Homeಮುಖಪುಟಜಾತ್ಯತೀತತೆ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂವಿಧಾನ ಸಭೆಯಲ್ಲಿ ಪರ ಯಾರು? ವಿರೋಧ ಯಾರು?

ಜಾತ್ಯತೀತತೆ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂವಿಧಾನ ಸಭೆಯಲ್ಲಿ ಪರ ಯಾರು? ವಿರೋಧ ಯಾರು?

ಗಾಂಧಿಯವರು ಒಂದು ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯು, ಸಮಾಜವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಜೊತೆ ಆಳವಾಗಿ ತಳಕುಹಾಕಿಕೊಂಡಿದೆ ಎಂದು ನಂಬಿದ್ದರು.

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಸಂವಿಧಾನ ಸಭೆಯಲ್ಲಿ 1949ರಲ್ಲಿ ಜಾತ್ಯತೀತತೆಯ ಕುರಿತು ಚರ್ಚೆ ನಡೆದಾಗಲೆಲ್ಲಾ ಅಂದಿನ ನಾಝಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಯ ತಾರತಮ್ಯ ಮತ್ತು ದಮನದ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಬಲ ಪಂಥೀಯರು ಲೇವಡಿ ಮಾಡುತ್ತಿದ್ದರು. ಇದೀಗ ಅವರ ವಾರಸುದಾರರು ಅಧಿಕಾರ ಹಿಡಿದಿದ್ದು, ಅದನ್ನೇ ಹೆಚ್ಚು ಆಕ್ರಮಣಕಾರಿಯಾಗಿ ಮುಂದುವರಿಸಿದ್ದಾರೆ. ಎನ್‌ಆರ್‌ಸಿ, ಸಿಎಎ ಹಿನ್ನೆಲೆಯಲ್ಲಿ ಜಾತ್ಯತೀತತೆ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯ ಕೆಲ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಅಂದು ಜಾತ್ಯಾತೀತತೆಯ ಕುರಿತು ಬಲಪಂಥೀಯರ ನಿರಂತರ ಲೇವಡಿಯಿಂದ ಆತಂಕಿತರಾದವರಲ್ಲಿ ಜವಾಹರಲಾಲ್ ನೆಹರೂ ಅವರೂ ಒಬ್ಬರಾಗಿದ್ದರು. ಭಾರತದ ಎಲ್ಲಾ ಸಮಸ್ಯೆಗಳಿಗೆ ಜಾತ್ಯತೀತತೆಯೇ ಮೂಲ ಕಾರಣ ಎಂದು ಬಿಂಬಿಸಲಾಗುತ್ತಿದ್ದುದೇ ಇದಕ್ಕೆ ಕಾರಣ.

“ನಾವು ಒಂದು ಜಾತ್ಯತೀತ ರಾಷ್ಟ್ರ ಎಂದು ಹೇಳುವುದರಿಂದ ನಾವು ಅದ್ಭುತವಾದ ಔದಾರ್ಯಪೂರ್ಣವಾದುದನ್ನು ಮಾಡುತ್ತಿದ್ದೇವೆ ಎಂದಾಗಲೀ, ಜಗತ್ತಿಗೆ ನಮ್ಮ ಜೇಬಿನಿಂದ ಏನನ್ನಾದರೂ ಕೊಡುತ್ತಿದ್ದೇವೆ ಎಂದಾಗಲೀ, ನಾವು ಮಾಡಬಾರದನ್ನೇನ್ನಾದರೂ ಮಾಡುತ್ತಿದ್ದೇವೆ ಎಂದಾಗಲೀ ಅರ್ಥವಲ್ಲ. ಜಗತ್ತಿನ ಕೆಲವು ದಾರಿತಪ್ಪಿದ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಹೊರತುಪಡಿಸಿ ಪ್ರತಿಯೊಂದು ದೇಶವು ಮಾಡಿರುವುದನ್ನೇ ನಾವು ಮಾಡಿದ್ದೇವೆ” ಎಂದು ಅವರು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಆ ಮೂಲಕ ನಾಗರಿಕ ಜಗತ್ತಿನಲ್ಲಿ ಒಪ್ಪಿತವಾದ ಜಾತ್ಯತೀತ ತತ್ವಗಳನ್ನು ಸಮರ್ಥಿಸಿದ್ದರು.

 

ದೇಶ ವಿಭಜನೆಯ ಹಿಂಸಾಚಾರದ ಬಳಿಕವೂ ಜಾತ್ಯತೀತತೆಯ ಪರಿಕಲ್ಪನೆಯನ್ನು ಸಮರ್ಥಿಸಬಲ್ಲ ನೈತಿಕ ಸ್ಥೈರ್ಯವಿದ್ದ ಜನರು ಅಂದು ಇದ್ದರೆ, ಇಂದು ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳಲ್ಲಿಯೂ ಈ ನಂಬಿಕೆ ಸವಕಲಾಗುತ್ತಿದೆ. ವಿಭಜನಕಾರಿ ಚಿಂತನೆಗಳಿಗೆ ಹಿಂದುತ್ವ ಪಕ್ಷಗಳ ಬಹಿರಂಗ ನಿಷ್ಟೆಗೆ ಎದುರಾಗಿ, ಜಾತ್ಯತೀತತೆಯ ಪರ ಹಿಂಜರಿಕೆಯ, ಚೈತನ್ಯವಿಲ್ಲದ ಪ್ರತಿರೋಧವಷ್ಟೇ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸುತ್ತಿರುವವರು ಮಾತ್ರ ರಾಜಕೀಯ ರಂಗದಲ್ಲಿ ಜಾತ್ಯತೀತತೆಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳು

ಗಾಂಧಿಯವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿರಲಿಲ್ಲ. ಒಂದು ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆಯು, ಸಮಾಜವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಜೊತೆ ಆಳವಾಗಿ ತಳಕುಹಾಕಿಕೊಂಡಿದೆ ಎಂದವರು ನಂಬಿದ್ದರು.

ಇಂದಿನಂತೆ ಅಂದೂ ಕೂಡಾ ತಾವು ಗಾಂಧಿಯವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸಿಗರಿದ್ದರು. ಆದರೆ, ಅವರು ಗಾಂಧಿಯವರ ಮೇಲಿನ ವಿಚಾರಗಳನ್ನು ತಿರಸ್ಕರಿಸಿ, ಪೌರತ್ವ ಕುರಿತ ಹಿಂದೂತ್ವವಾದಿಗಳ ಸಂಕುಚಿತ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಸೀಮಿತಗೊಳಿಸುವ ಪರಿಕಲ್ಪನೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದ್ದರು. ಅಂತವರಲ್ಲಿ ಒಬ್ಬರು ಕಾಂಗ್ರೆಸಿಗ ಮಹಾವೀರ ತ್ಯಾಗಿ. ಅಲ್ಪಸಂಖ್ಯಾತರ ಹಕ್ಕುಗಳ ಕುರಿತ ಚರ್ಚೆಯನ್ನು ಮುಂದೂಡಿ, ನಂತರದಲ್ಲಿ ಈ ವಿಷಯದ ಕುರಿತು ನಿರ್ಧರಿಸಬೇಕು ಎಂದು ಅವರು ಸಂವಿಧಾನ ಸಭೆಗೆ ಸಲಹೆ ಮಾಡಿದ್ದರು.

ಅವರದ್ದೇ ನಿಲುವನ್ನೇ ಗೃಹಮಂತ್ರಿ ಅಮಿತ್ ಶಾ ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯು ಪ್ರತಿಫಲಿಸುತ್ತದೆ. ತಮಗೆ ವಿಶೇಷ ಅವಕಾಶಗಳನ್ನು ಬೆಂಬಲಿಸುವುದಾದರೆ, ಅಲ್ಪಸಂಖ್ಯಾತರಿಗೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ನೈತಿಕ ಹಕ್ಕಿಲ್ಲ ಎಂದವರು ಹೇಳಿದ್ದರು.

ತ್ಯಾಗಿಯ ವಿಚಾರಗಳನ್ನು ಮತ್ತು ಶಾ ಪುನರುಚ್ಛಾರವನ್ನು ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ನಿರ್ಣಾಯಕವಾಗಿ ತಿರಸ್ಕರಿಸಿದ್ದರು.

“ಈ ಪ್ರಸ್ತಾಪವನ್ನು ಬೆಂಬಲಿಸಲು ಇರುವ ಏಕೈಕ ಕಾರಣವೆಂದರೆ- ಯಾರೂ ಇದನ್ನು ಊಹಿಸಬಹುದು- ಅಲ್ಪಸಂಖ್ಯಾತರ ಹಕ್ಕುಗಳು ಸಾಂಬಂಧಿಕವಾಗಿರಬೇಕು ಎಂಬುದು. ಅದರ (ತ್ಯಾಗಿ ವಾದದ) ಅರ್ಥವೆಂದರೆ ನಾವು ಹಿಂದೂಸ್ಥಾನ್ ಪ್ರದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಯಾವುದೇ ಹಕ್ಕುಗಳನ್ನು ನೀಡುವ ಮೊದಲು ಪಾಕಿಸ್ತಾನದ ಸಂವಿಧಾನ ಸಭೆಯು ಅಲ್ಪಸಂಖ್ಯಾತರಿಗೆ ಯಾವ ಹಕ್ಕುಗಳನ್ನು ನೀಡುತ್ತದೆ ಎಂದು ಕಾದುನೋಡಬೇಕು ಎಂಬುದು” ಎಂದು ಅಂಬೇಡ್ಕರ್ ಹೇಳಿದ್ದರು.

ಅವರು ಮುಂದುವರಿದು ಹೀಗೆ ಹೇಳಿದ್ದರು: “ಈಗ ಸ್ವಾಮಿ, ಎಲ್ಲಾ ಮತಬೇಧಗಳೊಂದಿಗೆ ನಾನು ಇಂತಹಾ ಯಾವುದೇ ವಿಚಾರಗಳನ್ನು ವಿರೋಧಿಸಬೇಕು. (ಇಲ್ಲಿನ) ಅಲ್ಪಸಂಖ್ಯಾತರ ಹಕ್ಕುಗಳು ಸಾಪೇಕ್ಷ (ಸಹಜ ಹಕ್ಕುಗಳು) ಹಕ್ಕುಗಳಾಗಿರಬೇಕು. ಬೇರೊಂದು ಪಕ್ಷವು (ಪಾಕಿಸ್ತಾನ) ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಿಗೆ ಏನು ಮಾಡುತ್ತದೆ ಎಂಬಂತಹ ಯಾವುದೇ ಪರಿಗಣನೆಗೆ ಒಳಪಡಬಾರದು.

ಆದರೆ, ಸಂವಿಧಾನ ದ್ವೇಷಿ ಬಲಪಂಥೀಯರು ಇದೀಗ ಅದನ್ನೇ ಮಾಡುತ್ತಿದ್ದಾರೆ- ಧರ್ಮಾಧರಿತ ಪೌರತ್ವವನ್ನು ತರಲು ಹೊರಟಿರುವ ಮೂಲಕ! ಅವರು ಸಂವಿಧಾನದ ಮೂಲ ಆಶಯಗಳನ್ನು ನಾಶಮಾಡುತ್ತಿದ್ದಾರೆ. ಇದನ್ನು ವಿರೋಧಿಸದಿದ್ದರೇ, ನಮ್ಮ ಪವಿತ್ರ ಸಂವಿಧಾನಕ್ಕೇ ಕುತ್ತು ಬರಬಹುದು!

(ದೇಶ ವಿಭಜನೆಯ ಕಾಲದಲ್ಲಿ ನಿರಾಶ್ರಿತರಾದ ಹಿಂದೂ, ಮುಸ್ಲಿಂ ಮತ್ತು ಸಿಕ್ಖರ ಪೌರತ್ವ ಕುರಿತು ಕೂಡಾ ಬಲಪಂಥೀಯರು ಯಾವ ರೀತಿ ವಿಭಜನಕಾರಿ ನಿಲುವು ತಳೆದಿದ್ದರು ಎಂಬ ಬಗ್ಗೆ ಇನ್ನೊಂದು ಲೇಖನವನ್ನು ನಿರೀಕ್ಷಿಸಿ.)


ಇದನ್ನೂ ಓದಿ: ಧರ್ಮಾಧಾರಿತ ಪೌರತ್ವ: ಇಂದಿನ ಭಾರತದ ಬಗ್ಗೆ 70 ವರ್ಷಗಳ ಹಿಂದೆಯೇ ಚರ್ಚಿಸಿದ್ದ ಸಂವಿಧಾನ ಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...