2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಮತ್ತು ಯುನೈಟೆಡ್ ಎಗೇನ್ಸ್ಟ್ ಹೇಟ್ ಸದಸ್ಯ ಖಾಲಿದ್ ಸೈಫಿ ಅವರನ್ನು ದೆಹಲಿ ನ್ಯಾಯಾಲಯ ಶನಿವಾರ ಆರೋಪ ಮುಕ್ತ ಮಾಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಖಜೂರಿ ಖಾಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ (101/2020) ಸಂಬಂಧಿಸಿದಂತೆ ಇಂದು ಆದೇಶವನ್ನು ಪ್ರಕಟಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಎಫ್ಐಆರ್ಗೆ ಸಂಬಂಧಿಸಿದಂತೆ ಖಾಲಿದ್ ಮತ್ತು ಸೈಫಿ ಇಬ್ಬರಿಗೂ ಜಾಮೀನು ದೊರೆತಿತ್ತು. ಆದಾಗ್ಯೂ, ಗಲಭೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿ ಯುಎಪಿಎ ಪ್ರಕರಣ ದಾಖಲಿಸಿರುವುದರಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎಫ್ಐಆರ್ ಅನ್ನು ಸೆಕ್ಷನ್ 109, 114, 147, 148, 149, 153-ಎ, 186, 212, 353, 395, 427, 435, 436, 452, 454, 505, 34 ಮತ್ತು 120 ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆಯ 3 ಮತ್ತು 4, ಶಸ್ತ್ರಾಸ್ತ್ರ ಕಾಯಿದೆಯ ವಿಭಾಗ 25 ಮತ್ತು 27ನೇ ಸೆಕ್ಷನ್ಗಳನ್ನೂ ಇಲ್ಲಿ ಸೇರಿಸಲಾಗಿದೆ.
ಫೆಬ್ರವರಿ 24, 2020ರಂದು ಚಾಂದ್ ಬಾಗ್ ಪುಲಿಯಾ ಬಳಿ ದೊಡ್ಡ ಜನಸಮೂಹ ಜಮಾಯಿಸಿ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿತು ಎಂದು ಕಾನ್ಸ್ಟೆಬಲ್ ಹೇಳಿದ್ದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿ ತನ್ನನ್ನು ರಕ್ಷಿಸಿಕೊಳ್ಳಲು ಹತ್ತಿರದ ಪಾರ್ಕಿಂಗ್ ಸ್ಥಳಕ್ಕೆ ಹೋದಾಗ, ಜನರ ಗುಂಪು ಪಾರ್ಕಿಂಗ್ ಲಾಟ್ನ ಶಟರ್ ಒಡೆದು ಒಳಗಿದ್ದವರಿಗೆ ಥಳಿಸಿತು. ವಾಹನಗಳಿಗೆ ಬೆಂಕಿ ಹಚ್ಚಿತು ಎಂದು ಆರೋಪಿಸಲಾಗಿದೆ. ನಂತರ ಪ್ರಕರಣವನ್ನು ಫೆಬ್ರವರಿ 28, 2020 ರಂದು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು.
ಪ್ರಾಸಿಕ್ಯೂಷನ್ ಪ್ರಕಾರ, “ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್ ಅವರ ಕಟ್ಟಡವನ್ನು ಗಲಭೆಕೋರರು ‘ಇಟ್ಟಿಗೆ, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಮತ್ತು ಆಸಿಡ್ ಬಾಂಬ್ ದಾಳಿ ನಡೆಸಲು ಬಳಸಿದ್ದಾರೆ.”
ಇದನ್ನೂ ಓದಿರಿ: ಬಿಜೆಪಿ, ಆರ್ಎಸ್ಎಸ್ನವರು ಶ್ರೀರಾಮನಂತೆ ಜೀವನ ನಡೆಸಲ್ಲ: ರಾಹುಲ್
ಕಟ್ಟಡದ ಮೂರನೇ ಮಹಡಿ ಮತ್ತು ಮೇಲ್ಛಾವಣಿಯಲ್ಲಿ ಈ ವಸ್ತು ಬಿದ್ದಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಉಮರ್ ಖಾಲಿದ್ ಅವರು ಜನಸಮೂಹದ ಭಾಗವಾಗಿಲ್ಲದಿದ್ದರೂ, ಉಮರ್ ಮತ್ತು ಖಾಲಿದ್ ಸೈಫೀ ಅವರನ್ನು ಪ್ರಕರಣದಲ್ಲಿ ಸೇರಿಸಿ ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.
ಉಮರ್ ಖಾಲಿದ್ಗೆ ಜಾಮೀನು ನೀಡುವಾಗ, “ಉಮರ್ ವಿರುದ್ಧದ ನಿಖರವಲ್ಲದ ಆಧಾರದ ಮೇಲೆ ಅವರನ್ನು ಜೈಲಿನಲ್ಲಿ ಉಳಿಯಲು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ತನಿಖೆ ಪೂರ್ಣಗೊಂಡಿದೆ ಮತ್ತು ದೋಷಾರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
ಸದ್ಯಕ್ಕೆ ಇದೊಂದು ಆಶಾದಾಯಕ ಬೆಳೆವಣಿಗೆ.