’ಮರಾಠರ ಹೆಮ್ಮೆ ಮತ್ತು ಹಿಂದುತ್ವದ ವಿಷಯಕ್ಕೆ ಬಂದಾಗ, ನಾವು ಗೂಂಡಾಗಳೇ, ನಮಗೆ ಯಾರೂ ಗೂಂಡಾಗಳು ಎಂದು ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ, ನಾವು ಪ್ರಮಾಣಪತ್ರ ಹೊಂದಿರುವ ಗೂಂಡಾಗಳೇ’ ಎಂದು ಶಿವಸೇನೆಯ ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈನ ದಾದರ್ನಲ್ಲಿರುವ ಸೇನಾ ಭವನದ ಹೊರಗೆ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಕಾರ್ಯಕರ್ತರ ನಡುವೆ ಬುಧವಾರ ನಡೆದ ಘರ್ಷಣೆ ಬಗ್ಗೆ ಬಿಜೆಪಿಯು ಶಿವಸೇನೆಯ ಗೂಂಡಾಗಿರಿಯ ಬಗ್ಗೆ ಟ್ವಿಟ್ ಮಾಡಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಜಯ್ ರಾವತ್ ನಾವು ಪ್ರಮಾಣಪತ್ರ ಹೊಂದಿದ ಗೂಂಡಾಗಳು ಎಂದಿದ್ದಾರೆ.
ಅಯೋಧ್ಯೆಯಲ್ಲಿ ಭೂ ವ್ಯವಹಾರ ವಿವಾದದ ಬಗ್ಗೆ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ “ಆಕ್ರಮಣಕಾರಿ” ಟೀಕೆಗಳ ವಿರುದ್ಧ ಬಿಜೆಪಿ ಯುವ ಮೋರ್ಚಾ ವಿಭಾಗವು ಪ್ರತಿಭಟನಾ ಮೆರವಣಿಗೆ ನಡೆಸುವಾಗ ಶಿವಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಶೀವಸೇನೆಯ ಕಾರ್ಯಕರ್ತರು ಬಿಜೆಪಿಯ ಮಹಿಳಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಬಿಜೆಪಿಗೆ ಭ್ರಷ್ಟಾಚಾರಿಗಳ ಮೇಲೆ ನಂಬಿಕೆಯೆ ಹೊರತು ರಾಮನ ಮೇಲಲ್ಲ: AAP ಸಂಸದ
ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದ್ದ ಈ ಘಟನೆಯಲ್ಲಿ, ’ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಲು ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಾರೆ ಎಂಬ ಮಾಹಿತಿ ತಮಗೆ ದೊರೆತಿದೆ’ ಎಂದು ಶಿವಸೇನಾ ಹೇಳಿತ್ತು.
“ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಬರುತ್ತಿದ್ದಾರೆ, ಅವರು ಸೇನಾ ಭವನವನ್ನು ಧ್ವಂಸ ಮಾಡಲು ಬರುತ್ತಿದ್ದಾರೆ ಎಂದು ನಮಗೆ ಮೊದಲು ತಿಳಿದಿತ್ತು. ಆದ್ದರಿಂದ ಅವರು ಸೇನಾ ಭವನದ ಹತ್ತಿರ ತಲುಪುವ ಮುನ್ನವೇ ನಾವು ಅವರನ್ನು ನಿಲ್ಲಿಸಿದ್ದೇವೆ” ಎಂದು ಸೇನಾ ಶಾಸಕ ಸದಾ ಸರ್ವಾಂಕರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಪಿಟಿಐ ಉಲ್ಲೇಖಿಸಿದೆ.
“ಬಾಳಾ ಸಾಹೇಬ್ ಠಾಕ್ರೆ ಅವರು ಶಿವಸೇನೆ ಭವನದಲ್ಲಿ ಕುಳಿತುಕೊಳ್ಳುತ್ತಿದ್ದರು. ಶಿವಸೇನೆ ಭವನವನ್ನು ಯಾರಾದರೂ ಟಾರ್ಗೆಟ್ ಮಾಡಿದರೆ ನಾವು ಸರಿಯಾದ ಉತ್ತರ ನೀಡುತ್ತೇವೆ. ಇದನ್ನು ನೀವು ಗೂಂಡಗಿರಿ ಎಂದು ಕರೆದರೆ ನಾವು ಗೂಂಡಾಗಳು” ಎಂದು ಸಂಜಯ್ ರಾವತ್ ಹೇಳಿದ್ದಾರೆ.
“ಬಿಜೆಪಿ ಏಕೆ ಇಷ್ಟು ಆಕ್ರೋಶಗೊಂಡಿದೆ..? ಸೇನಾ ಸಂಪಾದಕೀಯ ಏನು ಹೇಳಿದೆ..? ಇದು ಕೇವಲ ಆರೋಪಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿತ್ತು. ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಿದರೆ, ಅದನ್ನು ನೆಲಸಮಗೊಳಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿತ್ತು. ಸಂಪಾದಕೀಯದಲ್ಲಿ ಎಲ್ಲಿಯೂ ಬಿಜೆಪಿ ಭಾಗಿಯಾಗಿದೆ ಎಂದು ಉಲ್ಲೇಖಿಸಿಲ್ಲ. ನಿಮಗೆ ಓದಲು ಮತ್ತು ಬರೆಯಲು ಸಾಧ್ಯವಿಲ್ಲವೇ..? ಮೊದಲು ಆರೋಪಗಳು ಯಾವುವು ಮತ್ತು ಶಿವಸೇನೆ ವಕ್ತಾರರು ಏನು ಹೇಳಿದ್ದಾರೆಂದು ಅರ್ಥಮಾಡಿಕೊಳ್ಳಿ” ಎಂದು ಸಾಮ್ನಾ ಸಂಪಾದಕರು ಆಗಿರುವ ಸಂಜಯ್ ರಾವತ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರವನ್ನು ‘ಕೇಂದ್ರ ಸರ್ಕಾರ’ ಎಂದು ಉಲ್ಲೇಖಿಸುವುದನ್ನು ಕೈಬಿಟ್ಟ ತಮಿಳುನಾಡು!