ಐದು ಗಂಟೆ ಸುಮಾರಿಗೆ ನಾನು ಅವರ ಮನೆಗೆ ಹೋದೆ. ಆಗ ಅವರು ಏನಪ್ಪ ಮುಖ್ಯಮಂತ್ರಿಯಾಗೊ ಅವಕಾಶ ಇದೆ ಬೆಂಬಲಿಸ್ತಿಯಾ ಎಂದರು. ನನ್ನ ತಂದೆ ಬೂಕನಕೆರೆಲೀ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆ.ಆರ್.ಪೇಟೆ ತಾಲೂಕು ಅಭಿವೃದ್ಧಿಯಾಗಿಲ್ಲ ಎಂದು ಸ್ವಪ್ನದಲ್ಲಿ ಬಂದು ಕಾಡುತ್ತಿದ್ದಾರೆ. ನೀನು ಕೈ ಜೋಡಿಸಿದ್ರೆ ಕೆ.ಆರ್.ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯ ಎಂದ್ರು.
ಅದಕ್ಕೆ ನಾನು ತಾಲೂಕಿನ ಅಭಿವೃದ್ದಿಗಾಗಿ 7೦೦ ಕೋಟಿ ಅನುದಾನ ಕೇಳಿದ್ದೆ. ಆದ್ರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡ್ತಿನಿ ಅಂದ್ರು. ಅದ್ರಂತೆ ನಮ್ಮ ತಾಲೂಕಿನ ಅಭಿವೃದ್ದಿಗೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಹಾಗಾಗಿ ನಾನು ರಾಜಿನಾಮೆ ಕೊಟ್ಟೆ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದು ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ವಿಡಿಯೋ ನೋಡಿ
ಆ ಮೂಲಕ ರಾಜೀನಾಮೆಗೂ ಮೊದಲು ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿದ್ದಲ್ಲದೇ, ಆಪರೇಷನ್ ಕಮಲ ಮಾಡಿದ್ದು ಬಿ.ಎಸ್.ಯಡಿಯೂರಪ್ಪನವರೆ ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಸಾರಿದ್ದಾರೆ.
ಮಂಡ್ಯದ ಬೂಕನಕೆರೆಯಲ್ಲಿ ಮಾತನಾಡಿರುವ ಅನರ್ಹಶಾಸಕ ನಾರಾಯಣಗೌಡ, ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ರಾಜಿನಾಮೆ ನೀಡಿದೆವು. ಹಾಗಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ 1 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನನ್ನ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿ ದ್ರೋಹ ಬಗೆದರು ಎಂದು ಹೇಳಿದ್ದಾರೆ.
ಇನ್ನು ಮುಂದುವರೆದು ಎಚ್.ಡಿ ದೇವೇಗೌಡರು ಅವರ ಮನೆ ಚಪ್ಪಲಿ ಬಿಡುವಲ್ಲಿ ನಮ್ಮನ್ನು ನಿಲ್ಲಿಸುತ್ತಿದ್ದಾರೆ. ಈಗ ಸ್ವಾಭಿಮಾನಿಗಳಾಗಿದ್ದೇವೆ ಎಂದು ತಮ್ಮ ರಾಜಿನಾಮೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ಅನರ್ಹ ಶಾಸಕರು ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರಿಂದ ಬರುತ್ತಿರುವ ಗೊಂದಲದ ಹೇಳಿಕೆಗಳಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎಂಬ ಗೊಂದಲವೂ ಜನರಲ್ಲಿ ಮೂಡತೊಡಗಿದೆ.
ಹಿರೇಕೆರೂರಿನಲ್ಲಿ ಮಾತನಾಡಿರುವ ಅನರ್ಹ ಶಾಸಕ ಬಿ.ಸಿ.ಪಾಟೀಲ್, ಕಾಂಗ್ರೆಸ್ ಜೆಡಿಎಸ್ ನಾಯಕರ ವಿರುದ್ಧ ಗರಂ ಆಗಿದ್ದಾರೆ. ಯಡಿಯೂರಪ್ಪಗೂ ನಮ್ಮ ರಾಜಿನಾಮೆಗೂ ಸಂಬಂಧವಿಲ್ಲ ಎಂದು ಮಾತು ಬದಲಿಸಿದ್ದಾರೆ. ಈವರೆಗೆ ಬೇರೆ ರೀತಿಯಲ್ಲೇ ಮಾತನಾಡುತ್ತಿದ್ದ ಅನರ್ಹ ಶಾಸಕರು ಇದೀಗ ರಾಗಬದಲಿಸಿದ್ದಾರೆ.
ನನಗೆ ಕಾಂಗ್ರೆಸ್ ನಲ್ಲಿ ಅನ್ಯಾಯವಾಗಿತ್ತು. ಹಾಗಾಗಿ ನಾನು ರಾಜಿನಾಮೆ ನೀಡಬೇಕಾಗಿ ಬಂತು. ಸಿದ್ದರಾಮಯ್ಯ ಮಾತುಗಳು ಮತ್ತು ಜೆಡಿಎಸ್, ಕಾಂಗ್ರೆಸ್ ಮುಖಂಡರ ನಡೆಯೂ ಕೂಡ ನಾವು ರಾಜಿನಾಮೆ ನೀಡಲು ಕಾರಣ ಎಂದು ಸಮಜಾಯಿಸಿ ಕೊಟ್ಟಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರಿಗೆ ಗ್ರೌಂಡು ರಿಯಾಲಿಟಿ ಗೊತ್ತಿಲ್ಲ. ನಮ್ಮನ್ನು ಪಕ್ಷದಲ್ಲಿ ಕೂಲಿಗಳ ರೀತಿ ನಡೆಸಿಕೊಂಡರು. ಇದರಿಂದ ಬೇಸತ್ತು ರಾಜಿನಾಮೆ ನೀಡಬೇಕಾಯಿತು. ಕಾಂಗ್ರೆಸ್ ನಲ್ಲಿ ಲಿಂಗಾಯತರನ್ನು ಕಡೆಗಣಿಸಲಾಯಿತು. ಹಿರೇಕೆರೂರು ಕ್ಷೇತ್ರದಲ್ಲಿ ನಾನೊಬ್ಬನೇ ಶಾಸಕ. ನನಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದೆ ದ್ರೋಹ ಬಗೆದರು ಎಂದು ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ದಾಹ. ಅವರು ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ. ಅದಕ್ಕಾಗಿ ಬಣ್ಣ ಬದಲಿಸುತ್ತಾರೆ. ಅವರೊಂದು ರೀತಿ ಊಸರವಳ್ಳಿ ಇದ್ದಂತೆ. ಅವರು ಜೋಕರ್ ಇದ್ದಂತೆ. ಆಟ ಯಾರ ಕಡೆ ಇರುತ್ತದೋ ಅವರ ಕಡೆ ಹೋಗುತ್ತಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಸುಧಾಕರ್ ಕೂಡ ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.