ಮಾರ್ಚ್ 22 ರಿಂದ ಒಂದು ವಾರದವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳನ್ನು ಭಾರತಕ್ಕೆ ಇಳಿಯಲು ಅನುಮತಿಸುವುದಿಲ್ಲ ಎಂದು ಭಾರತ ಸರ್ಕಾರ ಇಂದು ಪ್ರಕಟಿಸಿದೆ. ದೇಶ ಪ್ರವೇಶಿಸಲು ಬಯಸುವ ಬಹುಪಾಲು ವಿದೇಶಿಯರಿಗೆ ಭಾರತ ಈಗಾಗಲೇ ವೀಸಾಗಳನ್ನು ಅಮಾನತುಗೊಳಿಸಿದೆ.
ಸಾರ್ವಜನಿಕ ಪ್ರತಿನಿಧಿಗಳು ಅಥವಾ ವೈದ್ಯರು ಅಥವಾ ಸರ್ಕಾರಿ ನೌಕರರಲ್ಲದ 65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮನೆಯಲ್ಲಿಯೇ ಇರಬೇಕೆಂದು ಸರ್ಕಾರ ಸಲಹೆ ನೀಡಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೂಡಾ ಮನೆಯಲ್ಲಿ ಇರಿಸಿಕೊಳ್ಳಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳು, ರೋಗಿಗಳು ಮತ್ತು ವಿಕಲಚೇತನರನ್ನು ಹೊರತುಪಡಿಸಿ ಎಲ್ಲಾ ರಿಯಾಯಿತಿ ಪ್ರಯಾಣವನ್ನು ಸ್ಥಗಿತಗೊಳಿಸಲು ರೈಲ್ವೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಖಾಸಗಿ ವಲಯಕ್ಕೆ ಮನೆಯಿಂದ ಕೆಲಸ ಮಾಡುವಂತೆ ಆದೇಶ ಜಾರಿಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.
ದೇಶದ ವಿವಿಧ ಭಾಗಗಳಿಂದ 18 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 173 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನ ವೈರಸ್ ಸೋಂಕಿದ ಪರಿಣಾಮ ದೇಶದಲ್ಲಿ ನಾಲ್ಕನೇ ಸಾವು ದಾಖಲಾಗಿದೆ, ಅವರು ಜರ್ಮನಿಯಿಂದ ಭಾರತಕ್ಕೆ ಬಂದಿದ್ದರು.
ಜಾಗತಿಕವಾಗಿ ಕೊರೊನ ವೈರಸ್ 8,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ, ಹಾಗೂ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ.
ದೇಶಾದ್ಯಂತ, ಶಾಲೆಗಳು, ಕಾಲೇಜುಗಳು, ಚಿತ್ರಮಂದಿರಗಳು, ಮಾಲ್ಗಳು ಮತ್ತು ಶಾಪಿಂಗ್ ಪ್ರದೇಶಗಳನ್ನು ಮುಚ್ಚಲಾಗಿದೆ. ಧಾರ್ಮಿಕ ಕೂಟಗಳು ಮತ್ತು ವಿವಾಹಗಳನ್ನು ಮುಂದೂಡಲಾಗಿದೆ.
ಭಾರತದಲ್ಲಿನ ಕರೋನವೈರಸ್ ಪ್ರಕರಣಗಳಲ್ಲಿ 25 ವಿದೇಶಿ ಪ್ರಜೆಗಳು ಸೇರಿದ್ದಾರೆ.