Homeಮುಖಪುಟಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ಸಂಘ ಪರಿವಾರಕ್ಕೆ ಎಚ್.ಎಸ್.ದೊರೆಸ್ವಾಮಿಯವರೇ ಟಾರ್ಗೆಟ್‌ ಏಕೆ?

ವಿಶ್ವದ ನಾಯಕರ ಮುಂದೆ ಗಾಂಧಿಯನ್ನು ಹೊಗಳುವ, ಅವರದೇ ಬೈಠಕ್‍ಗಳಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಅವರುಗಳನ್ನು ಆರಾಧಿಸುವ ಮಂದಿಗೆ ದೊರೆಸ್ವಾಮಿಯವರು ಸತ್ಯದ ದಾಖಲೆಗಳೊಂದಿಗೆ ಕಟ್ಟಿಕೊಡುವ ಇತಿಹಾಸ ಸಮಸ್ಯೆ ಸೃಷ್ಟಿಸಿದೆ.

- Advertisement -
- Advertisement -

ಮೌಲ್ಯಾಧಾರಿತ ಜೀವನವನ್ನು ನಡೆಸಿಕೊಂಡು ಬಂದು ನೈತಿಕ ವ್ಯಕ್ತಿತ್ವವನ್ನು ಉಸಿರಾಡಿದವರ ಸಿಟ್ಟಿಗೆ ನೂರಾರು ಉರಿನಾಲಗೆ ಇರುತ್ತದೆ. ಅಂತಹವರ ಸಿಟ್ಟನ್ನು ತಣಿಸಲು, ಸರ್ಕಾರಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಷ್ಟೇ. ಸುಳ್ಳಿನ ಮಾರ್ಗವನ್ನು ತೊರೆದು ಸತ್ಯದ ಮಾರ್ಗವನ್ನು ಮತ್ತೆ ತುಳಿಯಬೇಕಷ್ಟೇ. ಅದನ್ನು ಬಿಟ್ಟು ಅಂತಹ ನೈತಿಕ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಫಲ ಕೊಡುವುದು ಅನುಮಾನವೇ.

ಸ್ವಾತಂತ್ರ್ಯ ಹೋರಾಟಗಾರ, ಚಳವಳಿಗಳ ಮುಂದಾಳು, ಗಾಂಧೀವಾದಿ, ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ, ಅವರು ಪಾಕಿಸ್ತಾನಿ ಏಜೆಂಟ್’ ಎಂಬಿತ್ಯಾದಿಯಾಗಿ ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಳ್ಳಿನ ಅಸಹನೆಯ ಕಂತೆಯನ್ನು ಸುರುಳಿಸುರುಳಿಯಾಗಿ ಹರಿಬಿಟ್ಟಿರುವುದು ರಾಜ್ಯದ ಜನತೆಗೆ ಆಘಾತ ಮತ್ತು ಆಕ್ರೋಶವನ್ನು ತಂದಿದೆ. ಇದರ ಬೆನ್ನಿನಲ್ಲೆ ಸಚಿವ ವಿ.ಸೋಮಣ್ಣ ಮತ್ತು ಎಸ್.ಸುರೇಶ್ ಕುಮಾರ್‌ರವರಂತಹ ಇನ್ನಿತರ ಬಿಜೆಪಿ ಮತ್ತು ಆರ್.ಎಸ್.ಎಸ್ ಮುಖಂಡರು ಯತ್ನಾಳ್ ಅವರ ಶುದ್ಧ ಸುಳ್ಳಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಏಕೆ? ಶತಾಯುಷಿ ಎಚ್.ಎಸ್.ದೊರೆಸ್ವಾಮಿಯೇ ಇವರುಗಳ ಟಾರ್ಗೆಟ್ ಆಗಿರುವುದು ಏಕೆ?

ಎಚ್.ಎಸ್.ದೊರೆಸ್ವಾಮಿಯವರು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಾಕ್ಷಿಪ್ರಜ್ಞೆಯಾಗಿ ನಾಗರಿಕರ ಹಕ್ಕುಗಳನ್ನು ಕಾಯ್ದುಕೊಳ್ಳಲು ಸದಾ ಹೋರಾಟಕ್ಕೆ ಮುಂದಾಗಿರುವುದು ಸರ್ಕಾರಗಳ ಅಸಹನೆಗೆ ಮುಖ್ಯ ಕಾರಣವಾಗಿ ಕಾಣುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸರ್ಕಾರ, ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಸರ್ಕಾರ, ಹಲವು ಕರ್ನಾಟಕದ ರಾಜ್ಯ ಸರ್ಕಾರಗಳು ಮತ್ತು ಈಗಿನ ಕೇಂದ್ರ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದ್ದಾರೆ. ಹಿಂದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಭುತ್ವದ ಸಂಸ್ಥೆಗಳೇ ದೊರೆಸ್ವಾಮಿಯವರ ಮೇಲೆ ಮುಗಿಬಿದ್ದಿದ್ದರೆ, ಈಗಿನ ಪ್ರಭುತ್ವ ತಮ್ಮ ನೆಚ್ಚಿನ ಅಸ್ತ್ರವಾದ ನಕಲಿ ಸುದ್ದಿಗಳ ಪ್ರಚಾರದ ಮೊರೆ ಹೋಗಿದೆ. ಅದಕ್ಕಾಗಿ ಯತ್ನಾಳ್ ಅಂತಹವರ ಬೆಂಬಲ ತೆಗೆದುಕೊಂಡು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲು ಹಲವು ಐಟಿ ಸೆಲ್‍ಗಳು ತೊಡಗಿಸಿಕೊಂಡಿವೆ.

ಸದ್ಯಕ್ಕೆ ಎಚ್.ಎಸ್.ದೊರೆಸ್ವಾಮಿ ಅವರು ಸದರಿ ಕೇಂದ್ರ ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದು, ಸಿಎಎ ವಿರೋಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದರಿಂದ. ದೇಶದಾದ್ಯಂತ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್‌ಸಿ ವಿರೋಧಿ ಚಳವಳಿಗಳು ಚುರುಕು ಪಡೆದುಕೊಂಡು, ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯ ಸಂದರ್ಭದಲ್ಲಿ ಸರ್ಕಾರಕ್ಕೆ ಹೆಚ್ಚೆಚ್ಚು ಮುಜುಗರ ತಂದಿವೆ. ರಾಜಧಾನಿ ದೆಹಲಿಯಲ್ಲಿಯೇ ಬಿಜೆಪಿ ಪಕ್ಷದ ಕೆಲವು ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರೇರಣೆಯಾಗಿ ಗಲಭೆಗಳಾಗಿ ಹತ್ತಾರು ಸಾವುಗಳು ಸಂಭವಿಸಿವೆ. ಇಂತಹ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಹಾಲಿನಲ್ಲಿಯೇ ಪೊಲೀಸರಿಗೆ ವಿಡಿಯೋ ತೋರಿಸಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮುರುಳೀಧರ್ ಅವರ ವರ್ಗಾವಣೆ ರಾತ್ರೋರಾತ್ರಿ ನಡೆದಿದೆ. ನ್ಯಾಯಮೂರ್ತಿ ಮುರುಳೀಧರ್ ಅವರು ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ ಅವರಿಗೆ ಆಪ್ತರು ಎಂಬ ನಕಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲಾಗುತ್ತಿದೆ. ಹೀಗೆ ನಕಲಿ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುವ ಗುಂಪು ಈಗ ದೊರೆಸ್ವಾಮಿ ಅವರ ವಿರುದ್ಧ ಕೂಡ ಸೆಣೆಸಲು ತನ್ನೆಲ್ಲಾ ಬತ್ತಳಿಕೆಯನ್ನು ಬಳಸುತ್ತಿದೆ. ಎಚ್.ಎಸ್.ದೊರೆಸ್ವಾಮಿ ಅವರು ಈಗಿನ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಸಿಡಿದು ಜೈಲೋ ಭರೋ ಚಳವಳಿಗೆ ಕರೆ ಕೊಡುವ ಮುನ್ಸೂಚನೆ ಇವರನ್ನೆಲ್ಲ ಅಲುಗಾಡಿಸಿದೆ. ಸಂವಾದ ಮಾಡುವುದು ಇರಲಿ ಸಣ್ಣ ಟೀಕೆಯನ್ನೂ ಕೇಳಿಸಿಕೊಳ್ಳದ ಸರ್ಕಾರ ಮತ್ತು ಅದನ್ನು ಬೆಂಬಲಿಸುವ ಮುಖೇಡಿ ಐಟಿಸೆಲ್‍ಗಳು ಈಗ ಜಾಗೃತವಾಗಿವೆ.

ಇತ್ತೀಚೆಗಷ್ಟೇ ಕ್ಯಾರವಾನ್ ಪತ್ರಿಕೆ ಮಹಾತ್ಮ ಗಾಂಧಿ ಹತ್ಯೆಯ ಮುಖ್ಯ ರೂವಾರಿ ನಾಥೂರಾಮ್ ಗೋಡ್ಸೆ, ಆರ್‌ಎಸ್‍ಎಸ್ ತೊರೆದೇ ಇರಲಿಲ್ಲ ಎಂಬುದಕ್ಕೆ ಹೊಸ ಪುರಾವೆಗಳು ಸಿಕ್ಕಿವೆ ಎಂಬ ಒಂದು ದೀರ್ಘ ಲೇಖನವನ್ನು ಪ್ರಕಟ ಮಾಡಿತ್ತು. ಗಾಂಧಿ ಹತ್ಯೆಯಾದಾಗಲಿಂದಲೂ ಆರ್‌ಎಸ್‍ಎಸ್, ಗೋಡ್ಸೆಯಿಂದ ದೂರ ಸರಿಯಲು ಪ್ರಯತ್ನಿಸಿದೆ. ಆದರೆ ಪತ್ರಕರ್ತರೂ ಆಗಿದ್ದ ಎಚ್.ಎಸ್.ದೊರೆಸ್ವಾಮಿ ಅವರು ಗಾಂಧಿ ಹತ್ಯೆಯ ಮುಂಚಿನ ಇತಿಹಾಸವನ್ನೂ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇತಿಹಾಸವನ್ನು ನಿಖರವಾಗಿ ಅರಿತಿರುವ ಎಚ್.ಎಸ್.ದೊರೆಸ್ವಾಮಿ, ನಾಥೂರಾಮ್ ಗೋಡ್ಸೆ ಮತ್ತು ಆರ್‌ಎಸ್‍ಎಸ್ ಸಂಬಂಧದ ಬಗ್ಗೆ ಹಲವಾರು ವರ್ಷಗಳಿಂದ ಹೇಳುತ್ತಾ, ಬರೆಯುತ್ತಾ ಬಂದಿದ್ದಾರೆ. ಅಲ್ಲದೆ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾದ ವಿ.ಡಿ.ಸಾವರ್ಕರ್ ಅವರ ವಿರುದ್ಧ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರವನ್ನು ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಇದ್ದುದರ ಬಗ್ಗೆ ಬಹಳ ನಿಷ್ಠುರವಾಗಿ ನುಡಿಯುವ ಗಾಂಧಿವಾದಿ ದೊರೆಸ್ವಾಮಿಯವರ ಬಗ್ಗೆ ಕೋಪ, ದ್ವೇಷ, ಅಸೂಯೆಗಳು ಸಂಘ ಪರಿವಾರದವರಿಗೆ ಹುಟ್ಟಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲದೆ ಹೋದರೂ ಆತಂಕಕಾರಿ ವಿಷಯವಾಗಿದೆ. ವಿಶ್ವದ ನಾಯಕರ ಮುಂದೆ ಗಾಂಧಿಯನ್ನು ಹೊಗಳುವ, ಅವರದೇ ಬೈಠಕ್‍ಗಳಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಅವರುಗಳನ್ನು ಆರಾಧಿಸುವ ಮಂದಿಗೆ ದೊರೆಸ್ವಾಮಿಯವರು ಸತ್ಯದ ದಾಖಲೆಗಳೊಂದಿಗೆ ಕಟ್ಟಿಕೊಡುವ ಇತಿಹಾಸ ಸಮಸ್ಯೆ ಸೃಷ್ಟಿಸಿದೆ.

ಸ್ವ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಬರೆದು ಜೈಲಿಗೆ ಸೇರಿದ್ದ ದೊರೆಸ್ವಾಮಿಯವರಿಗೆ ಹೆದರಿಸಿ ಮೂಲೆಗುಂಪು ಮಾಡಲು ಸರ್ಕಾರಗಳಿಗೆ ಬೇರೆ ಯಾವುದೇ ಮಾರ್ಗ ಇಲ್ಲವಾಗಿದೆ. ಪ್ರಜಾಪ್ರಭುತ್ವವಾದಿಯಾಗಿರುವ ಶತಾಯುಷಿಗಳಿಗೆ ಯಾವುದೇ ಸರ್ಕಾರದ ಸರ್ವಾಧಿಕಾರದ ಧೋರಣೆಯನ್ನು ಸುಮ್ಮನೆ ನೋಡಿಕೊಂಡು, ಸಹಿಸಿಕೊಂಡು ಅಥವಾ ಕೇವಲ ಬಾಯಿಮಾತಿನಲ್ಲಿ ಟೀಕಿಸಿಕೊಂಡು ನಂತರ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವ ಇರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುವುದು, ಜನಾಭಿಪ್ರಾಯ ಮೂಡಿಸುವುದು ಅವರ ಮೂಲಗುಣ. ಗಾಂಧಿಯವರ ಜೊತೆಗಿನ ಹೋರಾಟದಲ್ಲಿ ಅವರು ರೂಢಿಸಿಕೊಂಡ ಧೋರಣೆ. ಬಹುಶಃ ಇದನ್ನು ಒಬ್ಬ ಅಥವಾ ಇಂತಹ ಸಾವಿರಾರು ಯತ್ನಾಳ್‍ಗಳಿಂದ ಬದಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲವೇನೋ.

ಟಿಪ್ಪುವಿನ ಬ್ರಿಟಿಷರ ವಿರುದ್ಧದ ಹೋರಾಟದ ಸಂಗತಿಗಳನ್ನು ತಿರುಚುವುದು, ಕೋಮುವಾದಿಗಳ ವಿರೋಧಿಗಳಾಗಿದ್ದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅಂತಹ ನಾಯಕರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ತಂತ್ರ ಮಾಡುವುದು, ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರ್‍ಎಸ್‍ಎಸ್ ನಾಯಕರನ್ನು ಬಂಧಿಸಿ, ಆರ್‍ಎಸ್‍ಎಸ್ ನಿಷೇಧಿಸಲು ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ನೆಹರೂರ ವಿರೋಧಿಗಳಾಗಿದ್ದರು ಎಂಬಂತೆ ಬಿಂಬಿಸುವುದು, ನೆಹರೂವಿನಿಂದ ಹಿಡಿದು ಪ್ರಮುಖ ಪ್ರಗತಿಪರ ಮುಖಂಡರ ಕುರಿತು ಸುಳ್ಳು ವೈಯಕ್ತಿಕ ಸಂಗತಿಗಳನ್ನು ಸೃಷ್ಟಿಸಿ ಖಳನಾಯಕರಂತೆ ಬಿಂಬಿಸುವುದು, ದೇಶದ ಸಾಮರಸ್ಯಕ್ಕೆ ಧಕ್ಕೆ ಆಗುವಂತೆ ಸೈದ್ಧಾಂತಿಕ ಪೊಲರೈಸೇಶನ್‍ಅನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗುವುದು, ಸಂವಿಧಾನ ಬರೆದದ್ದು ಅಂಬೇಡ್ಕರ್ ಅಲ್ಲ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಿದುಬಿಡುವುದು ಇಂತಹ ಪ್ರೊಪಗಾಂಡದ ಭಾಗವಾಗಿಯೇ.

ಈಗ ನಮ್ಮೆಲ್ಲರ ನಡುವೆ ತಮ್ಮ 103ನೇ ವಯಸ್ಸಿನಲ್ಲಿ ಪ್ರತಿರೋಧದ ಮಹಾಮೂರ್ತಿಯಂತೆ ಬದುಕುತ್ತಿರುವ ದೊರೆಸ್ವಾಮಿ ಅವರ ವಿರುದ್ಧ ಕೆಸರೆರಚಾಟಕ್ಕೆ ಸಂಘಪರಿವಾರದ ಹಲವು ಮುಖಂಡರು ಎದ್ದುಕೂತಿದ್ದಾರೆ. ನೈತಿಕವಾಗಿ ಗಟ್ಟಿಯಿಲ್ಲದ ವ್ಯಕ್ತಿಯ ವಿರುದ್ಧ ಆಗಿದ್ದರೆ ಸಫಲರಾಗುತ್ತಿದ್ದರೇನೋ, ಆದರೆ ಈ ಬಾರಿ ಅವರು ತಮ್ಮ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿತ್ವ ಮತ್ತು ಅವರನ್ನು ಗೌರವಿಸುವ ಲಕ್ಷಾಂತರ ನಾಗರಿಕರು ತಿರುಗಿಬಿದ್ದರೆ ತಾವು ಕಟ್ಟುವ ಸುಳ್ಳಿನ ಸೌಧ ನೆಲಸಮವಾಗಿ ಬೂದಿಯಾದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...