Homeಮುಖಪುಟಮೋದಿ ಸೃಷ್ಟಿಸಿದ 10ಕೋಟಿ ಉದ್ಯೋಗಗಳು ಎಲ್ಲಿವೆ? ಸಿದ್ದರಾಮಯ್ಯ ಪ್ರಶ್ನೆ

ಮೋದಿ ಸೃಷ್ಟಿಸಿದ 10ಕೋಟಿ ಉದ್ಯೋಗಗಳು ಎಲ್ಲಿವೆ? ಸಿದ್ದರಾಮಯ್ಯ ಪ್ರಶ್ನೆ

- Advertisement -
- Advertisement -

ನೋಟು ರದ್ದತಿ, ಜಿಎಸ್‌ಟಿ ಜಾರಿ ನಂತರದಿಂದ ದೇಶದ ಜಿಡಿಪಿ ಇಳಿಮುಖದಲ್ಲಿ ಸಾಗುತ್ತಿದೆ. ಪ್ರಧಾನಿ ಮೋದಿಯವರು ಮೊದಲ ಬಾರಿ ಆಯ್ಕೆಯಾದಾಗ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂದಿದ್ದರು. ಈವರೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ಲೆಕ್ಕಕೊಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಅಧಿವೇಶನದಲ್ಲಿ ಬಜೆಟ್‌ ಮೇಲಿನ ಚರ್ಚೆಯ ಕುತು ಮಾತನಾಡಿದ ಅವರು, ಹೊಸ ಉದ್ಯೋಗ ಸೃಷ್ಟಿಯ ಕತೆ ಇರಲಿ, ಕೋಟ್ಯಂತರ ಮಂದಿ ಇದ್ದ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರು ಒಮ್ಮೆ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ. ಅಲ್ಲಿನ ಬಹುತೇಕ ಉದ್ದಿಮೆಗಳು ಬಾಗಿಲು ಮುಚ್ಚುವ ಹಂತದಲ್ಲಿವೆ. ದೇಶದ ಆರ್ಥಿಕ ಸ್ಥಿತಿ ಪ್ರಗತಿಯ ಹಾದಿಯಲ್ಲಿದ್ದರೆ ಉದ್ದಿಮೆಗಳೇಕೆ ಬಾಗಿಲು ಮುಚ್ಚುತ್ತವೆ? ನಿನ್ನೆ ಬಿಜೆಪಿ ಸಚಿವರೊಬ್ಬರು ಭಾರತ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬದಲಾಗಿದೆ ಅಂದಿದ್ದರು. ಹಾಗಾದರೆ ನಮ್ಮ‌ ರಾಜ್ಯದ ತೆರಿಗೆ ಪಾಲು, ಜಿಎಸ್‌ಟಿ ಪರಿಹಾರ, ವಿಶೇಷ ಅನುದಾನಗಳಿಗೆ ಕೇಂದ್ರ ಕತ್ತರಿ ಹಾಕಿರುವುದು ಯಾಕೆ? ದೇಶದ ಜಿಡಿಪಿ ಕುಂಟುತ್ತಾ ಸಾಗುತ್ತಿರುವಾಗ ಆರ್ಥಿಕತೆ ಹೇಗೆ ಬೆಳೆಯುತ್ತೆ? ಎಂದು ಪ್ರಶ್ನಿಸಿದ್ದಾರೆ.

2013-14 ರಲ್ಲಿ ರೂ.1,04,000 ಕೋಟಿಯಿದ್ದ ಬಜೆಟ್ ಗಾತ್ರ 2018-19ಕ್ಕೆ ರೂ.2,09,000 ಕೋಟಿಗೆ ಏರಿಕೆಯಾಗಿತ್ತು. 2018-19ರಲ್ಲಿ ನಮ್ಮ‌ ಸರ್ಕಾರ ರೂ.41,000 ಕೋಟಿ ಸಾಲ ಮಾಡಿತ್ತು, ಈಗಿನ ಸರ್ಕಾರ ರೂ.52,918 ಕೋಟಿ ಸಾಲ ಮಾಡುತ್ತಿದೆ. ಈಗ ಹೇಳಲಿ ಸಾಲ ಮಾಡಿ ಹೋಳಿಗೆ ತಿನ್ನುತ್ತಿರೋದು ಯಾರು ಅಂತ? 2019-20ನೇ ಸಾಲಿಗೆ ಕೇಂದ್ರದ ಅನುದಾನ ರೂ.19,840 ಕೋಟಿ ಬರಬೇಕಿತ್ತು, ಆದರೆ ಅದು ರೂ.15,444 ಕೋಟಿಗೆ ಇಳಿದಿದೆ. 15ನೇ ಹಣಕಾಸು ಆಯೋಗದ ವರದಿ ಪ್ರಕಾರ 2023-24ಕ್ಕೆ ಕೇಂದ್ರದಿಂದ ಬರುವ ಅನುದಾನ ರೂ.16,705 ಕೋಟಿ ಆಗಲಿದೆ. ವರ್ಷ ಕಳೆದಂತೆ ಈ ಅನುದಾನದ ಪ್ರಮಾಣ ನಮ್ಮ ರಾಜ್ಯಕ್ಕೆ ಮಾತ್ರ ಕಡಿಮೆಯಾಗುವುದು ಯಾಕೆ ಎಂದಿದ್ದಾರೆ.

2023-24 ರ ವೇಳೆಗೆ ರಾಜಸ್ವ ಆದಾಯ ರೂ.2,07,230 ಕೋಟಿ ಇರಲಿದ್ದು, ರಾಜಸ್ವ ಖರ್ಚು ರೂ. 2,54,062 ಕೋಟಿ ತಲುಪಲಿದೆ. ಇದರಿಂದ ರೂ.46,832 ಕೋಟಿ ರಾಜಸ್ವ ಕೊರತೆ ಎದುರಾಗಲಿದೆ. ಹೀಗಾದಾಗ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಹೇಗೆ ಸಾಧ್ಯ? ಇದರಿಂದ ಸರ್ಕಾರ ಇನ್ನಷ್ಟು ಸಾಲದ ಮೊರೆ ಹೋಗಬೇಕಾಗುತ್ತದೆ. ಪ್ರಸಕ್ತ ಸಾಲಿನ ರಾಜಸ್ವ ಆದಾಯ ರೂ.1,77,255 ಕೋಟಿ ಇದೆ, ಇದರಲ್ಲಿ ಬದ್ಧತಾ ಖರ್ಚು ರೂ.1,55,191 ಕೋಟಿ. ಅಂದರೆ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ರೂ.22,064 ಕೋಟಿ ಹಣ ಉಳಿಯುತ್ತೆ. ಹೀಗಾದರೆ ರಾಜ್ಯದ ನೀರಾವರಿ ಯೋಜನೆಗಳಿಗೆ ಸರ್ಕಾರ ಹಣ ಎಲ್ಲಿಂದ ತರುತ್ತೆ ಎಂದು ಕೇಳಿದರು.

15ನೇ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ರಾಜ್ಯಗಳ ಪಾಲು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಕರ್ನಾಟಕ ಸರಿಯಾಗಿ ನಿಭಾಯಿಸಿರುವುದಕ್ಕೆ ಬೋನಸ್ ಕೊಡುವುದರ ಬದಲು ನಮ್ಮ ಪಾಲು ಕಡಿತಗೊಳಿಸಿ ಬರೆ ಹಾಕಿದ್ದಾರೆ. ಇದ್ಯಾವ ರೀತಿಯ ನ್ಯಾಯ? ಇನ್ನೂ ಕಾಲ ಮಿಂಚಿಲ್ಲ, ನವೆಂಬರ್ 20ಕ್ಕೆ ಹಣಕಾಸು ಆಯೋಗ ತನ್ನ ಅಂತಿಮ ವರದಿ ನೀಡಲಿದೆ, ಅಷ್ಟರೊಳಗೆ ಪ್ರಧಾನಿಗಳು, ಹಣಕಾಸು ಸಚಿವರ ಜೊತೆ ಮಾತನಾಡಿ ಉಳಿದ 4 ವರ್ಷಗಳಿಗಾದ್ರೂ ನಮಗೆ ನ್ಯಾಯಯುತ ಪಾಲು ನೀಡುವಂತೆ ಮನವರಿಕೆ ಮಾಡಬೇಕು. ರಾಜ್ಯದ ಬಿಜೆಪಿ ಸಂಸದರು, ಸಚಿವರು, ನಾಯಕರುಗಳು ಈಗಲೇ ಎಚ್ಚೆತ್ತುಕೊಳ್ಳುವುದು ಸೂಕ್ತ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...