Homeರಾಜಕೀಯಮೈತ್ರಿ ಸರಕಾರದ ಗೋಜಲು ಸಂದೇಶಗಳು

ಮೈತ್ರಿ ಸರಕಾರದ ಗೋಜಲು ಸಂದೇಶಗಳು

- Advertisement -
- Advertisement -
  • ಎ. ನಾರಾಯಣ |

ಎಲ್ಲಾ ಮೈತ್ರಿ ಸರಕಾರಗಳೂ ಅವಕಾಶವಾದದ ಶಿಶುಗಳೇ ಆಗಿರುತ್ತವೆ. ಹಾಗಿರುವಾಗ ಕರ್ನಾಟಕದಲ್ಲಿ 2018ರ ಚುನಾವಣೆಯ ನಂತರ ರೂಪುಗೊಂಡ ಜನತಾದಳ (ಜಾತ್ಯತೀತ) ಮತ್ತು ಕಾಂಗ್ರೆsಸ್ ಪಕ್ಷಗಳ ಮೈತ್ರಿ ಸರಕಾರವನ್ನು ಕೆಲವರು ಅಪವಿತ್ರ ಅಂತಲೂ ಅನೈತಿಕ ಅಂತಲೂ ಟೀಕಿಸುತ್ತಿರುವುದು ವಿಚಿತ್ರವಾಗಿದೆ. ಭಾರತದ ಪ್ರಜಾತಾಂತ್ರಿಕ ರಾಜಕೀಯವೇ ಒಂದು ರೀತಿಯ ಅಪವಿತ್ರ ಮತ್ತು ಅನೈತಿಕ ಆಯ್ಕೆಗಳ ಸರಮಾಲೆ. ಇರುವುದರಲ್ಲಿ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆಗಳನ್ನು ಮಾಡುವುದೇ ಇಲ್ಲಿ ಪರಮಪವಿತ್ರ ಪೌರ ಕೈಂಕರ್ಯ. ಅದು ಚುನಾವಣೆಯಾದರೂ ಅಷ್ಟೇ. ಆಡಳಿತವಾದರೂ ಅಷ್ಟೇ, ಸಂಸದೀಯ ವ್ಯವಹಾರಗಳಾದರೂ ಅಷ್ಟೇ .

ಆದುದರಿಂದ ಕರ್ನಾಟಕದಲ್ಲಿ ನಡೆದ ಚುನಾವಣೋತ್ತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಬಹುದಾಗಿದ್ದ ಪ್ರಶ್ನೆ ಬಹಳ ಸರಳವಾಗಿತ್ತು. ಯಾವುದು ಕಡಿಮೆ ಅಪವಿತ್ರ ಮತ್ತು ಅನೈತಿಕ? ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಸರಳ ಬಹುಮತಕ್ಕೆ ಬೇಕಾಗಿದ್ದ ಸಂಖ್ಯೆಗಳನ್ನು ಹೊಂದಿಸಲು ಇತರ ಪಕ್ಷಗಳ ಶಾಸಕರನ್ನು ಅಪ್ಪಟ ಹರಾಜಿನಲ್ಲಿ ವಿಕ್ರಯಿಸಿ ಸರಕಾರ ರಚಿಸುವುದೇ? ಅಥವಾ ಚುನಾವಣೆಯಲ್ಲಿ ಎಲ್ಲರೂ ಸೋತ ಹಿನ್ನೆಲೆಯಲ್ಲಿ ಸೋತ ಎರಡು ಪಕ್ಷಗಳು ಸೇರಿ ಕಾನೂನುಬದ್ಧವಾಗಿ ಸರಕಾರ ನಡೆಸುವುದೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಕೋರ್ಟು-ಕಚೇರಿ ಅಲೆಯಬೇಕಾಗಿಲ್ಲ, ರಾಜ್ಯಪಾಲರ ಬಳಿ ಬಿನ್ನವತ್ತಲೆ ಸಮರ್ಪಿಸಿ ಕಾಯಬೇಕಾಗಿಲ್ಲ, ಮಾಧ್ಯಮಗಳ ಚರ್ಚಾ ರಂಪಾಟದ ಅಗತ್ಯವಿಲ್ಲ. ನಿಷ್ಪಕ್ಷಪಾತವಾಗಿ ಯೋಚಿಸಬಲ್ಲ ಮೂರ್ಖನಿಗೂ ಇವೆರಡರ ನಡುವೆ ಕಡಿಮೆ ಅಪವಿತ್ರ ಮತ್ತು ಅನೈತಿಕವಾದ ಆಯ್ಕೆ ಯಾವುದು ಎಂದು ತಿಳಿದಿರುತ್ತದೆ. ಹಾಗಂತ ಕರ್ನಾಟಕದಲ್ಲಿ ಆಗಿ ಹೋದದ್ದೆಲ್ಲ ಬಹಳ ಅಪೇಕ್ಷಣೀಯ ಮತ್ತು ಆದರ್ಶಪ್ರಾಯ ಬೆಳವಣಿಗೆಗಳು ಎನ್ನುವ ಹಾಗಿಲ್ಲ. ಕಾನೂನುಬದ್ಧವಾದ ಎಲ್ಲವೂ ಆದರ್ಶಪ್ರಾಯವಾಗಿರುವುದಿಲ್ಲ. ಹಾಗಂತ ಅವು ಕಾನೂನು ವಿರೋಧಿ ಕೃತ್ಯಗಳಿಗಿಂತ ಅಪೇಕ್ಷಣೀಯ. ಮುಂದೊಂದು ದಿನ ಅತೀ ಹೆಚ್ಚು ಸ್ಥಾನಗಳು ಬಂದ ಪಕ್ಷದ ಜತೆ ಸಣ್ಣಪಕ್ಷಗಳು ಸೇರಿಕೊಳ್ಳಬೇಕು ಎಂಬ ಕಾನೂನೇ ಬಂದರೆ ಅದು ಬೇರೆ ಪ್ರಶ್ನೆ. ಹಾಗೊಂದು ಕಾನೂನು ತಂದು ರಾಜಕೀಯ ಪಕ್ಷಗಳ ಸ್ವಾತಂತ್ರ್ಯಹರಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

ಬಿಜೆಪಿಗೆ ಸಹಜವಾಗಿಯೇ ಬಹಳ ಕೋಪ ಬಂದಿದೆ. ಅದರ ಕೋಪ ಕೂಡಾ ಅರ್ಥವಾಗುವಂತಾದ್ದೆ. ಅದರ ಬಳಿ ಸಾಕಷ್ಟು ಸಂಖ್ಯೆಗಳಿಲ್ಲದೆ ಇರಬಹುದು. ಆದರೆ ಇರುವ ಮೂರು ಪಕ್ಷಗಳ ಪೈಕಿ ಅದು ಅತೀಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಆದುದರಿಂದ ಅತೀ ಕಡಿಮೆ ಸಂಖ್ಯೆ ಹೊಂದಿದ ಜೆಡಿ(ಎಸ್) ತನ್ನೊಂದಿಗೆ ಬಾರದೆ ಕಾಂಗ್ರೆಸ್ ಜೊತೆಗೆ ಸೇರಿದ್ದಕ್ಕೆ ಅದು ಕುದಿಯುತ್ತಿದೆ. ಆದರೆ ಯಾರ ಜತೆ ಸೇರಿಕೊಳ್ಳಬೇಕೆನ್ನುವುದು ಜೆಡಿ(ಎಸ್)ನ ಆಯ್ಕೆ. ತನಗೆ ಬೇಕಾದ ಪಕ್ಷದೊಂದಿಗೆ ಕಾನೂನಿನ ಪರಿಧಿಯೊಳಗೆ ಅದು ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್, ಬಿಜೆಪಿಗಿಂತ ಮೊದಲು ಅದರ ಬಳಿ ಬಂದು ಪ್ರಸ್ತಾಪ ಮಂಡಿಸಿತು ಎನ್ನುವುದು ಕೇವಲ ಸಾಂದರ್ಭಿಕ. ಜೆಡಿ(ಎಸ್)ಗೆ ಕಾಂಗ್ರೆಸ್ಸಿನ ಜತೆ ಹೋಗುವುದು ಇಷ್ಟವಿರಲಿಲ್ಲ ಎಂದಾದರೆ ಬಿಜೆಪಿಯ ಜತೆ ಹೋಗುವ ರಾಜಮಾರ್ಗ ತೆರೆದೇ ಇತ್ತು. ಬಹುಶಃ ಬಿಜೆಪಿಯ ಜತೆ ಸೇರಿಕೊಂಡಿದ್ದರೆ ಅದಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರಲಿಲ್ಲವೋ ಏನೋ. ಜೆಡಿ(ಎಸ್) ಮುಖ್ಯಮಂತ್ರಿ ಪಟ್ಟ ತನಗೆ ಅನಾಯಾಸವಾಗಿ ದೊರಕಿತು ಎಂದು ಕಾಂಗ್ರೆಸ್ಸಿನೊಂದಿಗೆ ಸೇರಿಕೊಂಡಿತೇ? ಅಥವಾ ಅದರ ಬಳಿ ಉಳಿದಿರಬಹುದಾದ ಅಲ್ಪಸ್ವಲ್ಪ ಜಾತ್ಯತೀತತೆಯ ಬದ್ಧತೆಯಿಂದ ಬಿಜೆಪಿಯನ್ನು ದೂರವಿಸಿ ಕಾಂಗ್ರೆಸ್ಸನ್ನು ಅಪ್ಪಿಕೊಂಡಿತೇ? ಅಥವಾ ಜಾತ್ಯತೀತತೆಗೆ ಬದ್ಧರಾಗಿರುವ ಮತ್ತು ಬದ್ಧರಾಗಿರದ ತಮ್ಮ ಶಾಸಕರು ಬೇರೆಬೇರೆ ದಾರಿ ಹಿಡಿಯುವ ಮೂಲಕ ಪಕ್ಷ ಇಬ್ಭಾಗವಾಗಿ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗುವ ಸನ್ನಿವೇಶ ತಪ್ಪಿಸಲು ಕಾಂಗ್ರೆಸ್ಸಿನ ಪ್ರಸ್ತಾಪ ಒಪ್ಪಿಕೊಂಡಿತೇ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸ್ಪಷ್ಟವಾಗಿ ದೊರಕಲಾರದು.

ಕುಮಾರಸ್ವಾಮಿಯವರ ಪದಗ್ರಹಣ ಸಮಾರಂಭಕ್ಕೆ ಬಂದ ವಿರೋಧ ಪಕ್ಷಗಳ ರಾಷ್ಟ್ರ ನಾಯಕರುಗಳಿಗೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ತಮ್ಮ ಸ್ವಹಿತಾಸಕ್ತಿ ಇತ್ತು. ಆದರೆ ಕರ್ನಾಟಕದಾಚೆಗೆ ದೊಡ್ಡಮಟ್ಟದ ಅಸ್ತಿತ್ವ ಇಲ್ಲದ ಜೆಡಿ(ಎಸ್)ಗೆ ಇಂತಹದ್ದೊಂದು ಸ್ವಹಿತಾಸಕ್ತಿಯ ಪ್ರಶ್ನೆ ಪ್ರೇರಣೆಯಾಗಿರುವ ಸಾಧ್ಯತೆ ಕಡಿಮೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಜಾತಿಯ ಬೆಂಬಲದಲ್ಲಿ ಅಸ್ತಿತ್ವ ಕಂಡುಕೊಂಡಿರುವ ಜೆಡಿ(ಎಸ್) ಪಕ್ಷವನ್ನು ಬಿಜೆಪಿ ಇಡಿಯಾಗಿ ನುಂಗಿಬಿಡುವ ಸಾಧ್ಯತೆ ಇಲ್ಲ. ಜೆಡಿ(ಎಸ್)ಗೆ ಕಂಟಕ ಇರುವುದು ಮತ್ತು ಬರುವುದು ಕಾಂಗ್ರೆಸ್ಸಿನಿಂದ. ಸದ್ಯದಲ್ಲೇ ಬರಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆ ಮಾಡಿಕೊಂಡರೂ ಮಾಡದೆ ಉಳಿದರೂ ಜೆಡಿ(ಎಸ್) ಸಂಕಟವನ್ನು ಅನುಭವಿಸಬೇಕು. ಈ ಸಂಕಟಕ್ಕೆ ಅದು ಸಿದ್ಧವಾಗಿದ್ದರೆ ರಾಜ್ಯಮಟ್ಟದಲ್ಲಿ ಮಾಡಿಕೊಂಡ ಮೈತ್ರಿ ಸರಕಾರಕ್ಕೆ ಕಂಟಕ ಇಲ್ಲ. ಆದರೆ ಆರಂಭದಲ್ಲಿ ಬೇಷರತ್ ಬೆಂಬಲ ಅಂತ ಹೇಳಿಕೊಂಡಿದ್ದ ಕಾಂಗ್ರೆಸ್ ಈಗ ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸುತ್ತಿದೆ ಎನ್ನುವ ವರ್ತಮಾನವಿದೆ. ಇದನ್ನೆಲ್ಲಾ ನೋಡುತಿದ್ದರೆ ಕಾಂಗ್ರೆಸ್ಸಿನ ಬದ್ಧತೆ ಜಾತ್ಯತೀತತೆಗೊ ಅಥವಾ ಸೋತರೂ ಅಧಿಕಾರದಲ್ಲಿ ಮುಂದುವರಿಯುವುದಕ್ಕೋ ಎನ್ನುವ ಸಂಶಯ ಬರುತ್ತಿದೆ.

ಕಾಂಗ್ರೆಸ್, ಜೆಡಿಎಸ್‍ಗೆ ಬೆಂಬಲ ನೀಡಿದ್ದು ಜಾತ್ಯತೀತತೆಗಿಂತ ಹೆಚ್ಚಾಗಿ ತನ್ನನ್ನು ನಿರ್ನಾಮ ಮಾಡಲು ಹೊರಟಿರುವ ಬಿಜೆಪಿಯನ್ನು ಕರ್ನಾಟಕದ ಮಟ್ಟಿಗೆ ಅಧಿಕಾರದಿಂದ ಹೊರಗಿಡಲು ಎನ್ನುವುದು ಹೆಚ್ಚು ಸೂಕ್ತ. ಜಾತ್ಯತೀತತೆಯ ಕುರಿತ ಬದ್ಧತೆ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು, ಇವೆರಡೂ ಒಂದೇ ಎಂದು ಕಾಂಗ್ರೆಸ್ ವಾದಿಸಬಹುದು. ವಾಸ್ತವದಲ್ಲಿ ಇವೆರಡು ಬೇರೆಬೇರೆ. ಅದೇನೇ ಇರಲಿ, ಈ ಮೈತ್ರಿ ಒಂದು ಸಂದೇಶವನ್ನಂತೂ ನೀಡಿದೆ. ಅದು ಈ ಕಾಲಕ್ಕೆ ತುಂಬಾ ಅಗತ್ಯವಾಗಿದ್ದ ಸಂದೇಶ. ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜೋಡಿ ರಾಜ್ಯಗಳ ಚುನಾವಣೆಯಲ್ಲಿ ಗೆದ್ದರೂ, ಗೆಲ್ಲದೇ ಅತಂತ್ರಸ್ಥಿತಿ ನಿರ್ಮಾಣವಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ವಿರಮಿಸುವುದು ಎನ್ನುವುದು ಎಲ್ಲಾ ಕಾಲದಲ್ಲೂ ಎಲ್ಲಾ ರಾಜ್ಯಗಳಲ್ಲೂ ಸಾಧ್ಯವಾಗಬೇಕಿಲ್ಲ ಎನ್ನುವುದೇ ಆ ಸಂದೇಶ. ಈ ಸಂದೇಶದ ಪ್ರಸ್ತುತತೆ ಮೈತ್ರಿ ಸರಕಾರ ಉಳಿದಷ್ಟು ಕಾಲ ಮಾತ್ರ. ಇದರ ಜತೆಗೆ ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬೇಕಾದರೆ ಒಂದಷ್ಟು ತ್ಯಾಗಗಳಿಗೂ ಸಿದ್ಧವಾಗಿದೆ ಎನ್ನುವ ಒಂದು ಸಂದೇಶವೂ ಆರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಮಂತ್ರಿಮಂಡಲ ರಚಿಸುವಲ್ಲಿ ಕಾಂಗ್ರೆಸ್ ನಡೆÀಸುತ್ತಿರುವ ಮೇಲಾಟ, ಜತೆಗೆ ಐದು ವರ್ಷಗಳ ಕಾಲ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೋ ಇಲ್ಲವೋ ಎನ್ನುವ ಕುರಿತ ನಿಲುವಿನಲ್ಲಿ ಅದು ತೋರುತ್ತಿರುವ ಅಸ್ಪಷ್ಟತೆ ಇತ್ಯಾದಿಗಳನ್ನು ನೋಡಿದರೆ ಆ ಸಂದೇಶ ಕೇವಲ ಕಣ್ಣುಕಟ್ಟು ಅನ್ನಿಸುತ್ತದೆ. ಮುಂದೇನೋ? ಊಹಿಸುವುದು ಕಷ್ಟ.

ವಾಸ್ತವದಲ್ಲಿ, ಕಾಂಗ್ರೆಸ್ಸಿಗೆ ಸೆಕ್ಯುಲರಿಸಂ ಕುರಿತಾದ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಮತ್ತು ಬಿಜೆಪಿಯ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಂದಾಗಿಸಲು ಒಂದು ಪ್ರೇರಕಶಕ್ತಿಯಾಗಿ ಕೆಲಸ ಮಾಡುವ ಉದ್ದೇಶಗಳೇ ಇದ್ದಿದ್ದರೆ ಅದು ಕುಮಾರಸ್ವಾಮಿ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಬೇಕಿತ್ತು. ಒಂದುವೇಳೆ ಸರಕಾರದಲ್ಲಿ ಪಾಲ್ಗೊಳ್ಳಲೇಬೇಕು ಎಂದಿದ್ದಲ್ಲಿ ಮಂತ್ರಿಮಂಡಲದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧಿತ್ವ ಸಾಕು ಎನ್ನಬೇಕಿತ್ತು. ಆಗ ಅದು ನೈತಿಕವಾಗಿ ಹಲವು ಮೆಟ್ಟಿಲು ಮೇಲೇರುತ್ತಿತ್ತು. ಬಿಜೆಪಿಯ ವಿಷಯಕ್ಕೆ ಬಂದರೆ ಆ ಪಕ್ಷದಲ್ಲಿ ಇಲ್ಲದ ನೈತಿಕತೆ ಅದಕ್ಕಿದೆ ಅಂತ ಜನ ಭಾವಿಸುತ್ತಾರೆ. ಅದೇವೇಳೆ ಕಾಂಗ್ರೆಸ್ ವಾಸ್ತವದಲ್ಲಿ ಎಷ್ಟು ನೈತಿಕ ಅಧಃಪತನ ಕಂಡಿದೆಯೋ ಅದಕ್ಕಿಂತ ಹೆಚ್ಚಿನ ಪತನವನ್ನು ಜನ ಅದರ ಮೇಲೆ ಆರೋಪಿಸುತ್ತಿದ್ದಾರೆ. ಸುದೀರ್ಘ ಕಾಲ ಆಡಳಿತದಲ್ಲಿದ್ದ ಪಕ್ಷವಾದ ಕಾರಣ ಕಾಂಗ್ರೆಸ್ ಇಂತಹ ಟೀಕೆಗಳನ್ನು ಎದುರಿಸುವುದು ಸಹಜ. ಜತೆಗೆ ಜನ ಕಾಂಗ್ರೆಸ್ಸನ್ನು ಈ ರೀತಿ ಕಾಣಲು ಬೇಕಾದ ಎಲ್ಲಾ ರೀತಿಯ ಪ್ರಚಾರವನ್ನು ಬಿಜೆಪಿ ಬಹಳ ವ್ಯವಸ್ಥಿತವಾಗಿ ಮಾಡುತ್ತಿದೆ. ಇದನ್ನು ಮೆಟ್ಟಿನಿಂತು ತನ್ನ ಪರವಾಗಿ ಜನಾಭಿಪ್ರಾಯ ಮತ್ತೆ ರೂಪುಗೊಳ್ಳುವಂತೆ ಮಾಡಬೇಕಾದರೆ ಕಾಂಗ್ರೆಸ್ ಗಟ್ಟಿಯಾದ ಕೆಲ ನೈತಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೋತರೂ ಅಧಿಕಾರ ಬಿಡಲೊಪ್ಪದ ಭಂಡಪಕ್ಷ ಈ ಕಾಂಗ್ರೆಸ್ ಎನ್ನುವ ರೀತಿಯಲ್ಲಿ ಜನ ಯೋಚಿಸಲು ಅನುವಾಗುವಂತೆ ಆ ಪಕ್ಷದ ನಡವಳಿಕೆ ಸಾಗಿದರೆ ಮುಂದಿನ ದಾರಿ ಅದಕ್ಕೆ ಇನ್ನೂ ದುರ್ಗಮವಾದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...