Homeಕರ್ನಾಟಕಯಡ್ಯೂರಪ್ಪ ಸ್ವತಃ ಹರಿಬಿಟ್ಟರೆ ಹುಬ್ಳಿ ವೀಡಿಯೋ!? ಏನಿದೆ ಬಿಜೆಪಿಯೊಳಗಿನ vice-versa ಲೆಕ್ಕಾಚಾರ.....

ಯಡ್ಯೂರಪ್ಪ ಸ್ವತಃ ಹರಿಬಿಟ್ಟರೆ ಹುಬ್ಳಿ ವೀಡಿಯೋ!? ಏನಿದೆ ಬಿಜೆಪಿಯೊಳಗಿನ vice-versa ಲೆಕ್ಕಾಚಾರ…..

- Advertisement -
- Advertisement -

ದೇಶಕವಿ ಕುವೆಂಪು ಕೃತಿಯೊಂದಕ್ಕೆ ಬರೆದ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ, “ಆಕಸ್ಮಿಕ ಎಂಬುದು ಅಪೂರ್ಣಜ್ಞಾನ. ಪೂರ್ವಾಪರವನ್ನು ಒಳಗೊಳ್ಳುವ ಪೂರ್ಣದೃಷ್ಟಿಗೆ ಆಕಸ್ಮಿಕ ಎಂಬುದೇ ಇಲ್ಲ” ಎಂದು. ಬಾಕಿ ವಿದ್ಯಮಾನಗಳಿಗೆ ಇದೆಷ್ಟು ದಿಟವೋ ಗೊತ್ತಿಲ್ಲ, ಆದರೆ ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಬಿಸಿ ಅಲೆ ಎಬ್ಬಿಸಿರುವ ಯಡ್ಯೂರಪ್ಪನವರ `ಹುಬ್ಳಿ ವೀಡಿಯೋ’ದ ಮಟ್ಟಿಗೆ ಮಾತ್ರ ಇದು ಅಕ್ಷರಶಃ ಸತ್ಯ.

ಕೆಲವೇ ಕೆಲವು ನಾಯಕರು ಮತ್ತು ಪದಾಧಿಕಾರಿಗಳಿಗಷ್ಟೇ ಸೀಮಿತವಾಗಿದ್ದ ’ಆಂತರಿಕ’ ಸಭೆಯಲ್ಲಿ ಯಡ್ಯೂರಪ್ಪನವರು ಸಿಟ್ಟಿಗೆದ್ದು ತಮ್ಮ ಅಸಮಾಧಾನ ಹೊರಹಾಕಿದ ವೀಡಿಯೊ ವೈರಲ್ ಆಯ್ತು. ಇದು ಯಡ್ಯೂರಪ್ಪನವರ ವಿರುದ್ಧದ ಪಿತೂರಿ ಅಂತ ಒಂದಷ್ಟು ಜನ ಅಂದಾಜಿಸಿದರೆ, ಆಕಸ್ಮಿಕವಾಗಿ ಹೊರಬಿದ್ದ ಈ ವಿಡಿಯೋದಿಂದ ಆಪರೇಷನ್ ಕಮಲದಲ್ಲಿ ಅಮಿತ್ ಶಾ ಅಧಿಕೃತವಾಗಿ ಎಕ್ಸ್ಪೋಜಾಗಿದ್ದಾರೆ ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಯಡ್ಯೂರಪ್ಪನವರ ವಿರುದ್ಧದ ಪಿತೂರಿಯೂ ಅಲ್ಲ, ಆಕಸ್ಮಿಕವಂತು ಅಲ್ಲವೇ ಅಲ್ಲ! ಸ್ವತಃ ಯಡ್ಯೂರಪ್ಪನವರೇ ಉದ್ದೇಶಪೂರ್ವಕವಾಗಿ, ಬಹಳ ವ್ಯವಸ್ಥಿತವಾಗಿ ವೈರಲ್ ಮಾಡಿಸಿದ ವೀಡಿಯೋ ಇದು!!!!

ಇಂತದ್ದೊಂದು ರಾಜಕೀಯ ಚರ್ಚೆ ಶಕ್ತಿಸೌಧದ ಆಚೀಚೆ ಬಲು ಬಿರುಸಾಗಿಯೇ ಕೇಳಿಬರುತ್ತಿದೆ. ಇತ್ತೀಚೆಗೆ ಸಾಲುಸಾಲಾಗಿ ನಡೆದ ವಿದ್ಯಮಾನಗಳು ಕೂಡಾ ಇದನ್ನು ದೃಢಪಡಿಸುತ್ತಿವೆ. ಇದೆಲ್ಲಾ ಶುರುವಾದದ್ದು ಅಕ್ಟೋಬರ್ ೨೪ನೇ ತೇದಿಯಂದು ಹೊರಬಿದ್ದ ಮಹಾರಾಷ್ಟ್ರ, ಹರ್ಯಾಣ ಫಲಿತಾಂಶಗಳ ತರುವಾತ. ಅಲ್ಲಿಯವರೆಗೆ ಹೈಕಮಾಂಡ್ ಗುಮ್ಮಕ್ಕೆ ಬೆದರಿದ ಮಗುವಿನಂತೆ ಥರಗುಟ್ಟುತ್ತಿದ್ದ ಯಡ್ಯೂರಪ್ಪಗೆ `ಒಂದು ಕೈ ನೋಡೇ ಬಿಡೋಣ’ ಎಂಬಷ್ಟು ಧೈರ್ಯ ಬಂದದ್ದು ಕೂಡಾ ಆ ನಂತರವೇ. ಹಾಗಾಗಿಯೇ ಯಾವ ಪ್ರಪಾತಕ್ಕೆ ತನ್ನನ್ನು ತಳ್ಳಲು ಬಿಜೆಪಿ ತ್ರೈಕಮಾಂಡ್ (ಮೋದಿ-ಶಾ-ಸಂತೋಷ್) ಸಂಚು ರೂಪಿಸಿತ್ತೋ, ಅದೇ ಪ್ರಪಾತಕ್ಕೆ ತನ್ನೊಟ್ಟಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನೂ ಸೊಂಟಕ್ಕೆ ಬಿಗಿದುಕೊಂಡೆ `ಆತ್ಮಾಹುತಿ’ಗೆ ಸಜ್ಜಾಗಿ ಯಡ್ಯೂರಪ್ಪ ಬಹಳ ಲೆಕ್ಕಾಚಾರದಿಂದ ಆಡಿದ ಮಾತುಗಳವು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಯಡ್ಯೂರಪ್ಪನವರು ಸಿಎಂ ಕುರ್ಚಿ ಮೇಲೆ ಕೂತ ದಿನದಿಂದ ಹೈಕಮಾಂಡ್ ತೋರಿದ ನಿರ್ಲಕ್ಷ್ಯ ಮಾಡಿದ ಅವಮಾನಗಳು ಅಷ್ಟಿಷ್ಟಲ್ಲ. ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಫಲಿತಾಂಶ, ಮುಖ್ಯವಾಗಿ ಕರ್ನಾಟಕದಲ್ಲಿ ನಿರೀಕ್ಷೆಗು ಮೀರಿ ಇಪ್ಪತ್ತೈದು ಸೀಟುಗಳನ್ನು ಗೆದ್ದದ್ದು ಯಡ್ಯೂರಪ್ಪರನ್ನು ಲಘುವಾಗಿ ಕಾಣಲು ಮುಖ್ಯ ಕಾರಣ. ಆದರೆ ಆ ವಿಶ್ವಾಸದ ಬಲೂನಿಗೆ ಸೂಜಿ ಚುಚ್ಚಿದ್ದು ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಫಲಿತಾಂಶಗಳು. ಎರಡೂ ಕಡೆ ಸ್ವತಂತ್ರವಾಗಿ ಗದ್ದುಗೆ ಏರುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಇವು ದೊಡ್ಡ ಆಘಾತ ತಂದಿಕ್ಕಿದವು. ಜೊತೆಗೆ `ಲೋಕಲ್ ಲೀಡರ್’ಗಳನ್ನು ಕ್ಯಾರೇ ಅನ್ನದ ಹೈಕಮಾಂಡ್ ಈ ಫಲಿತಾಂಶಗಳಿಂದ ಕೊಂಚ ಮೆತ್ತಗಾಗಲೂ ಬೇಕಾಯ್ತು. ಅಲ್ಲದೇ ಯಡ್ಯೂರಪ್ಪರನ್ನು ಕೆಳಗಿಳಿಸಿ ಮಧ್ಯಂತರ ಚುನಾವಣೆಗೆ ಹೋಗಿ ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಯ ಆಲೋಚನೆಯೇ ತಲೆಕೆಳಗಾದವು.

ಯಡ್ಯೂರಪ್ಪನವರಂತಹ ನುರಿತ ರಾಜಕಾರಣಿಗೆ ಇದರ ಸುಳಿವು ಸಿಗಲು ಬಹಳ ಸಮಯವೇನು ಹಿಡಿಯಲಿಲ್ಲ. ಹಾಗಾಗಿಯೇ ಫಲಿತಾಂಶ ಹೊರಬಿದ್ದ ಎರಡೇ ದಿನಕ್ಕೆ, ಅಂದರೆ ಅಕ್ಟೋಬರ್ 26ರ ಶನಿವಾರ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರು ಕೊಂಚ ಮೈಚಳಿ ಬಿಟ್ಟು ನೇರವಾಗಿಯೇ ತಮ್ಮ ಎದುರಾಳಿಗಳಿಗೆ ತಿವಿಯುವ ಧೈರ್ಯ ತೋರಿದ್ದು; ಆಪರೇಷನ್ ಕಮಲದ ವಿಚಾರ ಬಂದಾಗ ಬೇಕಂತಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ನಂಟನ್ನು ಒತ್ತಿ ಹೇಳಿದ್ದು.

ಆಪರೇಷನ್ ಕಮಲಕ್ಕೆ ಸಂಪೂರ್ಣ ಕುಮ್ಮಕ್ಕು ಕೊಟ್ಟು, ನೀಲನಕ್ಷೆ ಹಾಕಿಕೊಟ್ಟಿದ್ದೇ ಬಿಜೆಪಿಯ ದಿಲ್ಲಿ ನಾಯಕರು. ಆದರು, ಬಹಿರಂಗವಾಗಿ ಅದರಿಂದ ಅಂತರ ಕಾಯ್ದುಕೊಳ್ಳುತ್ತಲೇ ಬಂದರು. ಮೇಲ್ನೋಟಕ್ಕೆ ಇದು ಸಿಎಂ ಆಗುವ ಸಲುವಾಗಿ ಯಡ್ಯೂರಪ್ಪನವರೇ ನಡೆಸಿದ ಏಕಾಂಗಿ ಯತ್ನ ಎನ್ನುವಂತೆ ಬಿಂಬಿಸಲಾಗಿತ್ತು. ಈಗ ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ಕೊಡುವುದೂ ಹೈಕಮಾಂಡ್‌ಗೆ ಇಷ್ಟವಿರಲಿಲ್ಲ. `ಮಾತು ತಪ್ಪಿದ ಅಪವಾದ’ ತಟ್ಟಿದರೆ ಅದು ಯಡ್ಯೂರಪ್ಪನಿಗೆ ತಾನೇ, ತಟ್ಟಲಿ ಬಿಡು’ ಎಂಬಂತಿತ್ತು ಹೈಕಮಾಂಡ್ ವರ್ತನೆ. ಯಾವಾಗ ದಿಲ್ಲಿ ನಾಯಕರೇ ಇಂಥಾ ನಿಲುವು ತಳೆದಿದ್ದಾರೆನ್ನುವುದು ಗೊತ್ತಾಯ್ತೊ, ಆಗಿನಿಂದಲೇ ಸವದಿ, ಶ್ರೀರಾಮುಲು ತರದವರು ಅನರ್ಹರಿಗು ನಮಗೂ ಸಂಬಂಧವೇ ಇಲ್ಲ ಎನ್ನುವಂತ ಮಾತುಗಳನ್ನಾಡಿಕೊಂಡು ತಿರುಗಾಡಿದ್ದು. ಅವತ್ತಿನ ಪರಿಸ್ಥಿತಿಯಲ್ಲಿ ಯಡ್ಯೂರಪ್ಪ ಕೂಡಾ ಅವರನ್ನು ದೂರ್ವಾಸಗಣ್ಣು ಬಿಟ್ಟು ಹೆದರಿಸುವ ತಾಕತ್ತು ಉಳಿಸಿಕೊಂಡಿರಲಿಲ್ಲ.

ಮಹಾರಾಷ್ಟ್ರ ಹರ್ಯಾಣ ಫಲಿತಾಂಶಗಳು ಅವರ ಆ ಅಳುಕನ್ನು ತೊಡೆದು ಹಾಕಿದ್ದೇ ತಡ, ಸಭೆಯಲ್ಲಿ ಎದುರಾಳಿಗಳ ವಿರುದ್ಧ ಹರಿಹಾಯುತ್ತ ಆಪರೇಷನ್ ಕಮಲದಲ್ಲಿ ಅಮಿತ್ ಶಾರ ಹೆಸರನ್ನು ಪ್ರಸ್ತಾಪಿಸಿಯೇ ಬಿಟ್ಟರು. ಅನರ್ಹರಿಗೆ ಅನ್ಯಾಯವಾದರೆ, ಅರ್ಥಾತ್ ಆ ನೆಪದಲ್ಲಿ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ನಾನು ಅಮಿತ್ ಶಾರನ್ನೂ ಬಯಲಿಗೆಳೆಯಬಲ್ಲೆ ಎಂಬ ಸಂದೇಶ ಬಿಜೆಪಿ ಮಂದಿಗಷ್ಟೇ ಅಲ್ಲ ಜನರಿಗೂ ತಲುಪಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಜೊತೆಗೆ ನಾನಂತು ನಿಮ್ಮ ಪರವಾಗಿ ಪ್ರಮಾಣಿಕವಾಗಿ ಕಾದಾಡುತ್ತಿದ್ದೇನೆ, ಇದನ್ನೂ ಮೀರಿ ನಿಮಗೆ ಅನ್ಯಾಯವಾದರೆ ಅದಕ್ಕೆ ನಾನಷ್ಟೆ ಜವಾಬುದಾರನಲ್ಲ ಎನ್ನುವುದನ್ನು ಅನರ್ಹರಿಗೂ ತಲುಪಲಿ ಎಂದು ಬಯಸಿದ್ದರು. ಹಾಗಾಗಿಯೇ ಆ ಸಭೆಯಲ್ಲಿ ಅಷ್ಟೆಲ್ಲ ರೇಗಾಡಿದ ವೀಡಿಯೋದ ಕೊನೆಯಲ್ಲಿ, `ನನಗೆ ಗೊತ್ತು ನನ್ನ ಈ ಮಾತುಗಳನ್ನು ನೀವೇ ಹೊರಗೆ ಸುದ್ದಿ ಮಾಡಿಸುತ್ತೀರಿ’ ಎನ್ನುವ ಮೂಲಕ ಅಂಥಾ ಐಡಿಯಾವನ್ನು ಅವರೇ ವಿರೋಧಿಗಳ ಮುಂದಿಟ್ಟಿದ್ದರು.
ಆದರೆ ಅಮಿತ್ ಶಾ ಹೆಸರು ಬಂದಿದ್ದರಿಂದ ವಿರೋಧಿಗಳ್ಯಾರೂ ಆ ದುಸ್ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ಆ ಫಲಿತಾಂಶಗಳಿಂದ ಯಡ್ಯೂರಪ್ಪನವರ ಪರವಾಗಿ ಹೈಕಮಾಂಡ್ ಕೂಡಾ ಮೆತ್ತಗಾಗಿರುವ ಸ್ಪಷ್ಟ ಸುಳಿವು ಹಿಡಿದ ಅವರು ಬಾಯ್ಮುಚ್ಚಿಕೊಂಡು `ಎಲ್ಲಾ ಅನರ್ಹ ಶಾಸಕರಿಗೆ ಟಿಕೆಟ್ ಖಾತ್ರಿ’ ಎಂಬ ಯಡ್ಯೂರಪ್ಪನವರ ಘೋಷಣೆಗೆ ನಗುನಗುತ್ತಲೇ ಫೋಜು ಕೊಡಬೇಕಾಯ್ತು. ಅಲ್ಲಿಗೆ ವೀಡಿಯೊ ವೈರಲ್ ಆಗದಿದ್ದರು ಮುಟ್ಟಿಸಬೇಕಿದ್ದ ಬಿಸಿಯನ್ನು ಮುಟ್ಟಿಸಬೇಕಾದ ಜಾಗಕ್ಕೆ ಮುಟ್ಟಿಸಿದ ಖುಷಿಯಲ್ಲಿ ಯಡ್ಯೂರಪ್ಪ ಕೂಡಾ ಮುಗಳ್ನಕ್ಕು ಸುಮ್ಮನಾಗಿದ್ದರು.

ಆದರೆ ವೀಡಿಯೋವನ್ನು ವೈರಲ್ ಮಾಡಲೇಬೇಕಾದಂತಹ ಅನಿವಾರ್ಯತೆ ತಂದಿಕ್ಕಿದ್ದು ಆರೆಸ್ಸೆಸ್ಸಿಗರ ಆ ಭೇಟಿ! ಹೌದು, ವೀಡಿಯೊ ವೈರಲ್ ಆಗುವುದಕ್ಕು ಒಂದೆರಡು ದಿನ ಮುನ್ನ ಮೂವರು ರಾಜ್ಯಮಟ್ಟದ ಆರೆಸ್ಸೆಸ್ ನಾಯಕರು ಖುದ್ದಾಗಿ ಯಡ್ಯೂರಪ್ಪರನ್ನು ಭೇಟಿ ಮಾಡಿದ್ದರು. ಅವರು ಹೊತ್ತು ತಂದಿದ್ದ ಸಂದೇಶ ಸ್ಪಷ್ಟವಾಗಿತ್ತು. `ಇನ್ನು ನಿಮ್ಮ ಆಡಳಿತ ವೈಖರಿಯಲ್ಲಿ ಸಂಘ ಪರಿವಾರವಾಗಲಿ, ಹೈಕಮಾಂಡ್ ಆಗಲಿ ಮೂಗು ತೂರಿಸಲ್ಲ. ನಿಮಗಿಷ್ಟಬಂದಂತೆ ಸರ್ಕಾರ ನಡೆಸಿ. ಫುಲ್ ಫ್ರೀಡಂ ನಿಮಗುಂಟು. ಉಪಚುನಾವಣೆಯಲ್ಲೂ ಯಾರಿಗೆ ಟಿಕೆಟ್ ಕೊಡಬೇಕು, ಏನು ತಂತ್ರ ಹೆಣೆಯಬೇಕು ಎಂಬುದನ್ನು ನೀವೇ ನಿರ್ಧರಿಸಿ. ಸಂಪೂರ್ಣ ನಿಮ್ಮ ನೇತೃತ್ವದಲ್ಲಿ ಚುನಾವಣೆ ನಡೆಯಲಿ. ನಮ್ಮಿಂದ ಕಿಂಚಿತ್ತೂ ಅಡ್ಡಗಾಲು ಬರುವುದಿಲ್ಲ’ ಎಂಬುದು ಆ ಸಂದೇಶದ ಹೂರಣ.

ಇದನ್ನೂ ಓದಿ: ರಾಜಿನಾಮೆ ನೀಡುವ ಮುನ್ನ ಯಡಿಯೂರಪ್ಪನವರ ಮನೆಗೆ ಹೋಗಿದ್ದೆ ಎಂದ ನಾರಾಯಣಗೌಡ: ವಿಡಿಯೋ ನೋಡಿ

ಮೇಲ್ನೋಟಕ್ಕೆ ಇದು, ವಿಧಾನಸಭಾ ಫಲಿತಾಂಶಗಳಿಂದ ಬಿಜೆಪಿ ಹೈಕಮಾಂಡ್ ಕಲಿತ ಪಾಠದಂತೆಯೂ; ಯಡ್ಯೂರಪ್ಪನವರ ಪರವಾಗಿ ಸಿಕ್ಕ ಇಂಟರ್ನಲ್ ದಿಗ್ವಿಜಯದಂತೆಯೂ ಕಾಣಿಸಿದರು ಅದರ ಹಿಂದೆ ಯಡ್ಯೂರಪ್ಪರನ್ನು ಬಲಿಹಾಕುವ ಸ್ಪಷ್ಟ ಲಕ್ಷಣಗಳಿದ್ದವು. ಮಹಾರಾಷ್ಟ್ರ -ಹರ್ಯಾಣ ಚುನಾವಣೆಗಳು ಮತ್ತು ಅವುಗಳ ಜೊತೆಗೆ ನಡೆದ ವಿವಿಧ ರಾಜ್ಯಗಳ ಉಪಚುನಾವಣೆಗಳಲ್ಲಿ ಬೇರೆ ಪಕ್ಷಗಳಿಂದ ಬಿಜೆಪಿಗೆ ಕೆನೆದ `ಅನರ್ಹ’ರಂತಹ ಪಕ್ಷಾಂತರಿಗಳು ದೊಡ್ಡಮಟ್ಟದಲ್ಲಿ ಸೋಲನುಭವಿಸಿದ್ದರು. ಈ ಸೋಲುಗಳು ಬಿಜೆಪಿಯ `ಆಪರೇಷನ್ ಕಮಲ’ದ ವಿರುದ್ಧ ಜನರ ಮನಸ್ಥಿತಿಯನ್ನು ಅರ್ಥ ಮಾಡಿಸಿದ್ದವು. ಕರ್ನಾಟಕದ ಉಪಚುನಾವಣೆಯಲ್ಲೂ ಇದು ಪುನರಾವರ್ತನೆಯಾಗುವ ಸಾಧ್ಯತೆಗಳು ಹೈಕಮಾಂಡ್‌ಗೆ ಮನದಟ್ಟಾಗಿವೆ. ಹಾಗಾಗಿ ಸರ್ಕಾರ ಉಳಿಸಿಕೊಳ್ಳುವ ಮ್ಯಾಜಿಕ್ ನಂಬರ ೧೧೩ನ್ನು ಕ್ರಾಸ್ ಮಾಡಲು ಬೇಕಾದ ಎಂಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸವೇ ಹೈಕಮಾಂಡ್‌ಗೆ ಇಲ್ಲವಾಗಿದೆ.

ಈ ಸಂಭಾವ್ಯ ಸೋಲನ್ನು ಯಡ್ಯೂರಪ್ಪನವರ ತಲೆಗೆ ಕಟ್ಟುವ ಸಲುವಾಗಿಯೇ ಉಪಚುನಾವಣೆ ಇನ್ನೇನು ಒಂದು ತಿಂಗಳಿರುವಾಗ `ನಿಮಗೆ ಫುಲ್‌ಫ್ರೀಡಂ ಕೊಟ್ಟಿದ್ದೇವೆ’ ಎಂಬ ವ್ಯೂಹ ಹೆಣೆಯಲಾಗಿದೆ. ಒಂದೊಮ್ಮೆ ಗೆದ್ದರೆ, ಯಥಾಪ್ರಕಾರ ಈಗಿನಂತೆಯೇ ನಿಧಾನಕ್ಕೆ ಯಡ್ಯೂರಪ್ಪರನ್ನು ಮೂಲೆಗುಂಪು ಮಾಡೋದು, ಸೋತರೆ `ನಿಮಗೇ ಫುಲ್‌ಫ್ರೀಡಂ ಕೊಟ್ಟರೂ ಸರ್ಕಾರ ಉಳಿಸಿಕೊಳ್ಳುವಷ್ಟು ಎಂಎಲ್‌ಎಗಳನ್ನು ಗೆಲ್ಲಿಸಿಕೊಳ್ಳುವುದಕ್ಕೆ ನಿಮ್ಮಿಂದ ಆಗಲಿಲ್ಲ. ಇನ್ನು ಜಾಗ ಖಾಲಿ ಮಾಡಿ’ ಅಂತ ಅವರನ್ನು ಪಕ್ಷದೊಳಗೆ ಪಕ್ಕಕ್ಕೆ ಸರಿಸೋದು ಇದರ ಹಿಂದಿರುವ ಅಜೆಂಡಾ. ಇದು ಯಡ್ಯೂರಪ್ಪನವರಿಗೆ ಅರ್ಥವಾಗದ ಸಂಗತಿಯೇನಲ್ಲ.

ಈ ವ್ಯೂಹದಿಂದ ತನ್ನನ್ನು ಬಚಾವು ಮಾಡಿಕೊಳ್ಳುವ ಸಲುವಾಗಿಯೇ, ಸಭೆ ನಡೆದ ಒಂದು ವಾರದ ನಂತರ ಆ ವೀಡಿಯೊ ವೈರಲ್ ಆಗುವಂತೆ ಯಡ್ಯೂರಪ್ಪನವರೇ ವ್ಯವಸ್ಥೆ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು. ನನಗೆ ಪಕ್ಷದೊಳಗೆ ಹೆಜ್ಜೆಹೆಜ್ಜೆಗು ಸ್ಥಳೀಯ ನಾಯಕರಿಂದ ಮತ್ತು ರಾಷ್ಟ್ರೀಯ ಲೀಡರುಗಳಿಂದ ವಂಚನೆಯಾಗುತ್ತಲೇ ಬಂದಿದೆ ಅನ್ನೋದನ್ನು ಜನರಿಗೆ ತನ್ನ ಬಾಯಿಂದಲೇ ತಲುಪಿಸಿದರೆ, ಮುಂದಿನ ಉಪಚುನಾವಣೆಗಳಲ್ಲಿನ ಸೋಲಿನ ಬಲಿಪೀಠದಿಂದ ಎಸ್ಕೇಪ್ ಆಗಬಹುದು ಎನ್ನುವುದು ಅವರ ಲೆಕ್ಕಾಚಾರವಿದ್ದೀತು.

ಈ ಹಿಂದೆ ಜೆಡಿಎಸ್ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಅವರ ಮಗ ಶರಣಗೌಡನ ಜೊತೆ ಯಡ್ಯೂರಪ್ಪನವರು ನಡೆಸಿದ್ದ ಆಡಿಯೋ ಟೇಪನ್ನು ಸಿಎಂ ಆಗಿದ್ದ ಸ್ವತಃ ಕುಮಾರಸ್ವಾಮಿಯೇ ರಿಲೀಸ್ ಮಾಡಿದ್ದರು. ಆರಂಭದಲ್ಲಿ ಆ ದನಿ ನನ್ನದಲ್ಲ ಎಂದು ವಾದಿಸಿ, ಕಡೆಗೆ `ಧರ್ಮಸ್ಥಳ’ದ ಆಣೆಪ್ರಮಾಣಕ್ಕೆ ಬೆದರಿ ಒಪ್ಪಿಕೊಳ್ಳಬೇಕಾಗಿತ್ತು. ಹೀಗಿರುವಾಗ, ಅದೇ ಆಪರೇಷನ್ ಕಮಲವನ್ನು ಎಕ್ಸ್ಪೋಸ್ ಮಾಡಿದ ಈ ವೀಡಿಯೋವನ್ನು ಯಡ್ಯೂರಪ್ಪನವರು ಯಾವ ಮುಲಾಜಿಲ್ಲದೆ `ನನ್ನದೇ’ ಎಂದು ಒಪ್ಪಿಕೊಳ್ತಾರೆ ಅಂದ್ರೆ ಏನರ್ಥ. ವೀಡಿಯೊ ಹೊರಬಿದ್ದ ನಂತರ ಯಡ್ಯೂರಪ್ಪರನ್ನು ಸಂದರ್ಶನ ಮಾಡುತ್ತಿದ್ದ ಟೀವಿ ನಿರೂಪಕಿಯೊಬ್ಬರು `ನಿಮ್ಮದೆನ್ನಲಾದ ವೀಡಿಯೊ’ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಂತೆಯೇ, ಆಕೆಯ ಮಾತನ್ನು ಅರ್ಧಕ್ಕೇ ತಡೆದ ಯಡ್ಯೂರಪ್ಪನವರು `ನಿಮ್ಮದೆನ್ನಲಾದ ಅಲ್ಲ, ಅದು ನನ್ನದೇ’ ಎಂದು ಘಂಟಾಘೋಷವಾಗಿ ಕ್ಲೇಮ್ ಮಾಡಿಕೊಂಡದ್ದನ್ನು ಇನ್ನೇಗೆ ಅರ್ಥೈಸಿಕೊಳ್ಳಲು ಸಾಧ್ಯ….!? ಯಡ್ಯೂರಪ್ಪನವರ ಬಣವೇ ಇದನ್ನು ಹೊರಹಾಕಿರುವ ಸಾಧ್ಯತೆ ದಟ್ಟವಾಗಿರೋದ್ರಿಂದ ಬಿಜೆಪಿ ಹೈಕಮಾಂಡ್, ಆರೆಸ್ಸೆಸ್ ಕೂಡಾ ಕಟ್ಟುನಿಟ್ಟಿನ ಆಂತರಿಕ ತನಿಖೆಗೆ ಮುತುವರ್ಜಿ ವಹಿಸುತ್ತಿವೆ. ಬಹುಶಃ ಯಡ್ಯೂರಪ್ಪನವರ ಬಣಕ್ಕೂ ಇದನ್ನು ರಿಲೀಸ್ ಮಾಡುವ ಮುನ್ನ ಇದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗುತ್ತೆ ಅನ್ನೋ ಅಂದಾಜು ಇತ್ತೋ ಇಲ್ಲವೋ ಗೊತ್ತಿಲ್ಲ. ಈಗ ಎಲ್ಲವೂ ಕೈಮೀರಿ ಹೋಗಿರುವುದು ಮಾತ್ರ ಸತ್ಯ.

ಅಸಲೀ ಕುಚೋದ್ಯ ಏನು ಗೊತ್ತಾ, ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಅನ್ನೋ ಗಾದೆಯ ಮಾತಿನಂತೆ ಬಿಜೆಪಿಯ ಈ ಆಂತರಿಕ ಕಲಹದಿಂದ ಬೀದಿಗೆ ಬೀಳುತ್ತಿರೋದು `ಅನರ್ಹ’ ಶಾಸಕರು. ಸುಪ್ರೀಂ ಕೋರ್ಟ್ ಯಡ್ಯೂರಪ್ಪನವರ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿರೋದ್ರಿಂದ ತೀರ್ಪು ಅವರ ವಿರುದ್ಧವೇ ಬರಬಹುದು ಅಥವಾ ವಿಚಾರಣೆ ಮುಂದಕ್ಕೂ ಜಿಗಿಯಬಹುದು. ಇವೆರಡರಲ್ಲಿ ಯಾವುದಾದರು ಡಿಸೆಂಬರ್ 5ರ ಉಪಚುನಾವಣೆಯ ಮಟ್ಟಿಗೆ ಇವರ ಆತಂಕ ದುಪ್ಪಟ್ಟಾಗೋದ್ರಲ್ಲಿ ಡೌಟೇ ಇಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...

ಪ್ರಶ್ನೆಗಳಿಗೆ ಉತ್ತರಿಸದ ಸಚಿವರು: ಸದನ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್

ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ವಿಧಾನಸಭೆಯಲ್ಲಿ...

‘ಆಪರೇಷನ್ ಸಿಂಧೂರ್’ ಕುರಿತ ಪೋಸ್ಟ್: ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟ ಹರಿಯಾಣ ಸರ್ಕಾರ

'ಆಪರೇಷನ್ ಸಿಂಧೂರ್' ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧದ ಈ ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಹರಿಯಾಣ...

ಎಲ್‌ಪಿಜಿ ಬಿಕ್ಕಟ್ಟಿನ ನಡುವೆ ಆಧಾರ್ ಮೂಲಕ ‘ಇ-ಕೆವೈಸಿ’ ಮಾಡಿಸಿಕೊಳ್ಳುವಂತೆ ಸರ್ಕಾರದ ಸೂಚನೆ

ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಸುವ 330 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ತಮ್ಮ ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (ಇ-ಕೆವೈಸಿ) ಅನ್ನು ಬಯೋಮೆಟ್ರಿಕ್ ಆಧಾರ್ ದೃಢೀಕರಣ ವ್ಯವಸ್ಥೆಯ ಮೂಲಕ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ...

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದ ಚು. ಆಯೋಗ

ನಿರೀಕ್ಷೆಯಂತೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ತನ್ನ ಆಟ ಶುರು ಮಾಡಿದೆ. ರಾಜ್ಯದ ಸರ್ಕಾದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸಿದೆ. ಪಶ್ಚಿಮ ಬಂಗಾಳ...

ಉತ್ತರ ಪ್ರದೇಶ| ಪಾಕ್ ಸಂಪರ್ಕದ ಆರೋಪ; ಮಹಿಳೆ ಸೇರಿದಂತೆ 6 ಜನರ ಬಂಧನ

ಪಾಕಿಸ್ತಾನದ ದೇಶದ ಕೋಡ್‌ನಲ್ಲಿ ನೋಂದಾಯಿಸಲಾದ ವಿದೇಶಿ ಸಂಖ್ಯೆಯೊಂದಿಗೆ ಭದ್ರತಾ ಕಚೇರಿಗಳು, ತನಿಖಾ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದ ಮೇಲೆ ಗಾಜಿಯಾಬಾದ್‌ನಲ್ಲಿ ಮಹಿಳೆ...

ವೈರಮುತ್ತುಗೆ ಜ್ಞಾನಪೀಠ ಪ್ರಶಸ್ತಿ : ಚಿನ್ಮಯಿ ಶ್ರೀಪಾದ, ಟಿಎಂ ಕೃಷ್ಣ ಸೇರಿ ಹಲವರಿಂದ ಟೀಕೆ

ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ತಮಿಳು ಸಾಹಿತಿ ವೈರಮುತ್ತು ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  ಸಾಹಿತ್ಯ ಕ್ಷೇತ್ರದಲ್ಲಿನ ಅವರ ಕೊಡುಗೆಯನ್ನು ಪರಿಗಣಿಸಿ...