Homeಮುಖಪುಟಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

ಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

- Advertisement -
- Advertisement -

ವರದಿಗಾರ |

ಸಂಘಪರಿವಾರದ ಆಸ್ಥಾನ ಪುರೋಹಿತ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯ ಅಸಲಿ ಅವತಾರ ಅನಾವರಣವಾಗಿದೆ. ಕಳೆದ ವಾರ ಮಂಗಳೂರಲ್ಲಿ ವಿಶ್ವಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಗ ಆಗಬೇಕೆಂದು ಜನದ್ರೋಹ ಸಭೆಯೊಂದನ್ನು ನಡೆಸಿತ್ತಲ್ಲ, ಅಲ್ಲಿ ಪೇಜಾವರರ ದಿವ್ಯ ಸಾನಿಧ್ಯವಿತ್ತು. ರಾಮಮಂದಿರಕ್ಕಾಗಿ ಪೇಜಾವರ ಸ್ವಾಮಿ ಕ್ಯಾತೆ ತೆಗೆದು ಕೂಗಾಡಿದ ಪರಿ ಭಯೋತ್ಪಾದನೆಯ ಸ್ಯಾಂಪಲ್ಲಿನಂತಿತ್ತು. ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ, ಪ್ರಮೋದ್ ಮುತಾಲಿಕ್ ಮುಂತಾದ ಮೂರನೇ ದರ್ಜೆ ಹಿಂದೂತ್ವದ ಹಿಕಮತ್ತುದಾರರ ಗಂಟಲಲ್ಲಿ ಪೇಜಾವರ ಮಾತನಾಡಿದ್ದು ಕೇಳಿದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಿಗೆ ಈ ಅದ್ವೈತ ಸನ್ಯಾಸಿಯ ದೋಖಾ ದ್ವಂದ್ವ ಸಿದ್ಧಾಂತ ಮತ್ತೊಮ್ಮೆ ಜಗಜ್ಜಾಹೀರಾಗಿ ಹೋಗಿದೆ!

ಪರಧರ್ಮ ಸಹಿಷ್ಣು ಸಂತನ ಗೆಟಪ್ಪಿನಲ್ಲಿ ಓಡಾಡುವ ಈ ಪೊಲಿಟಿಕಲ್ ಸ್ವಾಮಿಯ ನಡೆ-ನುಡಿಯಲ್ಲಿ ಯಾವಾಗಲೂ ವಿರೋಧಾಭಾಸ-ವಿಪರ‍್ಯಾಸಗಳೇ, ಬ್ರಾಹ್ಮಣ್ಯದಡಿಯ ಅಸಮಾನತೆ-ಅಸ್ಪೃಶ್ಯತೆಗಳ ಅರ್ಥ ಮಾಡಿಸುತ್ತವೆ. ಹರಿಜನರ ಕೇರಿಗಳಿಗೆ ಹೋಗಿ ಪಾದ ತೊಳೆಸಿಕೊಳ್ಳುವ ಪೇಜಾವರರು ಮರಳಿ ಉಡುಪಿ ಮಠಕ್ಕೆ ಬರುವಾಗಲೇ ಜನಿವಾರ ಬದಲಿಸಿ ಶುದ್ಧೀಕರಣಗೊಳ್ಳುತ್ತಾರೆ. ಧರ್ಮೋನ್ಮಾದಿ ಕರಸೇವಕರು ಬಾಬರಿ ಮಸೀದಿ ಗುಮ್ಮಟ ಉರುಳಿಸುವಾಗ ಕಣ್ಣಾರೆ ಕಂಡು ಧನ್ಯತಾಭಾವದಿಂದ ಮಂದಹಾಸ ಬೀರುವ ಈ ಸ್ವಾಮಿ ತನ್ನ ಮಠದ ಆವರಣದಲ್ಲೇ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನಾಟಕವಾಡಬಲ್ಲರು.

ಉಡುಪಿ ಮಾಧ್ವಮಠದಲ್ಲಿ ಪಂಕ್ತಿಭೇದವೇ ಇಲ್ಲವೆಂದು ಹಸಿ-ಹಸಿ ಸುಳ್ಳು ಹೇಳುವ ಪೇಜಾವರ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನಕ್ಕೆ ಪರ‍್ಯಾಯವಾಗಿ ಉಡೆಸ್ನಾನದ ಆವಿಷ್ಕಾರ ಮಾಡಿ ಅಮಾಯಕ ಅಬ್ರಾಹ್ಮಣರ ದಿಕ್ಕು ತಪ್ಪಿಸುತ್ತಾರೆ. ಇವತ್ತಿಗೂ ಪೇಜಾವರರು ಗೋ-ಗೂಂಡಾಗಳಿಗೆ, ಬಾಬರಿ ಮಸೀದಿ ಧ್ವಂಸಕರಿಗೆ ಸ್ಫೂರ್ತಿಯ ಚಿಲುಮೆ. ತನ್ನ ಧಾರ್ಮಿಕ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆಂದಾಗ ಸಾಬರನ್ನು ಮಠಕ್ಕೆ ಕರೆದು ಇಫ್ತಾರ್ ಕೂಟ ಮಾಡುವ ಪೇಜಾವರರು ಶಾಸಕ ರಘುಪತಿ ಭಟ್ಟನಂಥವರು ಕಣ್ಣುಬಿಟ್ಟರೆ ಹೆದರಿ ಮರು ವರ್ಷ ಆ ಇಫ್ತಾರ್ ಪ್ರಹಸನ ಮಾಡುವುದೇ ಇಲ್ಲಾ! ಹಿಂದೂತ್ವದ ಸೈತಾನರು ಪಾಪದ ಸಾಬರ ಬೆತ್ತಲೆ ಮಾಡಿ ಬಡಿದು ಕೇಕೆ ಹಾಕಿದರೂ, ಕೊಂದು ಎಸೆದರೂ ಕಂಡೂ ಕಾಣದಂತಿರುತ್ತಾರೆ ಪೇಜಾವರ ಸ್ವಾಮಿ. ಹಾಗಂತ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಸಂವಿಧಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡಲು ಮಾತ್ರ ಮರೆಯುವುದಿಲ್ಲ……..

ಇಂಥ ಗುಣಧರ್ಮದ ಪೇಜಾವರ ಸ್ವಾಮೀಜಿ ಮೊನ್ನೆ ಮಂಗಳೂರಲ್ಲಿ ಕೇಸರಿ ಕೂಟದಲ್ಲಿ ಉದುರಿಸಿದ ಭೀಭತ್ಸ ಅಣಿ ಮುತ್ತುಗಳು ಅವರ ಜಾಯಮಾನಕ್ಕೆ ತಕ್ಕಂತೆಯೇ ಇದೆ. ಮಾತಿನುದ್ದಕ್ಕೂ ಪೇಜಾವರರ ಮೇಲೆ ಹಿಂದೂತ್ವದ ಭಯೋತ್ಪಾದಕನ ಆವಾಹನೆ ಆದಂತಿತ್ತು. ಹಿಂದೂತ್ವದ ಕಾಳಗದ ಕಾಲಾಳುಗಳಾದ ಅವಿಭಜಿತ ದಕ್ಷಿಣ ಕನ್ನಡದ ಅಬ್ರಾಹ್ಮಣರನ್ನು ಅನಾಹುತಕ್ಕೆ ಪ್ರಚೋದಿಸುವ ಓಘ ಪೇಜಾವರರ ಭಾಷಣಕ್ಕಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಮಾಮನ ಗೆಲ್ಲಿಸುವ ಮಸಲತ್ತಿನ ಮಾತುಗಾರಿಕೆ ಇದಾಗಿತ್ತೆಂಬುದು ಎಂಥ ಗಾಂಪನಿಗೂ ಅರ್ಥವಾಗುತ್ತದೆ!! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃವೀಕರಣಗೊಂಡಿರುವ ಹಿಂದೂತ್ವದ ಓಟ್‌ಬ್ಯಾಂಕ್ ಇನ್ನಾರು ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್ ತನಕ ಕಾಪಿಟ್ಟುಕೊಳ್ಳುವ ತಂತ್ರಗಾರಿಕೆ ಪೇಜಾವರ ಟೇಮಿನದಾಗಿತ್ತು.

ನಾಲ್ಕುವರೆ ವರ್ಷದಿಂದ ಸಂಘಪರಿವಾರದ ಬ್ರಾಹ್ಮಣ ರಿಂಗ್‌ಮಾಸ್ಟರ್‌ಗಳ ಪಾದುಕಾ ಪೂಜಾರಿ ಮೋದಿ ಪ್ರಧಾನಿಯಾಗಿದ್ದರೂ ಆತನಿಂದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿಕ್ಕೆ ಯಾಕಾಗಲಿಲ್ಲ ಎಂಬ ಮೂಲಭೂತ ಪ್ರಶ್ನೆ ಮರೆಮಾಚಿದ ಪೇಜಾವರರು ಏಕಾಏಕಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಆ ಮೂಲಕ ಇಲೆಕ್ಷನ್ ಪ್ರಚಾರ ಶುರುಮಾಡಿದ್ದಾರೆ. ಹಿಂದೂತ್ವಕ್ಕಾಗಿ ತನ್ನನ್ನು ಸಂಸದನಾಗಿಸಿದ ಜಿಲ್ಲೆಗೇ ಬೆಂಕಿ ಹಾಕ್ತೇನೆಂದು ಯಾವ ಮುಲಾಜೂ, ಮನುಷ್ಯತ್ವವೂ ಇಲ್ಲದೆ ಆರ್ಭಟಿಸುವ ನಳಿನ್‌ಕುಮಾರ್ ಕಟೀಲ್‌ನಂಥವರನ್ನು ಬಗಲಲ್ಲಿಟ್ಟುಕೊಂಡು ಪೇಜಾವರರು ಮಾಡಿದ ಭಾಷಣದ ನೀತಿ-ರೀತಿಗೆ ಕೂಗುಮಾರಿ ಖ್ಯಾತಿಯ ಚೈತ್ರಾ ಕುಂದಾಪುರ, ಸೂಲಿಬೆಲೆ ಚಕ್ರವರ್ತಿಯಂಥವರೇ ನಾಚಿ ತಲೆ ತಗ್ಗಿಸುವಂತಿತ್ತು!

ಪ್ರತಿದಿನ ಸಾವಿರ ಸುಳ್ಳು ಸಬೂಬು ಹೇಳುವ ಮೋದಿ 2019ರ ಚುನಾವಣೆಯಲ್ಲಿ ಬಚಾವಾಗದ ಪ್ರಪಾತಕ್ಕೆ ಹೋಗಿಬಿದ್ದಿದ್ದಾರೆಂಬುದು ಪೇಜಾವರರಂಥ ಹಿಂದೂ ಸಂತ ಸಂತಾನಕ್ಕೆ ಪಕ್ಕಾ ಆಗಿಹೋಗಿದೆ. ಮೋದಿಯಂಥ ಹುಂಬ ಶೋ ಮ್ಯಾನ್ ದೇಶದ ಚುಕ್ಕಾಣಿ ಹಿಡಿಯುವುದು ಸಂಘಪರಿವಾರಕ್ಕೆ ಅನಿವಾರ್ಯ ಅಗತ್ಯ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಬರುತ್ತಿದೆ ಎಂದು ಬಿಂಬಿಸಿದರೆ ಜನರ ಭಾವನೆ ಕೆರಳಿಸಬಹುದೆಂಬ ದೂ(ದು)ರಾಲೋಚನೆ ಕಾವಿ ಕೂಟದ್ದು. ಹಾಗಾಗಿಯೇ ಮಂಗಳೂರಲ್ಲಿ ಪೇಜಾವರರು ಮಾತುಮಾತಿಗೆ ಕಾಂಗ್ರೆಸ್ ರಾಮಮಂದಿರ ವಿರೋಧಿ ಎಂಬಂತೆ ಪ್ರವಚನ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ಮಾಡಬೇಕೆಂದು ಹೇಳುವ ಪೇಜಾವರ ಮಾತಿನ ಅರ್ಥ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮನಿಗೆ ಗುಡಿಕಟ್ಟಬೇಕೆನ್ನುವುದೇ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಕಾಂಗ್ರೆಸ್ ಸಹಕರಿಸಬೇಕೆಂದು ಎಚ್ಚರಿಕೆಯೂ ಪೇಜಾವರ ಸ್ವಾಮಿ ಕೊಟ್ಟಿದ್ದಾರೆ. ಕಾಂಗ್ರೆಸೇನಾದರೂ ರಾಮಮಂದಿರಕ್ಕೆ ಅಡ್ಡಗಾಲು ಹಾಕಿದರೆ ಮುಂಬರುವ ಚುನಾವಣೆಯಲ್ಲಿ ಆ ಪಾರ್ಟಿ ಮಣ್ಣು ಮುಕ್ಕುತ್ತದೆಯೆಂದು ಮೋದಿಯನ್ನು ಮೀರಿಸುವ ಸ್ಟೈಲಲ್ಲಿ ಪೇಜಾವರರು ಭಾಷಣ ಬಿಗಿದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರು ರಾಮ ಮಂದಿರಕ್ಕೆ ಬೆಂಬಲಿಸಿ ಹಿಂದೂಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸಾಬರು ಅಯೋಧ್ಯೆಯಲ್ಲಿ ರಾಮ ಮಂದಿರ ಆಗದಿದ್ದರೆ ಗಂಡಾಂತರಕ್ಕೆ ಸಿಲುಕಲಿದ್ದಾರೆಂದಾ? ಹಿಂದೂತ್ವದ ದಾದಾಗಿರಿಗೆ ಶರಣಾಗದಿದ್ದರೆ ಉಳಿಗಾಲವಿಲ್ಲವೆಂದಾ? ಸಾತ್ವಿಕ ಸಂತ ತಾನೆಂದೂ ತೋರಿಸಿಕೊಳ್ಳಲು ತಿಣಕಾಡುವ ಪೇಜಾವರರ ಮಾತುಗಾರಿಕೆ ಯಾವ ಹಿಂದೂ ಭಯೋತ್ಪಾಕ ಕಾವಿ ಅಥವಾ ಖಾದಿ ಪುಂಡರ ಭಾಷಣಕ್ಕೆ ಕಮ್ಮಿಯಿದೆ?!

ಜನಾಗ್ರಹ ಸಭೆ ಚುನಾವಣಾ ರಾಜಕೀಯ ಅಲ್ಲ ಅನ್ನುತ್ತಲೇ ಬಿಜೆಪಿ ಪರ ಪರೋಕ್ಷವಾಗಿ ಬಹಿರಂಗ ಪ್ರಚಾರ ಪೇಜಾವರ ಸ್ವಾಮಿ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೆಂದು ಹೇಳಿರುವುದೇ ವಿಕಟ ವ್ಯಂಗ್ಯ! ಲೋಕಸಭೆ ಸ್ಥಾನ ತ್ಯಜಿಸಲು ರಾಮ ಮಂದಿರಕ್ಕಾಗಿ ಬಿಜೆಪಿ ಸಂಸದರು ರೆಡಿಯಾಗಬೇಕೆಂದು ಹೇಳಿದ್ದಾರೆ. ಬರೀ ಆರು ತಿಂಗಳು ಬಾಕಿಯಿರುವಾಗ ಚೆಡ್ಡಿ ಎಂಪಿಗಳಿಗೆ ರಾಜೀನಾಮೆ ಕೊಡಿಯೆಂದು ಪೇಜಾವರರು ಹೇಳೋದು ಬಿಜೆಪಿಯನ್ನು ತಾರೀಫು ಮಾಡುವ ತಂತ್ರಗಾರಿಕೆಯಿಂದಷ್ಟೇ. ರಾಮನ ಹೆಸರಲ್ಲಿ ಪ್ರಧಾನಿಯಾದ ಮೋದಿ ನಾಲ್ಕುವರೆ ವರ್ಷದಿಂದ ಏಕೆ ರಾಮನಿಗೊಂದು ನೆಲೆಕೊಡುವ ಕೃತಜ್ಞತಾ ಭಾವದಿಂದ ಪ್ರಾಮಾಣಿಕ ಕೆಲಸ ಮಾಡಲಿಲ್ಲ ಎಂದು ಕೇಳುವ ಗಟ್ಸ್ ಪೇಜಾವರರೇಕೆ ತೋರಿಸುತ್ತಿಲ್ಲ?

ಹಿಂದೂತ್ವದ ದಿವಾಳಿಕೋರತನಕ್ಕೆ ಪೇಜಾವರರು ಸಂಕೇತವಾಗುತ್ತಿರುವುದು ದುರಂತ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...