Homeಸಾಮಾಜಿಕಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

ಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

- Advertisement -
- Advertisement -

ಶಿವಮೊಗ್ಗದ ಆಯನೂರು ಹೋಬಳಿಗೆ ಸೇರುವ ವೀರಣ್ಣನ ಬೆನವಳ್ಳಿ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿಗೆ ಮೊನ್ನೆ ಗತಿಸಿಹೋದ ಶನಿವಾರ ಎಂದಿನಂತಿರಲಿಲ್ಲ. ಆಸರೆ ಕೊಡಬೇಕಿದ್ದ ಸರ್ಕಾರವೇ ತಮ್ಮ ಬದುಕನ್ನು ಬೀದಿಗೆ ತಂದು ಎಸೆಯುತ್ತದೆ ಎಂಬ ಯಾವ ಅನುಮಾನವೂ ಇರದೆ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಪೊಲೀಸ್ ಸರ್ಪಗಾವಲು, ಜೆಸಿಬಿ ಯಂತ್ರಗಳ ಸಮೇತ ಅವರ ಮೇಲೆ ದಾಳಿ ಮಾಡಿದ ಜಿಲ್ಲಾಡಳಿತ ಅವರ ಟೆಂಟುಗಳಂತಹ ಮನೆಗಳನ್ನು ಕಿತ್ತುಹಾಕಿ, ಹೆಂಗಸರು ಮಕ್ಕಳನ್ನು ಎಳೆದಾಡಿ, ಕಸ ತುಂಬಿದಂತೆ ಅವರು ಮತ್ತು ಅವರ ಸರಂಜಾಮುಗಳನ್ನೆಲ್ಲ ತುಂಬಿಕೊಂಡು ಬೇರೊಂದು ಜಾಗದಲ್ಲಿ ಸುರಿದುಹೋಗಿದೆ! ತನ್ನದೇ ನಾಗರಿಕರ ಜೊತೆ ನಮ್ಮ ಸರ್ಕಾರಗಳು ವರ್ತಿಸುವ ಪರಿ ಇದು. ಅದೂ, ಒಂದು ಅಲೆಮಾರಿ ಸಮುದಾಯದ ಮೇಲೆ!!
ಕಳೆದ ಹತ್ತು ವರ್ಷಗಳಿಂದ ಬೆನವಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್78ರಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಟೆಂಟು ನಿರ್ಮಿಸಿಕೊಂಡು ನೆಲೆಸಿದ್ದರು. ಅದು ಸರ್ಕಾರಿ ಸ್ವಾಮ್ಯದ ಜಾಗ. ಈ ನಿವೇಶನರಹಿತರಿಗೆ ಆಸರೆಯಾಗಲು ಹಿಂದಿನ ಸಿಎಂ ಸಿದ್ದರಾಮಯ್ಯನವರ ಸರ್ಕಾರ 2016ರಲ್ಲಿ ಆ 4 ಎಕರೆ ಭೂಮಿಯನ್ನು ಮಂಜೂರು ಮಾಡಿ ಕಾಯ್ದಿರಿಸಿತ್ತು. ಆದರೆ ನಿವೇಶನ ಹಂಚಿಕೆಗೆ ಜಿಲ್ಲಾಡಳಿತ ಇದುವರೆಗೆ ಮುಂದಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅದ್ಯಾವ ಪ್ರಭಾವಿ ಕೈಗಳು ಕೆಲಸ ಮಾಡಿದವೋ ಗೊತ್ತಿಲ್ಲ, ಜುಲೈ 28ರ ಶನಿವಾರ ಸಂಜೆ ಹೊತ್ತಿಗೆ ಆವೇಶ ಮೈದಳೆದ ಜಿಲ್ಲಾಡಳಿತ ಭದ್ರಾವತಿ ಎಂಪಿಎಂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಅವರ ಬದುಕನ್ನೇ ಧ್ವಂಸ ಮಾಡಿದೆ.
ಈ ಸರ್ಕಾರಿ ಜನರ ದೌರ್ಜನ್ಯಕ್ಕೆ ಪ್ರತಿರೋಧ ತೋರಲು ಮುಂದಾದಾಗ ಪೊಲೀಸರು ಮಕ್ಕಳು, ವೃದ್ಧರು, ಗರ್ಭಿಣಿಯರು, ಹೆಂಗಸು-ಗಂಡಸರನ್ನೆದೆ ಪ್ರಾಣಿಗಳಿಗಿಂತ ಕಡೆಯಾಗಿ ಎಳೆದಾಡಿದ್ದಾರೆ. ಕೆಲ ಮಹಿಳೆಯರ ಸೀರೆ ಎಳೆದು ಅರೆಬೆತ್ತಲೆ ಮಾಡಲು ಮುಂದಾಗಿದ್ದರು. ಇದನ್ನೆಲ್ಲಾ ವೀಡಿಯೋ ಮಾಡಿಕೊಳ್ಳುತ್ತಿದ್ದ ಹಕ್ಕಿಪಿಕ್ಕಿಯವರ ಮೊಬೈಲ್‍ಗಳನ್ನು ಕಿತ್ತು ಜಜ್ಜಿಹಾಕಿದ್ದಾರೆ. ತಮ್ಮ ದೌರ್ಜನ್ಯದ ಯಾವ ಸಾಕ್ಷ್ಯವೂ ಉಳಿಯದಂತೆ ಜಿಲ್ಲಾಡಳಿತ ದಬ್ಬಾಳಿಕೆ ನಡೆಸುತ್ತಿದ್ದರೆ, ಅತ್ತ ಜೆಸಿಬಿ ಯಂತ್ರಗಳು ಕ್ಷಣಾರ್ಧದಲ್ಲಿ ಅವರ ತಲೆಮೇಲಿನ ಸೂರುಗಳನ್ನು ನೆಲಸಮ ಮಾಡಿ ಮುಗಿಸಿದ್ದವು.
ನಂತರ ಟ್ರ್ಯಾಕ್ಟರ್‍ಗಳಲ್ಲಿ ಅವರನ್ನು ತುಂಬಿತಂದು, ಶ್ರೀರಾಂಪುರದ ಬಳಿ ಇರುವ ಖಾಲಿ ಜಾಗಕ್ಕೆ ಬಿಸಾಕಿದ್ದಾರೆ. ಟೆಂಟ್ ಬಿಟ್ಟು ಕೆಲಸಕ್ಕೆ ಹೋಗಿದ್ದವರು ಪುನಃ ಬಂದು ನೋಡಿದರೆ ಟೆಂಟ್‍ಗಳೇ ಮಾಯವಾಗಿದ್ದವು. ಅಧಿಕಾರಿಗಳನ್ನು ವಿಚಾರಿಸಿದರೆ ಅಲ್ಲೆಲ್ಲೋ ಹಾಕಿದ್ದೇವೆ ಹೋಗಿ ಎಂಬ ಉಡಾಫೆಯ ಉತ್ತರ ಕೊಟ್ಟಿದ್ದರು.
ಎಸೆದುಹೋದ ಸ್ಥಳದಲ್ಲಿ ಕನಿಷ್ಠ ಪುನರ್ವಸತಿ ಸೌಲಭ್ಯವನ್ನೂ ಜಿಲ್ಲಾಡಳಿತ ಕಲ್ಪಿಸಿಲ್ಲ. ಟೆಂಟ್ ನಿರ್ಮಿಸಿಕೊಳ್ಳಲು ಇಟ್ಟುಕೊಂಡಿದ್ದ ಟಾರ್ಪಲ್‍ಗಳು ಪೊಲೀಸರ ದಾಳಿಗೆ ಹರಿದು ಚಿಂದಿಯಾಗಿವೆ. ಪಾತ್ರೆಪಗಡಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿದ್ದವು. ಹಾಲು ಕುಡಿವ ಕಂದಮ್ಮಗಳು, ಮಕ್ಕಳು ಹಸಿವು ತಾಳದೆ ಗೋಳಿಡುತ್ತಿರುವ ದೃಶ್ಯ ಸರ್ಕಾರಿ ಮನಸ್ಸುಗಳನ್ನು ಕಿಂಚಿತ್ತೂ ಕದಡಿದಂತೆ ಕಾಣಲಿಲ್ಲ.
ಈ ಹಕ್ಕಿಪಿಕ್ಕಿಗಳಿಗೆ ತಕ್ಷಣದಲ್ಲಿ ಯಾವುದೇ ಕಾನೂನಾತ್ಮಕವಾದ ನೆರವು ಸಿಗದಂತೆ ನೋಡಿಕೊಳ್ಳಲು ರಜಾದಿನದಂದೇ ಒಕ್ಕಲೆಬ್ಬಿಸುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ಅಧಿಕಾರಿಗಳು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇನ್ನು ಅಂತವರಿಂದ ಮನುಷ್ಯತ್ವವನ್ನು ನಿರೀಕ್ಷಿಸುವುದೇ ಅಪರಾಧ!
ಸರ್ಕಾರವೇ ಮಂಜೂರು ಮಾಡಿದ್ದ ಭೂಮಿಯಲ್ಲಿ ವಾಸವಿದ್ದ ಹಕ್ಕಿಪಿಕ್ಕಿಯವರನ್ನು ಒಕ್ಕಲೆಬ್ಬಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಶೀಲಿಸಿ ಸರ್ವೆ ನಂಬರ್ 78ರಲ್ಲಿ ವಾಸವಿದ್ದ ಹಕ್ಕಿಪಿಕ್ಕಿ ಸಮುದಾಯವರನ್ನು ಸ್ಥಳಾಂತರಿಸುವಂತೆ ಆದೇಶ ನೀಡಿದೆ. ಆದ್ದರಿಂದಾಗಿ ಒಕ್ಕಲೆಬ್ಬಿಸುತ್ತಿದ್ದೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.
ಆದರೆ ಅದೇ ಕಾನೂನಿನ ಪ್ರಕಾರ ಹೀಗೆ ಒಕ್ಕಲೆಬ್ಬಿಸುವ ಮುನ್ನ ವಾಸವಿದ್ದವರಿಗೆ ತಿಳಿವಳಿಕೆ ಪತ್ರ ನೀಡಬೇಕು, ತಾತ್ಕಾಲಿಕವಾಗಿಯಾದರೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಜಿಲ್ಲಾಡಳಿತಕ್ಕೆ ಕಾನೂನಿನ ಆ ಅಧ್ಯಾಯಗಳು ಬೇಡವಾಗಿದ್ದವು. ಅಲೆಮಾರಿ ಬದುಕುಗಳನ್ನು ಒಕ್ಕಲೆಬ್ಬಿಸುವ ಒಕ್ಕಣೆಯಷ್ಟೇ ಅವರಿಗೆ ಸಾಕಾಗಿತ್ತು!
ಹಕ್ಕಿಪಿಕ್ಕಿ ಜನರ ವಸತಿಗಾಗಿ ಮೀಸಲಿಟ್ಟಿದ್ದ 4 ಎಕರೆ ಭೂಮಿಯಲ್ಲಿ ಎಂಪಿಎಂ ಕಾರ್ಖಾನೆಯ ನೆಡುತೋಪು ಇರುವ ಕಾರಣ ಈವರೆಗೂ ನಿವೇಶನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಈ ಹಿಂದೆಯೂ ಇಲ್ಲಿರುವ ಮರಗಳು ಕಟಾವು ಆದ ನಂತರ ಆಯನೂರು ಪಂಚಾಯಿತಿ ನಿವೇಶನಗಳನ್ನು ನಿರ್ಮಿಸಿ, ಅರ್ಹ ಹಕ್ಕಿಪಿಕ್ಕಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತೆ, ಆಗ ನೀವು ಬಂದು ನೆಲೆಸಬಹುದು ಎಂದು ಇದೇ ಅಧಿಕಾರಿಗಳು ಆಶ್ವಾಸನೆಯನ್ನು ಕೊಟ್ಟಿದ್ದರು. ಇದಕ್ಕೆ ಒಪ್ಪಿದ ಹಕ್ಕಿಪಿಕ್ಕಿಗಳು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದ್ದರು. ಆದರೆ ಜಿಲ್ಲಾಡಳಿತ ಕೊಟ್ಟ ಮಾತು ಉಳಿಸಿಕೊಳ್ಳುವ ಯಾವ ಲಕ್ಷಣವನ್ನೂ ತೋರದಿದ್ದಾಗ, ಹಾಗೆ ಹೋಗಿದ್ದವರೆಲ್ಲ ವಾಪಾಸು ಬಂದು ಆ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಅವರಿಗೆ ಕನಿಷ್ಟ ಮಟ್ಟದ ಮೂಲಸೌಕರ್ಯಗಳೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿದ್ದು ಸರ್ಕಾರದ ಕ್ರೌರ್ಯವೆನ್ನದೇ ಇರಲಾಗದು.
ಇದನ್ನು ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸದಸ್ಯರು ಈ ಸಮುದಾಯದವರೊಂದಿಗೆ ಜುಲೈ 30ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅವರ ಕಚೇರಿಗೆ ಬಂದು ಸುಮಾರು ಎರಡು ಗಂಟೆ ಧರಣಿ ಕೂತರು ಯಾವೊಬ್ಬ ಅಧಿಕಾರಿಯೂ ಇವರನ್ನು ಕ್ಯಾರೇ ಅನ್ನಲಿಲ್ಲ. ಕೊನೆಗೆ ಡಿಸಿ ಸಾಹೇಬರ ಸಹಾಯಕ ಅಧಿಕಾರಿಯೊಬ್ಬ ಬಂದು ಕಾಟಾಚಾರಕ್ಕೆ ಮನವಿ ಸ್ವೀಕರಿಸಲು ಮುಂದಾಗಿದ್ದ. ಜಿಲ್ಲಾಧಿಕಾರಿಗಳೇ ಬರಲಿ ಅಂತ ಅವರೆಲ್ಲ ಪಟ್ಟು ಹಿಡಿದಾಗ `ಜಿಲ್ಲಾಧಿಕಾರಿಗಳು ಊರಲ್ಲಿಲ್ಲ, ಎರಡು ದಿವಸ ಅವರು ಬರುವುದಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗಳೂ ಕಚೇರಿಯಲ್ಲಿ ಇಲ್ಲ’ ಎಂಬ ಉತ್ತರ ಕೊಟ್ಟಿದ್ದ. ಅದನ್ನು ನಂಬಿದ ಆ ಅಲೆಮಾರಿಗಳು ಮನವಿ ಕೊಟ್ಟು ವಾಪಾಸು ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಕಚೇರಿ ಆವರಣದಲ್ಲೇ ಕಾಣಿಸಿಕೊಂಡಿದ್ದರು! ಅರೆ, ಭೇಟಿಯಾಗಿ ಮನವಿ ಕೊಡಲು ಬಂದ ತಮ್ಮನ್ನು ಹೀಗೆ ಸುಳ್ಳಿನ ಮೂಲಕ ಸಾಗಹಾಕಲು ನಾವೇನು ತಾಲಿಬಾನಿ ಉಗ್ರರಾ ಅಂತ ಆ ಅಲೆಮಾರಿಗಳು ಕೇಳುವ ಪ್ರಶ್ನೆ ಇಡೀ ಸರ್ಕಾರವನ್ನು ಅಣಕಿಸುವಂತಿತ್ತು.
ಸಾಮಾನ್ಯವಾಗಿ ಆಯಾ ಜಿಲ್ಲಾಧಿಕಾರಿಗಳೇ ‘ಜಿಲ್ಲಾ ಪರಿಶಿಷ್ಟ ಜಾತಿ, ಅಲೆಮಾರಿ, ಅರೆಅಲೆಮಾರಿ ಮತ್ತು ಅತೀ ಸೂಕ್ಷ್ಮ ಸಮುದಾಯದ ಅಭಿವೃದ್ಧಿ ಕೋಶ’ದ ಅಧ್ಯಕ್ಷರೂ ಆಗಿರುತ್ತಾರೆ. ಅವರೇ ಇಂಥಾ ಸಮುದಾಯಗಳ ಮೇಲೆ ದಾಳಿ ಮಾಡಿದರೆ ಏನಾಗಬೇಕು? ಈ ರೀತಿಯ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ 320 ಕೋಟಿ ಬಿಡುಗಡೆ ಮಾಡಿತ್ತು. ಅಶಕ್ತ ಸಮುದಾಯದವರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದು ಆ ಅನುದಾನದ ಇರಾದೆ. ಆದರೆ ಅದು ಖಜಾನೆಯಲ್ಲಿ ಖರ್ಚಾಗದೆ ಹಾಗೇ ಉಳಿದಿದೆ. ಪುನರ್ವಸತಿ ಸಮಿತಿಯ ಸದಸ್ಯರಾದ ಜಾವಡೆ ಲೋಕೇಶ್ ಮೊದಲಾದವರು ಜುಲೈ 16ರಂದು ನಡೆದ ಸಭೆಯೊಂದರಲ್ಲಿ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿವೇಶನವನ್ನು ಗುರುತಿಸಿಕೊಡಬೇಕೆಂದು ಕೇಳಿಕೊಂಡ ನಂತರವೂ ಜಿಲ್ಲಾಡಳಿತ ಹೀಗೆ ವರ್ತಿಸುತ್ತಿದೆಯೆಂದರೆ ಇದರ ಹಿಂದೆ ಬಲಾಢ್ಯ ಜನಪ್ರತಿನಿಧಿಗಳು ರಿಯಲ್ ಎಸ್ಟೇಟ್ ಹುನ್ನಾರ ಇರಬಹುದೆನ್ನುವ ಗುಮಾನಿ ಮೂಡುತ್ತಿದೆ.

– ರವಿ ಸಿದ್ಲಿಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...