Homeಮುಖಪುಟ'ಹಣ-ಆಸ್ತಿಯಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ' ಎನ್ನುವ ಸೂತ್ರ ಮುರಿದ ಈ ಅಭ್ಯರ್ಥಿ!

‘ಹಣ-ಆಸ್ತಿಯಿದ್ದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧೆ’ ಎನ್ನುವ ಸೂತ್ರ ಮುರಿದ ಈ ಅಭ್ಯರ್ಥಿ!

ನನ್ನ ಹೆಂಡತಿ ಈಗಲೂ ಆಡು ಮೇಯಿಸಲು ಹೋಗುತ್ತಾಳೆ ಎನ್ನತ್ತಾರೆ ಗಂಧರ್ವಕೋಟ್ಟೈ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಚಿನ್ನದುರೈ...

- Advertisement -
- Advertisement -

ಚುನಾವಣೆಯಲ್ಲಿ ನಿಂತು ಗೆಲ್ಲಬೇಕು ಎಂದರೆ, ಸ್ಪರ್ಧಿಸುವವನು ಹಣವಂತನಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಮಾತನ್ನು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಮ್ಯನಿಸ್ಟ್ ಪಕ್ಷದ ಅಭ್ಯರ್ಥಿ ಚಿನ್ನದುರೈ ಸುಳ್ಳು ಮಾಡಲು ಹೊರಟಿದ್ದಾರೆ. ಪುದುಕೋಟ್ಟೈ ಜಿಲ್ಲೆಯ ಗಂಧರ್ವಕೋಟ್ಟೈ ವಿಧಾನಸಭಾ ಕ್ಷೇತ್ರದಿಂದ ಕಮ್ಯುನಿಸ್ಟ್ (ಮಾರ್ಕ್ಸಿಸ್ಟ್‌) ಪಕ್ಷದಿಂದ ಯಾವುದೇ ಆಸ್ತಿಯಿಲ್ಲದ, ಚಳವಳಿಯ ಹಿನ್ನೆಲೆಯಿರುವ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಲಾಗಿದೆ. ಇದು ಈ ಚುನಾವಣೆಯಲ್ಲಿ ಅತ್ಯಂತ ವಿಶೇಷವೆನಿಸಿದೆ.

ಮೂಲತಃ ಗಂಧರ್ವಕೋಟ್ಟೈನವರಾದ ಚಿನ್ನದುರೈ ಕಾರ್ಮಿಕರಾಗಿದ್ದಾಗಿನಿಂದಲೂ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಸಿಐಟಿಯುನಲ್ಲಿ ಸಕ್ರಿಯ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಕಾಮ್ರೇಡ್ ಟಾಕೀಸ್ ಎನ್ನುವ ಯೂಟ್ಯೂಬ್ ಚಾನೆಲ್ ಇವರ ಸಂದರ್ಶನ ಮಾಡಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಯುವತಿ

ಹೆಂಚಿನ ಮನೆಯಲ್ಲಿ ವಾಸಿಸುತ್ತಿರುವ ಇವರ ಬಳಿಯಿರುವ ಆಸ್ತಿ ಒಂದು ಟಾಟಾ ಏಸ್ ಮಾತ್ರ. ಇದನ್ನು ಚಿನ್ನದುರೈ ಅವರ ಮಗ ಬಾಡಿಗೆಗೆ ಓಡಿಸುತ್ತಾರೆ. ಇದೇ ಇವರ ಕುಟುಂಬದ ಮೂಲ ಆದಾಯ.

ಈ ಕುರಿತು ಸ್ವತಃ ಚಿನ್ನದುರೈ ಅವರೇ ಹೇಳಿರುವಂತೆ, “ನಾನು ನಾಮಪತ್ರ ಸಲ್ಲಿಸಲು ಹೋದಾಗ ಆಸ್ತಿ ವಿವರಗಳನ್ನು ಸಲ್ಲಿಸಬೆಕಾಗಿತ್ತು. ಜೊತೆಗೆ ಐಟಿ ವಿವರಗಳನ್ನು ಸಲ್ಲಿಸಬೇಕಾಗಿತ್ತು. ಆದರೆ ನನ್ನ ಬಳಿ ಆಸ್ತಿಯೆ ಇಲ್ಲದಿರುವುದರಿಂದ ಅದರ ವಿವರಗಳನ್ನು ಸಲ್ಲಿಸಿರಲಿಲ್ಲ. ಆದರೆ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಅಧಿಕಾರಿಗಳು ಬಿಡದೇ ಒತ್ತಾಯ ಮಾಡುತ್ತಿದ್ದರು. ನಂತರ ನಮ್ಮ ಊರಿನ ಡಿಎಂಕೆ ಮುಖಂಡರು ಬಂದು ನೇರವಾಗಿ ಹೇಳಿದ ನಂತರ ನನಗೆ ತೊಂದರೆ ಕೊಡುವುದನ್ನು ನಿಲ್ಲಿಸಿದರು. ಠೇವಣಿ ಕಟ್ಟಲೂ ಸಹ ನನ್ನ ಬಳಿ ಹಣವಿರಲಿಲ್ಲ. ಊರಿನ ಮುಖಂಡರು, ಡಿಎಂಕೆ ಮುಖಂಡರು ಮತ್ತು ಇನ್ನೂ ಕೆಲವು ಸ್ನೇಹಿತರು ಸೇರಿ ಹಣ ಕಟ್ಟಿದರು. ಇದನ್ನು ನೋಡಿದಾಗ ನನಗೆ ಜನಸೇವೆ ಮಾಡಲು ಇನ್ನಷ್ಟು ಹುರುಪು ಹೆಚ್ಚಾಯಿತು” ಎನ್ನುತ್ತಾರೆ.

“ನನ್ನ ಹೆಂಡತಿ ಈಗಲೂ ಆಡು ಮೇಯಿಸಲು ಹೋಗುತ್ತಾಳೆ. ಆದರೆ ಕೆಲವರೆಲ್ಲಾ, ‘ನಿನ್ನ ಗಂಡ ಎಂಎಲ್‌ಎ ಆಗುತ್ತಾನಲ್ಲ. ನೀನ್ಯಾಕೆ ಆಡು ಮೇಯಿಸಲು ಬರುತ್ತೀಯ’ ಎಂದು ನನ್ನ ಹೆಂಡತಿಗೆ ಕೇಳುತ್ತಾರೆ. ಆದರೆ ಆಕೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಪ್ರತಿನಿತ್ಯ ತನ್ನ ಕಾಯಕ ಮಾಡುತ್ತಾಳೆ. ಆದರೆ ನಮ್ಮ ಮುಖಂಡರು ಹೇಳುವಂತೆ, ನಾನು ಚುನಾವಣೆಯಲ್ಲಿ ಗೆದ್ದು 5 ವರ್ಷ ಸಂಪೂರ್ಣವಾಗಿ ಶಾಸಕನಾಗಿ ನನ್ನ ಜನರಿಗೆ ಸೇವೆ ಮಾಡಿದ ನಂತರವೂ ನಾನು ಹೀಗೇ ಇರುತ್ತೇನೆ” ಎಂದು ಆಶ್ವಾಸನೆ ನೀಡಿದ್ದಾರೆ.

“ನನ್ನ ಕ್ಷೇತ್ರದ ಬಹುಪಾಲು ಹಳ್ಳಿಗಳಿಗೆ ಬಸ್ ವ್ಯವಸ್ಥೆಯಿಲ್ಲ. ರಸ್ತೆಯೇ ಇಲ್ಲದಿರುವಾಗ ಬಸ್ ವ್ಯವಸ್ಥೆ ಇರಲು ಹೇಗೆ ಸಾಧ್ಯ. ಹಾಗಾಗಿ ಮೂಲಭೂತವಾಗಿ ಒಂದು ಹಳ್ಳಿಗೆ ಸಿಗಬೇಕಾದ ಯಾವುದೇ ಸೌಕರ್ಯಗಳೂ ಸಹ ಸಿಗುತ್ತಿಲ್ಲ. ಇದನ್ನು ಒದಗಿಸುವುದು ನನ್ನ ಆದ್ಯತೆ. ಇದರಲ್ಲಿ ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳಿಗೆ ಮೊದಲ ಆದ್ಯತೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ: ಮೂರೂ ಪಕ್ಷಗಳಿಂದ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ

“ನನಗೆ ಆಗ ತಿಂಗಳಿಗೆ ಕೇವಲ 50 ರೂ. ಸಂಬಳವಿತ್ತು. ಇದರ ಜೊತೆ 20 ರೂ.ಗಳನ್ನು ಸೇರಿಸಿ 70 ರೂ. ಸಂಬಳ ಕೊಡಿ ಎಂದು ಕೇಳಿದೆ. ಮಾಲೀಕ ಒಪ್ಪಲಿಲ್ಲ. ಆಗ ಸಿಐಟಿಯು ಸಂಘಟನೆ ಸೇರಿದೆ. ಆಗ ನನ್ನ ವಯಸ್ಸು 21. ಸಂಘಟನೆ ಸೇರಿದ ನಂತರ ನನ್ನ ಜೊತೆಗಿನ ಕಾರ್ಮಿಕರ ಹಕ್ಕುಗಳಿಗಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಇದಕ್ಕಾಗಿ 3 ಬಾರಿ ಜೈಲಿಗೂ ಹೋಗಿದ್ದೇನೆ” ಎಂದು ಹೇಳಿದ್ದಾರೆ.

ಅಂತಿಮವಾಗಿ, “ತಮಿಳು ನೆಲದಲ್ಲಿ ಬಿಜೆಪಿಯನ್ನು ತಳವೂರಲು ಬಿಡಬಾರದು ಎನ್ನುವುದೇ ನಮ್ಮ ಮೈತ್ರಿಯ ಗುರಿಯಾಗಿದೆ. ಜೊತೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಪಕ್ಷವನ್ನು 234 ಕ್ಷೇತ್ರಗಳಲ್ಲಿಯೂ ಸೋಲಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಯಾಕೆಂದರೆ ಈ ಸರ್ಕಾರ ಕೃಷಿಕರಿಗೆ, ಕೃಷಿ ಕಾರ್ಮಿಕರಿಗಾಗಿ ಏನನ್ನೂ ಮಾಡಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಅನೈತಿಕ ಕಾನೂನುಗಳ ವಿರುದ್ಧ ದನಿಯೆತ್ತಿಲ್ಲ. ಅಪಾಯದಲ್ಲಿರುವ ತಮಿಳಿನ ಅಸ್ಮಿತೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ” ಎನ್ನುತ್ತಾರೆ.

ಇವರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಕಮ್ಯನಿಸ್ಟ್ ಪಕ್ಷವು ತಾನು ತಳಸಮುದಾಯದ ಪರ ಎಂಬುದನ್ನು ಸಾಬೀತುಪಡಿಸಿದೆ.

ಪಂಚರಾಜ್ಯ ಚುನಾವಣೆಗಳು ಘೋಷಣೆಯಾಗಿದ್ದು, ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆದು, ಮೇ ತಿಂಗಳಿನಲ್ಲಿ ಫಲಿತಾಂಶ ಹೊರಬೀಳಲಿದೆ.

ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್-ಕಮ್ಯುನಿಸ್ಟ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಎಐಎಡಿಎಂಕೆ ಪಕ್ಷವನ್ನು ಸೋಲಿಸಬೇಕು ಎಂಬ ಪಣತೊಟ್ಟಿವೆ. ಹಾಗಾಗಿ ತಮಿಳುನಾಡಿನ 234 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆಯನ್ನು ಬಹಳ ಎಚ್ಚರದಿಂದ ಮಾಡಿದೆ.


ಇದನ್ನೂ ಓದಿ: ಸಂಪರ್ಕದ ಮೂಲಕ ಕೊರೊನಾ : ಭಾರತದಲ್ಲೇ ಅತಿ ಹೆಚ್ಚು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ: ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಹಿಡಿದು ತಮಿಳುನಾಡಿನ ರೈತರಿಂದ ಪ್ರತಿಭಟನೆ

0
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಸುಮಾರು 200ರೈತರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆ ಮತ್ತು ಮೂಳೆಗಳನ್ನು ತಮಿಳುನಾಡಿನಿಂದ ದೆಹಲಿಗೆ ಹೊತ್ತೊಯ್ದಿದ್ದಾರೆ. ಕೃಷಿಯಲ್ಲಿ...