Homeಸಾಮಾಜಿಕಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

ಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

- Advertisement -
- Advertisement -

ಶಿವಮೊಗ್ಗದ ಆಯನೂರು ಹೋಬಳಿಗೆ ಸೇರುವ ವೀರಣ್ಣನ ಬೆನವಳ್ಳಿ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿಗೆ ಮೊನ್ನೆ ಗತಿಸಿಹೋದ ಶನಿವಾರ ಎಂದಿನಂತಿರಲಿಲ್ಲ. ಆಸರೆ ಕೊಡಬೇಕಿದ್ದ ಸರ್ಕಾರವೇ ತಮ್ಮ ಬದುಕನ್ನು ಬೀದಿಗೆ ತಂದು ಎಸೆಯುತ್ತದೆ ಎಂಬ ಯಾವ ಅನುಮಾನವೂ ಇರದೆ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಪೊಲೀಸ್ ಸರ್ಪಗಾವಲು, ಜೆಸಿಬಿ ಯಂತ್ರಗಳ ಸಮೇತ ಅವರ ಮೇಲೆ ದಾಳಿ ಮಾಡಿದ ಜಿಲ್ಲಾಡಳಿತ ಅವರ ಟೆಂಟುಗಳಂತಹ ಮನೆಗಳನ್ನು ಕಿತ್ತುಹಾಕಿ, ಹೆಂಗಸರು ಮಕ್ಕಳನ್ನು ಎಳೆದಾಡಿ, ಕಸ ತುಂಬಿದಂತೆ ಅವರು ಮತ್ತು ಅವರ ಸರಂಜಾಮುಗಳನ್ನೆಲ್ಲ ತುಂಬಿಕೊಂಡು ಬೇರೊಂದು ಜಾಗದಲ್ಲಿ ಸುರಿದುಹೋಗಿದೆ! ತನ್ನದೇ ನಾಗರಿಕರ ಜೊತೆ ನಮ್ಮ ಸರ್ಕಾರಗಳು ವರ್ತಿಸುವ ಪರಿ ಇದು. ಅದೂ, ಒಂದು ಅಲೆಮಾರಿ ಸಮುದಾಯದ ಮೇಲೆ!!
ಕಳೆದ ಹತ್ತು ವರ್ಷಗಳಿಂದ ಬೆನವಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್78ರಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಟೆಂಟು ನಿರ್ಮಿಸಿಕೊಂಡು ನೆಲೆಸಿದ್ದರು. ಅದು ಸರ್ಕಾರಿ ಸ್ವಾಮ್ಯದ ಜಾಗ. ಈ ನಿವೇಶನರಹಿತರಿಗೆ ಆಸರೆಯಾಗಲು ಹಿಂದಿನ ಸಿಎಂ ಸಿದ್ದರಾಮಯ್ಯನವರ ಸರ್ಕಾರ 2016ರಲ್ಲಿ ಆ 4 ಎಕರೆ ಭೂಮಿಯನ್ನು ಮಂಜೂರು ಮಾಡಿ ಕಾಯ್ದಿರಿಸಿತ್ತು. ಆದರೆ ನಿವೇಶನ ಹಂಚಿಕೆಗೆ ಜಿಲ್ಲಾಡಳಿತ ಇದುವರೆಗೆ ಮುಂದಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅದ್ಯಾವ ಪ್ರಭಾವಿ ಕೈಗಳು ಕೆಲಸ ಮಾಡಿದವೋ ಗೊತ್ತಿಲ್ಲ, ಜುಲೈ 28ರ ಶನಿವಾರ ಸಂಜೆ ಹೊತ್ತಿಗೆ ಆವೇಶ ಮೈದಳೆದ ಜಿಲ್ಲಾಡಳಿತ ಭದ್ರಾವತಿ ಎಂಪಿಎಂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಅವರ ಬದುಕನ್ನೇ ಧ್ವಂಸ ಮಾಡಿದೆ.
ಈ ಸರ್ಕಾರಿ ಜನರ ದೌರ್ಜನ್ಯಕ್ಕೆ ಪ್ರತಿರೋಧ ತೋರಲು ಮುಂದಾದಾಗ ಪೊಲೀಸರು ಮಕ್ಕಳು, ವೃದ್ಧರು, ಗರ್ಭಿಣಿಯರು, ಹೆಂಗಸು-ಗಂಡಸರನ್ನೆದೆ ಪ್ರಾಣಿಗಳಿಗಿಂತ ಕಡೆಯಾಗಿ ಎಳೆದಾಡಿದ್ದಾರೆ. ಕೆಲ ಮಹಿಳೆಯರ ಸೀರೆ ಎಳೆದು ಅರೆಬೆತ್ತಲೆ ಮಾಡಲು ಮುಂದಾಗಿದ್ದರು. ಇದನ್ನೆಲ್ಲಾ ವೀಡಿಯೋ ಮಾಡಿಕೊಳ್ಳುತ್ತಿದ್ದ ಹಕ್ಕಿಪಿಕ್ಕಿಯವರ ಮೊಬೈಲ್‍ಗಳನ್ನು ಕಿತ್ತು ಜಜ್ಜಿಹಾಕಿದ್ದಾರೆ. ತಮ್ಮ ದೌರ್ಜನ್ಯದ ಯಾವ ಸಾಕ್ಷ್ಯವೂ ಉಳಿಯದಂತೆ ಜಿಲ್ಲಾಡಳಿತ ದಬ್ಬಾಳಿಕೆ ನಡೆಸುತ್ತಿದ್ದರೆ, ಅತ್ತ ಜೆಸಿಬಿ ಯಂತ್ರಗಳು ಕ್ಷಣಾರ್ಧದಲ್ಲಿ ಅವರ ತಲೆಮೇಲಿನ ಸೂರುಗಳನ್ನು ನೆಲಸಮ ಮಾಡಿ ಮುಗಿಸಿದ್ದವು.
ನಂತರ ಟ್ರ್ಯಾಕ್ಟರ್‍ಗಳಲ್ಲಿ ಅವರನ್ನು ತುಂಬಿತಂದು, ಶ್ರೀರಾಂಪುರದ ಬಳಿ ಇರುವ ಖಾಲಿ ಜಾಗಕ್ಕೆ ಬಿಸಾಕಿದ್ದಾರೆ. ಟೆಂಟ್ ಬಿಟ್ಟು ಕೆಲಸಕ್ಕೆ ಹೋಗಿದ್ದವರು ಪುನಃ ಬಂದು ನೋಡಿದರೆ ಟೆಂಟ್‍ಗಳೇ ಮಾಯವಾಗಿದ್ದವು. ಅಧಿಕಾರಿಗಳನ್ನು ವಿಚಾರಿಸಿದರೆ ಅಲ್ಲೆಲ್ಲೋ ಹಾಕಿದ್ದೇವೆ ಹೋಗಿ ಎಂಬ ಉಡಾಫೆಯ ಉತ್ತರ ಕೊಟ್ಟಿದ್ದರು.
ಎಸೆದುಹೋದ ಸ್ಥಳದಲ್ಲಿ ಕನಿಷ್ಠ ಪುನರ್ವಸತಿ ಸೌಲಭ್ಯವನ್ನೂ ಜಿಲ್ಲಾಡಳಿತ ಕಲ್ಪಿಸಿಲ್ಲ. ಟೆಂಟ್ ನಿರ್ಮಿಸಿಕೊಳ್ಳಲು ಇಟ್ಟುಕೊಂಡಿದ್ದ ಟಾರ್ಪಲ್‍ಗಳು ಪೊಲೀಸರ ದಾಳಿಗೆ ಹರಿದು ಚಿಂದಿಯಾಗಿವೆ. ಪಾತ್ರೆಪಗಡಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿದ್ದವು. ಹಾಲು ಕುಡಿವ ಕಂದಮ್ಮಗಳು, ಮಕ್ಕಳು ಹಸಿವು ತಾಳದೆ ಗೋಳಿಡುತ್ತಿರುವ ದೃಶ್ಯ ಸರ್ಕಾರಿ ಮನಸ್ಸುಗಳನ್ನು ಕಿಂಚಿತ್ತೂ ಕದಡಿದಂತೆ ಕಾಣಲಿಲ್ಲ.
ಈ ಹಕ್ಕಿಪಿಕ್ಕಿಗಳಿಗೆ ತಕ್ಷಣದಲ್ಲಿ ಯಾವುದೇ ಕಾನೂನಾತ್ಮಕವಾದ ನೆರವು ಸಿಗದಂತೆ ನೋಡಿಕೊಳ್ಳಲು ರಜಾದಿನದಂದೇ ಒಕ್ಕಲೆಬ್ಬಿಸುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ಅಧಿಕಾರಿಗಳು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇನ್ನು ಅಂತವರಿಂದ ಮನುಷ್ಯತ್ವವನ್ನು ನಿರೀಕ್ಷಿಸುವುದೇ ಅಪರಾಧ!
ಸರ್ಕಾರವೇ ಮಂಜೂರು ಮಾಡಿದ್ದ ಭೂಮಿಯಲ್ಲಿ ವಾಸವಿದ್ದ ಹಕ್ಕಿಪಿಕ್ಕಿಯವರನ್ನು ಒಕ್ಕಲೆಬ್ಬಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಶೀಲಿಸಿ ಸರ್ವೆ ನಂಬರ್ 78ರಲ್ಲಿ ವಾಸವಿದ್ದ ಹಕ್ಕಿಪಿಕ್ಕಿ ಸಮುದಾಯವರನ್ನು ಸ್ಥಳಾಂತರಿಸುವಂತೆ ಆದೇಶ ನೀಡಿದೆ. ಆದ್ದರಿಂದಾಗಿ ಒಕ್ಕಲೆಬ್ಬಿಸುತ್ತಿದ್ದೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.
ಆದರೆ ಅದೇ ಕಾನೂನಿನ ಪ್ರಕಾರ ಹೀಗೆ ಒಕ್ಕಲೆಬ್ಬಿಸುವ ಮುನ್ನ ವಾಸವಿದ್ದವರಿಗೆ ತಿಳಿವಳಿಕೆ ಪತ್ರ ನೀಡಬೇಕು, ತಾತ್ಕಾಲಿಕವಾಗಿಯಾದರೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಜಿಲ್ಲಾಡಳಿತಕ್ಕೆ ಕಾನೂನಿನ ಆ ಅಧ್ಯಾಯಗಳು ಬೇಡವಾಗಿದ್ದವು. ಅಲೆಮಾರಿ ಬದುಕುಗಳನ್ನು ಒಕ್ಕಲೆಬ್ಬಿಸುವ ಒಕ್ಕಣೆಯಷ್ಟೇ ಅವರಿಗೆ ಸಾಕಾಗಿತ್ತು!
ಹಕ್ಕಿಪಿಕ್ಕಿ ಜನರ ವಸತಿಗಾಗಿ ಮೀಸಲಿಟ್ಟಿದ್ದ 4 ಎಕರೆ ಭೂಮಿಯಲ್ಲಿ ಎಂಪಿಎಂ ಕಾರ್ಖಾನೆಯ ನೆಡುತೋಪು ಇರುವ ಕಾರಣ ಈವರೆಗೂ ನಿವೇಶನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಈ ಹಿಂದೆಯೂ ಇಲ್ಲಿರುವ ಮರಗಳು ಕಟಾವು ಆದ ನಂತರ ಆಯನೂರು ಪಂಚಾಯಿತಿ ನಿವೇಶನಗಳನ್ನು ನಿರ್ಮಿಸಿ, ಅರ್ಹ ಹಕ್ಕಿಪಿಕ್ಕಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತೆ, ಆಗ ನೀವು ಬಂದು ನೆಲೆಸಬಹುದು ಎಂದು ಇದೇ ಅಧಿಕಾರಿಗಳು ಆಶ್ವಾಸನೆಯನ್ನು ಕೊಟ್ಟಿದ್ದರು. ಇದಕ್ಕೆ ಒಪ್ಪಿದ ಹಕ್ಕಿಪಿಕ್ಕಿಗಳು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದ್ದರು. ಆದರೆ ಜಿಲ್ಲಾಡಳಿತ ಕೊಟ್ಟ ಮಾತು ಉಳಿಸಿಕೊಳ್ಳುವ ಯಾವ ಲಕ್ಷಣವನ್ನೂ ತೋರದಿದ್ದಾಗ, ಹಾಗೆ ಹೋಗಿದ್ದವರೆಲ್ಲ ವಾಪಾಸು ಬಂದು ಆ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಅವರಿಗೆ ಕನಿಷ್ಟ ಮಟ್ಟದ ಮೂಲಸೌಕರ್ಯಗಳೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿದ್ದು ಸರ್ಕಾರದ ಕ್ರೌರ್ಯವೆನ್ನದೇ ಇರಲಾಗದು.
ಇದನ್ನು ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸದಸ್ಯರು ಈ ಸಮುದಾಯದವರೊಂದಿಗೆ ಜುಲೈ 30ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅವರ ಕಚೇರಿಗೆ ಬಂದು ಸುಮಾರು ಎರಡು ಗಂಟೆ ಧರಣಿ ಕೂತರು ಯಾವೊಬ್ಬ ಅಧಿಕಾರಿಯೂ ಇವರನ್ನು ಕ್ಯಾರೇ ಅನ್ನಲಿಲ್ಲ. ಕೊನೆಗೆ ಡಿಸಿ ಸಾಹೇಬರ ಸಹಾಯಕ ಅಧಿಕಾರಿಯೊಬ್ಬ ಬಂದು ಕಾಟಾಚಾರಕ್ಕೆ ಮನವಿ ಸ್ವೀಕರಿಸಲು ಮುಂದಾಗಿದ್ದ. ಜಿಲ್ಲಾಧಿಕಾರಿಗಳೇ ಬರಲಿ ಅಂತ ಅವರೆಲ್ಲ ಪಟ್ಟು ಹಿಡಿದಾಗ `ಜಿಲ್ಲಾಧಿಕಾರಿಗಳು ಊರಲ್ಲಿಲ್ಲ, ಎರಡು ದಿವಸ ಅವರು ಬರುವುದಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗಳೂ ಕಚೇರಿಯಲ್ಲಿ ಇಲ್ಲ’ ಎಂಬ ಉತ್ತರ ಕೊಟ್ಟಿದ್ದ. ಅದನ್ನು ನಂಬಿದ ಆ ಅಲೆಮಾರಿಗಳು ಮನವಿ ಕೊಟ್ಟು ವಾಪಾಸು ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಕಚೇರಿ ಆವರಣದಲ್ಲೇ ಕಾಣಿಸಿಕೊಂಡಿದ್ದರು! ಅರೆ, ಭೇಟಿಯಾಗಿ ಮನವಿ ಕೊಡಲು ಬಂದ ತಮ್ಮನ್ನು ಹೀಗೆ ಸುಳ್ಳಿನ ಮೂಲಕ ಸಾಗಹಾಕಲು ನಾವೇನು ತಾಲಿಬಾನಿ ಉಗ್ರರಾ ಅಂತ ಆ ಅಲೆಮಾರಿಗಳು ಕೇಳುವ ಪ್ರಶ್ನೆ ಇಡೀ ಸರ್ಕಾರವನ್ನು ಅಣಕಿಸುವಂತಿತ್ತು.
ಸಾಮಾನ್ಯವಾಗಿ ಆಯಾ ಜಿಲ್ಲಾಧಿಕಾರಿಗಳೇ ‘ಜಿಲ್ಲಾ ಪರಿಶಿಷ್ಟ ಜಾತಿ, ಅಲೆಮಾರಿ, ಅರೆಅಲೆಮಾರಿ ಮತ್ತು ಅತೀ ಸೂಕ್ಷ್ಮ ಸಮುದಾಯದ ಅಭಿವೃದ್ಧಿ ಕೋಶ’ದ ಅಧ್ಯಕ್ಷರೂ ಆಗಿರುತ್ತಾರೆ. ಅವರೇ ಇಂಥಾ ಸಮುದಾಯಗಳ ಮೇಲೆ ದಾಳಿ ಮಾಡಿದರೆ ಏನಾಗಬೇಕು? ಈ ರೀತಿಯ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ 320 ಕೋಟಿ ಬಿಡುಗಡೆ ಮಾಡಿತ್ತು. ಅಶಕ್ತ ಸಮುದಾಯದವರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದು ಆ ಅನುದಾನದ ಇರಾದೆ. ಆದರೆ ಅದು ಖಜಾನೆಯಲ್ಲಿ ಖರ್ಚಾಗದೆ ಹಾಗೇ ಉಳಿದಿದೆ. ಪುನರ್ವಸತಿ ಸಮಿತಿಯ ಸದಸ್ಯರಾದ ಜಾವಡೆ ಲೋಕೇಶ್ ಮೊದಲಾದವರು ಜುಲೈ 16ರಂದು ನಡೆದ ಸಭೆಯೊಂದರಲ್ಲಿ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿವೇಶನವನ್ನು ಗುರುತಿಸಿಕೊಡಬೇಕೆಂದು ಕೇಳಿಕೊಂಡ ನಂತರವೂ ಜಿಲ್ಲಾಡಳಿತ ಹೀಗೆ ವರ್ತಿಸುತ್ತಿದೆಯೆಂದರೆ ಇದರ ಹಿಂದೆ ಬಲಾಢ್ಯ ಜನಪ್ರತಿನಿಧಿಗಳು ರಿಯಲ್ ಎಸ್ಟೇಟ್ ಹುನ್ನಾರ ಇರಬಹುದೆನ್ನುವ ಗುಮಾನಿ ಮೂಡುತ್ತಿದೆ.

– ರವಿ ಸಿದ್ಲಿಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...