ಉತ್ತರ ಪ್ರದೇಶದ ಶಹಜಾನ್ಪುರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರೊಬ್ಬರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನ್ಯಾಯಾಂಗ ಸಂಕೀರ್ಣದ ಮೂರನೇ ಅಂತಸ್ತಿನಲ್ಲಿ ವಕೀಲನ ಶವ ಪತ್ತೆಯಾಗಿದ್ದು, ನಾಡ ಬಂದೂಕು ಮೃತದೇಹದ ಪಕ್ಕದಲ್ಲಿ ಸಿಕ್ಕಿದೆ.
“ಕೊಲೆಯಾಗುವ ಸಂದರ್ಭದಲ್ಲಿ ವ್ಯಕ್ತಿ ಒಬ್ಬರೇ ಇದ್ದರೂ ಎನಿಸುತ್ತದೆ. ವಿಧಿವಿಜ್ಞಾನ ತಂಡವು ಕೆಲಸ ಆರಂಭಿಸಿದೆ. ಕೊಲೆಗೆ ಕಾರಣ ಸ್ಪಷ್ಟವಾಗಿಲ್ಲ” ಎಂದು ಜಹಜಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವಕೀಲರೊಬ್ಬರು ಪ್ರತಿಕ್ರಿಯಿಸಿ, “ನಮಗೂ ಹೆಚ್ಚಿನ ಮಾಹಿತಿ ಇಲ್ಲ. ನಾವು ಕೋರ್ಟ್ನಲ್ಲಿದ್ದವು. ಒಬ್ಬರು ಬಂದು ಹೀಗೆ ವಕೀಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿಸಿದರು. ಮೃತದೇಹದ ಪಕ್ಕದಲ್ಲಿ ನಾಡಬಂದೂಕನ್ನು ಕಂಡೆವು. ಕೊಲೆಯಾಗಿರುವ ವ್ಯಕ್ತಿಯು ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರು. ನಾಲ್ಕೈದು ವರ್ಷಗಳಿಂದ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು” ಎಂದಿರುವುದಾಗಿ ಎನ್ಡಿಟಿವಿ ಹೇಳಿದೆ.
“ಈ ಘಟನೆ ದುಃಖಕರ ಹಾಗೂ ನಾಚಿಕೆಗೇಡು” ಎಂದಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ಉತ್ತರ ಪ್ರದೇಶ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
“ಶಹಜಾನ್ಪುರ ಕೋರ್ಟ್ ಅಂಗಳದಲ್ಲಿ ನಡೆದಿರುವ ಘಟನೆ ಅತ್ಯಂತ ದುಃಖಕರ ಹಾಗೂ ನಾಚಿಗೆಗೇಡಿನ ಸಂಗತಿ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಕಾನೂನು ಸುವ್ಯವಸ್ಥೆಯ ಸ್ಥಿತಿಯನ್ನು ಈ ಘಟನೆ ತೋರುತ್ತದೆ. ಘಟನೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಸರಿಯಾದ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ ಘಟನೆ
ದೆಹಲಿಯ ರೋಹಿಣಿ ನ್ಯಾಯಾಲಯ ಸಂಕೀರ್ಣದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗುಂಡಿನ ಕಾಳಗ ನಡೆದು, ಮೂವರು ಜೀವ ಕಳೆದುಕೊಂಡಿದ್ದರು.
ವಕೀಲರ ವೇಷದಲ್ಲಿದ್ದ ಗ್ಯಾಂಗ್ಸ್ಟರ್ಗಳ ಗುಂಪು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಗುಂಡಿನ ಕಾಳಗ ನಡೆದಿತ್ತು. ಈ ಮುಖಾಮುಖಿಯಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ಜಿತೆಂದರ್ ಗೋಗಿ ಸೇರಿ ಮೂವರು ಕೊಲೆಯಾಗಿದ್ದರು. ಹಲವರು ಗಾಯಗೊಂಡಿದ್ದರು.
ರೋಹಿಣಿ ಕೋರ್ಟ್ ನಂ. 207 ರ ಗಗನ್ ದೀಪ್ ಸಿಂಗ್ ಎಎಸ್ಜೆ NDPS ಕೋರ್ಟ್ ಆವರಣದಲ್ಲಿ ಫೈರಿಂಗ್ ನಡೆದಿತ್ತು. ಸುಮಾರು 40 ಸುತ್ತಿನ ಗುಂಡು ಹಾರಿಸಲಾಗಿತ್ತು. ವಕೀಲರು ಸಹ ಗಾಯಗೊಂಡಿದ್ದರು.
ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ತಿಹಾರ್ ಜೈಲಿನಲ್ಲಿದ್ದ ಕುಖ್ಯಾತ ಗ್ಯಾಂಗ್ಸ್ಟರ್ ಜಿತೆಂದರ್ ಗೋಗಿಯನ್ನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಈ ಘಟನೆ ಜರುಗಿತ್ತು. ಗೋಗಿಯ ವಿರೋಧ ಬಣವಾದ ತಿಲ್ಲು ಗ್ಯಾಂಗ್ನ ಇಬ್ಬರು ವಕೀಲರು ವೇಷದಲ್ಲಿ ಕೋರ್ಟ್ ಪ್ರವೇಶಿಸಿ ಗೋಗಿ ಮೇಲೆ ಗುಂಡಿಕ್ಕಿದ್ದರು. ಗೋಗಿ ಸ್ಥಳದಲ್ಲೇ ಮೃತಪಟ್ಟ ವೇಳೆ ಅಲ್ಲಿನ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡು ಗುಂಡು ಹಾರಿಸಿದ್ದರು.
ಇದನ್ನೂ ಓದಿರಿ: ದೆಹಲಿ ಕೋರ್ಟ್ ಆವರಣದಲ್ಲಿಯೇ ಗುಂಡಿನ ಕಾಳಗ: ಗ್ಯಾಂಗ್ಸ್ಟರ್ ಸೇರಿ ಮೂವರ ಕೊಲೆ