Homeರಾಜಕೀಯಮೈತ್ರಿ ಸರಕಾರದ ಗೋಜಲು ಸಂದೇಶಗಳು

ಮೈತ್ರಿ ಸರಕಾರದ ಗೋಜಲು ಸಂದೇಶಗಳು

- Advertisement -
- Advertisement -
  • ಎ. ನಾರಾಯಣ |

ಎಲ್ಲಾ ಮೈತ್ರಿ ಸರಕಾರಗಳೂ ಅವಕಾಶವಾದದ ಶಿಶುಗಳೇ ಆಗಿರುತ್ತವೆ. ಹಾಗಿರುವಾಗ ಕರ್ನಾಟಕದಲ್ಲಿ 2018ರ ಚುನಾವಣೆಯ ನಂತರ ರೂಪುಗೊಂಡ ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆsಸ್ ಪಕ್ಷಗಳ ಮೈತ್ರಿ ಸರಕಾರವನ್ನು ಕೆಲವರು ಅಪವಿತ್ರ ಅಂತಲೂ ಅನೈತಿಕ ಅಂತಲೂ ಟೀಕಿಸುತ್ತಿರುವುದು ವಿಚಿತ್ರವಾಗಿದೆ. ಭಾರತದ ಪ್ರಜಾತಾಂತ್ರಿಕ ರಾಜಕೀಯವೇ ಒಂದು ರೀತಿಯ ಅಪವಿತ್ರ ಮತ್ತು ಅನೈತಿಕ ಆಯ್ಕೆಗಳ ಸರಮಾಲೆ. ಇರುವುದರಲ್ಲಿ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆಗಳನ್ನು ಮಾಡುವುದೇ ಇಲ್ಲಿ ಪರಮಪವಿತ್ರ ಪೌರ ಕೈಂಕರ್ಯ. ಅದು ಚುನಾವಣೆಯಾದರೂ ಅಷ್ಟೇ. ಆಡಳಿತವಾದರೂ ಅಷ್ಟೇ, ಸಂಸದೀಯ ವ್ಯವಹಾರಗಳಾದರೂ ಅಷ್ಟೇ .

ಆದುದರಿಂದ ಕರ್ನಾಟಕದಲ್ಲಿ ನಡೆದ ಚುನಾವಣೋತ್ತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಬಹುದಾಗಿದ್ದ ಪ್ರಶ್ನೆ ಬಹಳ ಸರಳವಾಗಿತ್ತು. ಯಾವುದು ಕಡಿಮೆ ಅಪವಿತ್ರ ಮತ್ತು ಅನೈತಿಕ? ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಸರಳ ಬಹುಮತಕ್ಕೆ ಬೇಕಾಗಿದ್ದ ಸಂಖ್ಯೆಗಳನ್ನು ಹೊಂದಿಸಲು ಇತರ ಪಕ್ಷಗಳ ಶಾಸಕರನ್ನು ಅಪ್ಪಟ ಹರಾಜಿನಲ್ಲಿ ವಿಕ್ರಯಿಸಿ ಸರಕಾರ ರಚಿಸುವುದೇ? ಅಥವಾ ಚುನಾವಣೆಯಲ್ಲಿ ಎಲ್ಲರೂ ಸೋತ ಹಿನ್ನೆಲೆಯಲ್ಲಿ ಸೋತ ಎರಡು ಪಕ್ಷಗಳು ಸೇರಿ ಕಾನೂನುಬದ್ಧವಾಗಿ ಸರಕಾರ ನಡೆಸುವುದೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಕೋರ್ಟು-ಕಚೇರಿ ಅಲೆಯಬೇಕಾಗಿಲ್ಲ, ರಾಜ್ಯಪಾಲರ ಬಳಿ ಬಿನ್ನವತ್ತಲೆ ಸಮರ್ಪಿಸಿ ಕಾಯಬೇಕಾಗಿಲ್ಲ, ಮಾಧ್ಯಮಗಳ ಚರ್ಚಾ ರಂಪಾಟದ ಅಗತ್ಯವಿಲ್ಲ. ನಿಷ್ಪಕ್ಷಪಾತವಾಗಿ ಯೋಚಿಸಬಲ್ಲ ಮೂರ್ಖನಿಗೂ ಇವೆರಡರ ನಡುವೆ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆ ಯಾವುದು ಎಂದು ತಿಳಿದಿರುತ್ತದೆ. ಹಾಗಂತ ಕರ್ನಾಟಕದಲ್ಲಿ ಆಗಿ ಹೋದದ್ದೆಲ್ಲ ಬಹಳ ಅಪೇಕ್ಷಣೀಯ ಮತ್ತು ಆದರ್ಶಪ್ರಾಯ ಬೆಳವಣಿಗೆಗಳು ಎನ್ನುವ ಹಾಗಿಲ್ಲ. ಕಾನೂನುಬದ್ಧವಾದ ಎಲ್ಲವೂ ಆದರ್ಶಪ್ರಾಯವಾಗಿರುವುದಿಲ್ಲ. ಹಾಗಂತ ಅವು ಕಾನೂನು ವಿರೋಧಿ ಕೃತ್ಯಗಳಿಗಿಂತ ಅಪೇಕ್ಷಣೀಯ. ಮುಂದೊಂದು ದಿನ ಅತೀ ಹೆಚ್ಚು ಸ್ಥಾನಗಳು ಬಂದ ಪಕ್ಷದ ಜತೆ ಸಣ್ಣಪಕ್ಷಗಳು ಸೇರಿಕೊಳ್ಳಬೇಕು ಎಂಬ ಕಾನೂನೇ ಬಂದರೆ ಅದು ಬೇರೆ ಪ್ರಶ್ನೆ. ಹಾಗೊಂದು ಕಾನೂನು ತಂದು ರಾಜಕೀಯ ಪಕ್ಷಗಳ ಸ್ವಾತಂತ್ರ್ಯಹರಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಬಿಜೆಪಿಗೆ ಸಹಜವಾಗಿಯೇ ಬಹಳ ಕೋಪ ಬಂದಿದೆ. ಅದರ ಕೋಪ ಕೂಡಾ ಅರ್ಥವಾಗುವಂತಾದ್ದೆ. ಅದರ ಬಳಿ ಸಾಕಷ್ಟು ಸಂಖ್ಯೆಗಳಿಲ್ಲದೆ ಇರಬಹುದು. ಆದರೆ ಇರುವ ಮೂರು ಪಕ್ಷಗಳ ಪೈಕಿ ಅದು ಅತೀಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆದುದರಿಂದ ಅತೀ ಕಡಿಮೆ ಸಂಖ್ಯೆ ಹೊಂದಿದ ಜೆಡಿ(ಎಸ್) ತನ್ನೊಂದಿಗೆ ಬಾರದೆ ಕಾಂಗ್ರೆಸ್ ಜೊತೆಗೆ ಸೇರಿದ್ದಕ್ಕೆ ಅದು ಕುದಿಯುತ್ತಿದೆ. ಆದರೆ ಯಾರ ಜತೆ ಸೇರಿಕೊಳ್ಳಬೇಕೆನ್ನುವುದು ಜೆಡಿ(ಎಸ್)ನ ಆಯ್ಕೆ. ತನಗೆ ಬೇಕಾದ ಪಕ್ಷದೊಂದಿಗೆ ಕಾನೂನಿನ ಪರಿಧಿಯೊಳಗೆ ಅದು ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಅದರ ಬಳಿ ಬಂದು ಪ್ರಸ್ತಾಪ ಮಂಡಿಸಿತು ಎನ್ನುವುದು ಕೇವಲ ಸಾಂದರ್ಭಿಕ. ಜೆಡಿ(ಎಸ್)ಗೆ ಕಾಂಗ್ರೆಸ್ಸಿನ ಜತೆ ಹೋಗುವುದು ಇಷ್ಟವಿರಲಿಲ್ಲ ಎಂದಾದರೆ ಬಿಜೆಪಿಯ ಜತೆ ಹೋಗುವ ರಾಜಮಾರ್ಗ ತೆರೆದೇ ಇತ್ತು. ಬಹುಶಃ ಬಿಜೆಪಿಯ ಜತೆ ಸೇರಿಕೊಂಡಿದ್ದರೆ ಅದಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರಲಿಲ್ಲವೋ ಏನೋ. ಜೆಡಿ(ಎಸ್) ಮುಖ್ಯಮಂತ್ರಿ ಪಟ್ಟ ತನಗೆ ಅನಾಯಾಸವಾಗಿ ದೊರಕಿತು ಎಂದು ಕಾಂಗ್ರೆಸ್ಸಿನೊಂದಿಗೆ ಸೇರಿಕೊಂಡಿತೇ? ಅಥವಾ ಅದರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಜಾತ್ಯತೀತತೆಯ ಬದ್ಧತೆಯಿಂದ ಬಿಜೆಪಿಯನ್ನು ದೂರವಿಸಿ ಕಾಂಗ್ರೆಸ್ಸನ್ನು ಅಪ್ಪಿಕೊಂಡಿತೇ? ಅಥವಾ ಜಾತ್ಯತೀತತೆಗೆ ಬದ್ಧರಾಗಿರುವ ಮತ್ತು ಬದ್ಧರಾಗಿರದ ತಮ್ಮ ಶಾಸಕರು ಬೇರೆಬೇರೆ ದಾರಿ ಹಿಡಿಯುವ ಮೂಲಕ ಪಕ್ಷ ಇಬ್ಭಾಗವಾಗಿ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗುವ ಸನ್ನಿವೇಶ ತಪ್ಪಿಸಲು ಕಾಂಗ್ರೆಸ್ಸಿನ ಪ್ರಸ್ತಾಪ ಒಪ್ಪಿಕೊಂಡಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸ್ಪಷ್ಟವಾಗಿ ದೊರಕಲಾರದು.

ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭಕ್ಕೆ ಬಂದ ವಿರೋಧ ಪಕ್ಷಗಳ ರಾಷ್ಟ್ರ ನಾಯಕರುಗಳಿಗೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತಮ್ಮ ಸ್ವಹಿತಾಸಕ್ತಿ ಇತ್ತು. ಆದರೆ ಕರ್ನಾಟಕದಾಚೆಗೆ ದೊಡ್ಡಮಟ್ಟದ ಅಸ್ತಿತ್ವ ಇಲ್ಲದ ಜೆಡಿ(ಎಸ್)ಗೆ ಇಂತಹದ್ದೊಂದು ಸ್ವಹಿತಾಸಕ್ತಿಯ ಪ್ರಶ್ನೆ ಪ್ರೇರಣೆಯಾಗಿರುವ ಸಾಧ್ಯತೆ ಕಡಿಮೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಜಾತಿಯ ಬೆಂಬಲದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಜೆಡಿ(ಎಸ್) ಪಕ್ಷವನ್ನು ಬಿಜೆಪಿ ಇಡಿಯಾಗಿ ನುಂಗಿಬಿಡುವ ಸಾಧ್ಯತೆ ಇಲ್ಲ. ಜೆಡಿ(ಎಸ್)ಗೆ ಕಂಟಕ ಇರುವುದು ಮತ್ತು ಬರುವುದು ಕಾಂಗ್ರೆಸ್ಸಿನಿಂದ. ಸದ್ಯದಲ್ಲೇ ಬರಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ಮಾಡದೆ ಉಳಿದರೂ ಜೆಡಿ(ಎಸ್) ಸಂಕಟವನ್ನು ಅನುಭವಿಸಬೇಕು. ಈ ಸಂಕಟಕ್ಕೆ ಅದು ಸಿದ್ಧವಾಗಿದ್ದರೆ ರಾಜ್ಯಮಟ್ಟದಲ್ಲಿ ಮಾಡಿಕೊಂಡ ಮೈತ್ರಿ ಸರಕಾರಕ್ಕೆ ಕಂಟಕ ಇಲ್ಲ. ಆದರೆ ಆರಂಭದಲ್ಲಿ ಬೇಷರತ್ ಬೆಂಬಲ ಅಂತ ಹೇಳಿಕೊಂಡಿದ್ದ ಕಾಂಗ್ರೆಸ್ ಈಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಿದೆ ಎನ್ನುವ ವರ್ತಮಾನವಿದೆ. ಇದನ್ನೆಲ್ಲಾ ನೋಡುತಿದ್ದರೆ ಕಾಂಗ್ರೆಸ್ಸಿನ ಬದ್ಧತೆ ಜಾತ್ಯತೀತತೆಗೊ ಅಥವಾ ಸೋತರೂ ಅಧಿಕಾರದಲ್ಲಿ ಮುಂದುವರಿಯುವುದಕ್ಕೋ ಎನ್ನುವ ಸಂಶಯ ಬರುತ್ತಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಬೆಂಬಲ ನೀಡಿದ್ದು ಜಾತ್ಯತೀತತೆಗಿಂತ ಹೆಚ್ಚಾಗಿ ತನ್ನನ್ನು ನಿರ್ನಾಮ ಮಾಡಲು ಹೊರಟಿರುವ ಬಿಜೆಪಿಯನ್ನು ಕರ್ನಾಟಕದ ಮಟ್ಟಿಗೆ ಅಧಿಕಾರದಿಂದ ಹೊರಗಿಡಲು ಎನ್ನುವುದು ಹೆಚ್ಚು ಸೂಕ್ತ. ಜಾತ್ಯತೀತತೆಯ ಕುರಿತ ಬದ್ಧತೆ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು, ಇವೆರಡೂ ಒಂದೇ ಎಂದು ಕಾಂಗ್ರೆಸ್ ವಾದಿಸಬಹುದು. ವಾಸ್ತವದಲ್ಲಿ ಇವೆರಡು ಬೇರೆಬೇರೆ. ಅದೇನೇ ಇರಲಿ, ಈ ಮೈತ್ರಿ ಒಂದು ಸಂದೇಶವನ್ನಂತೂ ನೀಡಿದೆ. ಅದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದ್ದ ಸಂದೇಶ. ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ರಾಜ್ಯಗಳ ಚುನಾವಣೆಯಲ್ಲಿ ಗೆದ್ದರೂ, ಗೆಲ್ಲದೇ ಅತಂತ್ರಸ್ಥಿತಿ ನಿರ್ಮಾಣವಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ವಿರಮಿಸುವುದು ಎನ್ನುವುದು ಎಲ್ಲಾ ಕಾಲದಲ್ಲೂ ಎಲ್ಲಾ ರಾಜ್ಯಗಳಲ್ಲೂ ಸಾಧ್ಯವಾಗಬೇಕಿಲ್ಲ ಎನ್ನುವುದೇ ಆ ಸಂದೇಶ. ಈ ಸಂದೇಶದ ಪ್ರಸ್ತುತತೆ ಮೈತ್ರಿ ಸರಕಾರ ಉಳಿದಷ್ಟು ಕಾಲ ಮಾತ್ರ. ಇದರ ಜತೆಗೆ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬೇಕಾದರೆ ಒಂದಷ್ಟು ತ್ಯಾಗಗಳಿಗೂ ಸಿದ್ಧವಾಗಿದೆ ಎನ್ನುವ ಒಂದು ಸಂದೇಶವೂ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಮಂತ್ರಿಮಂಡಲ ರಚಿಸುವಲ್ಲಿ ಕಾಂಗ್ರೆಸ್ ನಡೆÀಸುತ್ತಿರುವ ಮೇಲಾಟ, ಜತೆಗೆ ಐದು ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೋ ಇಲ್ಲವೋ ಎನ್ನುವ ಕುರಿತ ನಿಲುವಿನಲ್ಲಿ ಅದು ತೋರುತ್ತಿರುವ ಅಸ್ಪಷ್ಟತೆ ಇತ್ಯಾದಿಗಳನ್ನು ನೋಡಿದರೆ ಆ ಸಂದೇಶ ಕೇವಲ ಕಣ್ಣುಕಟ್ಟು ಅನ್ನಿಸುತ್ತದೆ. ಮುಂದೇನೋ? ಊಹಿಸುವುದು ಕಷ್ಟ.

ವಾಸ್ತವದಲ್ಲಿ, ಕಾಂಗ್ರೆಸ್ಸಿಗೆ ಸೆಕ್ಯುಲರಿಸಂ ಕುರಿತಾದ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮತ್ತು ಬಿಜೆಪಿಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಂದಾಗಿಸಲು ಒಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಉದ್ದೇಶಗಳೇ ಇದ್ದಿದ್ದರೆ ಅದು ಕುಮಾರಸ್ವಾಮಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕಿತ್ತು. ಒಂದುವೇಳೆ ಸರಕಾರದಲ್ಲಿ ಪಾಲ್ಗೊಳ್ಳಲೇಬೇಕು ಎಂದಿದ್ದಲ್ಲಿ ಮಂತ್ರಿಮಂಡಲದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧಿತ್ವ ಸಾಕು ಎನ್ನಬೇಕಿತ್ತು. ಆಗ ಅದು ನೈತಿಕವಾಗಿ ಹಲವು ಮೆಟ್ಟಿಲು ಮೇಲೇರುತ್ತಿತ್ತು. ಬಿಜೆಪಿಯ ವಿಷಯಕ್ಕೆ ಬಂದರೆ ಆ ಪಕ್ಷದಲ್ಲಿ ಇಲ್ಲದ ನೈತಿಕತೆ ಅದಕ್ಕಿದೆ ಅಂತ ಜನ ಭಾವಿಸುತ್ತಾರೆ. ಅದೇವೇಳೆ ಕಾಂಗ್ರೆಸ್ ವಾಸ್ತವದಲ್ಲಿ ಎಷ್ಟು ನೈತಿಕ ಅಧಃಪತನ ಕಂಡಿದೆಯೋ ಅದಕ್ಕಿಂತ ಹೆಚ್ಚಿನ ಪತನವನ್ನು ಜನ ಅದರ ಮೇಲೆ ಆರೋಪಿಸುತ್ತಿದ್ದಾರೆ. ಸುದೀರ್ಘ ಕಾಲ ಆಡಳಿತದಲ್ಲಿದ್ದ ಪಕ್ಷವಾದ ಕಾರಣ ಕಾಂಗ್ರೆಸ್ ಇಂತಹ ಟೀಕೆಗಳನ್ನು ಎದುರಿಸುವುದು ಸಹಜ. ಜತೆಗೆ ಜನ ಕಾಂಗ್ರೆಸ್ಸನ್ನು ಈ ರೀತಿ ಕಾಣಲು ಬೇಕಾದ ಎಲ್ಲಾ ರೀತಿಯ ಪ್ರಚಾರವನ್ನು ಬಿಜೆಪಿ ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಇದನ್ನು ಮೆಟ್ಟಿನಿಂತು ತನ್ನ ಪರವಾಗಿ ಜನಾಭಿಪ್ರಾಯ ಮತ್ತೆ ರೂಪುಗೊಳ್ಳುವಂತೆ ಮಾಡಬೇಕಾದರೆ ಕಾಂಗ್ರೆಸ್ ಗಟ್ಟಿಯಾದ ಕೆಲ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋತರೂ ಅಧಿಕಾರ ಬಿಡಲೊಪ್ಪದ ಭಂಡಪಕ್ಷ ಈ ಕಾಂಗ್ರೆಸ್ ಎನ್ನುವ ರೀತಿಯಲ್ಲಿ ಜನ ಯೋಚಿಸಲು ಅನುವಾಗುವಂತೆ ಆ ಪಕ್ಷದ ನಡವಳಿಕೆ ಸಾಗಿದರೆ ಮುಂದಿನ ದಾರಿ ಅದಕ್ಕೆ ಇನ್ನೂ ದುರ್ಗಮವಾದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...