Homeಅಂಕಣಗಳುಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

- Advertisement -
- Advertisement -

ನಾವು ಸಣ್ಣವರಿದ್ದಾಗ ದೊಡ್ಡವರೆಲ್ಲಾ ಫೈವ್ ಎನ್.ಪಿ, ಟೆನ್ ಎನ್.ಪಿ ಅಂತ ಮಾತಾಡ್ತಿದ್ದರು. ಹಂಗಂದರ ನಯಾ ಪೈಸಾ. ಅದು ಆಣೆ – ಬಿಲ್ಲಿ ಲೆಕ್ಕ ಎಲ್ಲ ಹೋಗಿ ಪೈಸಾ ಬಂದಿದ್ದ ಕಾಲ.

ಅದು ಹಳೇದು ಆತು. ಈಗ ಬಂದಿರೋದು ಎನ್.ಇ.ಪಿ. ಅದು ಒಂದು ಥರ ಆಣೆ – ಬಿಲ್ಲಿ ಲೆಕ್ಕ ಹೋಗಿ ನಯಾ ಪೈಸಾ ಬಂದಂಗ. ಈ ಎನ್.ಇ.ಪಿ ಎನಪಾ ಅಂದ್ರ ಅದು ಹೊಸ ಶಿಕ್ಷಣ ನೀತಿ.

ನೀವು ಇಷ್ಟು ದಿವಸ ಬಹಳ ನೀತಿ- ನಿಯಮ ನೋಡಿರಬಹುಡು. ಅವುಕುರ ಹಣೆಬರಹ ಅಷ್ಟ.

ನೀತಿ ನಿಯಮಗಳು ಬರೇ ಕಾಗದದಾಗ ಇರಬೇಕು, ಜಾರಿಗೆ ಮಾತ್ರ ಬರೋದಿಲ್ಲ ಅಂತ ನೀವು ಏನರ ತಿಳ್ಕೊಂಡಿರಬಹುದು. ಅದು ಗಾಡಿ ಓಡಿಸೋವಾಗ ಎಡಗಡೆಯಿಂದ ಮುಂದಕ್ಕ ಹೋಗಬಾರದು ಅನ್ನೋ ಸರಳ ನಿಯಮ ಇರಬಹುದು ಅಥವಾ ಅಭಯಾರಣ್ಯದಾಗಿನ ಹುಲಿ- ಸಿಂಹ ಎಲ್ಲ ಕೊಂದು ಕಾರಖಾನಿ ಮಾಲೀಕರಿಗೆ ಕೊಡಬಾರದು ಅನ್ನೋ ಸಹಜ ನೀತಿ ಇರಲಿ, ಎಲ್ಲಾನೂ ಮುರಿಯಬಹುದು. ನೀತಿ ನಿಯಮದ ವಿಷಯಕ್ಕ ಬಂದರ ನಮಗ ಪ್ರತಿ ದಿನಾನು ದಸರಾ. ಪ್ರತಿ ಸಂಜೆ ಸೀಮೋಲ್ಲಂಘನ. ಈ ವಿಷಯಕ್ಕ ಬಂದರ ನಾವು ಮಹಿಷ ಕುಲದವರು.

ನಾವು ಧಾರವಾಡದ ಹತ್ತರ ಎಮ್ಮಿಗನೂರಿನ ನಾಡಹಬ್ಬ ಮಾಡಲಿ, ಮಂಡ್ಯದ ಹತ್ತರ ಮಹಿಷಾಸುರ ಊರಿನೊಳಗ ಚಾಮುಂಡಿ ಬೆಟ್ಟದ ಹತ್ತರ ದಸರಾ ಆಚರಿಸಲಿ, ಅದಕ್ಕ ಭಾಳ ವ್ಯತ್ಯಾಸ ಏನೂ ಇಲ್ಲ.

ಈಗ ನೋಡ್ರಿಪಾ, ಆ ನೀತಿ ಕೇಂದ್ರ ಸಚಿವ ಸಂಪುಟದಾಗ ಪಾಸು ಆಗಿ ಮೂರು ದಿವಸ ಆದ ಮ್ಯಾಲೆ ಅದನ್ನ ಕೇಂದ್ರ ಶಿಕ್ಷಣ ಇಲಾಖೆ ಜಾಲತಾಣದಾಗ ಬಿಟ್ಟಾರೂ. ಅದು ಸುಮಾರು 70 ಪುಟ ಐತಿ. ಅದರವು ಕೆಲವು ಪೇಜು ಅಷ್ಟ ನೋಡೋಣ.

ಮೊದಲಿಗೆ ಅದರಾಗ ಛಲೋ ಏನ ಐತಿ ಅನ್ನೋದು ನೋಡೋಣು. ಮೊದಲಿಗೆ, ಸಾಧ್ಯವಾದಷ್ಟು ಮಟ್ಟಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಅಂತ ಒಂದು ಮಾತು ಐತಿ.

ಇದು ಈಗ ಸದ್ಯ ಚಾಲ್ತಿ ಇರೋ ಆಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಕರಣದಾಗ ಸುಪ್ರೀಂ ಕೋರ್ಟು 2013ದೊಳಗ ನೀಡಿದ ತೀರ್ಪಿನ ವಿರುದ್ಧ ಐತಿ. ಯಾರಾದರೂ ಅದನ್ನು ಪ್ರಶ್ನಿಸಿದರ, ದೆಹಲಿಯೊಳಗಿನ ನಮ್ಮ ಲಾರ್ಡ್‍ಗಳು ನ್ಯಾಯಾಲಯದ ಲಾರ್ಡ್‍ಗಳನ್ನು ಹೆಂಗ ಒಪ್ಪಿಸತಾರ ನೋಡಬೇಕು.

ಎರಡನೇದು, ನಮ್ಮಂತಹ ಡ್ರಾಪ್‍ಔಟ್‍ಗಳು ಕಾಲೇಜು ಬಿಟ್ಟು ಹೋಗಿ ಹತ್ತು ವರ್ಷ ಆದ ಮ್ಯಾಲೆ ಮತ್ತ ಓದಬೇಕು ಅಂತ ಅನ್ನಿಸಿದರ ವಾಪಸ್ ಕಾಲೇಜಿಗೆ ಬಂದು ಎಲ್ಲಿಗೆ ಬಿಟ್ಟಿದ್ದಾರೋ ಅಲ್ಲಿಂದ ಶುರು ಮಾಡಬಹುದು.

ಮೂರನೇದು `ರೀಕಾಗ್ನಿಷನ್ ಆಫ್ ಪ್ರಯರ್ ಲರನಿಂಗ್’ ಅಂದ್ರ ಮುಂಚಿನ ಕಲಿಕೆಯನ್ನು ಗುರುತಿಸುವುದು ಅನ್ನೋ ಯೋಜನೆ ಒಳಗ, ಪ್ರಾಥಮಿಕ ಶಿಕ್ಷಣದ ನಂತರ ವಿದ್ಯಾರ್ಥಿಗಳು ಕರಕುಶಲ ಕಲೆ, ವೃತ್ತಿ ಶಿಕ್ಷಣ ಹಾಗೂ ಉದ್ಯೋಗ ಆಧಾರಿತ ಶಿಕ್ಷಣದ ತರಬೇತಿ ತೊಗೋಬಹುದು.

ಇನ್ನೊಂದು ಮಜಾ ಅಂದ್ರ ಎಂ.ಫಿಲ್ ಅಂತ ಒಂದು ಯಾರಿಗೂ ಬ್ಯಾಡಾಗಿದ್ದು ಒಂದು ಕೋರ್ಸ್ ಇತ್ತು. ನಮ್ಮ ಧಾರವಾಡ ಯುನಿವರ್ಸಿಟಿ ಒಳಗ ಒಂದು ಜೋಕು ಇತ್ತು. ಕೆಲಸ ಸಿಗಲಾರದ ಗಂಡು ಮಕ್ಕಳು ಮತ್ತು ಮದುವೆ ಆಗಲಾರದ ಹೆಣ್ಣು ಮಕ್ಕಳು ಸೇರಿಕೊಳ್ಳುವಂತಹ ಯಾವುದಾದರೂ ಕೋರ್ಸ್ ಇತ್ತು ಅಂದ್ರ ಅದು ಎಂ.ಫಿಲ್ ಅಂತ. ಆನಂತರ ನಮ್ಮ ಬಾಗಲಕೋಟೆಯ ಬಜರಂಗಿ ಭಾಯಿಜಾನ ಅರವಿಂದ್ ಲಿಂಬಾವಳಿ ಅವರು ಸಚಿವರಾದ ಮೇಲೆ ಅದನ್ನ ಸರ್ಕಾರಿ ಅಧ್ಯಾಪಕರ ನೇಮಕಾತಿಗೆ ಕಡ್ಡಾಯ ಮಾಡಿದರು. ಹಂಗ ಮಾಡಿದ ಮ್ಯಾಲೆ ನಮ್ಮ ಊರಾಗ ಟೂ ಮಿನಿಟ್ ಮ್ಯಾಗಿ ಮಾಡಿಕೊಂಡು ಇದ್ದ ಸಾವಿರಾರು ಡಬಲ್ ಪದವೀಧರರು ತಮಿಳುನಾಡು- ಒರಿಸ್ಸಾ – ಆಂಧ್ರ- ಗುಜರಾತಿನ ನೂರಾರು ಯೂನಿವರ್ಸಿಟಿಗಳಲ್ಲಿ ಧಿಡೀರ ಎಂ.ಫಿಲ್ ಮಾಡಿಬಿಟ್ಟರು. ಅಷ್ಟೊಂದು ಓದಿದವರಿಗೆ ಹೆಣ್ಣು ಹುಡುಕುವುದು ಕಷ್ಟ ಆಯಿತು. ಎಲ್ಲಿಂದ ಎಂ.ಫಿಲ್ ಮಾಡಿದಿರೋ ಅಲ್ಲಿಂದನ ಹೆಣ್ಣು ತರಬೇಕಾಗಿತ್ತು ಅಂತ ಹಿರೇರು ಹೇಳೋ ಪರಿಸ್ಥಿತಿ ಬಂತು.

ಈ ಎಂ.ಫಿಲ್‍ಅನ್ನ ರದ್ದು ಮಾಡರಿ ಅಂತ ಎನ್.ಇ.ಪಿದಾಗ ಒಂದು ಶಿಫಾರಸು ಐತಿ. ಇದಕ್ಕೂ ಒಂದು ವೆಲ್‍ಕಂ ಇರಲಿ.

ಡಿಗ್ರಿ ಮೂರು ವರ್ಷ ಹೋಗಿ ನಾಕು ಮಾಡಿದಾರು. ಒಂದು ವರ್ಷ ಓದಿದರ ಪ್ರಮಾಣ ಪತ್ರ, ಎರಡು ಓದಿದರ ಡಿಪ್ಲೋಮಾ, ಮೂರು ಓದಿದರ ಡಿಗ್ರಿ, ಹಾಗೂ ನಾಕು ಓದಿದರ ಮಾಸ್ಟರ್ ಡಿಗ್ರಿ ಅಂತ ಐತಿ. ಇನ್ನೊಂದು ವರ್ಷ ಓದರಿ, ನೌಕರಿ ಕೊಡ್ತೇವಿ ಅಂತ ಇರಬೇಕಾಗಿತ್ತು. ಆದರ ಹಂಗ ಇಲ್ಲ.

ಅಮೆರಿಕ – ಯುರೋಪಿನ ಪದ್ಧತಿಯಂತೆ ನಾಕು ವರ್ಷ ಡಿಗ್ರಿ, ಆನಂತರ ನೇರವಾಗಿ ಪಿ. ಎಚ್ ಡಿ. ಅಂತ ನಿಯಮ ಮಾಡಿದಾರು. ಹಂಗಾರ ಎಂಎ, ಎಂ ಕಾಂ, ಎಂಎಸ್ಸಿ ಕಲಿಸಿಗೋತ ನೂರಾರು ಎಕರೆ ಕ್ಯಾಂಪಸ್ಸುದೊಳಗ ಎರಡೂವರೆ ಎಕರೆ ಸರಕಾರಿ ಮನೆ ಒಳಗ ಇರೋ ಯೂಜಿಸಿ ಸಂಬಳದ ಪ್ರೊ.ಲಕ್ಷ್ಮೀಪತಿ ಅವರು ಮುಂದ ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಇಲ್ಲ.

ಸರಕಾರಿ ಸಾಲಿ ಒಳಗ ಮೂರನೇ ವರ್ಷದಿಂದ ಮಕ್ಕಳಿಗೆ ಪ್ರವೇಶ ಕೊಡರಿ ಅಂತ ಹೇಳಿದಾರ. ಅದರ ಅದಕ್ಕ ತಕ್ಕ ತರಬೇತಿ, ಮೂಲ ಸೌಕರ್ಯ ಮುಂತಾದರ ಮಾತು ಇಲ್ಲ.

ಎಲ್ಲ ರೀತಿಯ ಉನ್ನತ ಶಿಕ್ಷಣದ ಮೂಗುದಾರ ಹಿಡಿಯಲಿಕ್ಕೆ ಒಂದೇ ಸಂಸ್ಥೆ ಮಾಡ್ತೇವಿ ಅಂತ ಘೋಷಣೆ ಹಾಕಿದಾರು. ಯುಜಿಸಿ, ಎ.ಐ.ಸಿ.ಟಿ.ಇ., ಕೃಷಿ ಶಿಕ್ಷಣ ಪರಿಷತ್ತು, ಮುಂತಾದಾವೆಲ್ಲ ಸೇರಿಸಿ ಒಂದ ಸಂಘಟನೆ ಆಗೋ ವಿಚಾರ ಐತಿ. ಇದು ಒಂದು ಲೆಕ್ಕದಾಗ ಅಪಾಯಕಾರಿ. ಸರಕಾರಿ ಸಂಘಟೆನೆಗಳಿಗೆ ಸಾಮಾನ್ಯವಾಗಿ ರಾಜಕೀಯ ನೇಮಕಾತಿ ಆಗತದ. ಅದರಗೂ ಆಳುವ ಪಕ್ಷದವರು, ಬರೆ ಸಿದ್ಧಾಂತದ ಆಧಾರದ ಮೇಲೆ ನೇಮಕ ಆಗತಾರ. ಏನರ ಓದಿದವರು, ರಾಜಕೀಯ ಕಾರಣಕ್ಕಾಗಿ ಇದರಾಗ ಸೇರಿಕೊಂಡು ಏನೇನರ ಬದಲಾವಣೆ ಮಾಡಲಿಕ್ಕ ಹತ್ತಿದರ ಏನು ಕತಿ?

ಇನ್ನ ಹಳ್ಳಿಯ ಸಣ್ಣ ಶಾಲೆಗಳನ್ನ ಬಂದು ಮಾಡಿ 5-10 ಕಿಲೋಮೀಟರು ಅಂತರದಾಗ ದೊಡ್ಡ ಶಾಲೆ ತಗಿಬೇಕು ಅಂತ ಇದರಾಗ ಒಂದು ಉದ್ಧಘೋಷ ಐತಿ. ಇದು ಖಂಡಿತ ಅಡ್ಡಡ್ಡ ಪರಿಣಾಮ ಬೀರತೇತಿ. ಈಗ ಪ್ರಾಥಮಿಕ ಶಾಲೆಗಳು ಒಂದು ಕಿಲೋಮೀಟರು ಅಂತರದೊಳಗ ಇರಬೇಕು ಅಂತ ಐತಿ. ಇದನ್ನ ತಗದು ಹತ್ತು ಕಿಲೋಮೀಟರು ಅಂತರ ಮಾಡಿದರ ಅದರ ದುಷ್ಪರಿಣಾಮ ಹತ್ತು ಪಟ್ಟುಗಿಂತ ಜಾಸ್ತಿ ಆಗತದ ಅಂತ ಒಂದು ಅಂದಾಜು.

ಸಾವಿರಾರು ವರ್ಷದಿಂದ ಶಿಕ್ಷಣದಿಂದ ದೂರ ಉಳಿದ ಸಮುದಾಯಗಳು ಇವತ್ತು ಸಾಲಿ ಮೆಟ್ಟಲ ಹತ್ತಲಿಕ್ಕೆ ಸಾಧ್ಯ ಆಗಿದ್ದು ಈ ಒಂದು ಕಿಲೋಮೀಟರು ಅಂತರದ ಕಾನೂನಿನಿಂದನ. ಇದು ದೊಡ್ಡವರಿಗೆ ತಿಳಿಯದೇ ಇರಲಿಕ್ಕೆ ಸಾಧ್ಯ ಇಲ್ಲ.

ಈ ಜಿ.ಇ.ಆರ್ ಅಂತ ಒಂದು ಐತಿ. ಅದು ಎಂ.ಜಿ.ಆರ್, ಎನ್.ಟಿ.ಆರ್‍ರಷ್ಟು ಜನಪ್ರಿಯ ಅಲ್ಲ. ಚಾಲ್ತಿ ಒಳಗೂ ಇಲ್ಲ. ಅದು ಏನಪ ಅಂದ್ರ ನಿಮ್ಮ ಊರಾಗ ಒಂದು ನೂರು ಹುಡುಗರು ಒಂದನೇ ತರಗತಿಗೆ ಸಾಲಿಗೆ ಹೋದರ ಆದರಾಗ ಎಷ್ಟು ಮಂದಿ ಯುನಿವರ್ಸಿಟಿಗೆ ಹೋಗತಾರ ಅನ್ನೋ ಲೆಕ್ಕ.

ಅದು ಈಗ ದಕ್ಷಿಣ ಭಾರತದಾಗ ಸುಮಾರು 30-50ರ ಒಳಗ ಐತಿ. ಉತ್ತರ ಹಿಂದೂಸ್ತಾನದಾಗ 5-25 ರವರೆಗೂ ಐತಿ. ಈ ಹಿನ್ನೆಲೆಯೊಳಗ 2035 ರವರೆಗೆ ಸಮಗ್ರ ಭಾರತ ರಾಷ್ಟ್ರದ ಸರಾಸರಿ ಜಿ.ಇ.ಆರ್ ಅನ್ನು 50 ಮಾಡಬೇಕು ಅಂತ ಎನ್.ಇ.ಪಿ ಒಳಗ ಐತಿ.

ಅದರ ಅದನ್ನ ಹೆಂಗ ಮಾಡಬೇಕು ಅನ್ನೋ ಮಾತು ಇದರಾಗ ಇಲ್ಲ. ಈಗ ದೇಶದ ತಲಾ ಉತ್ಪನ್ನದ ಶೇಕಡಾ 2-4 ರ ಒಳಗ ಇರೋ ಬಾಬತ್ತು 4-8 ಆಗಬೇಕು ಅನ್ನೋ ಮಾತು ಇಲ್ಲ. ಇದು ಹೆಂಗ ಅಂದ್ರ ಮನಿಗ ಹಾಲು, ಸಕ್ಕರಿ, ಶಾವಿಗೆ ತಂದು ಕೊಡಲಾರದ ಗಂಡ `ನಾಳೆ ಪಾಯಸ ಮಾಡು ಇಲ್ಲಾಂದರ ಬಡಿತೇನಿ’ ಅಂತ ಹೆಂಡತಿಗೆ ಹೇಳಿದ ಹಂಗ.

ಇನ್ನ ಖಾಸಗಿ ಸಹಭಾಗಿತ್ವದ ಮಾತಿಗೆ ಬರೋಣ. ಖಾಸಗಿ ಕ್ಷೇತ್ರ ಸರಕಾರದ ಭಾರ ಹಂಚಿಕೊಳ್ಳಬೇಕು. ಬಡವರಿಗೆ ಹೊರೆ ಆಗದಂತೆ ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು ಅಂತ ಇದಾರಗ ಒಂದು ಫರಮಾನು ಐತಿ.

ಸರಕಾರಿ ಹಾಗೂ ಖಾಸಗಿ ಶಾಲೆ- ಕಾಲೇಜುಗಳಿಗೆ ಒಂದೇ ಮಾನದಂಡ. ಅವಕ್ಕೆ ಒಂದೇ ನಿಗರಾಣಿ ಸಂಸ್ಥೆ ಅಂತ ಒಂದು ಶೀಲಾಲೇಖ ಐತಿ. ಕಲ್ಲಿನ ಮ್ಯಾಲೆ ಬರದ ಮಾತು ಸುಳ್ಳು ಆಗತದ? ಇಲ್ಲ. ಆ ನಿಗರಾಣಿ ಸಂಸ್ಥೆಯೊಳಗ ನಮ್ಮ ನಿರಾಣಿ ಸಾಹೇಬರು ಅಥವಾ ಅಂತವರು ಸೇರಿಕೊಂಡರ ಮುಂದ ಏನು?

ಅದಾನಿ- ಅಂಬಾನಿ ಸಾಹುಕಾರರು ಕಲ್ಲಿನಾಗ ಪೆಟ್ರೋಲು ತೆಗೆಯೋದ ಬಿಟ್ಟು ಸಾಲಿ-ಕಾಲೇಜು, ವಿವಿ- ತಗೀಲಿಕ್ಕೆ ಹತ್ಯಾರ. ಇದನ್ನ ನೆನಪು ಇಟಗೊಂಡು ನಾವು ಎನ್.ಇ.ಪಿ ಅರ್ಥ ಮಾಡಿಕೊಳ್ಳಬೇಕು.

ಹಿಂದ ಟಿ.ಎಂ.ಎ. ಪೈ ಪ್ರಕರಣದಾಗ ನ್ಯಾಯಾಧೀಶರು `ಯೋಗ್ಯ ಲಾಭ’ ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅದನ್ನು ಕೇಂದ್ರ ಸರಕಾರ 2020 ರೊಳಗ ಅಫಿಶಿಯಲ್ ನೀತಿಯನ್ನಾಗಿ ಪ್ರಕಟಮಾಡಿತು.

ನಮ್ಮ ಪಂಥ ಪ್ರಧಾನ ಸೇವಕರು ಈ ನೀತಿ ನೌಕರಿ ಹುಡುಕುವರನ್ನು ಹುಟ್ಟು ಹಾಕುವುದಿಲ್ಲ. ನೌಕರಿ ಸೃಷ್ಟಿ ಮಾಡುವರನ್ನು ತಯಾರಿಸುತ್ತಾದೆ ಅಂತ ಹೇಳಿದಾರು. ಎಂಥ ಗಹನವಾದ ವಿಷಯಗಳನ್ನು ಅವರು ಎಷ್ಟು ಸರಳವಾದ ಭಾಷೆಯೊಳಗ ತಿಳಿ ಹೇಳತಾರ. ಮತ್ತು ಅದನ್ನ ಕೇಳಿಸಿಕೊಂಡವರು ಹೂಂ ಅಂತ ತಲೆದೂಗಿ ಚಪ್ಪಾಳೆ ತಟ್ಟಿ ವ್ಹಾ ವ್ಹಾ ಅಂತಾರ. ಈ ಗಹನವಾದ ಆಡಳಿತ ನೀತಿಯನ್ನು ಮೊದಲು ನಾವು ತಿಳಿದುಕೊಳ್ಳಬೇಕು.


ಇದನ್ನು ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...