Homeಮುಖಪುಟಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

ಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

- Advertisement -
- Advertisement -

| ಡಾ.ಲತಾ ಮೈಸೂರು |

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.

ಮೇಲ್ಜಾತಿಯಲ್ಲಿ ಜನಿಸಿರುವ ಎಸ್.ಎಲ್.ಭೈರಪ್ಪ ತಳಮೂಲದಿಂದ ಬಂದವರಾಗಿದಿದ್ದರೆ, ಅವರ ಬರವಣಿಗೆ, ಸೃಜನಶೀಲ ಕೃತಿ, ಭಾಷಣ, ಹೇಳಿಕೆಗಳಲ್ಲಿ ‘ವೈದಿಕತೆಯೇ ಸಂವಿಧಾನವಾಗಲಿ’ ಎಂಬ ಮೂಲಭೂತವಾದಿ ಧೋರಣೆಗಳು ನೆಲೆಗೊಳ್ಳುತ್ತಿದ್ದವೆ?

ಅವರು ಅವರ್ಣೀಯರಾಗಿದಿದ್ದರೆ!? ಇಷ್ಟೆ ವಿಸ್ತಾರ ಓದು, ತತ್ತ್ವಜ್ಞಾನದ ತಿಳಿವಳಿಕೆ, ದೈತ್ಯ ಸೃಜನಶೀಲ ಅಭಿವ್ಯಕ್ತಿ ಶಕ್ತಿ ಸಾಮಥ್ರ್ಯಗಳನ್ನು, ಜನಪ್ರಿಯಗೊಳ್ಳುವ ಕಲೆಯನ್ನು ಜೀವಪರತೆ, ಸತ್ಯ, ನ್ಯಾಯ, ಸಮಾನತೆ, ಅಹಿಂಸೆಗಳ ಅರಳಿಸುವಿಕೆಗೆ ಬಳಸುತ್ತಿದ್ದರೆನೋ?

ಇವೆಲ್ಲ ‘ರೆ’ಗಳು, ಜನ್ಮವನ್ನೆ ಮಾನದಂಡವಾಗಿಸಿರುವ ಭಾರತದ ನೆಲದಲ್ಲಿ ಯುಟೋಪಿಯಾ ಅಷ್ಟೆ. ತಮ್ಮ ಜನನವನ್ನೇ (ಜಾತಿಯನ್ನೇ) ಶ್ರೇಷ್ಠವಾಗಿಸಿಕೊಂಡು ಈ ನೆಲದ ಎಲ್ಲ ಅವಕಾಶ, ಸೌಲಭ್ಯ, ಅಧಿಕಾರ, ಸಂಪತ್ತುಗಳನ್ನು ಮೀಸಲಾಗಿಸಿಕೊಂಡು, ಉಳಿದವರೆಲ್ಲರೂ ತಮ್ಮ ತಮ್ಮ ಶ್ರೇಣಿಮಟ್ಟದಲ್ಲಿ ಇದೇ ಕ್ರೌರ್ಯ, ದೋಚುವಿಕೆಯನ್ನು ಧರ್ಮಶಾಸ್ತ್ರ ಗಳನ್ನಾಗಿಸಿಕೊಳ್ಳುವಂತೆ ಮಾಡಿರುವ ಡ್ಯಾಮೇಜ್ ಎಂದಿಗೂ ಸರಿಪಡಿಸಲಾಗದು. ಪ್ರತಿ ಜೀವದ ಅನನ್ಯತೆ – ಪ್ರತಿಭೆ, ಸಾಧಿಸಿಕೊಳ್ಳುವ ಶಕ್ತಿ-ಸಾಮಥ್ರ್ಯ- ಯೋಗ್ಯತೆಗಳು ಮಾಪನವಾಗದೆ, ತಮ್ಮ ಆಯ್ಕೆಯಲ್ಲದ ಪ್ರಾಕೃತಿಕ ಹುಟ್ಟು ಇಲ್ಲಿ ಮಾನದಂಡವಾಗಿ, ತಕ್ಕಡಿಯಾಗಿದೆ. ಈ ಮೂಲಕ ಬೇರ್ಬಿಟ್ಟಿರುವ ಅ-ನ್ಯಾಯದ, ಅ-ಸಮತೆಯ ವಾಸ್ತವಿಕ ಅಭ್ಯಾಸಗಳನ್ನು ಬದಲಿಸುವುದು ಸುಲಭವೆ?

ತಮ್ಮ ಜನ್ಮದ ಬ್ರಾಹ್ಮಣ್ಯವನ್ನೆ ಶ್ರೇಷ್ಠವಾಗಿಸಿಕೊಂಡ ಬ್ರಾಹ್ಮಣರು ಕಲಿಯುಗದಲ್ಲಿ ಎಂಥೆಂಥಾ ಅನಾಹುತ-ದುರಂತಗಳ ಸರಮಾಲೆಯನ್ನೆ ಸೃಷ್ಟಿಸಿ ಬಿಡುತ್ತಾರೆಂಬ (ದುರ್)ದರ್ಶನವನ್ನು ಪಂಪನ ಆದಿಪುರಾಣದ ಭರತ ದುಃಸ್ವಪ್ನ ರೂಪದಲ್ಲಿ ಕಾಣುತ್ತಾನೆ.

ಪಂಪನ ಆದಿಪುರಾಣದ 15ನೇ ಆಶ್ವಾಸದಲ್ಲಿ ‘ಭರತನು ಅನಭಿಷಿಕ್ತನಾಗಿ, ವೈಭವದಿಂದ ಭೂಮಂಡಲವನ್ನು ಪರಿಪಾಲಿಸುತ್ತಾ, ಧನವನ್ನು ತಕ್ಕವರಿಗೆ ದಾನ ಮಾಡಲು ಉಪಾಸಕರನ್ನು ಗುರುತಿಸುವ’ ಪ್ರಸಂಗದಲ್ಲಿ ಇದು ಬರುತ್ತದೆ. ಅಯೋಧ್ಯಾ ಸಿಂಹಾಸನದಲ್ಲಿ ಕುಳಿತು ಸಾಮ್ರಾಜ್ಯ ಸುಖ ಅನುಭವಿಸುತ್ತಿದ್ದ ಚಕ್ರವರ್ತಿ ಭರತನು ತಾನು ಜಿನಪೂಜೋತ್ಸವವೆಂಬ ಮಹಾಮಹವನ್ನು ಮಾಡಿ ಸಲ್ಲುವಂತಾಗಲು ಧನವನ್ನು ತಕ್ಕವರಿಗೆ ದಾನ ಮಾಡಬೇಕು. ಆದರೆ ತಪೋಧನರು ದಾನವನ್ನು ಒಲ್ಲರು, ಇನ್ನು ಆ ದಾನಕ್ಕೆ ಗೃಹಸ್ಥರಿದ್ದಾರೆ. ಆದರೆ ಅವರಲ್ಲಿ ಯಾರು ಯೋಗ್ಯರೆಂಬುದನ್ನು ಉಪಾಯಾಂತರದಿಂದ ಪರೀಕ್ಷಿಸಲು ಒಸಗೆಯೊಂದನ್ನು (ಮಂಗಳಕಾರ್ಯ) ಹಮ್ಮಿಕೊಂಡು, ಅರಮನೆಯ ಒಳ ಹೊರಗೂ ಹರಿತಾಂಕುರ-ಹೂ-ಹಣ್ಣು-ಮೊಳಕೆ ಧಾನ್ಯಗಳನ್ನು ಹರಡಿಸಿ ದಾನ ಸ್ವೀಕರಿಸಲು ಬರ ಹೇಳಿದನು. ಕೂಡಲೇ (ಅಹಿಂಸಾ) ವ್ರತವಿಲ್ಲದ ಅವಿವೇಕಿಗಳು ಅವುಗಳನ್ನೆಲ್ಲ ತುಳಿದುಕೊಂಡೇ ಅರಮನೆಯೊಳಕ್ಕೆ ಬಂದರು. ಆದರೆ ಆ ತುಳಿಯುವ ಹಿಂಸಾ ಪಾಪಕ್ಕೆ ಹೆದರಿ ಕೆಲವರು ಹೊರಗೇ ನಿಂತರು. ಇವರನ್ನು ಚಕ್ರವರ್ತಿ ಮತ್ತೆ ಕರೆಯಲು ಬೇರೆ ದಾರಿಯಿಂದ ಅರಮನೆಯೊಳಗೆ ಬಂದರು. ಆಗ ಭರತ ‘ನೀವಿಷ್ಟು ಜನ ಇವರು ಬಂದ ಮಾರ್ಗದಲ್ಲಿ ಬರದೆ ಬೇರೊಂದು ಮಾರ್ಗದಲ್ಲೇಕೆ ಬಂದಿರಿ’ ಎಂದು ಪ್ರಶ್ನಿಸಲು, ‘ಹಸಿರು-ಅಂಕುರ-ಕುಡಿ-ಕುಸುಮ-ಹಣ್ಣಿದ್ದಲ್ಲಿ ಜೀವರಾಶಿ ಅಪಾರವಾಗಿರುತ್ತದೆ. ಪುರಪರಮೇಶ್ವರನ ಸಭೆಯಲ್ಲಿ ‘ಗಣಾಧಿಪರು ಹೇಳಿದ ಅಹಿಂಸಾ ವ್ರತ ಹಿಡಿದಿರುವ ನಾವು ಅವನ್ನು ತುಳಿಯಲಾರೆವು’ ಎಂದರು. ಭರತ ಇವರ ದೃಢ ಅಹಿಂಸಾವ್ರತಕ್ಕೆ ಮೆಚ್ಚಿ ದಾನ-ಸನ್ಮಾನಕ್ಕೆ ಯೋಗ್ಯರೆಂದು ತವನಿಧಿ ತರಿಸಿ, ಅವರವರ ನೆಲೆಗಳಲ್ಲಿ ಬ್ರಹ್ಮಸೂತ್ರ ಎಂಬ ಅಭಿದಾನದ ‘ಯಜ್ಞೋಪವೀತ’ದಿಂದ ಅವರನ್ನು ಪವಿತ್ರಗಾತ್ರರನ್ನಾಗಿ ಮಾಡಿದನು.

ಇಲ್ಲಿ ಅಹಿಂಸಾ ನಡೆಯೇ ಯೋಗ್ಯರನ್ನಾರಿಸಲು ಮಾನದಂಡ. ಇಂಥ ಅಹಿಂಸಾ ನಡೆಯ ಜನರನ್ನು ಭರತ ಪ್ರತ್ಯೇಕವಾಗಿ ಗುರುತಿಸಿ, ಮೆಚ್ಚಿ ನಂತರ ಯಜ್ಞೋಪವೀತ ಹಾಕಿ, ಅವರನ್ನು ಪವಿತ್ರಗಾತ್ರರನ್ನಾಗಿಸಿದ. ಹೀಗಾಗಿ ಇಲ್ಲಿ ಬ್ರಾಹ್ಮಣ್ಯ ಎಂಬುದು ನಡೆಗಾಗಿ ಪಡೆದರೆ ಹೊರತು ಜನ್ಮಕ್ಕಾಗಿ ಅಲ್ಲ.

ಮುಂದೆ ಭರತ ತಾನೇ ಮಾಡಿದ ಉಪಾಸಕ ಬ್ರಾಹ್ಮಣರಿಗೆ ನೀವು ನಡೆಸಬೇಕಾದ ಕುಲಾಚಾರಗಳೆಂದು ಷಟ್‍ಕರ್ಮ… ವ್ರತ, ಸಂಸ್ಕಾರ, ಸತ್ಕ್ರಿಯಾ, ಪಂಚಾಣು ವ್ರತ, (ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ)ಗಳನ್ನು ಉಪದೇಶಿಸಿದ.

ಇಲ್ಲಿ ಷಟ್ಕರ್ಮ ಸಹಿತನಾದವನು ಮಾತ್ರ ಸತ್ತ್ಯದಿಂದ ದ್ವಿಜನಾಗುತ್ತಾನೆ. ಆದರೆ ಗೃಹಸ್ಥರ ಅಹಿಂಸಾನಡೆಗಾಗಿ, ಯಜ್ಞೋಪವೀತ ಹಾಕಿ ಬ್ರಾಹ್ಮಣರನ್ನಾಗಿ ಮಾಡಿ, ಷಟ್ಕರ್ಮ ವ್ರತಗಳನ್ನುಪದೇಶಿಸಿದ ಭರತನೆ ಮುಂದೆ ತನ್ನ ಹಿರಿಮೆಗಾಗಿ ಆನಂದದ ಭರದಲ್ಲಿ ಬ್ರಾಹ್ಮಣ್ಯ (ದ್ವಿಜತ್ವ)ವನ್ನು ಅವರ ವಂಶಕ್ಕೆ (ಜನ್ಮಕ್ಕೆ) ಅನ್ವಯ ಮಾಡಿ ಹೀಗೆ ಘೋಷಿಸಿ ಬಿಡುತ್ತಾನೆ – “ಪರಮಬ್ರಹ್ಮನ ತನುವಿಂದ ಹುಟ್ಟಿದವರು ದ್ವಿಜರು, ಇವರು ವರ್ಣೋತ್ತಮರು, ಲೋಕಪೂಜ್ಯರು, ರಾಜರಿಂದ ಮನ್ನಣೆ ಪಡೆಯಲು ಅರ್ಹರು, ಉನ್ನತ ಗುಣವಂತರು, ಶುದ್ಧ ಚಾರಿತ್ರರು, ಭೂಲೋಕದ ದೇವರುಗಳು ಈ ಬ್ರಾಹ್ಮಣರು” – ಹೀಗೆಂದು ಭೂಮಂಡಲೇಶ್ವರ ಭರತನು ಕೊಂಡಾಡಲು ಎತ್ತೆತ್ತಲೂ ಬ್ರಾಹ್ಮಣ ಸಂತತಿ ಒಡನೆಯೇ ವಿಖ್ಯಾತವಾಯಿತು.

ಭರತನ ಕೊಂಡಾಟದಿಂದ ಬ್ರಾಹ್ಮಣ ಸಂತತಿ ಅತಿಪ್ರಸಿದ್ಧವಾಗಿ ಕೆಲವು ಕಾಲ ನಡೆಯುತ್ತಿರುವಲ್ಲಿ ಭರತನಿಗೆ ಒಂದು ದಿನ ಬೆಳಗಿನ ಝಾವ ಅನಿಷ್ಟಫಲ ಸೂಚಕ ದುಃಸ್ವಪ್ನಗಳು ಬಿದ್ದವು. ಇವು ಯುಗದ ಕೊನೆಯಲ್ಲಿ ತನ್ನ ಪ್ರಜೆಗಳಿಗುಂಟಾಗುವ ವಿವಿಧ ಕೇಡುಗಳನ್ನು ಸೂಚಿಸುವಂತಿದೆ ಎಂಬ ಅನುಮಾನ ಭರತನಿಗೆ ಮೂಡಿತು. ಅನುಮಾನ ಪರಿಹಾರಕ್ಕಾಗಿ ತನ್ನ ಆರಾಧ್ಯನಾದ ವೃಷಭನಾಥನನ್ನು ಸ್ತುತಿಸಿ ಧ್ಯಾನಸ್ಥನಾಗಿ ಕೂತಿದ್ದಾಗ ಭರತನಿಗೆ ಅವಧಿಜ್ಞಾನ ಪ್ರಾಪ್ತವಾಯಿತು. (ಹಿಂದೆ ಭರತ ಬ್ರಾಹ್ಮಣ್ಯವನ್ನು ವಂಶಾನ್ವಯ ಮಾಡಿ ಘೋಷಿಸುವಾಗ ಅವನಿಗೆ ಅವಧಿಜ್ಞಾನ ಪ್ರಾಪ್ತವಾಗಿರಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು).

ಅವಧಿಜ್ಞಾನ ಪ್ರಾಪ್ತವಾದ ಭರತನು ತಾನು ಮಾಡಿದ ಮರುಳುತನಕ್ಕೆ ಪಶ್ಚಾತಾಪ ಪಟ್ಟು ತೀರ್ಥಂಕರನಲ್ಲಿ ಹೀಗೆ ಬಿನ್ನೈಸುತ್ತಾನೆ ‘ಆದಿಬ್ರಹ್ಮನೆನಿಸಿದ ನೀನೇ ಎಲ್ಲದಕ್ಕೂ ಮೊದಲು, ನೀನು ಇರುವಂತೆಯೇ ನನ್ನಲ್ಲುಂಟಾದ ಮರುಳತನದಿಂದ ವ್ರತ ಸಮೇತವಾದ ವಿಪ್ರಾನ್ವಯವೊಂದನ್ನು (ವಿಪ್ರತನವನ್ನು ವಂಶಪಾರಂಪರ್ಯ) ಮಾಡಿಬಿಟ್ಟೆ…. ಯಜ್ಞೋಪವೀತದ ಧಾರಣೆ ನನ್ನಿಂದ ಅವರಿಗಾಯಿತು….. ಇದರಿಂದ ಗುಣವೋ ದೋಷವೋ? ಮುಂದಾಗುವುದು ಯುಕ್ತವೊ ಅಯುಕ್ತವೋ? ಹಾನಿ / ವೃದ್ಧಿಯೆಂಬೆರಡರಲ್ಲಿ ಯಾವುದರಲ್ಲಿ ಹೋಗಿ ನಿಲ್ಲುವುದು…. ಅಲ್ಲದೆ ಇಂದು ಬೆಳಗಿನ ಝಾವ ಬಿದ್ದ ಅನಿಷ್ಟ ಸೂಚಕ ಕನಸುಗಳ ಫಲ ಏನೆಂದು ತಿಳಿಯ ಹೇಳಿರಿ. ತಾನೀಗ ಅವಧಿಜ್ಞಾನದಿಂದ ಅರಿತವನಾಗಿದ್ದರೂ….. ಈ ಸಭಾ ಜನರು ಅರಿಯಲೆಂದು ಹೇಳಿ’.

ಆಗ ತ್ರಿಲೋಕಗುರುಗಳು – ‘ನೀನು ಬ್ರಾಹ್ಮಣ ಜಾತಿಯನ್ನು (ಬ್ರಾಹ್ಮಣ್ಯವನ್ನು ಜನ್ಮಕ್ಕೆ ಅಂಟಿಸಿದ್ದು) ಒಳ್ಳೆಯದೆಂದು ಭಾವಿಸಿ ಮಾಡಿದೆ. ಆದರೆ ಧರ್ಮದ ಉದ್ದೇಶದಿಂದ ನೀನು ಮಾಡಿದ್ದರಿಂದ ಆದ ಈ ಬ್ರಾಹ್ಮಣ ಜಾತಿಯ ಆಚರಣೆಯು ನೀನೆಂದಂತೆ – ಈ ಕೃತಯುಗದೊಳಗೆ ಮಾತ್ರವೇ ಸಲ್ಲುವುದು. ಆಮೇಲೆ ಆಚರಣೆ ಬಿಟ್ಟು, ಸನ್ಮಾರ್ಗದ ಬಗ್ಗೆ ಮಚ್ಚರ ಬೆಳೆಸಿಕೊಂಡು, ಕಲಿಯುಗ ಹತ್ತಿರ ಹತ್ತಿರವಾದಂತೆಲ್ಲಾ ಈ ಬ್ರಾಹ್ಮಣರು ದ್ರವ್ಯಲೋಭಾತುರರಾಗಿ, ಉನ್ಮಾರ್ಗ ಉಪದೇಶ ಉದ್ಯತ ಬುದ್ಧಿಯವರಾಗಿ ಅತಿಕ್ರೂರಿಗಳೂ ಆಗುವರು (15. 26). ಮಧು-ಮದ್ಯ-ಮಾಂಸಲೋಲುಪರೂ, ಅಧಾರ್ಮಿಕರೂ, ಪರಸ್ತ್ರೀರತಿಪ್ರಿಯರೂ, ಅಧರ್ಮಿಷ್ಟರೂ, ಕೊಲೆಗಡುಕರೂ, ಪಾಪಿಗಳೂ, ಸುಳ್ಳುಬಡುಕ ಸಂಪತ್ತಿನವರೂ ಆಗುವರು ಕಲಿಯುಗದೊಳಗೆ ಬ್ರಾಹ್ಮಣರು (15-27). ಆದರೂ ಈಗ ಸದಾಚಾರವಂತರಾಗಿರುವುದರಿಂದ ಅವರನ್ನು ಈ ಆಚರಣೆಯಲ್ಲೇ ನಡೆಯಲು ಬಿಡಬೇಕು. ‘ಮಾಡಿ ಕೆಡಿಸಿದರೆ’ ನಿನಗೆ ಎಂದೆಂದಿಗೂ ಕೆಟ್ಟ ಹೆಸರು ನಿಂತು ಬಿಡುವುದು’ ಎಂದು ಹೇಳಿ, ಮುಂದೆ ವೃಷಭನಾಥರು ಭರತ ಕಂಡ ದುಃಸ್ವಪ್ನಗಳ ಸೂಚಿತ ಫಲಗಳನ್ನು ವಿವರ ವಿವರವಾಗಿ ಅರ್ಥೈಸುತ್ತಾರೆ – ‘ಈ ದ್ವಿಜನ್ಮರು ಷಟ್ಕರ್ಮರಹಿತರಾಗುವ ಕೇಡಿನ ಸ್ಥಿತ್ಯಂತರದ ಪರಿಣಾಮ ತರಂಗಿತ ತರಂಗಿತವಾಗಿ ಆ ಮಂಡಲದ ಎಲ್ಲ ಜನರು ಸತ್ಯ-ಶೌಚವಿರಹಿತರಾಗಿ ಸಚ್ಚಾರಿತ್ರ್ಯ ಬಿಟ್ಟು ಭೋಗ ಉಪಭೋಗಗಳಲ್ಲಿ ಲೋಲುಪರಾಗುವರು…… ಇದರಿಂದ ನೀನು ಅಸಹ್ಯ ಪಡಬೇಡ….. ನಿನಗೆ ಜೈನಧರ್ಮ ಶಾಂತಿಯನ್ನುಂಟು ಮಾಡಲಿ’ ಎಂದು ಸಂತೈಸಿ ಕಳುಹಿಸಿದರು. ಭರತ ತನ್ನ ಪಾಪ ಪರಿಹಾರಕ್ಕಾಗಿ ಜೈನಗೃಹಗಳನ್ನು ಕಟ್ಟಿಸಿದನೆಂಬಲ್ಲಿ 15ನೇ ಆಶ್ವಾಸ ಮುಕ್ತಾಯವಾಗುತ್ತದೆ.

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು. ‘ಜನ್ಮಶ್ರೇಷ್ಠತೆ’ಯ ವ್ಯಸನದವರು ಈ ಸಂವಿಧಾನವನ್ನು ಬದಲಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ.. ಬದಲಿಸುತ್ತೇವೆ.. ಎನ್ನುತ್ತಾ ಜೀವ ವಿರೋಧಿ ಜನ್ಮಾಧಾರಿತ ವೈದಿಕತೆಯೆ ಸಂವಿಧಾನವಾಗಲಿ ಎಂಬ ಫರ್ಮಾನುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹೊರಡಿಸುತ್ತಿದ್ದಾರೆ. ತಮ್ಮ ಜನ್ಮವನ್ನೆ ಯೋಗ್ಯತೆಯನ್ನಾಗಿಸಿಕೊಂಡವರು ಆದಿನಾಥನ ಕಲಿಯುಗದ ದರ್ಶನವನ್ನು ಸತ್ಯವಾಗಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...