ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುಗಡೆ ಮಾಡದೆ ಬೆಳೆ ಹಾನಿಯಾಗಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಇಂದು ಬಂದ್ಗೆ ಕರೆ ನೀಡಲಾಗಿದೆ.
ಬಂದ್ ಮೂಲಕ ತಮಿಳುನಾಡಿಗೆ ಸಾಕಷ್ಟು ಪ್ರಮಾಣದ ಕಾವೇರಿ ನೀರು ಬಿಡುವಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ರೈತರು ಒತ್ತಾಯಿಸಿದ್ದಾರೆ.
ತಂಜಾವೂರು, ತಿರುಚ್ಚಿ, ತಿರುವರೂರ್, ನಾಗಪಟ್ಟಿಣಂ, ಪುದುಕೊಟ್ಟೈ, ಮೈಲಾಡುತುರೈ, ಕಡಲೂರು ಮತ್ತು ಅರಿಯಲೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿತ್ತು.
ಈ ಪ್ರದೇಶದ ರೈತರು ನೀರಾವರಿಗಾಗಿ ಕಾವೇರಿ ನೀರು ಬಿಡುಗಡೆಯನ್ನು ಅವಲಂಬಿಸಿದ್ದರು. ಆದರೆ ನೀರು ಬಿಡಗಡೆಯಾಗದೆ ರೈತರಿಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕನಿಷ್ಠ 40,000 ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ನೀರಿನ ಕೊರತೆಯಿಂದಾಗಿ ನಾಶವಾಗಿವೆ ಎಂದು ಹೇಳಿದ್ದಾರೆ.
ಇನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸೋಮವಾರ ಅಂಗೀಕರಿಸಿತ್ತು.
ಇದನ್ನು ಓದಿ: ಭ್ರಷ್ಟಾಚಾರ ಬಯಲಿಗೆಳೆದ ಸಿಎಜಿ ಅಧಿಕಾರಿಗಳ ವರ್ಗಾವಣೆ: ಕಾಂಗ್ರೆಸ್ ಆರೋಪ