Homeಅಂಕಣಗಳುಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು

ಬಹುಜನ ಭಾರತ: ಚಹಾ ತೋಟಗಳ ನವಗುಲಾಮಗಿರಿಯಲ್ಲಿ ನರಳಿರುವ ಆದಿವಾಸಿಗಳು

- Advertisement -
- Advertisement -

ಕಾಂಗ್ರೆಸ್-ಬಿಜೆಪಿ ಪಾಲಿಗೆ ಅಸ್ಸಾಮಿನ Tea Tribe ನಡೆದಾಡುವ ಮತಗಳೇ ವಿನಾ ಮನುಷ್ಯರಲ್ಲ

ದಮನಿತರು ಶೋಷಿತರು ಅವಮಾನಿತರ ನೋವುಗಳಿಗೆ ದನಿಯಾಗಿದ್ದ ಇಂಗ್ಲಿಷ್ ಕಾದಂಬರಿಕಾರ ದಿವಂಗತ ಮುಲ್ಕರಾಜ್ ಆನಂದ್ ಅವರು ಚಹಾ ತೋಟಗಳಲ್ಲಿ ಕಾರ್ಮಿಕರು ಅನುಭವಿಸುವ ರೌರವ ನರಕವನ್ನು ಸೆರೆಹಿಡಿದು ಜಗತ್ತಿಗೆ ತೋರಿದ ಮೊದಲಿಗರು. ಈ ಕಾದಂಬರಿಯ ಹೆಸರು Two Leaves and a Bud (ಎರಡೆಲೆ ಮತ್ತು ಒಂದು ಮುಗುಳು). 1937ರಲ್ಲಿ ಬರೆದಿದ್ದ ಕೃತಿಯದು.

ಒಮ್ಮೆ ಹೊಕ್ಕರೆ ಮತ್ತೆಂದೂ ಹೊರಬೀಳದಂತೆ ಬಂಧಿಸಿ ಹಗಲಿರುಳು ರಕ್ತ ಬೆವರು ಒಂದು ಮಾಡಿಸಿ ದುಡಿಸಿಕೊಳ್ಳುವ ಚಹಾ ತೋಟಗಳ ನರಕದಿಂದ ಮುಕ್ತಿ ನೀಡುವ ಶಕ್ತಿಯಿರುವುದು ಸಾವಿಗೆ ಮಾತ್ರವೇ ಎಂಬ ಕ್ರೂರ ಸತ್ಯ ಈ ಕಾದಂಬರಿಯಲ್ಲಿ ಅನಾವರಣವಾಗುತ್ತ ಹೋಗುತ್ತದೆ. ಅಮಾಯಕರ ಶ್ರಮವನ್ನು ದರೋಡೆ ಮಾಡುವ ಒಡೆಯರ ಪಾಲಿಗೆ ಕೂಲಿಗಳು ದುಡಿವ ಯಂತ್ರಗಳೇ ವಿನಾ ಮನುಷ್ಯರಲ್ಲ. ದಿನಕ್ಕೆ ಬೆಳಗಿನಂತ ರಾತ್ರಿಯತನಕ ಬಿಡುವಿಲ್ಲದೆ ದುಡಿದರೆ ಕೈಗೆ ಬೀಳುವ ಕೂಲಿ ಮೂರು ಆಣೆಗಳು. ದಿನಸಿ ತರಲು ಸಂತೆಗೆ ಹೋದರೆ ಯಾತಕ್ಕೂ ಸಾಲದು. ಮೈಮುರಿಯುವಂತೆ ಹೊಡೆತಗಳನ್ನು ತಿನ್ನಬೇಕಲ್ಲದೆ ಪತ್ನಿ ಪುತ್ರಿಯರನ್ನು ಒಡೆಯರ ಲೈಂಗಿಕ ವಾಂಛೆಗೆ ಒಪ್ಪಿಸಲೇಬೇಕು. ಕೂಲಿಗಳ ಮುರುಕು ವಸತಿಗಳು ಕೊಳಕಿನ ಕೂಪಗಳು. ಕೊಕ್ಕೆಹುಳುಗಳ ಆಗರ. ಹೊಂಚು ಹಾಕುವ ಕಾಲರಾ. ಬಂಡವಾಳ ಹಾಕಿದ ಒಡೆಯರ ಪಾಲಿಗೆ ಕೂಲಿಗಳು ಸುಳ್ಳರು, ಕಳ್ಳರು ಹಾಗೂ ಸೋಮಾರಿಗಳು. ನೈರ್ಮಲ್ಯವೇ ಇಲ್ಲದ ಕೂಪದಲ್ಲಿ ಕೂಲಿ ಗಂಗುವಿನ ಪತ್ನಿ ಸಜನಿ ಕಾಲರಾಕ್ಕೆ ತುತ್ತಾಗಿ ಸಾಯುತ್ತಾಳೆ. ಅಂತ್ಯಕ್ರಿಯೆಗೆ ಗಂಗುವಿನ ಬಳಿ ಹಣವಿಲ್ಲ. ಕೇಳಲು ಹೋದರೆ ಗದರಿ ಅಟ್ಟುತ್ತಾನೆ ಒಡೆಯ. ತೋಟದ ಮ್ಯಾನೇಜರ್ ಕಣ್ಣು ಗಂಗುವಿನ ಮಗಳ ಮೇಲೆ ಬೀಳುತ್ತದೆ. ತಡೆಯಲು ಅಡ್ಡ ಬಂದ ಗಂಗು ಗುಂಡೇಟಿಗೆ ಹೆಣವಾಗಿ ಉರುಳುತ್ತಾನೆ.

ಸಿನೆಮಾಗಳಲ್ಲಿ ಕಾಣುವ ಬೆಟ್ಟಗುಡ್ಡ, ಝರಿ ತೊರೆ, ಕಲಕಲ ನದಿಯ ಸೀಮೆಯ ನಡುವೆ ನಳನಳಿಸುವ ಮನಮೋಹಕ ಹಸಿರು ಚಹಾ ತೋಟಗಳ ಹಿತ್ತಲುಗಳಲ್ಲಿ ಅಸಹನೀಯ ಮೌನ, ಹಸಿವಿನ ಯಾತನೆ, ನಿಟ್ಟುಸಿರು, ರಕ್ತಹೀನತೆ, ರೋಗರುಜಿನಗಳು, ಅಮಾನವೀಯ ಶೋಷಣೆ, ಸಾವಿನ ನೆರಳು ಮೈಚಾಚಿ ಮಲಗಿದೆ. ಬದುಕಿನ ಸಂಗೀತ ಮರೆಯಾಗಿದೆ.

ಕಂಗೆಟ್ಟಿರುವ ಲಕ್ಷ ಲಕ್ಷ ಕಾರ್ಮಿಕರನ್ನು ಮೈದಡವಿ ಮಾತಾಡಿಸುವ ಸರ್ಕಾರಗಳಿಲ್ಲ. ತಮ್ಮ ನೆಲದಲ್ಲೇ ಅನಾಥರಾಗಿರುವ ಅಸಂಖ್ಯಾತರ ಸಾಲಿಗೆ ಸೇರಿ ಹೋಗಿದ್ದಾರೆ ಈ ಶ್ರಮಜೀವಿಗಳು.

ಚೀನಾದಿಂದ ಚಹಾ ಸಸ್ಯಗಳನ್ನು ಕದಿಯುವ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ದಟ್ಟ ಕಾಡುಗಳನ್ನು ಬೋಳಿಸಿ ಬೆಳೆಸುತ್ತದೆ. ಬ್ರಿಟಿಷ್ ಪ್ಲಾಂಟರುಗಳು 150 ವರ್ಷಗಳ ಹಿಂದೆ ಕಾಡು ಕಡಿದು ಚಹಾ ತೋಟಗಳನ್ನು ಎಬ್ಬಿಸಲು ಮಧ್ಯಭಾರತದ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಸ್ಸಾಮ್ ಮತ್ತು ಬಂಗಾಳಕ್ಕೆ ಪಶುಗಳಂತೆ ಸಾಗಿಸುತ್ತಾರೆ. ಮುಂಡಾ, ಸಂತಾಲ್, ಓರಾನ್, ಗೊಂಡರು, ಖಾರಿಯಾ ಹಾಗೂ ಸಾವೊರಾ ಪಂಗಡಗಳ ಈ ಆದಿವಾಸಿ ಕಾರ್ಮಿಕರನ್ನು ಈಗಲೂ Tea Tribes ಎಂದೇ ಕರೆಯಲಾಗುತ್ತದೆ. ಅಸ್ಸಾಮ್ ಒಂದರಲ್ಲೇ ಈ ಆದಿವಾಸಿ ಕಾರ್ಮಿಕರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಅಸ್ಸಾಮಿನ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.18ರಷ್ಟು ಎನ್ನಲಾಗಿದೆ.

ಅಂದಿನ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಬ್ರಿಟಿಷ್ ಪ್ಲಾಂಟರುಗಳಿಗೆ ಸಂಪನ್ಮೂಲಗಳು ಮತ್ತು ಕೂಲಿ ಕಾರ್ಮಿಕರ ಮೇಲೆ ಎಣೆಯಿಲ್ಲದ ಪ್ರಶ್ನಾತೀತ ಅಧಿಕಾರವನ್ನ ಅಧಿಪತ್ಯ ನೀಡಿತ್ತು. ಬಲವಂತದ ನೇಮಕ, ಅತಿ ಕಡಿಮೆ ಕೂಲಿ, ಅಮಾನವೀಯ ವಸತಿ ಮತ್ತು ಕೆಲಸದ ಪರಿಸ್ಥಿತಿಗಳು ಅಂದಿನ ಬ್ರಿಟಿಷ್ ಮಾಲೀಕರ ಲಾಭವನ್ನು ನೂರ್ಮಡಿಗೊಳಿಸುತ್ತಿದ್ದವು. ಸ್ವತಂತ್ರ ಭಾರತದ ಚಹಾ ತೋಟಗಳ ಕಾರ್ಮಿಕರ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ತಮ್ಮ ರಾಜ್ಯಗಳಲ್ಲೇ ಬದುಕಿದ್ದರೆ ಇವರಿಗೆ ಸ್ವಾಭಾವಿಕವಾಗಿ ಹಕ್ಕಿನ ಪ್ರಕಾರವೇ ದಕ್ಕಿರುವ ಪರಿಶಿಷ್ಟ ಪಂಗಡಗಳ ಸ್ಥಾನಮಾನ ಸಿಗುತ್ತಿತ್ತು. ಆದರೆ ಅಸ್ಸಾಮ್ ಸರ್ಕಾರ ಇವರಿಗೆ ಆದಿವಾಸಿಗಳ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ತಯಾರಿಲ್ಲ. ಈ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿರುವ ಆದಿವಾಸಿಗಳು ಅಸ್ಸಾಮಿನ ಉಗ್ರರ ಕೆಂಗಣ್ಣಿಗೆ ಗುರಿಯಾಗಿ ಸಾವಿರ ಸಂಖ್ಯೆಯಲ್ಲಿ ಹತ್ಯೆಯಾಗಿ ಹೋಗಿದ್ದಾರೆ. ಚಹಾ ತೋಟಗಳ ಮಾಲೀಕರ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಡಪಾಯಿಗಳ ವಿರುದ್ಧ ಹತ್ತು ಹಲವು ರೂಪಗಳಲ್ಲಿ ಯುದ್ಧ ಸಾರಿವೆ.

ಅಸ್ಸಾಮ್ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಮೇಲೆ ಸೋಲು ಗೆಲುವಿನ ಮೇಲೆ ಪ್ರಭಾವ ಬೀರಬಲ್ಲವರು ಇವರು. ಸುಮಾರು 40 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಇವರ ಮತಗಳು ತೀರ್ಮಾನಿಸಬಲ್ಲವು. ರಾಜಕೀಯ ಪಕ್ಷಗಳ ಪಾಲಿಗೆ ಈ ಜನರು ನಡೆದಾಡುವ ಉಸಿರಾಡುವ ವೋಟುಗಳು ಅಷ್ಟೇ. ಐದು ವರ್ಷಗಳಿಗೊಮ್ಮೆ ಇವರ ಕಣ್ಣಲ್ಲಿ ಮಣ್ಣು ಹಾಕಿದರೆ ಸಾಕು. ಮುಂದಿನ ಐದು ವರ್ಷಗಳ ಕಾಲ ನಿಶ್ಚಿಂತೆ. ಅಸ್ಸಾಮಿನ ಚುನಾವಣೆಗಳು ಜರುಗಿವೆ. ಹೀಗಾಗಿ ಬಿಜೆಪಿ- ಕಾಂಗ್ರೆಸ್ಸು ಎರಡೂ ಪಕ್ಷಗಳು ಈ ಉಸಿರಾಡುವ ವೋಟುಗಳನ್ನು ರಮಿಸಲು ತೊಡಗಿವೆ.

ನೀರು, ನೆರಳು, ಅನ್ನ ಯಾವ ಸೌಲಭ್ಯವೂ ಸಮರ್ಪಕವಿಲ್ಲ. ಅತಿ ಕಡಿಮೆ ದಿನಗೂಲಿ, ಜೊತೆಗೆ ಲೈಂಗಿಕ ಕಿರುಕುಳ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯೊಂದು ಅಸ್ಸಾಮಿನ ಚಹಾ ತೋಟಗಳ ಕಾರ್ಮಿಕರ ಬವಣೆಯನ್ನು ಬಣ್ಣಿಸುತ್ತದೆ. ಶೇ.89ರಷ್ಟು ಚಹಾ ತೋಟಗಳಲ್ಲಿ ನೈರ್ಮಲ್ಯದ ಸೌಲಭ್ಯಗಳಿಲ್ಲ. ಹೆಣ್ಣುಮಕ್ಕಳು ಮಾಸಿಕ ಚಕ್ರದ ದಿನಗಳಲ್ಲೂ ದುಡಿಯಬೇಕಿದೆ. ಶಿಶುವಿಹಾರ ವ್ಯವಸ್ಥೆಯಿಲ್ಲ ಎಂದು 2017ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ವಿಕಾಸ ಮಂತ್ರಾಲಯಕ್ಕೆ ಸಲ್ಲಿಸಲಾದ ವರದಿ ಹೇಳಿದೆ

ಚಹಾ ಎಲೆ ಕೀಳುವ ಕೂಲಿಯಾಳುಗಳು ಬಹುತೇಕ ಮಹಿಳೆಯರು. ಕೆಲಸದ ನಡುವೆ ಅವರು ಕುಡಿಯುವ ಚಹಾ ಕಷಾಯಕ್ಕೆ ಸಕ್ಕರೆಯ ಬದಲಿಗೆ ಉಪ್ಪು ಬೆರೆಸಿಕೊಳ್ಳುತ್ತಾರೆ. ಅಧಿಕ ರಕ್ತದೊತ್ತಡ ಅವರ ಬೆನ್ನು ಹತ್ತಿದೆ. ಉಪ್ಪಿನ ಬದಲು ಉಚಿತ ಸಕ್ಕರೆ ಸರಬರಾಜು ಮಾಡುವುದಾಗಿ 2019ರಲ್ಲಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಅದೂ ಆಶ್ವಾಸನೆಯಾಗೇ ಉಳಿದಿದೆ.

ನರೇಂದ್ರ ಮೋದಿಯವರು ತಮ್ಮನ್ನು ’ಚಾಯ್ ವಾಲಾ’ ಎಂದು ಕರೆದುಕೊಂಡರು. ಚಹಾ ಮಾರಿದೆನೆಂದು ಹೇಳಿಕೊಂಡು ಅದನ್ನು ಚುನಾವಣೆಯಲ್ಲಿ ರಾಜಕೀಯ ಬಂಡವಾಳವನ್ನಾಗಿಯೂ ಮಾಡಿಕೊಂಡರು. ಆದರೆ ದೇಶದ ಚಹಾ ಮಾರುವವರ ಬದುಕುಗಳನ್ನು ಅರಳಿಸುವಂತಹದೇನನ್ನೂ ಅವರು ಮಾಡಲಿಲ್ಲ. 2014ರ ಲೋಕಸಭಾ ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ದಿನಗೂಲಿಯನ್ನು 350 ರುಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದುಂಟು. ಬಿಜೆಪಿ 2016ರಲ್ಲಿ ಅಸ್ಸಾಮ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಅಚ್ಚು ಮಾಡಿತು. ಇದೀಗ ಮತ್ತೊಂದು ಚುನಾವಣೆ ಬಂದಿದೆ. ಆದರೆ ಆಶ್ವಾಸನೆ ಚುನಾವಣೆ ಪ್ರಣಾಳಿಕೆಯ ಪುಟಗಳಲ್ಲೇ ಹೂತು ಹೋಗಿದೆ.


ಇದನ್ನೂ ಓದಿ: ಬಹುಜನ ಭಾರತ: ಬಂಧನದಲ್ಲಿ ಕಳೆದುಹೋಗುವ ಮುಸಲ್ಮಾನ ಬದುಕುಗಳು- ಪರಿಹಾರ ಇಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...