`ರೈತರ ನೋವನ್ನು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ಪಕ್ಷದ ನಾಯಕತ್ವವು ವಿಫಲವಾಗಿದೆ. ಆದ್ದರಿಂದಲೇ ಕೃಷಿ ಕಾನೂನುಗಳ ಬಗ್ಗೆ ಒಮ್ಮತ ಮೂಡಿಸಲು ಸಾಧ್ಯವಾಗಿಲ್ಲ’ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಅನಿಲ್ ಜೋಶಿ ಕೇಂದ್ರ ಮತ್ತು ಪಂಜಾಬ್ ರಾಜ್ಯ ಬಿಜೆಪಿ ನಾಯಕತ್ವವನ್ನು ಟೀಕಿಸಿದ್ದಾರೆ.
ಅಮೃತಸರ ಉತ್ತರ ವಿಧಾನಸಭೆಯಿಂದ ಎರಡು ಬಾರಿ ಶಾಸಕರಾಗಿದ್ದ ಜೋಶಿಯವರು, ‘ತಮ್ಮ ಪಕ್ಷದ ಹಿರಿಯ ನಾಯಕರು ಪಂಜಾಬ್ ರಾಜಕೀಯದಲ್ಲಿ ಜೀವಂತವಾಗಿ ಇರಬೇಕಾದರೆ ‘ಹಠ ಯೋಗ’ವನ್ನು ದೂರವಿಡಬೇಕು ಮತ್ತು ರೈತರ ವಿಷಯದಲ್ಲಿ ಪ್ರಾಮಾಣಿಕತೆ ತೋರಿಸಬೇಕು’ ಎಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
`ರೈತರ ಆಂದೋಲನದಿಂದಾಗಿ ನಾವು ಪಂಜಾಬ್ನ ಪುರಸಭೆ ಚುನಾವಣೆಗಳಲ್ಲಿ ಕೆಟ್ಟದಾಗಿ ಸೋತಿದ್ದೇವೆ. ಅವರು ನಮಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಎಂದು ನೀವು ಭಾವಿಸುತ್ತೀರಾ? ಕಳೆದ ಆರು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಭದ್ರವಾಗಿ ನೆಲೆಯೂರಿರುವ ರೈತರು ಈಗ ನಮಗೆ ಬಗ್ಗುತ್ತಾರೆ ಎಂದು ನೀವು ಭಾವಿಸುತ್ತೀರಾ? ನಿಮ್ಮನ್ನು ನಂಬಿದವರ ಸಮಸ್ಯೆಗಳನ್ನು ನಿಭಾಯಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ರಾಜಕೀಯದಲ್ಲಿ ಬದುಕುಳಿಯುತ್ತೀರಿ ಎಂದು ಇನ್ನೂ ಯೋಚಿಸುತ್ತಿದ್ದೀರಾ?’ ಎಂದು ಬಿಜೆಪಿ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ.
ರೈತರ ಮಾತುಗಳನ್ನು ಕೇಳುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿರುವ ಜೋಶಿ, ‘ಬಿಜೆಪಿ ನಾಯಕರು ಉನ್ನತ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಬಹುದು ಎಂದು ರೈತರು ಭಾವಿಸುತ್ತಾರೆ. ಆದರೆ ನಮ್ಮ ಮಾತನ್ನು ರಾಜ್ಯಾಧ್ಯಕ್ಷರೇ ಕೇಳುವುದಿಲ್ಲ ಎಂಬುದು ರೈತರಿಗೆ ತಿಳಿದಿಲ್ಲ, ಎಂದು ಪಕ್ಷದ ನಾಯಕತ್ವದ ವಿರುದ್ಧ ಕಿಡಿಕಾರಿದ್ದಾರೆ.
ರೈತರು ದೆಹಲಿ ಗಡಿಗಳಲ್ಲಿ ಬೀಡುಬಿಟ್ಟು ಪ್ರತಿಭಟನೆ ಆರಂಭಿಸಿ ಆರು ತಿಂಗಳು ಕಳೆದಿವೆ. ನಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಸೇರಿದಂತೆ ಸುಮಾರು 500 ಜನ ರೈತರು ಹುತಾತ್ಮರಾಗಿದ್ದಾರೆ. ಇದರ ನೋವು ನಮ್ಮೆಲ್ಲರಿಗೂ ಇರಬೇಕು ಎಂದು ಜೋಶಿ ತಿಳಿಸಿದ್ದಾರೆ.
ಕೃಪೆ: ಅನ್ನದ ಋಣ
ಇದನ್ನೂ ಓದಿ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ರೈತರು: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಜೆಜೆಪಿ ಶಾಸಕ