Homeಅಂಕಣಗಳುಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

ಸಮಾಜ ಬದಲಾವಣೆಯಲ್ಲಿ ಯುವಜನರ ಪಾತ್ರ

- Advertisement -
ನಮ್ಮ  ಸಮಾಜ ನಿಂತ ನೀರಿನಂತೆ ಗಬ್ಬು ಹೊಡೆಯುತ್ತಿದೆ. ವಿಷಪೂರಿತವಾಗಿದೆ. ಅನೇಕ ಸಾಮಾಜಿಕ ಕಾಯಿಲೆಗಳ ಆವಾಸಸ್ಥಾನವಾಗಿದೆ. ಸ್ವಾತಂತ್ರ್ಯ ಬಂದು 70ವರ್ಷಗಳೇ ಆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಕೆಲವೇ ಶ್ರೀಮಂತರು ಸಹಸ್ರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಪಕ್ಷ ರಾಜಕೀಯ ಹೊಲಸಾಗಿದೆ. ವಿದ್ಯೆ ಮಾರಾಟದ ವಸ್ತುವಾಗಿದೆ. ಶಾಸಕರು, ಮಂತ್ರಿಗಳಿಂದ ಮೊದಲುಗೊಂಡು ಪಂಚಾಯ್ತಿ ಸದಸ್ಯರವರೆಗೆ ದುರ್ಲಾಭಕ್ಕೋಸ್ಕರ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಮಠಾಧಿಪತಿಗಳೂ ಈ ಸ್ಪರ್ಧೆಯಲ್ಲಿದ್ದಾರೆ.
ಇದನ್ನೆಲ್ಲ ಮೂಕಪ್ರೇಕ್ಷಕರಂತೆ ನಮ್ಮ ಯುವಕರು ನೋಡಿಕೊಂಡು ಕುಳಿತಿದ್ದಾರೆ. ನಮ್ಮದು ಪ್ರಜಾರಾಜ್ಯ, ಪ್ರಜೆಗಳೇ ನಮ್ಮ ದೇಶದ ಪ್ರಭುಗಳು ಎಂದು ನಮ್ಮ ರಾಜ್ಯಾಂಗ ಹೇಳುತ್ತದೆ. ಆದರೆ ನಾವು ಮಾತ್ರ ಆಡಳಿತಕ್ಕೂ ನಮಗೂ ಸಂಬಂಧವಿಲ್ಲವೇನೋ ಎಂಬಂತೆ ಹೊಣೆಗೇಡಿಗಳಾಗಿ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಮನೋಭಾವ ಯುವಕರಿಗೆ ತರವಲ್ಲ. ಗಾಢನಿದ್ರೆಯಲ್ಲಿರುವ ಯುವಕರು ಮೈಕೊಡವಿಕೊಂಡು ಏಳಬೇಕು. ದೇಶದ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಬಗೆಹರಿಸಬೇಕು. ಅದಕ್ಕೆ ಮೊದಲು ನಾವು ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಯುವಕರು ನಮ್ಮ ಆಶಾಕಿರಣ, ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳಿವು :-
1. ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಿದೆ.
2. ನಮ್ಮ ಮೂಲಭೂತ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಆಡಳಿತದ ದುರ್ಬಳಕೆ ಇವುಗಳಿಗೆ ಪರಿಹಾರ ಕಂಡುಹಿಡಿದುಕೊಳ್ಳಬೇಕಿದೆ.
3. ಲೋಕಸಭೆ, ಶಾಸನಸಭೆಗಳು ಜನರ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸುವುದುದನ್ನು ಬಿಟ್ಟು ಜಗಳ, ಗದ್ದಲ, ವಾಕ್‍ಔಟ್, ದೊಂಬಿ, ಗಲಾಟೆ ಇವುಗಳಲ್ಲೇ ಕಾಲಕಳೆದು, ಚರ್ಚೆಯಿಲ್ಲದೆ ಮಸೂದೆಗಳು ಪಾಸಾಗುತ್ತಿವೆ.
4. ಹಣ, ಜಾತಿ, ಧರ್ಮ, ತೋಳ್ಬಲ ಇರುವವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ.
ಇಂತಹ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಮೊದಲು ಈ ಸಮಸ್ಯೆಗಳನ್ನು ಬಗೆ ಹರಿಸಲು ಯುವಕರು ತೊಡಗಬೇಕು.
ನಮ್ಮ ಸಮಾಜವನ್ನು ನಾವು ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಕಟ್ಟಬೇಕು. ಯುವಕರಿಗೆ ಕೋಪತಾಪಗಳಿರಬಾರದು. ಹೋರಾಟ ಮಾಡುವಾಗ ಯುವಕರು ಥರ್ಮಾಮೀಟರ್‍ನಂತೆ ಇರಬೇಕು. ಥರ್ಮಾಮೀಟರ್‍ಗೆ ಜ್ವರ ಬರಬಾರದು. ಅದಕ್ಕೆ ಜ್ವರ ಬಂದರೆ ಅದು ಇತರರ ಜ್ವರವನ್ನು ಕಂಡುಹಿಡಿಯುವುದಾದರೂ ಹೇಗೆ? ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ಯುದ್ಧಸ್ಯವಿಗತ ಜ್ವರ: ಎಂದು ತಲೆ ಬಿಸಿಮಾಡಿಕೊಳ್ಳದೆ, ಶಾಂತಿಚಿತ್ತದಿಂದ ಯುದ್ಧದಲ್ಲಿ ತೊಡಗಿಕೊ ಎಂಬುದು ಇದರರ್ಥ.
ನಾವು ಹೋರಾಡಬೇಕಾಗಿರುವುದು ಸರ್ವರಿಗೂ ಸುಖ ಸಂತೋಷ ಸಿಗಲೆಂದು. ಅಂದರೆ ಜನರಲ್ಲಿ ಹಸಿವು, ಬಡತನ, ಅಜ್ಞಾನ, ಅಸಮಾನತೆ ಇವು ಇರಬಾರದು. ಅಹಿಂಸಾ ಹೋರಾಟದ ಮೂಲಕ ಈ ಬದಲಾವಣೆಯನ್ನು ಸಮಾಜದಲ್ಲಿ ತರಬೇಕು. ಈಗ ಯಾವ ರಾಜಕೀಯ ಪಕ್ಷಕ್ಕೂ ಸಿದ್ಧಾಂತಗಳೇ ಇಲ್ಲ. ಇಂಥಾ ಸನ್ನಿವೇಶದ ದುರ್ಲಾಭ ಮಾಡಿಕೊಳ್ಳಲು ಭಾರತೀಯ ಜನತಾ ಪಕ್ಷ ‘ಹಿಂದೂರಾಷ್ಟ್ರ ನಿರ್ಮಾಣ’ ಎಂಬ ಡೋಂಗಿ ರಾಷ್ಟ್ರವಾದವೊಂದನ್ನು ಮುಂದೆ ತರುತ್ತಿದೆ. ಅದು ಅತ್ಯಂತ ಅಪಾಯಕಾರಿ. ಸಮಾಜದಲ್ಲಿ ಮೌಲ್ಯಗಳ ಅಧಃಪತನವೇ ಇಂದಿನ ನಮ್ಮ ಈ ಅಧೋಗತಿಗೆ ಕಾರಣ. ಮಾನವೀಯ ಮೌಲ್ಯಗಳಾದ ಸೋದರತ್ವ, ಸಮಾನತೆಗಳ ಆಧಾರದ ಮೇಲೆ ನಮ್ಮ ಸಮಾಜ ರೂಪಿತವಾಗಬೇಕು. ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬೆರೆಸಬಾರದು. ಆದರೆ ಈಗ ಕ್ರಿಮಿನಲ್‍ಗಳು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಆರಿಸಿ ಬರುತ್ತಿದ್ದಾರೆ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿಯಿಂದ 27, ಜನತಾದಳದಿಂದ 23, ಕಾಂಗ್ರೆಸ್ಸಿನಿಂದ 15 ಕ್ರಿಮಿನಲ್ ಹಿನ್ನೆಲೆಯವರು ಆರಿಸಿ ಬಂದಿದ್ದಾರೆ. ಮತದಾರರಿಗೆ ಇಂತಹವರನ್ನು ಆಯ್ಕೆ ಮಾಡಬೇಡಿ, ಇಂಥವರಿಗೆ ಮತ ಹಾಕಬೇಡಿ ಎಂದು ಗಟ್ಟಿದನಿಯಲ್ಲಿ ಹೇಳುವವರು ಬೇಕಾಗಿದ್ದಾರೆ.
ಯುವಕರ ಇತ್ತೀಚಿನ ಸಾಧನೆ ಕುರಿತು ಎರಡು ನಿದರ್ಶನಗಳನ್ನು ಕೊಡುತ್ತೇನೆ. ಅಸ್ಸಾಂನಲ್ಲಿ ವಿದ್ಯಾರ್ಥಿಗಳು ಸಂಘಟನೆ ಮಾಡಿಕೊಂಡರು. ಆಗ ಅಸ್ಸಾಂನಲ್ಲಿ ಅಧಿಕಾರಿಗಳಾಗಿದ್ದವರೆಲ್ಲ ಬಂಗಾಳಿಗಳು. ‘ಅಸ್ಸಾಂ ಅಸ್ಸಾಮಿಯರಿಗೆ’ ಎಂಬ ಚಳವಳಿ ಆರಂಭಿಸಿದರು. ಅಸ್ಸಾಂ ಗಣತಂತ್ರ ಪರಿಷತ್ ಎಂಬ ಸಂಸ್ಥೆ ಸ್ಥಾಪಿಸಿದರು. ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಲಾಠಿಚಾರ್ಜ್ ನಡೆದವು, ಅರೆಸ್ಟು, ಜೈಲುವಾಸಗಳಾದವು. ಆದರೆ ವಿದ್ಯಾರ್ಥಿ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರೆಸಿದರು. ಚಳುವಳಿಯ ನಾಯಕರು ಬಂದ್ ಘೋಷಣೆ ಮಾಡಿದರು. ಬಂದ್ ಯಶಸ್ವಿಯಾಯಿತು. ಪೊಲೀಸ್ ಕಫ್ರ್ಯೂ ಹಾಕಿದರು. ಜನರು ಯಾರೂ ಮನೆಬಿಟ್ಟು ಹೊರಬರಲೇ ಇಲ್ಲ. ಸರ್ಕಾರಿ ಕೆಲಸವೆಲ್ಲ ಸ್ಥಗಿತವಾಯಿತು. ಮುಂದೆ ವಿಧಾನಸಭೆಗೆ ಚುನಾವಣೆ ಘೋಷಣೆಯಾಯಿತು. ಚುನಾವಣೆ ನಡೆಸುವ ಅಧಿಕಾರಿಗಳನ್ನು ಇಂದಿರಾಗಾಂಧಿ ದೆಹಲಿಯಿಂದಲೇ ಕಳುಹಿಸಿದರು. ವಿದಾರ್ಥಿ ನಾಯಕರು ಚುನಾವಣೆಯನ್ನು ಬಹಿಷ್ಕರಿಸಲು ಅಸ್ಸಾಮಿಯರಿಗೆ ಕರೆಕೊಟ್ಟರು. ಚುನಾವಣೆ ನಡೆದೇ ನಡೆಯಿತು. ಶೇ.10ರಷ್ಟು ಮತದಾನ ಆಯಿತು. ಆದರೂ ಎಣಿಕೆ ನಡೆಯಿತು. ಕಾಂಗ್ರೆಸ್‍ಗೆ ಬಹುಮತ ಬಂತು ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತು. ಆದರೆ ಆ ಸರ್ಕಾರ ಬಹಳ ಕಾಲ ನಡೆಯಲಿಲ್ಲ. ಮತ್ತೆ ಚುನಾವಣೆ ಘೋಷಣೆಯಾಯಿತು. ‘ಅಸ್ಸಾಂ ಗಣ ಪರಿಷತ್’ ಪರವಾಗಿ ಅಭ್ಯರ್ಥಿಗಳನ್ನು ನಿಲ್ಲಿಸಲಾಯಿತು. ಅವರು ಬಹುಮತ ಗಳಿಸಿದರು. ಅಧಿಕಾರ ಅವರ ಕೈಗೆ ಹೋಯಿತು. ಯುವಕರು ಸಂಘಟಿತರಾಗಿ ಜನತೆಯ ಹಿತಕ್ಕಾಗಿ ದುಡಿದರೆ, ಅವರೂ ಅಧಿಕಾರಕ್ಕೆ ಬರಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.
ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್‍ರವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧವಾಗಿ ದೀರ್ಘಕಾಲದ ಚಳುವಳಿ ನಡೆಯಿತು. ಸರ್ಕಾರ ನಡೆಸುವವರು ಭ್ರಷ್ಟರಾಗಿರುವುದರಿಂದ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಘೋಷಿಸುತ್ತಾ ಒಂದು ಲಕ್ಷ ಸಹಿಮಾಡಿದ ಸಹಿಸಂಗ್ರಹದ ಕಡತಗಳನ್ನು ಲಾರಿಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಮೆರವಣಿಗೆ ಹೊರಟರು. ಜಯಪ್ರಕಾಶರ ತಲೆಗೇ ಪೊಲೀಸರು ಲಾಠಿಯಿಂದ ಹೊಡೆದರು. ವಿದ್ಯಾರ್ಥಿಗಳ ದಸ್ತಗಿರಿ ಆಯಿತು. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಸೋತರು.
ಯುವಕರು ಮನಸ್ಸು ಮಾಡಿದರೆ ಭ್ರಷ್ಟಾಚಾರ ತಪ್ಪಿಸಬಹುದು. ಆಡಳಿತ ನಡೆಸುವ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬಹುದು ಎಂಬುದಕ್ಕೆ ಯುವಕರ ಈ ಎರಡು ಹೋರಾಟಗಳು ಉದಾಹರಣೆ.
ಸಮಾಜ ಪೂರ್ತಿ ಕೆಟ್ಟುಹೋಗಿದೆ. ಸರ್ಕಾರ ನಡೆಸುವವರು ಭ್ರಷ್ಟರಾಗಿದ್ದಾರೆ, ಸರ್ಕಾರಿ ಅಧಿಕಾರಿಗಳು ಲಂಚಕೋರರು; ಇವನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತಿದ್ದಾರೆ ಯುವಜನತೆ. ಈ ಮನೋಭಾವ ತ್ಯಜಿಸಿ ಕ್ರಾಂತಿಯನ್ನು ತರಬೇಕೆಂದು ಯುವಕರು ಮನಸ್ಸು ಮಾಡಬೇಕು. ಕ್ರಾಂತಿ ಎಂದರೆ ರಕ್ತಕ್ರಾಂತಿ ಎಂದು ಯುವಕರು ಭಾವಿಸುತ್ತಾರೆ. ಕ್ರಾಂತಿ ಎಂದರೆ ಸಮಾಜದ ಸಂಪೂರ್ಣ ಬದಲಾವಣೆ. ಈ ಕ್ರಾಂತಿಯನ್ನು ಯುವಕರು ಜನರ ತಲೆಯಲ್ಲಿ ಕ್ರಾಂತಿಯ ಬೀಜಗಳನ್ನು ಬಿತ್ತುವ ಮೂಲಕ ಸಾಧಿಸಬೇಕು. ಕ್ರಾಂತಿಯ ಬೀಜ ಎಲ್ಲರ ತಲೆಯಲ್ಲಿ ಸ್ಫೋಟವಾಗಬೇಕು. ಇದನ್ನು ವಿಚಾರಕ್ರಾಂತಿ ಎಂದು ಹೇಳುತ್ತಾರೆ. ಅಂತಹ ವಿಚಾರಕ್ರಾಂತಿ ಯುವಕರ ಮನಸ್ಸಿನಲ್ಲಿ ಮೂಡಬೇಕು. ಯುವಕರು ಕ್ರಾಂತಿವಾಹಕರಾಗಿ ಜನಜಾಗೃತಿಯ ಕೆಲಸದಲ್ಲಿ ತೊಡಗಿಸಿಕೊಂಡಲ್ಲಿ ಜನಜಾಗೃತಿಯ ಮೂಲಕ ಸಾಮಾಜಿಕ ಕ್ರಾಂತಿ ಸಾಧಿಸಬಹುದು; ಹೊಸ ಮೌಲ್ಯಗಳಿರುವ ನವಸಮಾಜವನ್ನು ಸೃಷ್ಟಿ ಮಾಡಬಹುದು.
                             – ಹೆಚ್.ಎಸ್.ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...