Homeಕರ್ನಾಟಕದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ

ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ

ಸಂಘ ಪರಿವಾರ ತೊರೆದ ಮುಖಂಡರ ಅಭಿಪ್ರಾಯಗಳು ಬಿಜೆಪಿ ನಾಯಕರ ಇಂತಹ ಹೇಳಿಕೆಗಳಿಗೆ ತದ್ವಿರುದ್ಧವಾಗಿವೆ.

- Advertisement -
- Advertisement -

ಇಬ್ಬರು ಮುಸ್ಲಿಂ ಯುವತಿಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿ ಎರಡು ವಾರ ಜೈಲುವಾಸ ಅನುಭವಿಸಿದ ಬಳಿಕ ಡಿಸೆಂಬರ್ 4ರ ಸಂಜೆ ಇಬ್ಬರು ಕೈದಿಗಳು ಕೊಡಗು ಜಿಲ್ಲೆಯ ಮಡಿಕೇರಿ ಜಿಲ್ಲಾ ಕಾರಾಗೃಹದಿಂದ ಹೊರ ಬಂದರು.

ಅವರನ್ನು ಭೇಟಿಯಾಗಲು ಜೈಲಿನ ಹೊರಗೆ ಒಂದು ಸಣ್ಣ ಗುಂಪು ಜಮಾಯಿಸಿತ್ತು. ಜೈಲಿನಿಂದ ಬಿಡುಗಡೆಯಾದ ಯುವಕರನ್ನು ಶನಿವಾರಸಂತೆಗೆ ಕರೆದೊಯ್ಯಲಾಯಿತು. ಅವರಿಗೆ ಕೇಸರಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಿಜೆಪಿ ಮುಖಂಡ ಎಸ್‌.ಎನ್.ರಘು ಅವರು ಈ ಯುವಕರೊಂದಿಗೆ ಫೋಟೋ ತೆಗೆಸಿಕೊಂಡರು.

“ಯುವಕರು ಧರ್ಮದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರದ ಆಶೀರ್ವಾದ ಅವರಿಗಿದೆ. ಈ ಯುವಕರ ಏಳಿಗೆಗೆ ದೇಶ ಸಹಾಯ ಮಾಡುತ್ತದೆ” ಎಂದ ರಘು ಅವರು, ಜೈಲಿನಿಂದ ಬಿಡುಗಡೆಯಾಗಿ ಬಂದ ಯುವಕರನ್ನು ಬೆಂಬಲಿಸಿದರು.

ಒಂದು ವಾರದ ಹಿಂದೆ ರಘು ಅವರು ಈ ಯುವಕರ ಕುಟುಂಬವನ್ನು ಭೇಟಿ ಮಾಡಿ ಭರವಸೆ ನೀಡಿದ್ದರು. “ನಾವು ನಿಮ್ಮ ಮಗನನ್ನು ಮನೆಗೆ ಕರೆತರುತ್ತೇವೆ. ಅವರು ರಾಷ್ಟ್ರಕ್ಕಾಗಿ ಇದನ್ನು ಮಾಡಿದ್ದಾರೆ. ಅವರು ತಮ್ಮ ಧರ್ಮಕ್ಕಾಗಿ ಈ ಕೆಲಸವನ್ನು ಮಾಡಿದ್ದಾರೆ. ನೀವು ಏನನ್ನೂ ಖರ್ಚು ಮಾಡಬೇಕಾಗಿಲ್ಲ, ನಾವು ಅದನ್ನು ನೋಡಿಕೊಳ್ಳುತ್ತೇವೆ” ಎಂದಿದ್ದರು ರಘು.

ನವೆಂಬರ್ 18ರಂದು ಶನಿವಾರಸಂತೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕಿಯರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಜ್ವಲ್ ಮತ್ತು ಕೌಶಿಕ್ ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಈ ಮುಸ್ಲಿಂ ಬಾಲಕಿಯರು ಬುರ್ಖಾವನ್ನು ಹಸ್ತಾಂತರಿಸಿದ ಆರೋಪ ಮಾಡಿಈ ಬಾಲಕಿಯರ ಮೇಲೆ ದಾಳಿ ಮಾಡಲು ಯತ್ನಿಸಿದ 30 ಯುವಕರ ಗುಂಪಿನ ಭಾಗವಾಗಿದ್ದರು ಪ್ರಜ್ವಲ್‌ ಮತ್ತು ಕೌಶಿಕ್‌.

ಒಂದು ತಿಂಗಳಿನಿಂದ ಕೊಡಗಿನಲ್ಲಿ ವರದಿಯಾದ ಕೋಮು ದ್ವೇಷದ ಅಪರಾಧಗಳ ಸರಣಿಯಲ್ಲಿ ಈ ಘಟನೆ ಇತ್ತೀಚಿನದು. ಶಾಲೆಗೆ ಹೋಗುವ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಸಿಕ್ಕಿರುವ ಬೆಂಬಲ ಕೊಡಗು ಜಿಲ್ಲೆಯ ಪ್ರಜ್ಞಾವಂತರಲ್ಲಿ ಆತಂಕ ತಂದಿದೆ.

ಇದನ್ನೂ ಓದಿರಿ: ಶನಿವಾರಪೇಟೆ: ಬುರ್ಖಾ ಧರಿಸಿದಕ್ಕೆ ಅಮಾಯಕ ಬಾಲಕಿಯರ ಮೇಲೆ ಮತೀಯ ಗೂಂಡಾಗಿರಿ

PC: thenewsminute.com

ಕೊಡಗು ಜಿಲ್ಲೆಯಲ್ಲಿ ಮತೀಯ ಗಲಭೆಗಳು ಇನ್ನಿಲ್ಲದಂತೆ ಹಚ್ಚಾಗುತ್ತಿವೆ. ಯುವಕರು ಹಿಂದುತ್ವದ ರಾಜಕೀಯ ದಾಳವಾಗುತ್ತಿದ್ದಾರೆ. ಗಲಭೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಿಂದುತ್ವದಂತೆಯೇ ಮುಸ್ಲಿಂ ಹೆಸರಲ್ಲಿನ ಮತೀಯವಾಗಿ ಸಂಘಟನೆಗಳೂ ಬಲವಾಗುತ್ತಿವೆ. ಆದರೆ ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿ ಇರುವುದರಿಂದ ಹಿಂದುತ್ವ ಸಂಘಟನೆಗಳಿಗೆ ಹೆಚ್ಚಿನ ಬಲ ಬಂದಂತೆ ಕಾಣುತ್ತಿದೆ.

ಆದರೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಪ್ರಕರಣಗಳನ್ನು ಮೈಮೇಲೆ ಎಳೆದುಕೊಳ್ಳುವ ಯುವಕರ ಕುರಿತು ವಿಷಾದ ವ್ಯಕ್ತಪಡಿಸುತ್ತಾರೆ ಹಿಂದುತ್ವಕ್ಕಾಗಿ ದಶಕಗಳ ಕಾಲ ಕೆಲಸ ಮಾಡಿ, ಪ್ರಕರಣಗಳನ್ನು ಮೈಮೇಲೆ ಎಳೆದುಕೊಂಡ ಅನೇಕ ನಾಯಕರು.

‘ನ್ಯಾಯಪಥ’ ಪತ್ರಿಕೆ ಹಾಗೂ ‘ನಾನುಗೌರಿ.ಕಾಂ’ನಲ್ಲಿ ಪ್ರಕಟವಾಗುತ್ತಿರುವ “ನಾನೇಕೆ ಸಂಘ ಪರಿವಾರ ತೊರೆದೆ” ಲೇಖನ ಸರಣಿಯಲ್ಲಿ ಮಾತನಾಡುವ ಅನೇಕರು ಈ ಕುರಿತು ವಿಸ್ತೃತವಾಗಿ ಮಾತನಾಡುತ್ತಿದ್ದಾರೆ. ಶೂದ್ರ ಸಮುದಾಯಗಳ ಯುವಕರಿಗೆ ಬುದ್ಧಿ ಹೇಳುತ್ತಾ, ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಕೋಮುವಾದದ ಪ್ರಯೋಗಶಾಲೆ ಎಂದೇ ಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಶಕಗಳ ಕಾಲ ಸಂಘ ಪರಿವಾರದೊಂದಿಗೆ ಇದ್ದವರು ಸುನಿಲ್ ಬಜಿಲಕೇರಿ ಹಾಗೂ ಪ್ರವೀಣ್‌ ವಾಲ್ಕೆ. ಇತ್ತೀಚೆಗೆ ’ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದ ಅವರುಈ ನಾಯಕರು ಹೇಗೆ ಸಂಘಪರಿವಾರದ ನಾಯಕರು ಬಡ ಹುಡುಗರನ್ನು ಬಳಸಿಕೊಳ್ಳುತ್ತಾರೆ ಎಂದು ವಿವರಿಸಿದ್ದರು.

“ಹಿಂದೂ ಧರ್ಮದ ಉಳಿವಿಗೆ ಸಂಘಟನೆಯ ಅಗತ್ಯವಿಲ್ಲ. ನಮ್ಮ ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿದರೆ, ಹಿಂದೂ ಧರ್ಮ ಸುಧಾರಿಸಿ ಉಳಿಯುತ್ತದೆ. ಯಾವುದೇ ರಾಜಕೀಯ ನಾಯಕರ ಮಕ್ಕಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇಲ್ಲ. ಇಲ್ಲಿನ ಕಾರ್ಯಕರ್ತರು, ಕೆಳವರ್ಗದ ಹುಡುಗರು ಮಾತ್ರ ಕೋರ್ಟ್ ಮೆಟ್ಟಿಲೇರುತ್ತಾರೆ. ಮೇಲ್ವರ್ಗದ ಹುಡುಗರಿಗೆ ಸಜೆಯಾಗಿದ್ದನ್ನಾಗಲೀ, ಪ್ರಕರಣ ದಾಖಲಾಗಿದ್ದಾಗಲೀ ನಾವು ನೋಡಲಿಲ್ಲ. ಪೂಜಾರಿಗಳು, ಶೆಟ್ಟಿಗಳು ಈ ಥರದ ಸಮುದಾಯಗಳೇ ಬಲಿಪಶುಗಳಾಗಿರುತ್ತವೆ. ಈ ಜನಾಂಗಗಳ ಜೀವನವನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಂದ ದೇಶ ಉದ್ಧಾರವಾಗುವುದಿಲ್ಲ. ದೇಶ ಉದ್ಧಾರದ ಬ್ಯಾನರ್ ಹಾಕಿಕೊಂಡು ದೇಶವನ್ನು ’ಲಗಾಡಿ’ ತೆಗೆಯುತ್ತಿದ್ದಾರೆ” ಎಂದಿದ್ದರು ಬಜರಂಗದಳ ಮಾಜಿ ನಾಯಕ ಪ್ರವೀಣ್ ವಾಲ್ಕೆ.

“ಒಬ್ಬ ಹುಡುಗ ಮೊದಲ ಬಾರಿಗೆ ಜೈಲಿಗೆ ಹೋದಾಗ ಸಂಘ ಪರಿವಾರದಲ್ಲಿ ಬಹಳ ಮುರ್ಯಾದೆ ಕೊಡಲಾಗುತ್ತದೆ. ಮತ್ತೆಮತ್ತೆ ಇದೇ ರೀತಿ ಗಲಾಟೆಯಾಯಿತೆಂದರೆ ಅವನನ್ನು ಸಂಘಟನೆಯವರು ಹಿಂದಕ್ಕೆ ಹಾಕುತ್ತಾರೆ. ಹಿಂದೂ ಆಗಲಿ, ಮುಸ್ಲಿಂ ಆಗಲೀ- ದಕ್ಷಿಣ ಕನ್ನಡ ಜಿಲ್ಲೆ ಗ್ಯಾಂಗ್ ಕಟ್ಟಿ ಎದುರುಬದುರಾಗಿಸಲು ಒಂದು ಕಾರ್ಖಾನೆಯಂತಾಗಿದೆ. ಯುವಕರನ್ನು ರೌಡಿಸಂ ಕಾರ್ಖಾನೆಗೆ ಹಿಂದೂ ಮುಸ್ಲಿಂ ಧರ್ಮಗಳ ಕಟ್ಟರ್ ಸಂಘಟನೆಗಳು ದೂಡುತ್ತಿವೆ” ಎಂಬುದು ವಾಲ್ಕೆಯವರ ಅಭಿಪ್ರಾಯ. (ಪ್ರವೀಣ್ ವಾಲ್ಕೆ ಅವರ ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ)

ಸುನಿಲ್‌ ಬಜಿಲಕೇರಿಯವರ ಅನುಭವಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಿಂದುತ್ವದಿಂದ ಬಂಧುತ್ವದ ಕಡೆಗೆ ಹೊರಟಿರುವ ಅವರು, “ಕೇರಳದಿಂದ ಬರುವ ಮುಸ್ಲಿಂ ಯುವಕರು ಹಿಂದೂ ಹುಡುಗಿಯರನ್ನು ಮದುವೆಯಾದಾಗ ಹಿಂದುತ್ವ, ಸಂಘಟನೆ, ಧರ್ಮ ಎನ್ನುತ್ತಾ ಆರ್‌ಎಸ್‌ಎಸ್, ಭಜರಂಗದಳಗಳ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ನಾಯಕರು ಮಾತ್ರ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದು ತಿಳಿಯುತ್ತಾ ಹೋಯಿತು. ಚುನಾವಣಾ ಸಮಯದಲ್ಲಿ ಕಾರ್ಯಕರ್ತರ ಕೊಲೆಯನ್ನು ಮಾಡೋದೋ, ಮಾಡಿಸುವಂತಹದ್ದೋ ಆಗುತ್ತದೆ. ಚುನಾವಣೆ ನಡೆದ ಬಳಿಕ ಎಲ್ಲರೂ ಒಟ್ಟಿಗೆ ಬಾಳೋಣ ಎನ್ನುತ್ತಾರೆ. ಚುನಾವಣೆ ಪ್ರಾರಂಭವಾದ ಕೂಡಲೇ ಕೊಲೆಗಳು ಇಲ್ಲಿ ಅನಿವಾರ್ಯವಾಗುತ್ತಿತ್ತು. ಇದನ್ನೆಲ್ಲ ನೋಡಿನೋಡಿ ಬೇಸರವಾಯಿತು. ಹಿಂದೂ ಸಂಘಟನೆಗಳಲ್ಲಿ ದುಡಿದು ಏನೂ ಪ್ರಯೋಜನವಿಲ್ಲ. ಅವರು ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ನಮಗೆ ರಾಜಕೀಯ ಬೇಡ. ನಾವ್ಯಾಕೆ ಒಂದಾಗಿ ಬದುಕಬಾರದು? ನಮ್ಮ ಮಂಗಳೂರಿನಲ್ಲಿ ಶಾಂತಿ ಏಕೆ ನೆಲೆಸಬಾರದು? ಎಂದು ಯೋಚಿಸಿ ’ಹಿಂದುತ್ವದಿಂದ ಬಂಧುತ್ವ’ ಪರಿಕಲ್ಪನೆಯಲ್ಲಿ ಸಮಾನ ಮನಸ್ಕರು ಸೇರಿ ಜಾಗೃತಿ ಮೂಡಿಸಲು ಮುಂದಾದೆವು. ’ಹಿಂದುತ್ವದೊಂದಿಗೆ ಬಂಧುತ್ವ’ ನಮ್ಮ ಮುಂದಿನ ಹೆಜ್ಜೆಯಾಯಿತು” ಎನ್ನುತ್ತಾರೆ ಸುನಿಲ್.

“ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಹಿಂದುತ್ವದ ಪ್ರಯೋಗಶಾಲೆ. ಈ ಜಿಲ್ಲೆಯಲ್ಲಿ ಬಹುಸಂಖ್ಯಾತರೆಂದರೆ ಬಿಲ್ಲವರು. ಆದರೆ ಈ ಸಮುದಾಯದ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದನ್ನೇ ಬಿಜೆಪಿಯ ಸಂಘಪರಿವಾರದ ನಾಯಕರು ಬಳಸಿಕೊಂಡರು. ಪೇಂಟರ್ ಆಗಿರಬಹುದು, ವೆಲ್ಡರ್ ಆಗಿರಬಹುದು, ಸಣ್ಣ ಸಣ್ಣ ಕೆಲಸ ಮಾಡುವವರನ್ನೆಲ್ಲ ಹಿಂದುತ್ವದ ಬಲೆಯೊಳಗೆ ಹಾಕಿ ಗಲಾಟೆ ಮಾಡಿಸುತ್ತಾರೆ. ಜೈಲಿನಲ್ಲಿ ಇರುವ ಶೇ.90 ಜನರು ಬಿಲ್ಲವರು. ಇದೇನೂ ಈ ರೀತಿ ಮಾಡುತ್ತಿದ್ದಾರೆ? ರಾಜಕೀಯದಲ್ಲಿ ಒಳ್ಳೆಯ ಹುದ್ದೆಗಳಲ್ಲಿ ಇರುವವರೆಲ್ಲ ಮೇಲ್ವರ್ಗದವರಿಗೆ ಮೀಸಲು, ಗಲಾಟೆ ಮಾಡಿ ಜೈಲಿನಲ್ಲಿ ಇರುವವರು ಮಾತ್ರ ಹಿಂದುಳಿದ ವರ್ಗದ ಯುವಕರು! ಇದೆಲ್ಲ ನೋವು ನೀಡಿತು” ಎನ್ನುತ್ತಾರೆ ಸುನಿಲ್‌ ಬಜಿಲಕೇರಿ. (ಇವರ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ)

ಚುನಾವಣೆ ಹತ್ತಿರವಾಗುತ್ತಿವೆ. ಎಲ್ಲೆಡೆ ಕೋಮುದ್ವೇಷ ಹೆಚ್ಚುತ್ತಿವೆ. ಯುವಕರನ್ನು ಜೈಲಿಗೆ ತಳ್ಳುವ ಕೆಲಸಗಳು ನಡೆಯುತ್ತಿವೆ. ರಾಜಕಾರಣಿಗಳ ದಾಳಕ್ಕೆ ಬಡ ಸಮುದಾಯಗಳ ಯುವಕರು ಬಲಿಪಶುಗಳಾಗುವುದು ತಪ್ಪಬೇಕಿದೆ ಎಂಬುದು ಪ್ರಜ್ಞಾವಂತರ ಆಶಯ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌‌: ಪಾಕ್ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿನಿಯರ ಪದವಿ ರದ್ದು ಮಾಡಲಾಗಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...