Homeಮುಖಪುಟಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

ಕ್ರಾಂತಿಕಾರಿ ತುಕಾರಾಮ ಡಾ ಆ ಹ ಸಾಳುಂಖೆ

- Advertisement -
- Advertisement -

ಸಂತ ತುಕಾರಾಂ ಎಂದರೆ ನಮಗೆ ಡಾ ರಾಜ್ ಅಭಿನಯದ “ಜಯತು ಜಯ ವಿಠಲ” ಎಂದು ಹಾಡಿಕೊಂಡು, ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ, ಸದಾ ಸಾಧು ಸ್ವಭಾವದ ಆಕಳಂತೆ ಇದ್ದು, ಪಡಬಾರದ ಪಾಡನ್ನೆಲ್ಲಾ ಪಟ್ಟ ಭಕ್ತನ ಕಾಪಾಡದ ದೇವರು ಕೊನೆಗೆ ನನ್ನ ಹತ್ತಿರ ನೆಮ್ಮದಿಯಾಗಿರು ಎಂದು ಪುಷ್ಪಕವಿಮಾನದಲ್ಲಿ ಬಂದು ಕರೆದುಕೊಂಡು ಹೋಗುವ ಚಿತ್ರವು ಮನಸ್ಸಿನಲ್ಲಿ ಬಂದರೆ ಅದು ನಮ್ಮ ತಪ್ಪಲ್ಲ. ಪೌರಾಣಿಕದ ಬೂದಿಯಲ್ಲಿ ಇತಿಹಾಸದ ಕೆಂಡವನ್ನು ಮರೆಮಾಡುತ್ತಾ ಒಂದು ನಿರ್ದಿಷ್ಟ ಮನಸ್ಥಿತಿಯಿಂದ ಬರಹಗಾರರು ಸಾಮಾಜಿಕ ಸಾಮರಸ್ಯದಲ್ಲಿ, ಧಾರ್ಮಿಕ ಸಮಾನತೆಯಲ್ಲಿ, ಆಧ್ಯಾತ್ಮಿಕ ಔನ್ನತ್ಯದಲ್ಲಿ ಕ್ರಾಂತಿಕಾರಿ ಸಿಂಹಗಳಾಗಿದ್ದವರನ್ನೂ ಮುಂದೆ ಕುರಿಗಳಂತೆ ತೋರಿಬಿಡುತ್ತಾರೆ ಎಂದು ಸಾಳುಂಖೆ ಎಚ್ಚರಿಸುತ್ತಾರೆ.

ಕಳೆದ ಮೂರು ಶತಮಾನಗಳಿಂದ ತುಕಾರಾಮ ಮಹಾರಾಷ್ಟ್ರದ ಜನರ ಹೃದಯದಲ್ಲಿ ಸಂವೇದನೆಯಾದ. ಅವನ ಅಭಂಗಗಳು ಮರಾಠ ಸಂಸ್ಕೃತಿಯ ಭಾಗವಾಗುವಷ್ಟು ನಾಡು ಅವನನ್ನು ಪ್ರೀತಿಸಿತು. ಅದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ ಮನಸ್ಸಿನಲ್ಲಿರುವ ಹಳೆಯ ಸಂತ ತುಕಾರಾಮನ ಪ್ರತಿಮೆಯನ್ನು ದೂರ ಮಾಡಬೇಕಾಗುತ್ತದೆ ಎನ್ನುವರು ಸಾಳುಂಖೆ. ಏಕೆಂದರೆ ಅದು ಅವನ ಮೂಲ ವ್ಯಕ್ತಿತ್ವಕ್ಕೆ ಹೋಲುವುದಿಲ್ಲ. ದಿವಾಳಿಯಾಗಿ, ಅಸಹಾಯಕನಾಗಿ ದೇವರ ಭಕ್ತನಾಗಿ, ಸರಿಯಾಗಿ ಸಂಸಾರ ತೂಗಿಸಲಾಗದೇ, ಸದಾ ತಾಳ ಕುಟ್ಟುತ್ತಾ ಕುಳಿತುಕೊಂಡು, ವ್ಯವಹಾರ ಶೂನ್ಯ, ಮುಗ್ಧ ಭೋಳೆ ಸಂತನಂತೆ (ಅದೇ ಸಂತ ತುಕಾರಾಂ ಚಿತ್ರದಲ್ಲಿ ತೋರಿಸುವಂತೆ) ಇರಿಸಲಾಗಿದೆ. ಆದರೆ ಧರ್ಮದ ಹೆಸರಿನಲ್ಲಿ ಅನೀತಿಯ ವ್ಯಾಪಾರ ನಡೆಸುತ್ತಿದ್ದ ಧಾರ್ಮಿಕಸತ್ತೆಯ ವಿರುದ್ಧವಾಗಿ ಇವನು ಮಹಾನ್ ಯೋಧನಂತೆ ಹೋರಾಡಿದ್ದ. ಅತ್ಯಂತ ಪ್ರಬಲ ಮತ್ತು ಮಜಬೂತಾಗಿರುವ ಸಮಾಜ ವ್ಯವಸ್ಥೆಯ ಮೂಲಕ್ಕೆ ಸಿಡಿಮದ್ದು ಇರಿಸುವ ಕಾರ್ಯವನ್ನು ಅವನು ಬದುಕಿನ ಉದ್ದಕ್ಕೂ ಮಾಡುತ್ತಲೇ ಬಂದಿದ್ದ.

ತುಕಾರಾಮನ ಜೀವನದ ಕ್ರಾಂತಿಕಾರಕ ಅನೇಕ ಘಟನೆಗಳನ್ನು ನಿರ್ಲಕ್ಷಿಸಿ, ಅವನನ್ನು ಸಂತನಾಗಿ ತೋರುವ ಧಾವಂತದಲ್ಲಿ ಮರೆಮಾಚಲಾಗಿರುವ ಸಂಗತಿಗಳ ಮೇಲೆ ಸಾಳುಂಖೆ ಬೆಳಕು ಚೆಲ್ಲುತ್ತಾರೆ.

ತನ್ನ ಅಭಂಗಗಳಲ್ಲಿ ತುಕಾರಾಮ ಬುವಾ ಡಾಂಭಿಕ ವ್ಯವಸ್ಥೆಯ ಮೇಲೆ ನೇರಾನೇರ ಪ್ರಹಾರ ಮಾಡುತ್ತಾರೆ. ಧಾರ್ಮಿಕತೆಯು ಮಾಡುವ ಅನ್ಯಾಯಗಳನ್ನು ಖಂಡಿಸಿ ಬರೆಯುತ್ತಿದ್ದ ಅವನ ಅಭಂಗಗಳನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿಬಿಡುವ ಶಿಕ್ಷೆ ಕೊಡುವುದು ತಿಳಿದಿರುವುದೇ. ಆದರೆ ಹೊಡೆದು, ಬಡಿದು, ನಿಂದಿಸಿ ನಾನಾ ರೀತಿಯಲ್ಲಿ ಹಿಂಸೆಗಳನ್ನು ಕೊಟ್ಟರೂ, “ತುಂಡು ಮಾಡಿ ಕೊಚ್ಚಿ ಹಾಕಿದರೂ ಹೆದರಲಾರೆ” ಎನ್ನುವ ತುಕಾರಾಮ ಅಭಂಗಗಳನ್ನು ಬರೆಯುತ್ತಾನೆ.

ಧಾರ್ಮಿಕನಾಗಿಯೇ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ತುಕಾರಾಮ ಸತ್ತದ್ದೂ ನಿಗೂಢವೇ. ಇಂದ್ರಾಣಿ ನದಿಯ ತೀರದಲ್ಲಿ ಕೀರ್ತನೆ ಹಾಡುತ್ತಿದ್ದಾಗ ಅದೃಶ್ಯನಾದ ಎಂಬ ಐತಿಹ್ಯವನ್ನು ಬೇಧಿಸಿದರೆ ರಾಮೇಶ್ವರ ಭಟ್ಟ ತುಕಾರಾಮನ ಮೇಲೆ ಖಟ್ಲೆ ಹೂಡಿದವನು, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡವನು, ಬಹಿಷ್ಕಾರ ಹಾಕಿಸಿದವನು, ಗಡಿಪಾರಿನ ಆಜ್ಞೆ ಮಾಡಿಸಿದವನು, ಅಭಂಗಗಳನ್ನು ಇಂದ್ರಾಯಣಿ ನದಿಯಲ್ಲಿ ಮುಳುಗಿಸಿದವನು, ಅಂತವನು ಸಾರುವುದೇನೆಂದರೆ, ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು. ಅಂದರೆ ಹೆಣವೂ ಕೂಡ ಸಿಗದಂತೆ ಮುಗಿಸಿದರೇ?

ತುಕಾರಾಮನ ವೈಕುಂಠಯಾನ ಹೇಗೆ ಹತ್ಯೆಯಾಗಿದ್ದಿರಬಹುದೆಂದು ಸಾಳುಂಖೆ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತಾರೆ.

ಒಟ್ಟಾರೆ ತುಕಾರಾಮನೆಂಬ ಕ್ರಾಂತಿಕಾರಿಯನ್ನು ಅವನ ಸಾಮಾಜಿಕ ಹೋರಾಟದ ಮತ್ತು ಆಧ್ಯಾತ್ಮಿಕತೆಯ ಮೌಲ್ಯದ ಸಮೇತ ಪರಿಚಯಿಸಿ ಕೊಡುವ ಸಾಳುಂಖೆಯವರ ಕೃತಿಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ತಂದಿದ್ದಾರೆ. ಪುಟಪುಟದಲ್ಲೂ ನಮ್ಮ ಭಾರತದ ಧಾರ್ಮಿಕತೆಯಲ್ಲಿ ತನ್ನ ಕ್ರೌರ್ಯ ಮತ್ತು ಅಸಹನೆಯನ್ನು ಮೆರೆದ ಧಾರ್ಮಿಕಸತ್ತೆಯ ದೌರ್ಜನ್ಯದ ಅನಾವರಣವಾಗುತ್ತದೆ. ಜೊತೆಗೆ ತುಕಾರಾಮನ ಹೋರಾಟದ ಘನತೆ ಮತ್ತು ತಾತ್ವಿಕತೆಯು ಪುಟಕ್ಕಿಟ್ಟಂತೆ ಹೊಳೆಯುತ್ತದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇದನ್ನು ಪ್ರಕಟಿಸಿ ಸಂತ ಯೋಧನ ಅರಿಯುವಲ್ಲಿ ಉಪಕರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಂತ ತುಕಾರಾಮನ ನಿಜ ಚರಿತ್ರೆಯನ್ನು ತಿಳಿಸಿರುವ ಡಾ.ಸಾಳುಂಕೆ ಮತ್ತು ಚಂದ್ರಕಾಂತ ಪೋಕಳೆಯವರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...