ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಧಿಕಾರಿಗಳನ್ನು ಸರ್ಕಾರ ಬೆದರಿಸುತ್ತಿದೆ ಮತ್ತು ಅವರು ಭ್ರಷ್ಟಾಚಾರ ಬಯಲಿಗೆಳೆದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಅಧಿಕಾರಿಗಳ ವರ್ಗಾವಣೆ ಆದೇಶಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಅಧಿಕಾರಿಗಳ ವರ್ಗಾವಣೆ ಕುರಿತು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಯಾರಾದರೂ ಅವ್ಯವಹಾರ ಬಯಲು ಮಾಡಿದರೆ ಅವರನ್ನು ಬೆದರಿಸಲಾಗುತ್ತಿದೆ ಮತ್ತು ಅವರನ್ನು ತೆಗೆದುಹಾಕುವುದು ಮೋದಿ ಸರ್ಕಾರದ ವಿಧಾನವಾಗಿದೆ ಎಂದು ಆರೋಪಿಸಿದ್ದಾರೆ.
ಈ ವರ್ಗಾವಣೆ ಆದೇಶಗಳನ್ನು ತಕ್ಷಣವೇ ರದ್ದುಗೊಳಿಸಬೇಕು, ಅಧಿಕಾರಿಗಳು ಸಿಎಜಿಗೆ ಹಿಂತಿರುಗಬೇಕು ಮತ್ತು ದ್ವಾರಕಾ ಎಕ್ಸ್ಪ್ರೆಸ್ವೇ, ಭಾರತಮಾಲಾ ಮತ್ತು ಆಯುಷ್ಮಾನ್ ಭಾರತ್ಗೆ ಸಂಬಂಧಿಸಿದ ಈ ಬಹುದೊಡ್ಡ ಹಗರಣಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅವರು ಎಕ್ಸ್ನಲ್ಲಿ ಬರೆದ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮೋದಿ ಸರ್ಕಾರ ಮಾಫಿಯಾ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. ಯಾರಾದರೂ ಭ್ರಷ್ಟಾಚಾರ ಬಹಿರಂಗಪಡಿಸಿದರೆ, ಅವರಿಗೆ ಬೆದರಿಕೆ ಹಾಕಲಾಗುತ್ತದೆ ಅಥವಾ ತೆಗೆದುಹಾಕಲಾಗುತ್ತದೆ. ಸರ್ಕಾರಿ ಯೋಜನೆಗಳಲ್ಲಿನ ದೊಡ್ಡ ಹಗರಣಗಳನ್ನು ಬಹಿರಂಗಪಡಿಸಿದ ಮೂವರು ಅಧಿಕಾರಿಗಳು ಇತ್ತೀಚಿನ ಬಲಿಪಶುಗಳು ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಸಿಎಜಿ ವರದಿಯು ಮೂಲಸೌಕರ್ಯ ಯೋಜನೆ ಮತ್ತು ಸಾಮಾಜಿಕ ಯೋಜನೆಗಳಲ್ಲಿ ಹಗರಣಗಳನ್ನು ಬಯಲುಗೊಳಿಸಿದೆ. ಇದು ದ್ವಾರಕಾ ಎಕ್ಸ್ಪ್ರೆಸ್ವೇಯಲ್ಲಿ ಟೆಂಡರ್ ಅಕ್ರಮಗಳನ್ನು ಬಯಲಿಗೆಳೆದಿದೆ. ದೋಷಪೂರಿತ ಬಿಡ್ಡಿಂಗ್ಗಳು ಮತ್ತು ಭಾರತಮಾಲಾ ಯೋಜನೆಯ ವೆಚ್ಚ ದುಪ್ಪಟ್ಟು ಬಯಲುಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯ ಲೆಕ್ಕಪರಿಶೋಧನೆಯು ಸತ್ತ ರೋಗಿಗಳ ಹೆಸರಿನಲ್ಲಿ ಲಕ್ಷಾಂತರ ಹಣ ಬಿಡುಗಡೆಯನ್ನು ತೋರಿಸಿದೆ ಮತ್ತು ಕನಿಷ್ಠ 7.5 ಲಕ್ಷ ಫಲಾನುಭವಿಗಳು ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಹೊಂದಿದ್ದಾರೆ ಎಂಬ ವರದಿಯನ್ನು ಸಿಎಜಿ ಬಹಿರಂಗಪಡಿಸಿತ್ತು.
ಆಯುಷ್ಮಾನ್ ಭಾರತ್ ಮತ್ತು ದ್ವಾರಕಾ ಎಕ್ಸ್ಪ್ರೆಸ್ವೇ ಹಗರಣಗಳ ವರದಿಯನ್ನು ಬಹಿರಂಗ ಮಾಡಿದ ಮೂವರು ಸಿಎಜಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಇದನ್ನು ಓದಿ: FCRA ಉಲ್ಲಂಘನೆಯ ಆರೋಪ: ಸಿಬಿಐನಿಂದ ಪ್ರಬೀರ್ ಪುರ್ಕಾಯಸ್ಥ ನಿವಾಸದಲ್ಲಿ ಶೋಧ