“ಲವ್ ಜಿಹಾದ್” ಪ್ರಕರಣಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಉತ್ತರ ಪ್ರದೇಶದ ಹೊಸ ಮತಾಂತರ ವಿರೋಧಿ ಸುಗ್ರೀವಾಜ್ಞೆಯು ಖಾಪ್ ಪಂಚಾಯತ್ನ ತತ್ತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ಈ ಕಾಯ್ದೆಯ ಮುಖ್ಯ ಉದ್ದೇಶವೇ ಮುಖ್ಯವಾಗಿ ಮಹಿಳೆಯರನ್ನು ವಶಪಡಿಸಿಕೊಳ್ಳುವುದು ಎಂದು ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ ಹೇಳಿದ್ದಾರೆ.
ಎನ್ಡಿಟಿವಿ ಜೊತೆಗೆ ಮಾತನಾಡಿದ ನಿವೃತ್ತ ನ್ಯಾಯಾಧೀಶರು, ಈ ಕಾಯ್ದೆಯ ಹಲವಾರು ನಿಬಂಧನೆಗಳು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಜೀವನ ಹಕ್ಕು ಮತ್ತು ಸ್ವಾತಂತ್ರ್ಯದ ಮೂಲವನ್ನು ಹೊಡೆದು ಹಾಕುತ್ತವೆ. ಈ ಸುಗ್ರೀವಾಜ್ಞೆಯು ಸಾರ್ವಜನಿಕ ಕಿಡಿಗೇಡಿತನಕ್ಕೆ ಸಮರ್ಥನೆಯಾಗಿದ್ದು, ಸಂವಿಧಾನದಿಂದ ನಿಯಂತ್ರಿಸಲ್ಪಡುವ ಈ ದೇಶದಲ್ಲಿ ಇಂತಹ ಕಾನೂನನ್ನು ಸರ್ಕಾರವು ಅಂಗೀಕರಿಸಿದೆ ಎಂದು ನಂಬಲು ಕಷ್ಟವಾಯಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಾನೂನು ಆಯೋಗದ ಮಾಜಿ ಅಧ್ಯಕ್ಷರೂ ಆಗಿದ್ದ ನ್ಯಾಯಮೂರ್ತಿ ಎಪಿ ಶಾ ಅವರು, ಈ ಸುಗ್ರೀವಾಜ್ಞೆಯ ಹಲವಾರು ನಿಬಂಧನೆಗಳು 25 ನೇ ವಿಧಿ ಖಾತರಿಪಡಿಸಿದಂತೆ ಯಾವುದೇ ಧರ್ಮವನ್ನು ಅನುಸರಿಸುವ ಮೂಲಭೂತ ಹಕ್ಕನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿ ಮತ್ತೊಬ್ಬರ ಬಂಧನ
“ಈ ಸುಗ್ರೀವಾಜ್ಞೆಯಲ್ಲಿ, ಪ್ರತಿಯೊಂದು ಧಾರ್ಮಿಕ ಮತಾಂತರವೂ ಕಾನೂನುಬಾಹಿರವೆಂದು ಭಾವಿಸಲಾಗಿದೆ. ಆದ್ದರಿಂದ ಕಾನೂನಿನಲ್ಲಿ ಅಪರಾಧದ ಊಹೆಯಿದೆ. ಅಪರಾಧವು ಅರಿವಿನಿಂದ ಕೂಡಿದೆ. ಇದು ಜಾಮೀನು ರಹಿತವಾಗಿದೆ. ಜೊತೆಗೆ ಪೊಲೀಸರು ಯಾರನ್ನೂ ಬೇಕಾದರೂ ಬಂಧಿಸಬಹುದು” ಎಂದು ನ್ಯಾಯಮೂರ್ತಿ ಶಾ ಹೇಳಿದ್ದಾರೆ.
ಈ ಸುಗ್ರೀವಾಜ್ಞೆ ಪ್ರಕಾರ ಮತಾಂತರವು ಆಮಿಷವನ್ನು ಆಧರಿಸಿದ್ದರೆ, ಅದು ಕಾನೂನುಬಾಹಿರವಾಗಿದೆ. ಆದರೆ, ಇಲ್ಲಿನ ಸಮಸ್ಯೆಯೆಂದರೆ, ಆಮಿಷ ಎಂಬ ಪದವನ್ನು ವಿಶಾಲವಾಗಿ ಬಳಸಲಾಗಿದೆ. ಅಂದರೆ, ಒಂದು ಗಡಿಯಾರ, ಬಳೆ, ಅಥವಾ ಉಂಗುರ, ಮದುವೆಯ ಉಡುಗೊರೆಗಳನ್ನು ಕೂಡ ಮತಾಂತರದ ಆಕರ್ಷಣೆಗೆ ಸಮನಾಗಿರುತ್ತದೆ’ ಎಂಬುವಂತಿದೆ ಎಂದು ಮಾಜಿ ನ್ಯಾಯಾಧೀಶರು ವ್ಯಂಗ್ಯವಾಡಿದ್ದಾರೆ.

ಇನ್ನು “ಮತಾಂತರಕ್ಕೆ ಒಳಗಾದವರು ಅಪ್ರಾಪ್ತ ವಯಸ್ಕರು ಅಥವಾ ಮಹಿಳೆ, ಅಥವಾ ಎಸ್ಸಿ / ಎಸ್ಟಿ ಸಮುದಾಯದವರಾಗಿದ್ದರೇ 10 ವರ್ಷಗಳವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಮಹಿಳೆ ವಿದ್ಯಾವಂತಳಾಗಿದ್ದು, ತಾನೇ ಮತಾಂತರಗೊಂಡರೂ 10 ವರ್ಷ ಶಿಕ್ಷೆಯಿದೆ. ಆದರೆ ನೀವು ಅನಕ್ಷರಸ್ಥ ಪುರುಷನನ್ನು ಮತಾಂತರಗೊಳಿಸಿದರೇ 5 ವರ್ಷ ಶಿಕ್ಷೆಯಿದೆ” ಎಂದು ಕಾನೂನನ್ನು ಬಳಸಿಕೊಂಡು ಹೇಗೆ ಮಹಿಳೆಯ ಮೇಲೆ ನಿಯಂತ್ರಣ ಹೇರಲು ಬಳಸಲಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ-ಅಂತರ್ಧರ್ಮಿಯ ವಿವಾಹ; ಗರ್ಭಿಣಿ ಸರ್ಕಾರಿ ಆಶ್ರಯತಾಣದಲ್ಲಿ, ಪತಿ ಜೈಲಿನಲ್ಲಿ!
“ಕುತೂಹಲಕಾರಿಯಾಗಿ, ಈ ಕಾಯ್ದೆ ಪ್ರಕಾರ ಮರುಮತಾಂತರ ಕಾನೂನುಬಾಹಿರವಲ್ಲ. ಅದು ವಂಚನೆ ಅಥವಾ ಬಲದಿಂದ ಕೂಡಿದ್ದರೂ ಶಿಕ್ಷೆಯಿಲ್ಲ. ಆದರೆ, ಒಬ್ಬ ವ್ಯಕ್ತಿಯನ್ನು ಸ್ವಯಂಪ್ರೇರಣೆಯಿಂದ ಮತಾಂತರಗೊಳಿಸಿದರೆ, ಆತನನ್ನು ಬಂಧಿಸಬಹುದು ಎಂಬ ಎರಡು ವಿಭಿನ್ನ ರೂಪವನ್ನು ಸುಗ್ರಿವಾಜ್ಞೆ ಹೊಂದಿರುವ ಬಗ್ಗೆ ಗಮನಸೆಳೆದರು.
“ಹಿಂದೂ ಮಹಾಸಭಾ, ಮುಸ್ಲಿಂ ಪುರುಷರು ಭಾರತದಲ್ಲಿ ಜಿಹಾದ್ ನಡೆಸುತ್ತಿದ್ದಾರೆ ಎಂಬ ವಿಚಾರವನ್ನು ಮಹಿಳೆಯರಲ್ಲಿ ತುಂಬಲು ಪ್ರಯತ್ನಿಸಿದರು” ಎಂದು ನ್ಯಾಯಮೂರ್ತಿ ಎಪಿ ಶಾ ಹೇಳಿದ್ದಾರೆ. “ಹೊರಗಿನವರ ಬಗ್ಗೆ ಮಹಿಳೆಯರಿಗೆ ಎಚ್ಚರಿಕೆ ನೀಡಲಾಗುತ್ತದೆ, ಅದರಲ್ಲೂ ವಿಶೇಷವಾಗಿ ಧರ್ಮದ ಹೊರಗಿನವರು ಅಥವಾ ಕೆಳಜಾತಿಯವರ ಬಗ್ಗೆ ಎಚ್ಚರಿಕೆಯಂದಿರುವಂತೆ ತಿಳಿಸಲಾಗುತ್ತದೆ’ ಎಂದು ಹೇಳಿದರು.
ಮಹಿಳೆಯರನ್ನು ಅಧೀನದಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಖಾಪ್ ಪಂಚಾಯಿತಿಗಳು ಇದೇ ರೀತಿಯ ತತ್ವಶಾಸ್ತ್ರವನ್ನು ಅನುಸರಿಸುತ್ತವೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಲವ್ ಜಿಹಾದ್ಗೆ ಕೌಂಟರ್: ಅಂತರ್ಧರ್ಮೀಯ ವಿವಾಹಿತರಿಗೆ ಪ್ರೋತ್ಸಾಹ ಧನ ಘೋಷಿಸಿದ ಉತ್ತರಾಖಂಡ್!
ವಾಸ್ತವವಾಗಿ, ಅಂತರ್ ಧರ್ಮದ ವಿವಾಹಗಳು ಭಾರತದಲ್ಲಿ ಇನ್ನೂ ಅಪರೂಪ. ಭಾರತದಲ್ಲಿ 90% ಕ್ಕೂ ಹೆಚ್ಚು ವಿವಾಹಗಳನ್ನು ಮನೆಯಲ್ಲಿಯೇ ನಿರ್ಧರಿಸಲಾಗುತ್ತದೆ ಮತ್ತು ಪೋಷಕರಿಂದ ಅಂಗೀಕರಿಸಲ್ಪಟ್ಟಿವೆ. ಕೆಲವೇ ಕೆಲವು ವಿವಾಹಗಳು ಅಂತರ್ಜಾತಿ ವಿವಾಹಗಳಾಗಿವೆ. ಅಂತರ್ಜಾತಿಯ ಶೇಕಡಾವಾರು ಪ್ರಮಾಣವು 5% ಆಗಿದೆ. ಅಂತರ್-ಧರ್ಮಿಯ ವಿವಾಹಗಳು 2-3%, ಇದೆ ಎಂದು ಹೇಳಿದ್ದಾರೆ.
“ಭಾರತದಲ್ಲಿ ದಶಕಗಳಿಂದ, ನಾವು ಕೋಮು ಸೌಹಾರ್ದತೆಯನ್ನು ಸಾಧಿಸಲು ಅಂತರ್-ರಾಜ್ಯ, ಅಂತರ್ಜಾತಿ ಮತ್ತು ಅಂತರ್ ಧರ್ಮದ ವಿವಾಹಗಳನ್ನು ಪ್ರತಿಪಾದಿಸಿದ್ದೇವೆ. ಅಂಬೇಡ್ಕರ್ ಇದರ ದೊಡ್ಡ ಪ್ರತಿಪಾದಕರಾಗಿದ್ದರು. ಅವರ ಅನಿಹಿಲೇಷನ್ ಆಫ್ ಕಾಸ್ಟ್ ಎಂಬ ಪುಸ್ತಕದಲ್ಲಿ ಈ ಕುರಿತು ದೃಢವಾಗಿ ದಾಖಲಿಸಿದ್ದಾರೆ.” ಎಂದು ಎಪಿ ಶಾ ಹೇಳಿದ್ದಾರೆ.
“ಇಂತಹ ಸುಗ್ರೀವಾಜ್ಞೆಯನ್ನು ತಕ್ಷಣವೇ ಹೊಡೆದುರುಳಿಸಬೇಕು ಎಂಬುದು ಸ್ಪಷ್ಟವಾಗಿದೆ. ದೇಶದಲ್ಲಿ ಖಂಡಿತವಾಗಿಯೂ ಇಂತಹ ಕಾನೂನು ಜಾರಿಗೆ ತರಲು ಅನುಮತಿ ನೀಡಬಾರದು. ಸಂವಿಧಾನವು ಖಾತರಿಪಡಿಸಿದ ಈ ಸ್ವಾತಂತ್ರ್ಯಗಳು ನಾಶವಾಗಲು ಬಿಡಬಾರದು. ಇದು ನ್ಯಾಯಾಂಗದಿಂದ ಮಾತ್ರ ಸಾಧ್ಯ ಎಂದಿದ್ದಾರೆ ನಿವೃತ್ತ ನ್ಯಾಯಮೂರ್ತಿ ಎಪಿ ಶಾ.
ಇದನ್ನೂ ಓದಿ: ಲವ್ ಜಿಹಾದ್: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ಮೊದಲ ಬಂಧನ


