Homeಮುಖಪುಟಸೌರವ್ ಗಂಗೂಲಿ ಬಿಜೆಪಿ ಸೇರದ ಕಾರಣಕ್ಕೆ ಬಿಸಿಸಿಐನಿಂದ ಹೊರಕ್ಕೆ: TMC ಆರೋಪ

ಸೌರವ್ ಗಂಗೂಲಿ ಬಿಜೆಪಿ ಸೇರದ ಕಾರಣಕ್ಕೆ ಬಿಸಿಸಿಐನಿಂದ ಹೊರಕ್ಕೆ: TMC ಆರೋಪ

ಅಮಿತ್ ಶಾ ಪುತ್ರ ಜಯ್ ಶಾ ಅವರು ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದಾದರೆ ಸೌರವ್ ಗಂಗೂಲಿ ಯಾಕಿಲ್ಲ ಎಂದು ಟಿಎಂಸಿ ಪ್ರಶ್ನಿಸಿದೆ.

- Advertisement -
- Advertisement -

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿಯವರನ್ನು ಎರಡನೇ ಅವಧಿಗೆ ಮುಂದುವರೆಸುವುದಿಲ್ಲ, ಬದಲಿಗೆ ರೋಜರ್ ಬಿನ್ನಿಯವರು ಆ ಸ್ಥಾನ ಪಡೆಯುತ್ತಾರೆ ಎಂಬ ವರದಿಗಳ ಬೆನ್ನಲ್ಲೆ ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿ ಮೇಲೆ ಹರಿಹಾಯ್ದಿದೆ. ಸೌರವ್ ಗಂಗೂಲಿ ಬಿಜೆಪಿ ಸೇರದ ಕಾರಣಕ್ಕೆ ಬಿಸಿಸಿಐನಿಂದ ಹೊರಹಾಕಲಾಗುತ್ತಿದೆ ಎಂದು TMC ಆರೋಪಿಸಿದೆ.

ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಬಹುದಾದರೆ ಸೌರವ್ ಗಂಗೂಲಿ ಯಾಕಿಲ್ಲ? ಏಕೆಂದರೆ ಇದು ಬಿಜೆಪಿಯ ಸೇಡಿನ ರಾಜಕೀಯದ ಉದಾಹರಣೆಯಾಗಿದೆ ಎಂದು ಟಿಎಂಸಿ ಹೇಳಿದೆ.

ಬಿಜೆಪಿಯು ಬಂಗಾಳದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಹಾಗಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಜನಪ್ರಿಯತೆ ಹೊಂದಿರುವ ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರೆ ಎಂಬ ಉಹಾಪೋಹ ಹಬ್ಬಿಸಿತ್ತು. ಅದು ಸಾಧ್ಯವಾಗದ ಕಾರಣ ಅವರನ್ನು ಎರಡನೇ ಭಾರಿಗೆ ಮುಂದುವರೆಸಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಗಂಗೂಲಿ ಅವರು ಎರಡನೇ ಬಾರಿಗೆ ಆಯ್ಕೆಯಾಗದಿರುವ ಹಿಂದೆ ರಾಜಕೀಯವಿದೆ. ಅವರನ್ನು ಅವಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ನಾವು ಈ ವಿಷಯದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸುವುದಿಲ್ಲ, ಆದರೆ ಚುನಾವಣೆಯ ಸಮಯದಲ್ಲಿ ಮತ್ತು ನಂತರ ಬಿಜೆಪಿಯು ಇಂತಹ ಪ್ರಚಾರವನ್ನು ಮಾಡಿದ್ದರಿಂದ ಅದಕ್ಕೆ ಪ್ರತಿಕ್ರಿಯಿಸುವುದು ಖಂಡಿತವಾಗಿಯೂ ಬಿಜೆಪಿಯ ಜವಾಬ್ದಾರಿಯಾಗಿದೆ ಎಂದು ಘೋಷ್ ಹೇಳಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು (ಅಮಿತ್ ಶಾ) ಗಂಗೂಲಿ ಅವರ ಮನೆಗೆ ಊಟಕ್ಕೆ ಹೋಗಿದ್ದರು. ಈ ಕುರಿತು ಚೆನ್ನಾಗಿ ವಿವರಿಸಲು ಸೌರವ್ ಅವರಿಗೆ ಸಾಧ್ಯವಿದೆ ಎಂದು ನನಗನಿಸುತ್ತದೆ. ಅಂದಿನ ರಾಜಕೀಯದ ಕುರಿತು ಅವರು ಎಷ್ಟು ಮಾತನಾಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಟಿಎಂಸಿ ಹೇಳಿಕೆಗೆ ಆಧಾರವಿಲ್ಲದ ಆರೋಪ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಮಾತನಾಡಿ, “ಸೌರವ್ ಗಂಗೂಲಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಕ್ರಿಕೆಟ್ ದಂತಕತೆಯಾಗಿದ್ದಾರೆ. ಆದರೆ ಕೆಲವರು ಅವರನ್ನು ಎರಡನೇ ಬಾರಿಗೆ ಮುಂದುವರೆಸುತ್ತಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅವರ ಪಾತ್ರ ಏನಾದರೂ ಇದೆಯೇ? ತೃಣಮೂಲವು ಪ್ರತಿಯೊಂದು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು” ಎಂದಿದ್ದಾರೆ.

1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ರೋಜರ್ ಬಿನ್ನಿಯವರು ಮಂಗಳವಾರ BCCI ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಅಕ್ಟೋಬರ್ 18 ರಂದು ಮುಂಬೈನಲ್ಲಿ BCCI ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು ಅಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಜಯ್ ಶಾ ಕೂಡ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದಲ್ಲಿ ಅವರು ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಆಗ ಅವರು ಐಸಿಸಿ ಮಂಡಳಿಯಲ್ಲಿ ಭಾರತದ ಪ್ರತಿನಿಧಿಯಾಗಿ ಗಂಗೂಲಿಯನ್ನು ಬದಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇದನ್ನೂ ಓದಿ; ಭಾರತ್ ಜೋಡೋ ಜೊತೆಗೆ ದಲಿತರನ್ನೂ ಬೆಸೆಯಬಹುದೇ ಕಾಂಗ್ರೆಸ್ ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...