ಸ್ವಾತಂತ್ರ್ಯಕ್ಕೂ ಮುಂಚೆ ನಾವು ಈಸ್ಟ್ ಇಂಡಿಯಾ ಕಂಪನಿಯ ಗುಲಾಮರಾಗಿದ್ದೆವು, ಆದರೆ ಸ್ವಾತಂತ್ರ್ಯ ನಂತರವೂ ಸಹ ಅಂಬಾನಿ ಅದಾನಿಯಂತಹ ಬಂಡವಾಳಶಾಹಿಗಳ ಗುಲಾಮರಾಗಿರಬೇಕೆಂದು ಸರ್ಕಾರ ಬಯಸುತ್ತಿದೆ. ಅದನ್ನು ತಪ್ಪಿಸುವುದಕ್ಕಾಗಿ ಹೋರಾಡುತ್ತಿರುವ ಗಣಿ ಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದರು.
ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕು. ಭೂರಹಿತ ಸಂತ್ರಸ್ತ ಗಣಿ ಕಾರ್ಮಿಕರ ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು ಎಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗಾಗಿ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘವು ಸಂಡೂರಿನಿಂದ ಬಳ್ಳಾರಿವರೆಗೆ ನಡೆಸುತ್ತಿರುವ 70 ಕಿ.ಮೀಗಳ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿಮ್ಮ ಹೋರಾಟವು ನರ್ಮದಾ ಉಳಿಸಿ ಹೋರಾಟದಂತೆಯೆ ಬಹಳ ಕಷ್ಟದಿಂದ ಕೂಡಿದೆ. ಆದರೆ ಅಷ್ಟೇ ಪ್ರಮುಖವಾದ ಹೋರಾಟವಾಗಿದೆ. ಇದು ನಮ್ಮ ದುಡಿಮೆಯ ಪಾಲನ್ನು ಕೇಳುವ ಹೋರಾಟವಾಗಿದೆ. ಇಡೀ ದೇಶದಲ್ಲಿ ನೀರು, ಕಾಡು, ಜಮೀನನ್ನು ಖಾಸಗೀಕರಣ ಮಾಡಲಾಗುತ್ತಿದೆ. ಇದಕ್ಕೆ ಗಣಿ ಮಾಫಿಯಾದ ಅನ್ಯಾಯವೂ ಕೂಡ ಕಾರಣವಾಗಿದೆ. ಸಂತೋಷ್ ಹೆಗ್ಡೆಯಂತಹ ನ್ಯಾಯಮೂರ್ತಿಗಳು ಈ ಕುರಿತು ವಿಸ್ತೃತ ವರದಿ ಮಾಡಿದ್ದರೆ. ಹಾಗಾಗಿ ಬಳ್ಳಾರಿಯಂತಹ ಜಿಲ್ಲೆಯಲ್ಲಿ ಇಂತಹ ಹೋರಾಟಗಳ ಅಗತ್ಯವಿದೆ ಎಂದು ಮೇಧಾ ಪಾಟ್ಕರ್ ಹೇಳಿದರು.
Padh yatra of Ballari mine workers underway. The Bellary Zilla Gani Karmika Sangh under All India Central Council of Trade Unions are demanding special rehabilitation package for the workers, re-employment and compensation. pic.twitter.com/o4C1uy5lt0
— Clifton D' Rozario (@clifroz) October 11, 2022
ಎಐಸಿಸಿಟಿಯು ರಾಜ್ಯಾಧ್ಯಕ್ಷರಾದ ಕ್ಲಿಫ್ಟನ್ ರೊಜಾರಿಯೋರವರು ಮಾತನಾಡಿ, “ಪ್ರಾಣವನ್ನೇ ಒತ್ತೆಯಿಟ್ಟು, ರಕ್ತಸುರಿಸಿ ದುಡಿಯುತ್ತಿರುವ ಬಳ್ಳಾರಿ ಗಣಿ ಕಾರ್ಮಿಕರ ಸ್ಥಿತಿ ಪ್ರಾರಂಭದ ದಿನಗಳಿಂದಲೂ ಶೋಚನೀಯವಾಗಿದೆ. ಈ ಕಾರ್ಮಿಕರು ಅತ್ಯಂತ ದುರ್ಬಲ ಮತ್ತು ತಳ ಸಮುದಾಯಗಳಿಂದ ಬಂದಿದ್ದು, ಇವರಿಗೆ ಕನಿಷ್ಠ ವೇತನವೂ ದೊರೆಯುತ್ತಿಲ್ಲ. ಅಲ್ಲದೇ, ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸದೇ ಮತ್ತು ಸರಿಯಾದ ಸುರಕ್ಷತಾ ಸಾಧನಗಳನ್ನು ನೀಡದೇ ಜೀವಕ್ಕೆ ಅಪಾಯವಿರುವಂತಹ ಕೆಲಸವನ್ನು ಮಾಡಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
2011 ರ ಜುಲೈನಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ನ ಆದೇಶದೊಂದಿಗೆ, ಬಳ್ಳಾರಿ ಜಿಲ್ಲೆಯ ಹಲವಾರು ಗಣಿಗಳಲ್ಲಿ ಕಾರ್ಮಿಕರ ರಿಟ್ರೇಂಚ್ಮೆಂಟ್ಗೆ ಸಂಬಂಧಿಸಿದ ಕಾರ್ಮಿಕ ಕಾನೂನಿನ ನಿಯಮಗಳನ್ನು ಪಾಲಿಸದೇ ಎಲ್ಲ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ಇದರಿಂದಾಗಿ 25,000ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡರು ಮತ್ತು ಇವರಿಗೆ ಯಾವುದೇ ಪರಿಹಾರ ಅಥವಾ ಪುನರ್ವಸತಿಯನ್ನು ನೀಡದೇ ಬೀದಿಪಾಲು ಮಾಡಲಾಯಿತು. ಗಣಿ ಮಾಲೀಕರು ಸುಪ್ರೀಂ ಕೋರ್ಟ್ ಆದೇಶವನ್ನೇ ನೆಪವನ್ನಾಗಿ ಮಾಡಿಕೊಂಡು ಕಾರ್ಮಿಕರಿಗೆ ನೀಡಬೇಕಾಗಿದ್ದ ರೀಟ್ರೆಂಚ್ಮೆಂಟ್ ಪರಿಹಾರ ಸೇರಿದಂತೆ ಇತರೆ ಶಾಸನಬದ್ಧ ಹಕ್ಕುಗಳನ್ನು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದರು.
ಮಳೆಯೇ ಬರಲಿ, ಬಿಸಿಲೇ ಬರಲಿ, ನಮ್ಮ ಹೋರಾಟ ಮುಂದು ಸಾಗಲಿ! ರಕ್ತ ಬಸಿದು ದುಡಿವ ಗಣಿ ಕಾರ್ಮಿಕರ ಬದುಕಿನ ಹೋರಾಟಕ್ಕೆ ರಕ್ತ ಗಂಬಳಿ ಹಾಕಿ ಜಯಕೋರುತ್ತಿದೆ ಪ್ರಕೃತಿ, ಇಂಕಿಲಾಬ್ ಜಿಂದಾಬಾದ್, ಜೈ ಜೈ ಜೈಭೀಮ್! pic.twitter.com/AsKB49ofCg
— AICCTU Karnataka (@aicctukar) October 12, 2022
ಎಲ್ಲ ಗಣಿ ಕಾರ್ಮಿಕರಿಗೆ ಆರ್ ಆ್ಯಂಡ್ ಆರ್ನಲ್ಲಿ ಸಮಗ್ರ ಪುನರ್ವಸತಿ, ಉದ್ಯೋಗ ಕಲ್ಪಿಸಬೇಕು. ಎಲ್ಲಾ ಗಣಿ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಿ ಮನೆ ನಿರ್ಮಿಸಿ ಕೊಡಬೇಕು. ನಿವೃತ್ತಿ ವಯಸ್ಸು ತಲುಪಿದ ಗಣಿ ಕಾರ್ಮಿಕರಿಗೆ ಮಾಸಿಕ 5000 ರೂ ಪಿಂಚಣಿ ನೀಡಬೇಕು. ಗಣಿ ಕಾರ್ಮಿಕರು ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಂಗನವಾಡಿ, ಸಮುದಾಯ ಭವನ, ಗ್ರಂಥಾಲಯ, ಕಾರ್ಮಿಕರ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಗಣಿ ಕಾರ್ಮಿಕರಿಗೆ ಆಸ್ಪತ್ರೆ ನಿರ್ಮಿಸಿ, ಗಣಿ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಒದಗಿಸಬೇಕು. ಗಣಿ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಸಹಾಯಧನ ಹಾಗೂ ಮದುವೆಗೆ ಹಣಕಾಸಿನ ನೆರವು ಒದಗಿಸಬೇಕು ಎಂಬ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಪಾದಯಾತ್ರೆ ನಡೆಯುತ್ತಿದೆ.
ವಕೀಲರಾದ ಮೈತ್ರೇಯಿ ಕೃಷ್ಣನ್, ಐಟಿಐ ಕಾರ್ಮಿಕರ ಒಕ್ಕೂಟದ ಹೇಮಂತ್, ಆದಿವಾಸಿ ಸಂಘರ್ಷ ಮೋರ್ಚಾದ ಮೋಹನ್ ಸೇರಿದಂತೆ ಹೋರಾಟಕ್ಕೆ ನಟ ಚೇತನ್ ಕೂಡ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎಐಸಿಸಿಟಿಯು ಸಂಘಟನೆಯ ಬೆಂಬಲದೊಂದಿಗೆ ಸಂಡೂರಿನ ಎಪಿಎಂಸಿ ಮಾರುಕಟ್ಟೆಯಿಂದ ಆರಂಭವಾದ ಪಾದಯಾತ್ರೆಯು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ವಡ್ಡುವಿನಿಂದ ಇಂದು ಕಾರ್ಮಿಕರು ಹೆಜ್ಜೆ ಹಾಕಲಿದ್ದು ನಾಳೆ ಅಕ್ಟೋಬರ್ 13ರಂದು ಬಳ್ಳಾರಿ ಜಿಲ್ಲಾಡಳಿತದ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ ಪಾದಯಾತ್ರೆ