Homeಅಂಕಣಗಳುಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು

ಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು

- Advertisement -
- Advertisement -

ಕಾಂಗ್ರೆಸ್-ಬಿಜೆಪಿ ಪಾಲಿಗೆ ಅಸ್ಸಾಮಿನ Tea Tribe ನಡೆದಾಡುವ ಮತಗಳೇ ವಿನಾ ಮನುಷ್ಯರಲ್ಲ

ದಮನಿತರು ಶೋಷಿತರು ಅವಮಾನಿತರ ನೋವುಗಳಿಗೆ ದನಿಯಾಗಿದ್ದ ಇಂಗ್ಲಿಷ್ ಕಾದಂಬರಿಕಾರ ದಿವಂಗತ ಮುಲ್ಕರಾಜ್ ಆನಂದ್ ಅವರು ಚಹಾ ತೋಟಗಳಲ್ಲಿ ಕಾರ್ಮಿಕರು ಅನುಭವಿಸುವ ರೌರವ ನರಕವನ್ನು ಸೆರೆಹಿಡಿದು ಜಗತ್ತಿಗೆ ತೋರಿದ ಮೊದಲಿಗರು. ಈ ಕಾದಂಬರಿಯ ಹೆಸರು Two Leaves and a Bud (ಎರಡೆಲೆ ಮತ್ತು ಒಂದು ಮುಗುಳು). 1937ರಲ್ಲಿ ಬರೆದಿದ್ದ ಕೃತಿಯದು.

ಒಮ್ಮೆ ಹೊಕ್ಕರೆ ಮತ್ತೆಂದೂ ಹೊರಬೀಳದಂತೆ ಬಂಧಿಸಿ ಹಗಲಿರುಳು ರಕ್ತ ಬೆವರು ಒಂದು ಮಾಡಿಸಿ ದುಡಿಸಿಕೊಳ್ಳುವ ಚಹಾ ತೋಟಗಳ ನರಕದಿಂದ ಮುಕ್ತಿ ನೀಡುವ ಶಕ್ತಿಯಿರುವುದು ಸಾವಿಗೆ ಮಾತ್ರವೇ ಎಂಬ ಕ್ರೂರ ಸತ್ಯ ಈ ಕಾದಂಬರಿಯಲ್ಲಿ ಅನಾವರಣವಾಗುತ್ತ ಹೋಗುತ್ತದೆ. ಅಮಾಯಕರ ಶ್ರಮವನ್ನು ದರೋಡೆ ಮಾಡುವ ಒಡೆಯರ ಪಾಲಿಗೆ ಕೂಲಿಗಳು ದುಡಿವ ಯಂತ್ರಗಳೇ ವಿನಾ ಮನುಷ್ಯರಲ್ಲ. ದಿನಕ್ಕೆ ಬೆಳಗಿನಂತ ರಾತ್ರಿಯತನಕ ಬಿಡುವಿಲ್ಲದೆ ದುಡಿದರೆ ಕೈಗೆ ಬೀಳುವ ಕೂಲಿ ಮೂರು ಆಣೆಗಳು. ದಿನಸಿ ತರಲು ಸಂತೆಗೆ ಹೋದರೆ ಯಾತಕ್ಕೂ ಸಾಲದು. ಮೈಮುರಿಯುವಂತೆ ಹೊಡೆತಗಳನ್ನು ತಿನ್ನಬೇಕಲ್ಲದೆ ಪತ್ನಿ ಪುತ್ರಿಯರನ್ನು ಒಡೆಯರ ಲೈಂಗಿಕ ವಾಂಛೆಗೆ ಒಪ್ಪಿಸಲೇಬೇಕು. ಕೂಲಿಗಳ ಮುರುಕು ವಸತಿಗಳು ಕೊಳಕಿನ ಕೂಪಗಳು. ಕೊಕ್ಕೆಹುಳುಗಳ ಆಗರ. ಹೊಂಚು ಹಾಕುವ ಕಾಲರಾ. ಬಂಡವಾಳ ಹಾಕಿದ ಒಡೆಯರ ಪಾಲಿಗೆ ಕೂಲಿಗಳು ಸುಳ್ಳರು, ಕಳ್ಳರು ಹಾಗೂ ಸೋಮಾರಿಗಳು. ನೈರ್ಮಲ್ಯವೇ ಇಲ್ಲದ ಕೂಪದಲ್ಲಿ ಕೂಲಿ ಗಂಗುವಿನ ಪತ್ನಿ ಸಜನಿ ಕಾಲರಾಕ್ಕೆ ತುತ್ತಾಗಿ ಸಾಯುತ್ತಾಳೆ. ಅಂತ್ಯಕ್ರಿಯೆಗೆ ಗಂಗುವಿನ ಬಳಿ ಹಣವಿಲ್ಲ. ಕೇಳಲು ಹೋದರೆ ಗದರಿ ಅಟ್ಟುತ್ತಾನೆ ಒಡೆಯ. ತೋಟದ ಮ್ಯಾನೇಜರ್ ಕಣ್ಣು ಗಂಗುವಿನ ಮಗಳ ಮೇಲೆ ಬೀಳುತ್ತದೆ. ತಡೆಯಲು ಅಡ್ಡ ಬಂದ ಗಂಗು ಗುಂಡೇಟಿಗೆ ಹೆಣವಾಗಿ ಉರುಳುತ್ತಾನೆ.

ಸಿನೆಮಾಗಳಲ್ಲಿ ಕಾಣುವ ಬೆಟ್ಟಗುಡ್ಡ, ಝರಿ ತೊರೆ, ಕಲಕಲ ನದಿಯ ಸೀಮೆಯ ನಡುವೆ ನಳನಳಿಸುವ ಮನಮೋಹಕ ಹಸಿರು ಚಹಾ ತೋಟಗಳ ಹಿತ್ತಲುಗಳಲ್ಲಿ ಅಸಹನೀಯ ಮೌನ, ಹಸಿವಿನ ಯಾತನೆ, ನಿಟ್ಟುಸಿರು, ರಕ್ತಹೀನತೆ, ರೋಗರುಜಿನಗಳು, ಅಮಾನವೀಯ ಶೋಷಣೆ, ಸಾವಿನ ನೆರಳು ಮೈಚಾಚಿ ಮಲಗಿದೆ. ಬದುಕಿನ ಸಂಗೀತ ಮರೆಯಾಗಿದೆ.

ಕಂಗೆಟ್ಟಿರುವ ಲಕ್ಷ ಲಕ್ಷ ಕಾರ್ಮಿಕರನ್ನು ಮೈದಡವಿ ಮಾತಾಡಿಸುವ ಸರ್ಕಾರಗಳಿಲ್ಲ. ತಮ್ಮ ನೆಲದಲ್ಲೇ ಅನಾಥರಾಗಿರುವ ಅಸಂಖ್ಯಾತರ ಸಾಲಿಗೆ ಸೇರಿ ಹೋಗಿದ್ದಾರೆ ಈ ಶ್ರಮಜೀವಿಗಳು.

ಚೀನಾದಿಂದ ಚಹಾ ಸಸ್ಯಗಳನ್ನು ಕದಿಯುವ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ದಟ್ಟ ಕಾಡುಗಳನ್ನು ಬೋಳಿಸಿ ಬೆಳೆಸುತ್ತದೆ. ಬ್ರಿಟಿಷ್ ಪ್ಲಾಂಟರುಗಳು 150 ವರ್ಷಗಳ ಹಿಂದೆ ಕಾಡು ಕಡಿದು ಚಹಾ ತೋಟಗಳನ್ನು ಎಬ್ಬಿಸಲು ಮಧ್ಯಭಾರತದ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಸ್ಸಾಮ್ ಮತ್ತು ಬಂಗಾಳಕ್ಕೆ ಪಶುಗಳಂತೆ ಸಾಗಿಸುತ್ತಾರೆ. ಮುಂಡಾ, ಸಂತಾಲ್, ಓರಾನ್, ಗೊಂಡರು, ಖಾರಿಯಾ ಹಾಗೂ ಸಾವೊರಾ ಪಂಗಡಗಳ ಈ ಆದಿವಾಸಿ ಕಾರ್ಮಿಕರನ್ನು ಈಗಲೂ Tea Tribes ಎಂದೇ ಕರೆಯಲಾಗುತ್ತದೆ. ಅಸ್ಸಾಮ್ ಒಂದರಲ್ಲೇ ಈ ಆದಿವಾಸಿ ಕಾರ್ಮಿಕರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಅಸ್ಸಾಮಿನ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.18ರಷ್ಟು ಎನ್ನಲಾಗಿದೆ.

ಅಂದಿನ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಬ್ರಿಟಿಷ್ ಪ್ಲಾಂಟರುಗಳಿಗೆ ಸಂಪನ್ಮೂಲಗಳು ಮತ್ತು ಕೂಲಿ ಕಾರ್ಮಿಕರ ಮೇಲೆ ಎಣೆಯಿಲ್ಲದ ಪ್ರಶ್ನಾತೀತ ಅಧಿಕಾರವನ್ನ ಅಧಿಪತ್ಯ ನೀಡಿತ್ತು. ಬಲವಂತದ ನೇಮಕ, ಅತಿ ಕಡಿಮೆ ಕೂಲಿ, ಅಮಾನವೀಯ ವಸತಿ ಮತ್ತು ಕೆಲಸದ ಪರಿಸ್ಥಿತಿಗಳು ಅಂದಿನ ಬ್ರಿಟಿಷ್ ಮಾಲೀಕರ ಲಾಭವನ್ನು ನೂರ್ಮಡಿಗೊಳಿಸುತ್ತಿದ್ದವು. ಸ್ವತಂತ್ರ ಭಾರತದ ಚಹಾ ತೋಟಗಳ ಕಾರ್ಮಿಕರ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ತಮ್ಮ ರಾಜ್ಯಗಳಲ್ಲೇ ಬದುಕಿದ್ದರೆ ಇವರಿಗೆ ಸ್ವಾಭಾವಿಕವಾಗಿ ಹಕ್ಕಿನ ಪ್ರಕಾರವೇ ದಕ್ಕಿರುವ ಪರಿಶಿಷ್ಟ ಪಂಗಡಗಳ ಸ್ಥಾನಮಾನ ಸಿಗುತ್ತಿತ್ತು. ಆದರೆ ಅಸ್ಸಾಮ್ ಸರ್ಕಾರ ಇವರಿಗೆ ಆದಿವಾಸಿಗಳ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ತಯಾರಿಲ್ಲ. ಈ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿರುವ ಆದಿವಾಸಿಗಳು ಅಸ್ಸಾಮಿನ ಉಗ್ರರ ಕೆಂಗಣ್ಣಿಗೆ ಗುರಿಯಾಗಿ ಸಾವಿರ ಸಂಖ್ಯೆಯಲ್ಲಿ ಹತ್ಯೆಯಾಗಿ ಹೋಗಿದ್ದಾರೆ. ಚಹಾ ತೋಟಗಳ ಮಾಲೀಕರ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಡಪಾಯಿಗಳ ವಿರುದ್ಧ ಹತ್ತು ಹಲವು ರೂಪಗಳಲ್ಲಿ ಯುದ್ಧ ಸಾರಿವೆ.

ಅಸ್ಸಾಮ್ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಮೇಲೆ ಸೋಲು ಗೆಲುವಿನ ಮೇಲೆ ಪ್ರಭಾವ ಬೀರಬಲ್ಲವರು ಇವರು. ಸುಮಾರು 40 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಇವರ ಮತಗಳು ತೀರ್ಮಾನಿಸಬಲ್ಲವು. ರಾಜಕೀಯ ಪಕ್ಷಗಳ ಪಾಲಿಗೆ ಈ ಜನರು ನಡೆದಾಡುವ ಉಸಿರಾಡುವ ವೋಟುಗಳು ಅಷ್ಟೇ. ಐದು ವರ್ಷಗಳಿಗೊಮ್ಮೆ ಇವರ ಕಣ್ಣಲ್ಲಿ ಮಣ್ಣು ಹಾಕಿದರೆ ಸಾಕು. ಮುಂದಿನ ಐದು ವರ್ಷಗಳ ಕಾಲ ನಿಶ್ಚಿಂತೆ. ಅಸ್ಸಾಮಿನ ಚುನಾವಣೆಗಳು ಜರುಗಿವೆ. ಹೀಗಾಗಿ ಬಿಜೆಪಿ- ಕಾಂಗ್ರೆಸ್ಸು ಎರಡೂ ಪಕ್ಷಗಳು ಈ ಉಸಿರಾಡುವ ವೋಟುಗಳನ್ನು ರಮಿಸಲು ತೊಡಗಿವೆ.

ನೀರು, ನೆರಳು, ಅನ್ನ ಯಾವ ಸೌಲಭ್ಯವೂ ಸಮರ್ಪಕವಿಲ್ಲ. ಅತಿ ಕಡಿಮೆ ದಿನಗೂಲಿ, ಜೊತೆಗೆ ಲೈಂಗಿಕ ಕಿರುಕುಳ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯೊಂದು ಅಸ್ಸಾಮಿನ ಚಹಾ ತೋಟಗಳ ಕಾರ್ಮಿಕರ ಬವಣೆಯನ್ನು ಬಣ್ಣಿಸುತ್ತದೆ. ಶೇ.89ರಷ್ಟು ಚಹಾ ತೋಟಗಳಲ್ಲಿ ನೈರ್ಮಲ್ಯದ ಸೌಲಭ್ಯಗಳಿಲ್ಲ. ಹೆಣ್ಣುಮಕ್ಕಳು ಮಾಸಿಕ ಚಕ್ರದ ದಿನಗಳಲ್ಲೂ ದುಡಿಯಬೇಕಿದೆ. ಶಿಶುವಿಹಾರ ವ್ಯವಸ್ಥೆಯಿಲ್ಲ ಎಂದು 2017ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ವಿಕಾಸ ಮಂತ್ರಾಲಯಕ್ಕೆ ಸಲ್ಲಿಸಲಾದ ವರದಿ ಹೇಳಿದೆ

ಚಹಾ ಎಲೆ ಕೀಳುವ ಕೂಲಿಯಾಳುಗಳು ಬಹುತೇಕ ಮಹಿಳೆಯರು. ಕೆಲಸದ ನಡುವೆ ಅವರು ಕುಡಿಯುವ ಚಹಾ ಕಷಾಯಕ್ಕೆ ಸಕ್ಕರೆಯ ಬದಲಿಗೆ ಉಪ್ಪು ಬೆರೆಸಿಕೊಳ್ಳುತ್ತಾರೆ. ಅಧಿಕ ರಕ್ತದೊತ್ತಡ ಅವರ ಬೆನ್ನು ಹತ್ತಿದೆ. ಉಪ್ಪಿನ ಬದಲು ಉಚಿತ ಸಕ್ಕರೆ ಸರಬರಾಜು ಮಾಡುವುದಾಗಿ 2019ರಲ್ಲಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಅದೂ ಆಶ್ವಾಸನೆಯಾಗೇ ಉಳಿದಿದೆ.

ನರೇಂದ್ರ ಮೋದಿಯವರು ತಮ್ಮನ್ನು ’ಚಾಯ್ ವಾಲಾ’ ಎಂದು ಕರೆದುಕೊಂಡರು. ಚಹಾ ಮಾರಿದೆನೆಂದು ಹೇಳಿಕೊಂಡು ಅದನ್ನು ಚುನಾವಣೆಯಲ್ಲಿ ರಾಜಕೀಯ ಬಂಡವಾಳವನ್ನಾಗಿಯೂ ಮಾಡಿಕೊಂಡರು. ಆದರೆ ದೇಶದ ಚಹಾ ಮಾರುವವರ ಬದುಕುಗಳನ್ನು ಅರಳಿಸುವಂತಹದೇನನ್ನೂ ಅವರು ಮಾಡಲಿಲ್ಲ. 2014ರ ಲೋಕಸಭಾ ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ದಿನಗೂಲಿಯನ್ನು 350 ರುಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದುಂಟು. ಬಿಜೆಪಿ 2016ರಲ್ಲಿ ಅಸ್ಸಾಮ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಅಚ್ಚು ಮಾಡಿತು. ಇದೀಗ ಮತ್ತೊಂದು ಚುನಾವಣೆ ಬಂದಿದೆ. ಆದರೆ ಆಶ್ವಾಸನೆ ಚುನಾವಣೆ ಪ್ರಣಾಳಿಕೆಯ ಪುಟಗಳಲ್ಲೇ ಹೂತು ಹೋಗಿದೆ.


ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...