ಉತ್ತರಾಖಂಡದ ಉತ್ತರಕಾಶಿ ಪಟ್ಟಣದಲ್ಲಿ ಗುರುವಾರ ಹಿಂದುತ್ವ ಗುಂಪುಗಳ ನೇತೃತ್ವದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ 55 ವರ್ಷ ಹಳೆಯ ಮಸೀದಿಯನ್ನು ಕೆಡವಲು ಒತ್ತಾಯಿಸಿ ನಡೆಸಿದ್ದ ರ್ಯಾಲಿಯಲ್ಲಿ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘರ್ಷಣೆಯಲ್ಲಿ ಮುಸ್ಲಿಂ ಒಡೆತನದ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು ಮತ್ತು ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಸಂಯುಕ್ತ ಸನಾತನ ಧರ್ಮ ರಕ್ಷಕ ಸಂಘದ ಅಡಿಯಲ್ಲಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದುತ್ವ ಗುಂಪುಗಳು ಮಸೀದಿಯನ್ನು “ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ” ಎಂದು ಪ್ರತಿಪಾದಿಸಿದ್ದರು. ಆದಾಗ್ಯೂ, ಜಿಲ್ಲಾಡಳಿತವು ಇತ್ತೀಚೆಗೆ ಮಸೀದಿಯ ಕಾನೂನುಬದ್ಧತೆಯನ್ನು ದೃಢಪಡಿಸಿದ್ದು, 1969 ರಲ್ಲಿ ಅದರ ನೋಂದಣಿ ಮಾಡಲಾಗಿದೆ ಎಂದು ಅದು ಹೇಳಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪೊಲೀಸ್ ಬ್ಯಾರಿಕೇಡ್ಗಳನ್ನು ಸಮೀಪಿಸುತ್ತಿದ್ದಂತೆ ಗುಂಪು ಕ್ಷೋಭೆಗೊಂಡಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಶ್ರೀವಾಸ್ತವ ಹೇಳಿದ್ದಾರೆ. ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆಯ ಗೊತ್ತುಪಡಿಸಿದ ಮಾರ್ಗದ ಬದಲಿಗೆ ಮಸೀದಿಯ ಕಡೆಗೆ ತಿರುಗಿಸಲು ಪ್ರಯತ್ನಿಸಿದರು, ಹಾಗಾಗಿ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
“ಮಸೀದಿ ಕಡೆಗೆ ತೆರಳದಂತೆ ಅವರನ್ನು ನಿರ್ಬಂಧಿಸಿದಾಗ, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಇದರಿಂದ ನಾಲ್ವರು ಅಧಿಕಾರಿಗಳು ಗಾಯಗೊಂಡರು” ಎಂದು ಶ್ರೀವಾಸ್ತವ ಹೇಳಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಪೊಲೀಸರು ಭದ್ರತಾ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇವಭೂಮಿ ರಕ್ಷಾ ಅಭಿಯಾನದ ಮುಖ್ಯಸ್ಥ ದರ್ಶನ್ ಭಾರತಿ ಸೇರಿದಂತೆ ಸುಮಾರು 30 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಮಸೀದಿಯ ವಿರುದ್ಧ ತಿಂಗಳುಗಟ್ಟಲೆ ಸಂಘಟಿತ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಇದೀಗ ಪ್ರತಿಭಟನೆ ಉಲ್ಬಣಗೊಂಡಿವೆ. ಬಿಜೆಪಿ ಪರ ಕಾರ್ಯಕರ್ತರು ಧರಣಿಗಳನ್ನು ನಡೆಸಿದ್ದು, ಮಸೀದಿಯನ್ನು ಕೆಡವಲು ಒತ್ತಾಯಿಸಿ ಜಿಲ್ಲೆಯ ಅಧಿಕಾರಿಗಳಿಗೆ ಪದೇ ಪದೇ ಮನವಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ ಆರಂಭದಲ್ಲಿ ಮಸೀದಿಯು ವಿವಾದಿತ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಸಣ್ಣ ರ್ಯಾಲಿಯನ್ನು ನಡೆಸಿದ್ದರು. ಜಿಲ್ಲಾಡಳಿತವು ಇತ್ತೀಚೆಗೆ ಮಸೀದಿಯ ನ್ಯಾಯಸಮ್ಮತತೆಯನ್ನು ಎತ್ತಿ ಹಿಡಿದಿದ್ದರೂ, ಬಿಜೆಪಿ ಪರ ಗುಂಪುಗಳು ಅದನ್ನು ತಳ್ಳಿಹಾಕಿವೆ.
“ಈ ಮಸೀದಿಯು ಕಾನೂನುಬಾಹಿರವಾಗಿದೆ ಎಂಬುವುದನ್ನು ಸಮರ್ಥಿಸಲು ನಮ್ಮ ಬಳಿ ದಾಖಲೆಗಳಿವೆ. ನಾವು ಅವುಗಳನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸುತ್ತೇವೆ” ಎಂದು ಸಂಯುಕ್ತ ಸನಾತನ ಧರ್ಮ ರಕ್ಷಕ ಸಂಘ ಹೇಳಿಕೆಯಲ್ಲಿ ತಿಳಿಸಿದೆ. ಗುರುವಾರ, ಉತ್ತರಕಾಶಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ರ್ಯಾಲಿ ನಡೆಸಲಾಗಿದ್ದು, ಅದರಲ್ಲಿ ಭಾಗವಹಿಸಿದವರು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡೆಹ್ರಾಡೂನ್ ಮೂಲದ ಮುಸ್ಲಿಂ ಸೇವಾ ಸಂಘಟನೆಯ ಅಧ್ಯಕ್ಷ ನಯೀಮ್ ಖುರೇಷಿ ಹಿಂಸಾಚಾರವನ್ನು ಖಂಡಿಸಿದ್ದು, ಆಡಳಿತದ ಪ್ರತಿಕ್ರಿಯೆಯನ್ನು ಟೀಕಿಸಿದ್ದಾರೆ. “ಈ ರ್ಯಾಲಿ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ…ಹಿಂಸಾಚಾರವು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಹಿಂದೂ ರಾಷ್ಟ್ರಕ್ಕಾಗಿ ಮಾಡುವ ಕಾರ್ಯಸೂಚಿಯ ಭಾಗವಾಗಿದೆ” ಎಂದು ಅವರು ಹೇಳಿದ್ದಾರೆ. ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್, ಈ ತಿಂಗಳ ಆರಂಭದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಸೀದಿಯು ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿದೆ ಮತ್ತು ವಕ್ಫ್ ಮಂಡಳಿಯಿಂದ ನೋಂದಾಯಿಸಲ್ಪಟ್ಟಿದೆ ಎಂದು ಹೇಳಿದ್ದರು.
“ಕೆಲವು ಬಲಪಂಥೀಯ ಸಂಘಟನೆಗಳು ಇದು ಅಕ್ರಮ ಮಸೀದಿ ಎಂದು ಹೇಳಿಕೊಂಡು ಜಿಲ್ಲಾಡಳಿತಕ್ಕೆ ಮನವಿ ನೀಡಿವೆ. ನಮ್ಮ ದಾಖಲೆಗಳ ಪ್ರಕಾರ, ಇದು ನೋಂದಾಯಿತ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ಇದು ಅಕ್ರಮವಲ್ಲ. ನಾಲ್ಕು ಜನರ ಹೆಸರಿನಲ್ಲಿ ನೋಂದಣಿಯಾಗಿದೆ. ಜಿಲ್ಲಾಡಳಿತ ಕೂಡಾ ಇದನ್ನೆ ಹೇಳಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ: ಪುಣೆ ಪೋರ್ಷೆ ಅಪಘಾತ ಪ್ರಕರಣ: ಸಾಸೂನ್ ಆಸ್ಪತ್ರೆ ಸಿಬ್ಬಂದಿಗಳ ವಿಚಾರಣೆಗೆ ಮಹಾರಾಷ್ಟ್ರ ಸರ್ಕಾರ ಅನುಮೋದನೆ


