Homeಮುಖಪುಟಶಾಲೆಯಲ್ಲಿ ಅಸ್ಪೃಶ್ಯತೆ - ಏಟಿಗೆ ಎದುರೇಟು

ಶಾಲೆಯಲ್ಲಿ ಅಸ್ಪೃಶ್ಯತೆ – ಏಟಿಗೆ ಎದುರೇಟು

- Advertisement -
- Advertisement -

ಉತ್ತರಾಖಂಡ್ ರಾಜ್ಯದ ಚಂಪಾವತ್ ಜಿಲ್ಲೆಯ ಸುಖಿಧಂಗ್ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಅಪರೂಪವೆನಿಸುವ ಒಂದು ಘಟನೆ ನಡೆದಿದೆ. ಸಂವಿಧಾನದ ಪ್ರಕಾರ ಅಸ್ಪೃಶ್ಯತೆಯ ಆಚರಣೆ ಅಪರಾಧವೆನಿಸಿದ್ದರೂ ದೇಶದಾದ್ಯಂತ ಒಂದು ಪಿಡುಗಾಗಿ ಮುಂದುವರೆದಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಆದರೆ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಲ್ಲಿನ 23 ದಲಿತ ಮಕ್ಕಳು ತೋರಿಸಿಕೊಟ್ಟಿದ್ದಾರೆ. ದಶಕಗಳ ಹಿಂದೆಯೆ ಶಾಲೆಗಳಲ್ಲಿ ಮಧ್ಯಾಹ್ನದ ಊಟ ನೀಡುವ ಕಾರ್ಯಕ್ರಮ ಪ್ರಾರಂಭವಾದಾಗ ದಲಿತ ಮಹಿಳೆಯರು ಮಾಡಿದ ಅಡುಗೆಯನ್ನು ತಿನ್ನಲು ಸವರ್ಣೀಯ ಮಕ್ಕಳು ನಿರಾಕರಿಸುತ್ತಿದ್ದರು. ಅದಕ್ಕೆ ಕಾರಣ ಅವರ ಪೋಷಕರು. ನನ್ನ ತವರು ಜಿಲ್ಲೆಯಾದ ಚಾಮರಾಜನಗರದಲ್ಲಿ ಕೆಲವು ತಂದೆ ತಾಯಿಯರು ಮಕ್ಕಳ ನಾಲಗೆಯನ್ನು ಬೇವಿನ ಕಡ್ಡಿಯಿಂದ ತಿಕ್ಕಿ, ಹಸುವಿನ ಮೂತ್ರ ಲೇಪಿಸಿ ಶುದ್ಧೀಕರಿಸಿಕೊಂಡಿದ್ದರು. ಈ ವಿಷಯ ಬಹುವಾಗಿ ಚರ್ಚಿತವಾಗಿತ್ತು. ನಮ್ಮ ದೇಶದಲ್ಲಿ ಒಂದು ಸಮಸ್ಯೆ ಉದ್ಭವಿಸಿದರೆ ಅದನ್ನು ನಿವಾರಣೆ ಮಾಡಬೇಕು ಎಂದೇನಿಲ್ಲ. ಅದನ್ನು ಹೇಗೋ ಮುಚ್ಚಿಹಾಕಿದರೆ ಆಯಿತು ಅಥವಾ ಜನರನ್ನು ಯಾಮಾರಿಸಿದರೆ ಆಯಿತು ಎನ್ನುವ ಮನೋಭಾವ ಅಧಿಕಾರಸ್ಥರಲ್ಲಿ ಇದೆ. ಇದುವರೆಗೂ ಹಾಗೆ ಮಾಡಿಕೊಂಡು ಬಂದಿದ್ದ ಅಸ್ಪೃಶ್ಯತೆ ಸಮಸ್ಯೆಗೆ ಅಲ್ಲಿನ ವಿದ್ಯಾರ್ಥಿಗಳು ತಕ್ಕ ಉತ್ತರ ನೀಡಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ನಾಣ್ನುಡಿಯನ್ನು ನಿಜ ಮಾಡಿ ತೋರಿಸಿದ್ದಾರೆ.

ಶಾಲೆಯಲ್ಲಿ ನಿವೃತ್ತಿಯಿಂದ ತೆರವಾದ ಭೋಜನಮಾತಾ (ಅಡುಗೆ ತಯಾರಿಸುವಾಕೆ) ವೃತ್ತಿಗೆ ಸುನಿತಾ ದೇವಿ ಎಂಬ ದಲಿತ ಮಹಿಳೆಯನ್ನು ಶಾಲಾ ನಿರ್ವಹಣಾ ಸಮಿತಿಯು ಕಾನೂನಿನಂತೆಯೆ ನೇಮಕ ಮಾಡಿತ್ತು. ಆದೇಶದಂತೆ ಆಕೆ ಅಡುಗೆ ಮಾಡುವ ಕಾರ್ಯಕ್ಕೆ ತೊಡಗಿದಳು. ಆದರೆ ಮರುದಿನವೇ ಶಾಲೆಯ 66 ಮಕ್ಕಳಲ್ಲಿ 43 ಸವರ್ಣೀಯ ಮಕ್ಕಳು ದಲಿತ ಮಹಿಳೆ ಮಾಡಿದ ಅಡುಗೆಯನ್ನು ತಿನ್ನುವುದಿಲ್ಲ ಎಂದು ತಿರಸ್ಕರಿಸಿದರು. ಸಮಸ್ಯೆಯನ್ನು ಪರಿಹರಿಸಲು ಶಾಲಾ ನಿರ್ವಹಣಾ ಸಮಿತಿಯು ಬೇರೆ ದಾರಿ ಕಾಣದೆ ಒಂದೆರಡು ದಿನಗಳ ನಂತರ ಸುನಿತಾ ದೇವಿಗೆ ನೀಡಿರುವ ಆದೇಶವನ್ನು ’ತಪ್ಪಾಗಿ ನೀಡಲಾಗಿದೆ’ ಎಂಬ ಕಾರಣ ಹೇಳಿ ಅದನ್ನು ರದ್ದುಪಡಿಸಿ, ಪುಷ್ಪಾ ಭಟ್ ಎನ್ನುವ ಬ್ರಾಹ್ಮಣ ಮಹಿಳೆಗೆ ಹೊಸ ಆದೇಶ ನೀಡಿತು. ಮಕ್ಕಳ ಪೋಷಕರಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂಬ ಎರಡು ಗುಂಪಾಯಿತು. ಈ ಜಟಾಪಟಿಯ ನಡುವೆ ಉಳಿದ 23 ದಲಿತ ಮಕ್ಕಳು ಬ್ರಾಹ್ಮಣ ಮಹಿಳೆಯು ಮಾಡಿದ ಅಡುಗೆಯನ್ನು ನಾವು ತಿನ್ನುವುದಿಲ್ಲ ಎಂದು ನಿರ್ಧಾರ ತೆಗೆದುಕೊಂಡರು! ಈ ಹೊಸ ಮಾದರಿಯ ಪ್ರತಿರೋಧವನ್ನು ನೋಡಿ ಆಡಳಿತ ವರ್ಗಕ್ಕೆ ಒಂದು ದೊಡ್ಡ ಶಾಕ್ ಆಗಿರಲಿಕ್ಕೂ ಸಾಕು. ಇದು ಸರ್ಕಾರದ ಗಮನಕ್ಕೆ ಹೋಗಿ ದೇಶದಾದ್ಯಂತ ಸುದ್ದಿಯಾಯಿತು. ಸ್ವತಃ ಮುಖ್ಯಮಂತ್ರಿಯೇ ಶಾಲೆಗೆ ಭೇಟಿ ನೀಡಿದರು. ಆಗ ಸುನೀತಾ ದೇವಿಯನ್ನು ಕೆಲಸದಿಂದ ವಜಾ ಮಾಡಿದ್ದು ಯಾಕೆ? ಎಂದು ತನಿಖೆ ಮಾಡಲು ಸರ್ಕಾರ ಒಂದು ಸಮಿತಿಯನ್ನು ನೇಮಿಸಿತು. ಈ ಲೇಖನವನ್ನು ಬರೆಯುತ್ತಿರುವ ಹೊತ್ತಿಗೆ ಆಕೆಯನ್ನು ಮರುನೇಮಕ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಮಕ್ಕಳು ಊಟ ಮಾಡುತ್ತಿದ್ದಾರೆ. ಪರಿಸ್ಥಿತಿ ತಾತ್ಕಾಲಿಕವಾಗಿ ತಣ್ಣಗಾಗಿದೆ.


1935ರಲ್ಲಿ ನಡೆದ ಇತಿಹಾಸ ಪ್ರಸಿದ್ಧವಾದ ಒಂದು ಘಟನೆಯನ್ನು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಗುಜರಾತಿನ ಅಹಮದಾಬಾದ್ ಜಿಲ್ಲೆಯ ಕವಿತಾ ಎಂಬ ಗ್ರಾಮದ ಅಸ್ಪೃಶ್ಯರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಸವರ್ಣೀಯರನ್ನು ಕೇಳಿಕೊಳ್ಳುತ್ತಾರೆ. ವಿದ್ಯೆ ಕೇಳುವಷ್ಟು ಸೊಕ್ಕು ಬಂತೆ ಇವರಿಗೆ ಎಂದು ಸವರ್ಣೀಯರು ಕೆರಳಿ ಕೆಂಡವಾಗಿ ಅಸ್ಪೃಶ್ಯರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಾರೆ. ಅಲ್ಲಿನ ಹಿಂದೂಗಳ ಮನವೊಲಿಸಲು ಹೋಗಿದ್ದ ಎ. ವಿ. ಠಕ್ಕರ್ ಎಂಬುವರು ಒಂದು ವರದಿ ನೀಡುತ್ತಾರೆ. ಕವಿತಾ ಹಳ್ಳಿಯ ಸವರ್ಣೀಯರು ಹರಿಜನ ಬಾಲಕರನ್ನು ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿರುತ್ತಾರೆ ಮತ್ತು ಸಮಸ್ಯೆ ಬಗೆಹರಿದಿದೆ ಎಂದಿರುತ್ತದೆ ಆ ವರದಿ. ಆದರೆ ವಾಸ್ತವವಾಗಿ ಅಸ್ಪೃಶ್ಯರನ್ನು ಹೆದರಿಸಿ, ಬೆದರಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಒತ್ತಾಯ ಮಾಡಿದ್ದಾರೆಂದು ಅಹಮದಾಬಾದಿನ ಹರಿಜನ ಸೇವಕ ಸಂಘದ ಕಾರ್ಯದರ್ಶಿಯ ಹೇಳಿಕೆಯಿಂದ ತಿಳಿದುಬರುತ್ತದೆ. ಒತ್ತಾಯವೆಂದರೆ ಹೇಗೆ? ಅವರನ್ನು ಜಮೀನಿನಿಂದ ಓಡಿಸಲಾಯಿತು. ದನಕರುಗಳಿಗೆ ಮೇಯಲು ಬಿಡಲಿಲ್ಲ. ಅಸ್ಪೃಶ್ಯರ ಮುಂದಾಳುಗಳನ್ನು ಕರೆಸಿ ದೇವರ ಹೆಸರಿನಲ್ಲಿ ಭಾಷೆ ತೆಗೆದುಕೊಂಡು, ಇನ್ನು ಮುಂದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಒಪ್ಪಂದ ಮಾಡಿಕೊಳ್ಳಲಾಯಿತು, ಹೀಗೆ. ಆದರೂ ಬಹಿಷ್ಕಾರ ಮುಂದುವರೆಯುತ್ತದೆ. ತಾವು ಮಾಡಿದ ದೌರ್ಜನ್ಯ ಕಡಿಮೆಯಾಯಿತೆಂದು ಹರಿಜನರು ಬಳಸುತ್ತಿದ್ದ ಬಾವಿಯ ನೀರಿಗೆ ಸೀಮೆ ಎಣ್ಣೆ ಸುರಿದು, ಅವರು ಕುಡಿಯಲು ನೀರಿಲ್ಲದೆ ಸಂಕಟಪಡುವುದನ್ನು ನೋಡಿ ಸವರ್ಣೀಯರು ವಿಕೃತಾನಂದವನ್ನು ಪಡೆಯುತ್ತಾರೆ. ದಲಿತರ ಒಂದು ಸಣ್ಣ ಪ್ರತಿರೋಧವನ್ನು ಸವರ್ಣೀಯರು ಸಹಿಸಿಕೊಳ್ಳಲಾರರು ಎನ್ನುವುದಕ್ಕೆ ಇದೊಂದು ಉದಾಹರಣೆ. ಈ ರೀತಿಯ ಮರೆಮೋಸ, ದೌರ್ಜನ್ಯ ಯಾವತ್ತಿನಿಂದಲೂ ನಡೆದುಕೊಂಡು ಬರುತ್ತಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನುಚ್ಛೇದ 17ರ ಪ್ರಕಾರ ಅಸ್ಪೃಶ್ಯರಿಗೆ ಸಂವಿಧಾನಾತ್ಮಕ ರಕ್ಷಣೆ ಇದ್ದಾಗ್ಯೂ 1935ರಲ್ಲಿ ಇದ್ದಂತಹ ದೌರ್ಜನ್ಯಗಳು ಇಂದಿಗೂ ಮುಂದುವರೆದಿವೆ. ಈಗ ಮತಾಂತರ ನಿಷೇಧ ಕಾಯ್ದೆಯು ಜಾರಿಗೆ ಬರುತ್ತಿದೆ. ಇದು ನೇರಾನೇರ ಪ್ರಭುತ್ವವು ಅಸ್ಪೃಶ್ಯರ ಮೇಲೆ ಎಸಗುತ್ತಿರುವ ಕಾನೂನಾತ್ಮಕ ದೌರ್ಜನ್ಯವೆಂದರೆ ತಪ್ಪಾಗದು. ಕಾನೂನು ಜಾರಿಗೆ ಬರುವ ಮುನ್ನವೆ ಸಮಾಜದಲ್ಲಿ ಅನೇಕ ಅಪಸವ್ಯಗಳು ಕಾಣಿಸಿಕೊಳ್ಳುತ್ತಿವೆ. ಮೊನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕ್ರಿಸ್‌ಮಸ್ ದಿನದಂದು ದಶಕಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಒಂದು ಶಾಲೆಗೆ ಕೆಲ ಯುವಕರು ನುಗ್ಗಿ ಕ್ರಿಸ್‌ಮಸ್ ಯಾಕೆ ಮಾಡುತ್ತಿದ್ದೀರಿ, ಗಣಪತಿ ಹಬ್ಬ ಯಾಕೆ ಮಾಡಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ವಿತಂಡವಾದಗಳಿಗೆ ಇನ್ನುಮುಂದೆ ಕೊನೆಯಿರುವುದಿಲ್ಲ. ತುಮಕೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಸಂಘಪರಿವಾರದವರೆನ್ನಲಾದ ಕೆಲವರು ಕ್ರೈಸ್ತರ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಎಗ್ಗಿಲ್ಲದೆ ಪ್ರಶ್ನೆ ಮಾಡಿದ್ದಾರೆ. ನವಮತಾಂತರಿಗಳ ಪಾಡು ಹೇಳತೀರದಾಗಿದೆ. ಕಾರ್ಯಕರ್ತನೊಬ್ಬ ಮನೆಯೊಳಗಿರುವ ಮಹಿಳೆಯನ್ನು ನೀವು ಹಿಂದೂ ಆಗಿದ್ದರೆ ಹೆಣ್ಮಕ್ಕಳ ಲಕ್ಷಣ ಏನು? ಎಂದು ಕೇಳುತ್ತಾನೆ. ಅದಕ್ಕೆ ಆಕೆ ನಾನು ತಾಳಿಯನ್ನೂ ಬಿಚ್ಚಿಡುತ್ತೇನೆ, ಕಾಲುಂಗುರವನ್ನೂ ತೆಗೆದಿಡುತ್ತೇನೆ. ಅದನ್ನು ಕೇಳುವ ಅಧಿಕಾರ ನಿನಗೆ ಕೊಟ್ಟವರ್‍ಯಾರು? ಎಂದು ಪ್ರತಿಭಟಿಸುತ್ತಾಳೆ. ವಾಟ್ಸ್ಯಾಪ್ ದೃಶ್ಯಾವಳಿಯ ಪ್ರಕಾರ ಅವು ಎಲ್ಲೆ ಮೀರಿದ ದೌರ್ಜನ್ಯಗಳಾಗಿವೆ. ಒಬ್ಬ ಶಾಸಕರೇ ಚರ್ಚುಗಳ ಬಳಿ ಹೋಗಿ ’ನೀವು ಯಾವ ಜಾತಿ, ಎಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದೀರಿ? ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಾರೆ. ಶಾಸಕರೇ ಹೀಗೆ ಮಾಡಿದರೆ ಸಾರ್ವಜನಿಕ ನಡವಳಿಕೆಗೆ ಇದ್ದ ಲಕ್ಷ್ಮಣರೇಖೆಯನ್ನು ಅಳಿಸಿಹಾಕಿದಂತಾಗುವುದಿಲ್ಲವೆ? ಹಿಂದೂಧರ್ಮ ಎನ್ನುವುದು ಕಿಟಕಿ ಬಾಗಿಲುಗಳಿಲ್ಲದ, ಮೆಟ್ಟಿಲುಗಳಿಲ್ಲದ ಮನೆ ಎಂಬ ಅಂಬೇಡ್ಕರ್ ಹೇಳಿದ ಮಾತು ಸವರ್ಣೀಯರಿಗೆ
ಇಂದಿಗೂ ನಾಟುತ್ತಿಲ್ಲ ಮತ್ತು ಆಳುವ ಪ್ರಬಲ ಜಾತಿಗಳ ಮನಸ್ಥಿತಿಗೆ ಪೂರಕವಾಗಿಯೆ ಸಂವಿಧಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಮತಾಂತರ ನಿಷೇಧ ಕಾಯಿದೆ ಉದಾಹರಣೆಯಾಗಿದೆ. ಇದು ಸಂವಿಧಾನದ ಅನುಚ್ಛೇದ 25ರಲ್ಲಿ ನೀಡಲಾಗಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೆ ನಾಗರಿಕರಿಂದ ಕಸಿಯುವ ಕಾಯ್ದೆಯಾಗಿದೆ ಮತ್ತು ಸಂವಿಧಾನವಿರೋಧಿಯಾಗಿದೆ. ಸಂವಿಧಾನಬದ್ಧವಾಗಿ ಅಸ್ಪೃಶ್ಯತೆ ನಿಷೇಧ ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿ ಸರ್ಕಾರಕ್ಕಿರಬೇಕಾಗಿತ್ತು. ಅದರ ಬದಲಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ದಲಿತರನ್ನು ಮತಾಂತರ ಮಾಡಿದರೆ ಹೆಚ್ಚು ಕಠಿಣತಮ ಶಿಕ್ಷೆಯನ್ನು ವಿಧಿಸುವುದು ಏನನ್ನು ಹೇಳುತ್ತದೆ? ಸರ್ಕಾರ ದಲಿತರಿಗೆ ನೀವು ಎಲ್ಲಿದ್ದೀರೋ ಅಲ್ಲಿಯೇ ಇರಿ, ಹೇಗಿದ್ದೀರೋ ಹಾಗೆಯೆ ಇರಿ ಎಂಬ ಧಾರ್ಷ್ಟ್ಯದ ಆದೇಶವನ್ನು ನೀಡುತ್ತಿದೆ ಎಂದಲ್ಲವೆ? ಆದ್ದರಿಂದ ಇದು ಪ್ರಭುತ್ವ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಎಂದು ನಾನು ಕರೆಯುತ್ತೇನೆ.

ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಕನ್ನಡದ ಖ್ಯಾತ ಕವಿ. ದಲಿತ, ಬಂಡಾಯ ಮತ್ತು ಬೌದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸಿದ ಪ್ರಮುಖರಲ್ಲಿ ಒಬ್ಬರು. ‘ಕೊಂಡಿಗಳು ಮತ್ತು ಮುಳ್ಳುಬೇಲಿಗಳು’, ‘ಚಪ್ಪಲಿ ಮತ್ತು ನಾನು’ ಮೂಡ್ನಾಕೂಡು ಅವರ ಕೆಲವು ಕವನಸಂಕಲನಗಳು. ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಅವರ ಆತ್ಮಕತೆ.


ಇದನ್ನೂ ಓದಿ: ಉತ್ತರಾಖಂಡ: ಶಾಲೆಯಲ್ಲಿ ದಲಿತ ಮಹಿಳೆ ಅಡಿಗೆ ಮಾಡಿದ ಕಾರಣಕ್ಕೆ ಊಟ ನಿರಾಕರಿಸಿದ ಸವರ್ಣಿಯ ಮಕ್ಕಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...