-ಮಲ್ಲಿ |
ಬಜೆಟ್ ಅಧಿವೇಶನ ನಡೆದಿದ್ದು 5 ದಿನ ಮಾತ್ರ! ಇದರಲ್ಲಿ ಕಲಾಪ ನಡೆದಿದ್ದು ಕೇವಲ 15 ಗಂಟೆ 10 ನಿಮಿಷ! ಇದನ್ನು ಅಧಿವೇಶನ ಎನ್ನುವುದೋ ಅಧಿ’ವೇಷಣ’ ಎನ್ನುವುದೋ? ಏಕೆಂದರೆ ಈ ಸಲ ಹಲವರ ‘ವೇಷಣಗಳು’ ಕಳಚಿಬಿದ್ದಿದ್ದಂತೂ ಸತ್ಯ. ಹಾಗೆಯೇ ಆಡಳಿತ ಪಕ್ಷ ಮತ್ತು ವಿಪಕ್ಷಗಳ ರಾಜಕೀಯ ಕಿತ್ತಾಟಕ್ಕೆ ಕಲಾಪ ಬಲಿಯಾಗಿದ್ದೂ ನಿಜ.
ರಾಜ್ಯ ಸರ್ಕಾರದ ಒಂದು ವರ್ಷದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಚೌಕಟ್ಟಿನ ಮುನ್ನೋಟ ನೀಡುವ ಮಹತ್ವದ ಬಜೆಟ್ ಯಾವುದೇ ಅಂಗೀಕಾರವಿಲ್ಲದೇ ಅನುಮೋದನೆ ಪಡೆದಿದೆ. ಅಂದರೆ ಪಾಸ್ ಆಗಿದೆ, ಅಲ್ಲಿಗೆ ಕಲಾಪದ ಒಟ್ಟೂ ಉದ್ದೇಶವೇ ಫೇಲ್ ಆಗಿದೆ. ಆಪರೇಷನ್ ಕಮಲ ಎಂಬ ಭೂತ ಬಜೆಟ್ ಚರ್ಚೆಯನ್ನೇ ನುಂಗಿ ಹಾಕಿ ಅಟ್ಟಹಾಸ ಮೆರೆದಿದೆ.
2 ಲಕ್ಷ 34 ಸಾವಿರ ಕೋಟಿಗಳ ಬಜೆಟ್ ಬಗ್ಗೆ ಚರ್ಚಿಸಲು ಅಲ್ಲಿ ಯಾರಿಗೂ ವ್ಯವಧಾನವೇ ಇರಲಿಲ್ಲ. ವಿಪಕ್ಷ ಬಿಜೆಪಿಗಂತೂ ತನ್ನ ಅಧಿವೇಶನದುದ್ದಕ್ಕೂ ತನ್ನ ಅಧಿನಾಯಕ ಯಡಿಯೂರಪ್ಪನವರನ್ನು ರಕ್ಷಿಸುವುದೇ ಒಂದು ಘನಂದಾರಿ ಕೆಲಸವಾಗಿತ್ತು. ಅದಕ್ಕೆ ಅದು ಆಯ್ದುಕೊಂಡ ಮಾರ್ಗ: ಇಡೀ ಕಲಾಪವನ್ನೇ ಗಬ್ಬೆಬ್ಬಿಸುವ ನೀಚ ಮಾರ್ಗ.
ಬಜೆಟ್ನ ಮೂರನೇ ಒಂದು ಭಾಗದಷ್ಟಿರುವ ಲೇಖಾನುಧನವನ್ನು ಯಾವುದೇ ರ್ಚೆಯಿಲ್ಲದೇ ಪಾಸು ಮಾಡಲಾಗಿತು. ಹಿಂದೆಂದೂ ಇಂತಹ ಘಟನೆ ಸಂಭವಿಸಿರಲಿಲ್ಲ. ಆದರೆ ಈ ಸದಸನದ ಯೋಗ್ಯತೆಯೇ ಅಷ್ಟಿರುವಂತಿದೆಯಲ್ಲವೇ?
ಕಲಾಪದಲ್ಲಿ ಸ್ಪೀಕರ್ ಸಾಹೇಬರು ಪದೇ ಪದೇ ತಮ್ಮ ನೋವು ತೊಡಿಕೊಳ್ಳುವ ‘ವಿಲಕ್ಷಣ’ ಸಂದರ್ಭಗಳೇ ಸೃಷಿಯಾದವು. ಕಲಾಪ ನಡೆಯುವಂತೆ ಮಾಡಲು ಅವರು ತುಂಬ ಪ್ರಯಾಸಪಟ್ಟರೂ ಉಪಯೋಗವಾಗಲಿಲ್ಲ. ಬಜೆಟ್ ಮುನ್ನ ಸ್ಪೋಟಗೊಂಡ ಆಡಿಯೋವೇ ಎಲ್ಲವನ್ನೂ ಗುಡಿಸಿ ಹಾಕಿತು- ಆಪರೇಷನ್ ಕಮಲವನ್ನೂ, ಕಲಾಪದ ಚರ್ಚೆಯನ್ನೂ….
ಅಂತಿಮವದಲ್ಲಿ ಯಾವುದೇ ರ್ಚೆಯಿಲ್ಲದೇ ಬಜೆಟ್ ಮಂಡನೆ ಆಗುತ್ತಿದ್ದಂತೆ, ಸ್ಪೀಕರ್ ಸಾಹೇಬರು ತಮ್ಮ ಹೃದಯ ಕಿತ್ತು ಬರುತ್ತಿದೆ, ಸಾರ್ವಜನಿಕರ ಹಣದ ಬಳಕೆಯ ಬಗ್ಗೆ ಚರ್ಚೆ ನಡೆಸದೇ ಘೋರ ಅಪರಾಧ ಮಾಡಿದ್ದೇವೆ ಎಂದು ಅವಲತ್ತುಕೊಳ್ಳಬೇಕಾಗಿತು. ಆಡಳಿತ ಮತ್ತು ವಿಪಕ್ಷಗಳಿಗೆ ಮಾತ್ರ ಇದೇನೂ ಘೋರ ಅಪರಾಧ ಎನಿಸಲೇ ಇಲ್ಲ!
ಎಸ್ಐಟಿ ತನಿಖೆ ಬೇಡ ಎಂದು ಗದ್ದಲ ಮಾಡಿ ಎರಡು ದಿನ ಕಲಾಪವನ್ನು ಬರ್ಬಾದ್ ಮಾಡಿದ ಬಿಜೆಪಿ, ಎಸ್ಐಟಿ ತನಿಖೆಯೇ ಫೈನಲ್ ಎಂದು ನಿರ್ಣಯವಾದ ಮೇಲಾದರೂ ಚರ್ಚೆಗೆ ಅವಕಾಶ ಮಾಡಿಕೊಡಬಹದಿತ್ತು. ಆದರೆ ಶಾಸಕ ಪ್ರೀತಂಗೌಡರಿಗೆ ರಕ್ಷಣೆ ಕೊಡಿ ಎಂದು ಮತ್ತೆ ಒಂದೂವರೆ ದಿನಗಳ ಕಲಾಪವನ್ನು ಹಳ್ಳ ಹಿಡಿಸಿತು. ಪ್ರೀತಂಗೌಡನಿಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆಯಿತ್ತಲ್ಲವೇ? ಅದನ್ನೆಲ್ಲ ಬಿಟ್ಟು ಸದಸನದ ಕಲಾಪ ಹಾಳು ಮಾಡುವ ಅಗತ್ಯವಿತ್ತೇ?
ಎಲ್ಲ ಕಲಾಪಗಳಲ್ಲೂ ಅಬ್ಬರಿಸುತ್ತಿದ್ದ ಯಡಿಯೂರಪ್ಪ ಈ ಸಲ ಎಲ್ಲ ಮುಚ್ಚಿಕೊಂಡು, ಮುಖ ಗಂಟಿಕ್ಕಿಕೊಂಡು ಕೂತದ್ದೇ ಜಾಸ್ತಿ. ಆದರೂ ಅವರಿಗೆ ಮಾನ ಮುಚ್ಚಿಕೊಳ್ಳಲಾಗಲಿಲ್ಲ. ಈ ಅಧಿವೇಶನದ ಇನ್ನೊಂದು ಅಂಶವೆಂದರೆ, ಮಾಧುಸ್ವಾಮಿಯವರಂತಹ ಹಿರಿಯ ಸಂಸದೀಯ ಪಟು ಲಜ್ಜೆ ಬಿಟ್ಟು ಯಡಿಯೂರಪ್ಪನವರ ಸಮರ್ಥನೆಗೆ ಇಳಿದಿದ್ದು!
ಈ ಅಧಿವೇಶನದ ಲಾಭವಾಗಿದ್ದು ಮೈತ್ತಿ ಪಕ್ಷಗಳಿಗೆ ಮಾತ್ರ. ಆಪರೇಷನ್ ಕಮಲವನ್ನು ಹೊಡೆದು ಹಾಕುವ ಮೂಲಕ ಮೈತ್ರಿಬಣದಲ್ಲಿ ಮೂಡಿದ್ದ ಬಿರುಕನ್ನು ಅವು ನಿವಾರಿಸಿಕೊಂಡವು.
ಹಿಂದೆ ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವಿದ್ದಾಗ, ನಂತರ ಕುಮಾರಸ್ವಾಮಿ-ಯಡಿಯೂರಪ್ಪ ಸರ್ಕಾರವಿದ್ದಾಗಲೂ ಸದನದ ಕಲಾಪಗಳು ಹೀಗೇ ಬಲಿಯಾಗಿದ್ದವು. ತಮ್ಮ ಪಕ್ಷಗಳ ನಡುವಿನ ಕಿತ್ತಾಟದ ರಾಜಕೀಯವನ್ನು ಸದನದಲ್ಲಿ ಚಚಿಚ್ಸಲು ನಾವು ಅವರನ್ನು ಅಲ್ಲಿಗೆ ಕಳಿಸಿದ್ದೇವಾ ಎಂಬ ಪ್ರಶ್ನೆ ಜನರನ್ನು ಕಾಡದೇ ಇರದು. ಯಾವುದೇ ಚರ್ಚೆಯಿಲ್ಲದೇ ಮಸೂದೆಗಳನ್ನು ಧ್ವನಿಮತದ ಮೂಲಕ ಪಾಸು ಮಾಡುವುದಾದರೆ ಈ ಶಾಸಕರು ಸದನದಲ್ಲಿ ಕಿತ್ತು ಹಾಕುವುದಾದರೂ ಏನನ್ನು ಎಂದು ಪ್ರಶ್ನಿಸುವ ಸಮಯ ಬಂದಿದೆಯಲ್ಲವೇ?
ಹಿಂದೆ ಆಗಿನ್ನೂ ಸಂಸದಿಯ ವ್ಯವಸ್ಥೆ ಬಾಲ್ಯಾವಸ್ಥೆಯಲ್ಲಿ ಇದ್ದ ಸಂದರ್ಭದಲ್ಲೇ, ಬಜೆಟ್ ಅಧಿವೇಶನ 6 ದಿನಗಳ ಅವಧಿಯನ್ನು ಹೊಂದಿರುತ್ತಿತ್ತು. ದಿವಾನರ ಭಾಷಣ, ಪ್ರಶ್ನೆಗಳು ಮತ್ತು ಸರ್ಕಾರಿ ಕಲಾಪಕ್ಕಾಗಿ 1 ದಿನ, ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗಾಗಿ ಗರಿಷ್ಠ 2 ದಿನ, ಬಜೆಟ್ ಮೇಲಿನ ನಿರ್ಣಯಗಳಿಗಾಗಿ 1 ದಿನ, ಅರಿಕೆಗಳಿಗಾಗಿ 1 ದಿನ ಮತ್ತು ಇತರ ನಿರ್ಣಯಗಳಿಗಾಗಿ 1 ದಿನವನ್ನು ನಿಗದಿಪಡಿಸಲಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಬಜೆಟ್ ರ್ಚೆಗಳು ಕೇವಲ ದೂಷಾರೋಪಣೆಯಲ್ಲೇ ಮುಗಿದು ಹೋಗುತ್ತಿವೆ. ಕಳೆದ ವಾರ ಮುಗಿದ ಬಜೆಟ್ ಅಧಿವೇಶನವಂತೂ ಚರ್ಚೆಯಿಲ್ಲದೇ ಬಜೆಟ್ ಪಾಸು ಮಾಡಿ ‘ದಾಖಲೆ’ ಬರೆದಿದೆ!


