Homeಮುಖಪುಟಆಧಾರ್ ಜೋಡಣೆಯ ಅವಾಂತರಗಳು

ಆಧಾರ್ ಜೋಡಣೆಯ ಅವಾಂತರಗಳು

- Advertisement -
- Advertisement -

ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಅಗತ್ಯವೇ?

ವಿರೋಧ ಪಕ್ಷಗಳ ವಿರೋಧದ ನಡುವೆಯೇ ಉಭಯ ಸದನಗಳಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಅಂಗೀಕರಿಸಲಾಯಿತು. ಈ ಮಸೂದೆಯ ಮೂಲಕ ಪ್ರಜಾಪ್ರತಿನಿಧಿ ಕಾಯಿದೆ 1950 ಮತ್ತು 1951ರ ವಿವಿಧ ವಿಭಾಗಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್ ನಂಬರ್‌ಗೆ ಜೋಡಿಸುವ ಪ್ರಸ್ತಾಪವನ್ನೂ ಇಲ್ಲಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸುತ್ತಾ, “ಚುನಾವಣೆ ವ್ಯವಸ್ಥೆಯ ’ಶುದ್ಧೀಕರಣ’ಕ್ಕೆ ಸರ್ಕಾರ ಮುಂದಾಗಿದೆ” ಎಂದಿದ್ದಾರೆ.

ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಒಬ್ಬನೇ ವ್ಯಕ್ತಿಯು ವೋಟರ್ ಐಡಿ ಹೊಂದುವುದನ್ನು ಈ ಮಸೂದೆ ತಡೆಯುತ್ತದೆ ಎಂಬುದು ಸರ್ಕಾರದ ವಾದ. “ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಯಾವುದೇ ಅರ್ಜಿಯನ್ನು ನಿರಾಕರಿಸುವಂತಿಲ್ಲ. ಆಧಾರ್ ನೀಡದ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದುಗಳನ್ನು ಅಳಿಸಲಾಗುವುದಿಲ್ಲ. ಆಧಾರ್ ನೀಡಲು ವಿಫಲರಾದಂತಹ ಜನರು ಸೂಚಿಸಿರುವ ಇತರ ದಾಖಲೆಗಳನ್ನು ಒದಗಿಸಲು ಅನುಮತಿಸಲಾಗುವುದು” ಎಂದು ಸಚಿವರು ತಿಳಿಸಿದ್ದಾರೆ.

ಕಿರಣ್ ರಿಜಿಜು

ಆಧಾರ್ ಜೊತೆಗೆ ವೋಟರ್ ಐಡಿಯನ್ನು ಲಿಂಕ್ ಮಾಡುವುದು ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ. ಈ ಹಿಂದೆಯೂ ಆಧಾರ್ ಜೊತೆಗೆ ಬೇರೆ ದಾಖಲೆಗಳನ್ನು ಜೋಡಣೆ ಮಾಡಿದ್ದರಿಂದ ಹಲವು ಲೋಪಗಳಾಗಿರುವುದನ್ನು ತಜ್ಞರು ಗುರುತಿಸಿದ್ದಾರೆ. ವಿರೋಧ ಪಕ್ಷಗಳೂ ಇದೇ ಅಭಿಪ್ರಾಯ ತಾಳಿವೆ. ಇದು ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (ಗೌಪ್ಯತೆಯ ಹಕ್ಕು) ಆಧಾರ್ ಬಗ್ಗೆ ಸುಪ್ರೀಂ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕೆಲಸಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆದಾಗ ಮತದಾರರಿಗೆ ಆಗಿದ್ದ ಅನ್ಯಾಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಕಾರ್ಯಕ್ರಮವನ್ನು ಕೋರ್ಟ್ ರದ್ದುಗೊಳಿಸಿತ್ತು ಕೂಡ.

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಬೆಂಗಳೂರಿನ ಅಜೀಂಪ್ರೇಮ್‌ಜೀ ಯೂನಿವರ್ಸಿಟಿಯ ಪ್ರಾಧ್ಯಾಪಕರಾದ ರಾಜೇಂದ್ರನ್ ನಾರಾಯಣ್ ಅವರು ತಮ್ಮ ಕ್ಷೇತ್ರ ಕಾರ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಾ ಆಧಾರ್ ಜೋಡಣೆಯಿಂದಾಗಿ ಈ ಹಿಂದೆ ಆಗಿರುವ ಅವಾಂತರಗಳನ್ನು ಬಿಚ್ಚಿಟ್ಟರು.

“ನರೇಗಾ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಜಾಬ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡಲಾಯಿತು. ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಹಾಗೂ ಜಾಬ್ ಕಾರ್ಡ್ ಜೊತೆಗೆ ಜನರು ಜೋಡಣೆ ಮಾಡಬೇಕಾಯಿತು. ಮೊದಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರಲಿಲ್ಲ. 2016-2017ಯಿಂದ ಕಡ್ಡಾಯ ಮಾಡಲಾಯಿತು. ಆಧಾರ್ ನೋಂದಣಿಯನ್ನು ಸರ್ಕಾರ ಉತ್ತೇಜಿಸಿತು. ನೀವು ಆಧಾರ್ ಜೊತೆಗೆ ಜಾಬ್‌ಕಾರ್ಡ್ ಲಿಂಕ್ ಮಾಡದಿದ್ದರೆ ನಿಮಗೆ ನರೇಗಾ ಕೆಲಸಗಳನ್ನು ಕೊಡುವುದಿಲ್ಲ ಎನ್ನುವಂತಹ ಬೆಳವಣಿಗೆಗಳು ಆದವು. ನಕಲಿ ಜಾಬ್ ಕಾರ್ಡ್‌ಗಳನ್ನು ತಡೆಯುವುದು ಇದರ ಉದ್ದೇಶ ಎಂದು ಹೇಳಲಾಯಿತು. ಇದರ ಪರಿಣಾಮ ನರೇಗಾದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಕೂಲಿಕಾರರ ಜಾಬ್‌ಕಾರ್ಡ್ ಡಿಲೀಟ್ ಆಯಿತು” ಎನ್ನುತ್ತಾರೆ ರಾಜೇಂದ್ರನ್.

ರಾಜೇಂದ್ರನ್ ನಾರಾಯಣ್

ಮುಂದುವರಿದು ವಿವರಿಸುವ ಅವರು, “ಗ್ರಾಮೀಣ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಸೃಷ್ಟಿಸಲಾಯಿತು. ಕೆಲವೆಡೆಗಳಲ್ಲಿ, ಒಂದೇ ಮನೆಯ ಐವರಲ್ಲಿ ಇಬ್ಬರ ಜಾಬ್‌ಕಾರ್ಡ್ ಆಧಾರ್ ಲಿಂಕ್ ಆಗಿದ್ದು, ಇನ್ನು ಮೂವರ ಜಾಬ್‌ಕಾರ್ಡ್ ಡಿಲೀಟ್ ಮಾಡುವ ಕೆಲಸ ಆಯಿತು. ಆ ಮೂಲಕ ಶೇ.100 ಆಧಾರ್ ಲಿಂಕ್ ಕಾರ್ಯಾಚರಣೆ ಎಂದು ತೋರಿಸಲಾಯಿತು. ಮತ್ತೊಂದು ಸಮಸ್ಯೆ ತಲೆದೋರಿತು. ಕೇಂದ್ರ ಸರ್ಕಾರದಿಂದ ನೇರವಾಗಿ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದರಲ್ಲಿ ತೊಡಕಾಯಿತು. ಆಧಾರ್ ಆಧಾರಿತ ಪೇಮೆಂಟ್, ಅಕೌಂಟ್ ಆಧಾರಿತ ಪೇಮೆಂಟ್- ಈ ಎರಡು ವಿಧದಲ್ಲಿ ಹಣ ಜಮೆ ಮಾಡಬಹುದು. ಅಕೌಂಟ್ ಆಧಾರಿತ ಜಮೆಯಲ್ಲಿ ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಹಾಗೂ ಬ್ಯಾಂಕ್ ಖಾತೆಯ ವಿವರ ಇದ್ದರೆ ಆಗುತ್ತದೆ. ಆಧಾರ್ ಆಧಾರಿತ ಖಾತೆಯಲ್ಲಿ ಆಧಾರ್ ನಂಬರ್‌ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕಾಗಿರುತ್ತದೆ. ಕೇಂದ್ರ ಸರ್ಕಾರ ಏನು ಮಾಡಿತ್ತೆಂದರೆ, ಆಧಾರ್ ನಂಬರ್ ಜೊತೆಗೆ ಲಿಂಕ್ ಇರುವ ಫೈನಾನ್ಸಿಯಲ್ ಅಡ್ರಸ್‌ಗೆ ಸರ್ಕಾರ ಹಣವನ್ನು ಜಮೆ ಮಾಡಿತು. ಇದರಿಂದ ಫಲಾನುಭವಿಗಳು ಗೊಂದಲಕ್ಕೊಳಗಾದರು. ನಿಗದಿತ ಖಾತೆಗೆ ಹಣ ಬಾರದೆ ಕಂಗಾಲಾದರು” ಎನ್ನುತ್ತಾರೆ.

“ನೀವು ಮೂರು ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿದ್ದರೆ, ಎಲ್ಲ ಬ್ಯಾಂಕ್ ಅಕೌಂಟ್‌ಗಳಿಗೂ ಆಧಾರ್ ಲಿಂಕ್ ಮಾಡಿರುತ್ತೀರಿ. ಸರ್ಕಾರ ಹಣ ಜಮೆ ಮಾಡಿದಾಗ ಕೊನೆಯದಾಗಿ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ನರೇಗಾ ಫಲಾನುಭವಿಯೊಬ್ಬ ತಮ್ಮ ಹಣಕ್ಕಾಗಿ ಎಸ್‌ಬಿಐ ಖಾತೆಯನ್ನು ನೀಡಿರುತ್ತಾನೆ ಎಂದುಕೊಳ್ಳೋಣ. ಆತ ಮತ್ತೊಂದು ಖಾತೆಯನ್ನು ಸೆಂಟ್ರಲ್ ಬ್ಯಾಂಕ್‌ನಲ್ಲಿ ಹೊಂದಿದ್ದು ಅದಕ್ಕೂ ಆಧಾರ್ ಲಿಂಕ್ ಮಾಡಿದ್ದರೆ ನರೇಗಾ ಹಣ ಎಸ್‌ಬಿಐ ಖಾತೆಗೆ ಬರುತ್ತಿರಲಿಲ್ಲ. ಸಾಮಾನ್ಯವಾಗಿ ನರೇಗ ಹಣ ಪಡಯಲು ಬಳಸುವ ಅಧಿಕೃತ ಖಾತೆಗೆ ಹಣ ಬಾರದೆ ಎಲ್ಲಿ ಹೋಯಿತು ಎಂದು ಫಲಾನುಭವಿಗಳು ಚಿಂತಿಸುವಂತಾಯಿತು. ಈ ಸಮಸ್ಯೆಯನ್ನು ಬಗೆಹರಿಸುವುದು ಕಷ್ಟವಾಯಿತು. ಆಧಾರ್ ಲಿಂಕ್‌ನಿಂದಾಗಿರುವ ಸಮಸ್ಯೆಗಳನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ. ವೋಟರ್ ಐಡಿ ಲಿಂಕ್ ಕಡ್ಡಾಯವೇನೂ ಅಲ್ಲ ಎನ್ನುತ್ತಾರೆ. ಒಮ್ಮೆ ಜಾರಿಗೆ ಬಂದ ಮೇಲೆ ಜನರು ಇದನ್ನು ಕಡ್ಡಾಯವೆಂದೇ ಭಾವಿಸುತ್ತಾರೆ. ಮುಂದೆ ಸರ್ಕಾರವೇ ಅಧಿಕೃತವಾಗಿ ಕಡ್ಡಾಯ ಮಾಡಬಹುದು. ನರೇಗಾ ಕಾರ್ಡ್ ಡಿಲೀಟ್ ಆದಂತೆಯೇ ವೋಟರ್ ಕಾರ್ಡ್ ಕೂಡ ಡಿಲೀಟ್ ಆಗಬಹುದು. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ವೋಟರ್ ಐಡಿಗೆ ಹೋಲಿಕೆಯಾಗದಿದ್ದರೆ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯೇ ಹೆಚ್ಚಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಜೇಂದ್ರನ್.

ಆಧಾರ್ ಪ್ಯಾನ್ ಲಿಂಕಿಂಗ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಲ್ಲಿ ಒಬ್ಬರಾದ ಮತ್ತು ಡೇಟಾಮೀಟ್ ಸಂಸ್ಥಾಪಕರಾದ ತೇಜೇಶ್ ಜಿ ಎನ್ ಅವರು ತಮ್ಮ ಆತಂಕಗಳನ್ನು ’ನ್ಯಾಯಪಥ’ದೊಂದಿಗೆ ಹಂಚಿಕೊಂಡರು. “ಎಲ್ಲರನ್ನೂ ಮತದಾನದಲ್ಲಿ ಒಳಗೊಳ್ಳಬೇಕು ಎಂಬುದು ನಮ್ಮ ಗುರಿಯಾಗಿದೆ. ಚುನಾವಣೆ ಬಂದಾಗಲೆಲ್ಲ ಆದಷ್ಟು ವೋಟ್ ಮಾಡಿ ಎಂದು ಜಾಗೃತಿ ಮೂಡಿಸುತ್ತೇವೆ. ಅಮೆರಿಕದಂತಹ
ದೇಶದಲ್ಲಿ ಪರಿಸ್ಥಿತಿ ಬೇರೆ ರೀತಿ ಇದೆ. ಮತದಾರರೆಂದು ಸಾಬೀತು ಮಾಡದೆ ಅಮೆರಿಕದಲ್ಲಿ ಮತ ಚಲಾಯಿಸಲು ಸಾಧ್ಯವಾಗಲ್ಲ. ಅಮೆರಿಕದ್ದು ರಿಜೆಕ್ಷನ್ ಪ್ರೊಸೆಸ್ ಆದರೆ ನಮ್ಮದು ಸೆಲೆಕ್ಷನ್ ಪ್ರೊಸೆಸ್. ಮನೆಯಿಂದ ಹೊರಬಂದು ಮತ ಚಲಾಯಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ವೋಟರ್ ಲಿಸ್ಟ್‌ನಲ್ಲಿ ಹೆಸರು ಇಲ್ಲದಿದ್ದರೆ ಅದನ್ನು ಸಮಸ್ಯೆ ಎಂದು ನಾವು ಭಾವಿಸುತ್ತೇವೆ. ಮತದಾನ ಮಾಡಿದವರಿಗೆ ಶಾಯಿಯನ್ನು ಹಾಕುತ್ತಾರೆ. ಅದು ಸುಲಭಕ್ಕೆ ಅಳಿಸಿ ಹೋಗುವುದಿಲ್ಲ. ಹೀಗಾಗಿ ಡಬಲ್ ವೋಟಿಂಗ್ ಸಂಖ್ಯೆ ತುಂಬಾ ಕಡಿಮೆ ಇದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ಮತದಾನದಿಂದ ಹೊರಗುಳಿಯುವವರ ಸಂಖ್ಯೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ವೋಟರ್ ಲಿಂಕ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿದ್ದರಿಂದ ರೇಷನ್ ತೆಗೆದುಕೊಳ್ಳಲು ಆಗದೆ ಒದ್ದಾಡಿದವರನ್ನು ನೋಡಿದ್ದೇವೆ” ಎನ್ನುತ್ತಾರೆ ತೇಜೇಶ್.


“ವೋಟರ್ ಐಡಿ ಜೊತೆಗೆ ಆಧಾರ್ ಜೋಡಣೆಯು ಖಾಸಗಿತನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯಾರುಯಾರಿಗೆ ವೋಟ್ ಹಾಕುತ್ತಿದ್ದರು ಎಂಬುದು ಈವರೆಗೆ ಗೌಪ್ಯವಾಗಿರುತ್ತಿತ್ತು. ಸದ್ಯಕ್ಕೆ ಮತಗಟ್ಟೆ ಆಧಾರದಲ್ಲಿ ಮಾತ್ರ ಯಾರಿಗೆ ಎಷ್ಟು ಮತ ಹೋಗಿದೆ ಎಂದು ಊಹಿಸಬಹುದಿತ್ತು. ಒಂದು ಓಣಿಯಲ್ಲಿರುವ ಜನ ಯಾವ ಪಕ್ಷಕ್ಕೆ ವೋಟು ಹಾಕಿದ್ದಾರೆಂದು ಹೇಳಬಹುದಿತ್ತು. ಈ ಓಣಿಯಲ್ಲಿರುವವರು ನಮಗೆ ವೋಟ್ ಹಾಕಿಲ್ಲ, ನಾನೇಕೆ ಸಹಾಯ ಮಾಡಲಿ ಎಂದು ಕೇಳುವುದನ್ನು ನಾವು ನೋಡಿದ್ದೇವೆ. ಈ ರೀತಿಯ ರಾಜಕಾರಣ ಮತಗಟ್ಟೆ ಮಟ್ಟಕ್ಕೆ, ಗ್ರಾಮ ಪಂಚಾಯಿತಿ ಮಟ್ಟಕ್ಕೆ ಸೀಮಿತವಾಗಿತ್ತು. ಆದರೆ
ಆಧಾರ್ ಲಿಂಕ್ ಮಾಡಿದರೆ ಯಾವ ಆಧಾರ್ ಐಡಿ ಯಾರಿಗೆ ವೋಟ್ ಹಾಕಿದೆ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ತಿಳಿಯಬಹುದಾದ ಸಮಸ್ಯೆ ಇದೆ. ಇದರಿಂದ ಮತದಾನದ ಗೌಪ್ಯತೆ ಹಾಳಾಗುತ್ತದೆ. ಪಕ್ಷಪಾತ ಧೋರಣೆ ಮೊದಲು ಸಣ್ಣ ಘಟಕಗಳ ಮಟ್ಟದಲ್ಲಿತ್ತು. ಈಗ ರಾಷ್ಟ್ರಮಟ್ಟಕ್ಕೆ ಹೋಗುತ್ತದೆ. ವೋಟರ್ ಐಡಿ ಜೊತೆಗೆ ಆಧಾರ್ ಇದ್ದರೆ ಫೋನ್ ನಂಬರ್ ಕೂಡ ಲಭ್ಯವಾಗುತ್ತದೆ. ನಂಬರ್ ಲೀಕ್ ಆಗಿ ಮತದಾರರಿಗೆ ಕಾಲ್ ಮಾಡಿರುವ ಘಟನೆ ಪಾಂಡಿಚೆರಿಯಲ್ಲಿ ನಡೆದಿರುವುದು ಈಗ ಕೋರ್ಟ್ ಮೆಟ್ಟಿಲೇರಿದೆ” ಎಂದು ವಿವರಿಸುತ್ತಾರೆ ತೇಜೇಶ್.

ಐಟಿ ಫಾರ್ ಚೇಂಜ್‌ನ ಕೆ.ಗುರು ಅವರು ನಮ್ಮೊಂದಿಗೆ ಮಾತನಾಡಿ ಆಧಾರ್ ಕಾರ್ಡ್‌ನ ಮಿತಿಯನ್ನು ವಿವರಿಸಿದರು. “ಪೌರತ್ವಕ್ಕೆ ಆಧಾರ್ ಕಾರ್ಡ್ ಆಧಾರವಲ್ಲ. ನೀವು ಇಲ್ಲಿ ವಾಸವಿದ್ದರೆ ಆಧಾರ್ ಕಾರ್ಡ್ ಸಿಗುತ್ತದೆ. ಮತದಾನ ಕೇವಲ ಪೌರತ್ವಕ್ಕೆ ಮಾತ್ರ ಸಿಗಬೇಕು. ಆಧಾರ್ ಮೂಲಕ ಪೌರರಲ್ಲದವರಿಗೂ ಮತದಾನದ ಹಕ್ಕು ಸಿಗುವ ಸಾಧ್ಯತೆ ಇದೆ. ಮತ್ತೊಂದು ಅಪಾಯವೆಂದರೆ ಡಿಜಿಟಲ್ ಜಗತ್ತಿನಲ್ಲಿ ನಾವು ಹೀಗೆ ಲಿಂಕ್ ಮಾಡುತ್ತಾ ಹೋದಷ್ಟು ನಮ್ಮ ಪೌರತ್ವದ ಸೆಕ್ಯುರಿಟಿ ಕಡಿಮೆಯಾಗುತ್ತದೆ. ನಮ್ಮ ವಿವರಗಳು ಗೌಪ್ಯವಾಗಿ ಇರಲು ಸಾಧ್ಯವಾಗದು” ಎನ್ನುತ್ತಾರೆ.

ಆಧಾರ್ ಜೋಡಣೆಯ ವಿಚಾರವಾಗಿ ತಜ್ಞರು ಹೇಳುವ ಮಾತುಗಳನ್ನು ಕೇಳಿದರೆ ಇದರಿಂದ ಉಂಟಾಗಬಹುದಾದ ಅಪಾಯಗಳು, ಸರ್ಕಾರ ಪ್ರತಿಪಾದಿಸುತ್ತಿರುವ ಉಪಯೋಗಗಳನ್ನು
ಮೀರಿಸುವಂತಿವೆ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಇದರ ಬಗ್ಗೆ ವಿಸ್ತೃತ ಸಾರ್ವಜನಿಕ ಚರ್ಚೆಯ ಅಗತ್ಯವಿದೆ.


ಇದನ್ನೂ ಓದಿ: Explainer: ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡುವ ಮಸೂದೆಯ ಸಾಧಕ-ಬಾಧಕಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...