಗಳ ವಿರುದ್ಧ ದೇಶ ಒಟ್ಟಾಗಿ ಮುಖಾಮುಖಿಯಾಗಬೇಕಿದೆ ಎಂದಿದ್ದಾರೆ.
ದಲಿತ ಸಮುದಾಯವನ್ನು ಪ್ರತಿನಿಧಿಸುವ ಸುಪ್ರೀಂಕೋರ್ಟ್ನ ನ್ಯಾಯಾಧೀಶರ ಮೇಲಿನ ದಾಳಿಯನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಸಿಜೆಐ ಗವಾಯಿಯವರ ಬೆನ್ನಿಗೆ ದೇಶದ ಪ್ರಜ್ಞಾವಂತ ಜನರು ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಸಿಜೆಐ ಮೇಲೆ ಶೂ ಎಸೆಯುವ ಪ್ರಯತ್ನ ಮನುವಾದಿಗಳ ಜಾತಿ ಅಸಮಾನತೆಗೆ ಸಾಕ್ಷಿ: ಸಿಎಂ ಸಿದ್ದರಾಮಯ್ಯ


